ಮಕ್ಕಳ ಸಾಹಿತ್ಯದ ಜಗತ್ತಿಗೆ ದಿಕ್ಸೂಚಿಯಂತಿರುವ ಈ ಕೃತಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದೆ. ‘ಮಕ್ಕಳ ಕವಿತೆ ಅಜ್ಜನ ಹೆಗಲ ಮೇಲೆ ಕೂತ ಮೊಮ್ಮಗುವಿನಂತೆ’ ಎಂದು ಮಕ್ಕಳಿಗೆ ಬರೆಯುವುದು ಏಕೆ, ಹೇಗೆ ಎಂಬ ಪ್ರಬಂಧದಲ್ಲಿ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿಯವರು ಉಲ್ಲೇಖಿಸುತ್ತಾರೆ. ಈ ಮಾತಿಗೆ ಪೂರಕವಾಗಿ ‘ಹಕ್ಕಿಸಾಲು’ ಸಂಗ್ರಹದ ಸಾಕ್ಷ್ಯ ನೀಡುತ್ತಾರೆ. ಗಂಭೀರ ಸಾಹಿತ್ಯಕ್ಕೂ ಮಕ್ಕಳ ಸಾಹಿತ್ಯಕ್ಕೂ ಗುಲಗಂಜಿ ತೂಕ ಹೆಚ್ಚು ಕಮ್ಮಿ ಇಲ್ಲ ಎಂದು ಉಲ್ಲೇಖಿಸುವ ಎಚ್ಚೆಸ್ವಿ ಅವರ ಮಾತು ಯುವ ಲೇಖಕರಿಗೆ ತಟ್ಟಬೇಕಿದೆ. ವಾಸ್ತವ ಜಗತ್ತಿನ ಬಿಂಬಗಳೂ ಕಥೆಗಳ ಮೂಲಕ ಮಕ್ಕಳ ಮನಸ್ಸಿನಲ್ಲಿ ಪಡಿಮೂಡಬೇಕು ಎನ್ನುವ ಅಂಶವನ್ನು ನಾಗೇಶ ಹೆಗಡೆ ಅವರು ಉಲ್ಲೇಖಿಸುತ್ತಾರೆ.ಹೀಗೆ ಮಕ್ಕಳ ಕತೆಗಳು, ಅನುವಾದದ ಬಗ್ಗೆ ಪ್ರಸ್ತಾಪಿಸುತ್ತಾ, ಕನ್ನಡ ಶಾಲೆಗಳು ಉಳಿಯಬೇಕು, ಬಲಗೊಳ್ಳಬೇಕು ಎನ್ನುವ ಹಂಬಲದ ಜೊತೆಗೆ ಕನ್ನಡದ ಮಕ್ಕಳ ಸಾಹಿತ್ಯ ಸಮೃದ್ಧಗೊಳ್ಳಬೇಕು, ಮಕ್ಕಳಿಗಾಗಿ ಅನುವಾದ ಮಾಡುವ ಲೇಖಕರ ಸಂಖ್ಯೆಯೂ ಹೆಚ್ಚಬೇಕು ಎನ್ನುವ ಆಶಯವನ್ನೂ ಕೃತಿ ಹೊತ್ತಿದೆ. ಪ್ರಬಂಧಗಳನ್ನು ಸಂಪಾದಿಸಿದ ಎ.ವಿ. ನಾವಡರ ಕಾರ್ಯ ಸ್ತುತ್ಯರ್ಹವಾಗಿದೆ.