ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಬುದ್ಧಿಜೀವಿ ಬಿಕ್ಕಟ್ಟುಗಳು– ಬೇರೆ ದಿಕ್ಕಿನ ನೋಟ

Last Updated 1 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಜೀನ್ ಪಾಲ್ ಸಾರ್ತೃ ಅವರ A Plea for Intellectuals ಎನ್ನುವ ಮಹತ್ವದ ಬರಹವನ್ನು ಕೆ.ವಿ.ನಾರಾಯಣ ಅವರು ಕನ್ನಡದಲ್ಲಿ ನಿರೂಪಿಸಿದ್ದಾರೆ. ಬುದ್ಧಿಜೀವಿಗಳನ್ನು ಕುರಿತ ಹಲವು ಮಹತ್ವದ ಬರಹಗಳು ಇಪ್ಪತ್ತನೇ ಶತಮಾನದಲ್ಲಿ ಬಂದಿರುತ್ತವೆ. ಆ ಎಲ್ಲ ಬರಹಗಳಲ್ಲಿ ಸಾರ್ತೃ ಅವರ ಈ ಬರಹ ವಿಶೇಷವಾಗಿದೆ. ಆದಾಗ್ಯೂ ಈ ಬರಹವು ಹೆಚ್ಚು ಚರ್ಚೆಗೆ ಒಳಗಾಗಿಲ್ಲ ಅನ್ನುವುದು ಗಮನಾರ್ಹ.

ಇಂತಹದೊಂದು ಬರಹವನ್ನು ಕನ್ನಡದಲ್ಲಿ ಈಗ ನಿರೂಪಿಸುವುದರ ಉದ್ದೇಶ ಏನಿರಬಹುದು ಎಂಬ ಕುತೂಹಲ ಯಾರಲ್ಲಾದರೂ ಮೂಡಬಹುದು. ಆದರೆ ಇಲ್ಲಿ ಮಂಡಿತವಾಗಿರುವ ವಿಚಾರಗಳು ಕುತೂಹಲಕ್ಕಷ್ಟೆ ಸಂಬಂಧಿಸಿದವುಗಳಲ್ಲ. ಬದಲಾಗಿ ಬುದ್ಧಿಜೀವಿ ಎನ್ನುವ ಪರಿಕಲ್ಪನೆಯ ಸುತ್ತಲೂ ಏರ್ಪಡಬಹುದಾದ ಗ್ರಹಿಕೆ, ತಾತ್ವಿಕತೆ ಹಾಗೂ ಸಾಮಾಜಿಕ-ರಾಜಕೀಯ ನೆಲೆಗಳು ಎಂತಹವು? ಈ ನಿಲುವುಗಳನ್ನು ಅರ್ಥೈಸುವಲ್ಲಿ ಸಾರ್ತೃ ಅವರು ಬಳಸಿಕೊಂಡಿರುವ ವಿಶ್ಲೇಷಣೆಯ ಬಗೆಗಳು ಯಾವವು? ಬುದ್ಧಿಜೀವಿ ಕುರಿತು ಚಾಮ್ಸ್ಕಿ, ಸೈದ್, ಜಾಕಿ ವಾಕರ್, ರೋಮಿಲಾ ಥಾಪರ್ ಮೊದಲಾದವರು ಚಿಂತಿಸಿದ ಬಗೆಗಿಂತ ಭಿನ್ನವಾಗಿ ಸಾರ್ತೃ ಅವರು ಹೇಗೆ ಚಿಂತಿಸಿದ್ದಾರೆ? ಬುದ್ಧಿಜೀವಿ ಬಗೆಗಿನ ಇಂತಹ ವಿಭಿನ್ನ ಚರ್ಚೆಗಳನ್ನು ಭಾರತ/ಕರ್ನಾಟಕದ ಸದ್ಯದ ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶದಲ್ಲಿ ನೆಲೆಗೊಳಿಸುವುದರ ಹಿಂದಿನ ಆಶಯ ಏನು? ಎಂಬಿತ್ಯಾದಿ ಪ್ರಶ್ನೆಗಳ ಮೂಲಕ ಪ್ರಸ್ತುತ ಕನ್ನಡದ ನಿರೂಪಣೆಯನ್ನು ಅರಿಯಬಹುದಾಗಿದೆ.

ಬುದ್ಧಿಜೀವಿ ಕುರಿತ ನಮ್ಮ ಅಭಿಪ್ರಾಯ, ತಿಳಿವಳಿಕೆ ಹಾಗೂ ತಾತ್ವಿಕತೆಯನ್ನು ಮರು ಪರಿಶೀಲಿಸುವಂತೆ ಈ ಚಿಂತನೆಗಳು ಒತ್ತಾಯಿಸುತ್ತವೆ. ಬುದ್ಧಿಜೀವಿ ಅನ್ನುವ ಪರಿಕಲ್ಪನೆಯೇ ಎಷ್ಟೊಂದು ಸಂಕೀರ್ಣವಾದದ್ದು ಹಾಗೂ ಬುದ್ಧಿಜೀವಿ ಆಗುವ ಪ್ರಕ್ರಿಯೆಯಲ್ಲಿ ಎದುರಾಗುವ ಬಿಕ್ಕಟ್ಟು, ಸವಾಲು ಹಾಗೂ ವೈರುಧ್ಯಗಳ ಸ್ವರೂಪ ಎಂತಹದು ಎಂಬುದನ್ನು ಅತ್ಯಂತ ಕೂಲಂಕಷವಾಗಿ ಈ ಬರಹದಲ್ಲಿ ಚರ್ಚಿಸಲಾಗಿದೆ.

ಬುದ್ಧಿಜೀವಿಗಳು ಇರುವುದಿಲ್ಲ, ಆಗುತ್ತಾರೆ. ಈ ಆಗುವಿಕೆಗೆ ಕಾರಣಗಳು ಸಾಮಾಜಿಕ ನೆಲೆಯಲ್ಲಿರುತ್ತವೆ. ಸಮಾಜದ ಗತಿಶೀಲತೆಯಲ್ಲಿ ಬುದ್ಧಿಜೀವಿಗಳು ರೂಪುಗೊಳ್ಳುತ್ತಾರೆ ಎನ್ನುವುದು ಸಾರ್ತೃ ಅವರ ನಿಲುವು. ಬುದ್ಧಿಜೀವಿಗಳು ಸಮಾಜದಲ್ಲಿ ಇರುತ್ತಾರೆ. ಸರ್ಕಾರವು ಅನುಸರಿಸುವ ನಡೆಗಳಲ್ಲಿ ಜನರ ಹಿತಕ್ಕೆ ವಿರುದ್ಧವಾದುದು ಏನಿದೆ ಎನ್ನುವುದನ್ನು ತಿಳಿಸಿಕೊಡುವುದು ಬುದ್ಧಿಜೀವಿಗಳ ಕೆಲಸ ಎನ್ನುವುದು ಚಾಮ್ಸ್ಕಿ ಅವರ ನಿಲುವು. ಬುದ್ಧಿಜೀವಿ ಎಂಬ ಈ ಪರಿಕಲ್ಪನೆಯನ್ನು ಸಾರ್ತೃ ಅವರು ಸಮಸ್ಯೀಕರಿಸುವ ಬಗೆ ಮತ್ತು ಅದಕ್ಕೆ ಬಳಸಿಕೊಳ್ಳುವ ಪರಿಕರಗಳು ವಿಶಿಷ್ಟವೂ ಹಾಗೂ ಅತ್ಯಂತ ಸೂಕ್ತವೂ ಆಗಿರುತ್ತವೆ. ಹಾಗಾಗಿ ಸಾರ್ತೃ ಅವರ ಬುದ್ಧಿಜೀವಿ ಕುರಿತಾದ ಚರ್ಚೆಗಳಳನ್ನು ಕನ್ನಡಿಕರಿಸಿದ್ದು ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಮಹತ್ವದ ವಿದ್ಯಮಾನವಾಗಿದೆ.

ಬುದ್ಧಿಜೀವಿ ಅನ್ನುವಂತಹ ಪರಿಕಲ್ಪನೆ ಬಹಳ ವ್ಯಾಪಕವಾದ ಹಾಗೂ ಅಷ್ಟೇ ಸಂಕೀರ್ಣವಾದ ಮನೋಧರ್ಮ ಆಗಿರುತ್ತದೆ. ಬುದ್ಧಿಜೀವಿಯಾಗಿ ಹೊರಹೊಮ್ಮುವ ಆ ಇಡೀ ಪ್ರಕ್ರಿಯೆಯಲ್ಲಿ ಸಮಾಜ, ಸಂಸ್ಕೃತಿ, ಪ್ರಭುತ್ವ, ಅಧಿಕಾರ, ಬಂಡವಾಳಶಾಹಿ ಹಾಗೂ ಶಿಕ್ಷಣದಂತಹ ವಿನ್ಯಾಸಗಳು ಹೇಗೆ ಕಾರಣವಾಗುತ್ತವೆ ಮತ್ತು ಹೇಗೆ ಇವುಗಳು ನಿರ್ಬಂಧಕಗಳಾಗಿ ಮೈದೋರುತ್ತವೆ ಅನ್ನುವುದು ವಿಶೇಷ. ಅಂದರೆ ಬುದ್ಧಿಜೀವಿಗಳ ಅಸ್ತಿತ್ವದ ಪ್ರಶ್ನೆಗಳು, ಸಾಮಾಜಿಕ ನೆಲೆ ಮತ್ತು ಬಿಕ್ಕಟ್ಟುಗಳು ಹಾಗೂ ಅವುಗಳನ್ನು ನಿಭಾಯಿಸುವ ವಿನ್ಯಾಸಗಳನ್ನು ಕಂಡುಕೊಳ್ಳುವ ಸವಾಲುಗಳೂ ಅತ್ಯಂತ ಗಮನಾರ್ಹ.

ಬುದ್ಧಿಜೀವಿಗಳು ಆಯಾ ಸಮಾಜದ ಫಲಿತವೇ ಆಗಿರುತ್ತಾರೆ. ಆದರೆ, ಅದೇ ಸಮಾಜ ಅವರನ್ನು ಮಾನ್ಯಮಾಡುವ ಹಾಗೂ ಪರಿಗಣಿಸುವ ಬಗೆಗಳು ಅತ್ಯಂತ ಅಸಹಜವಾಗಿರುತ್ತವೆ. ಎಲ್ಲ ಕಾಲದಲ್ಲೂ ಎಲ್ಲ ಸಮಾಜಗಳಲ್ಲಿಯೂ ಬುದ್ಧಿಜೀವಿಗಳಿಗೆ ಮನ್ನಣೆ ಇರುವಂತೆ ಅತೀವವಾದ ತಿರಸ್ಕಾರವೂ ಇರುವುದನ್ನು ಕಾಣುತ್ತೇವೆ (ಪು:13). ಸೈದ್ ಅವರು ಹೇಳುವಂತೆ, ಬುದ್ಧಿಜೀವಿಗಳಿಗೆ ಒಂದು ಸಾರ್ವತ್ರಿಕವಾದ ಹಾಗೂ ಖಚಿತವಾದ ಚಹರೆಯನ್ನು ಗುರುತಿಸುವುದು ಆಗದ ಮಾತಾಗುತ್ತದೆ. ಕಾರಣವೇನೆಂದರೆ, ಒಬ್ಬ ತಜ್ಞನ ಅಧ್ಯಯನ ವಿಧಾನಕ್ಕೂ ಹಾಗೂ ಬುದ್ಧಿಜೀವಿ ಅಧ್ಯಯನ ವಿಧಾನಕ್ಕೂ ಹಲವು ಬಗೆಯ ಭಿನ್ನತೆಗಳಿರುವಂತೆಯೇ ಬಿಕ್ಕಟ್ಟುಗಳಿರುತ್ತವೆ.

ತಜ್ಞನಿಗೆ ಇರುವ ಸಾಮಾಜಿಕ ಮಾನ್ಯತೆ, ಬುದ್ಧಿಜೀವಿಗೆ ಇರಲಾರದು. ಇವನು ಯಾವಾಗಲೂ ತನ್ನೊಳಗಿನ ವೈರುಧ್ಯಗಳ ಜೊತೆಗೆ ಹೋರಾಡಬೇಕಾಗುತ್ತದೆ. ಹಾಗಾಗಿ ಇವನು ಅಧ್ಯಯನ ಮಾಡಬೇಕಾದ ಸಾಮಾಗ್ರಿಗಳು ಕೂಡ ತನ್ನೊಳಗಿನ ವೈರುಧ್ಯಗಳೇ ಆಗಿರುತ್ತವೆ. ಹಾಗಂತ ಆತ ತನ್ನನ್ನೇ ತಾನು ಅಂತರಂಗ ಪರಿವೀಕ್ಷಣೆಗೆ ಗುರಿ ಮಾಡಿಕೊಂಡು ಆ ಮೂಲಕ ತನ್ನ ಅಧ್ಯಯನ ಉದ್ದೇಶವನ್ನು ಪೂರ್ಣಗೊಳಿಸಿಕೊಳ್ಳಲಾರ. ಏಕೆಂದರೆ ಅವನನ್ನು ಆವರಿಸಿರುವ ಸಮಾಜವು ಅವನನ್ನು ರೂಪಿಸಿದೆ. ಆ ಸಮಾಜದ ಪರಿಪ್ರೇಕ್ಷ್ಯದಲ್ಲಿ ಇರಿಸಿಕೊಳ್ಳದೇ ಅವನ ಅಧ್ಯಯನ ಮುಂದುವರೆಯುವುದು ಸಾಧ್ಯವಾಗದು (ಪು:71).

ಆತ ಚರಿತ್ರೆಯ ಕೂಸೂ ಹೌದು. ಯಾವ ಸಮಾಜ ಕೂಡ ತನ್ನ ಬುದ್ಧಿಜೀವಿಗಳ ಬಗೆಗೆ ತಕರಾರು ತೆಗೆಯುವಂತಿಲ್ಲ. ಏಕೆಂದರೆ ಆ ಸಮಾಜವೇ ಅವರನ್ನು ಸೃಷ್ಟಿಸಿರುತ್ತದೆ. ಬುದ್ಧಿಜೀವಿಗಳ ಬಿಕ್ಕಟ್ಟು ಎನ್ನುವಂತಹದು ಜಾಗತಿಕ ವಿದ್ಯಮಾನ. ಈ ಲೋಕದ ಪ್ರಭುತ್ವ ವ್ಯವಸ್ಥೆ, ಅದು ರೂಪಿಸುವ ಹುಸಿ ನಂಬಿಕೆ, ಈ ನಂಬಿಕೆಯನ್ನು ನೆಲೆಗೊಳಿಸಲು ಶಿಕ್ಷಣವನ್ನು ಪ್ರಭುತ್ವ ಹೇಗೆ ಒಂದು ಆಯುಧವನ್ನಾಗಿ ಬೆಳೆಸುತ್ತದೆ ಎನ್ನುವುದಕ್ಕೆ ಅತ್ಯಂತ ಸಮಂಜಸವಾದ ನಿದರ್ಶನಗಳು ಇಲ್ಲಿ ಪ್ರಕಟಗೊಂಡಿವೆ.

ಬುದ್ಧಿಜೀವಿಯ ಬಿಕ್ಕಟ್ಟುಗಳನ್ನು ರೂಪಿಸುವಲ್ಲಿ ಪ್ರಭುತ್ವದ ಯಜಮಾನಿಕೆ, ಅಧಿಕಾರ ಸಂಬಂಧ ಹಾಗೂ ಬಂಡವಾಳಶಾಹಿ ನಿಲುವು ಪ್ರಮುಖವಾಗಿರುತ್ತವೆ. ಅಷ್ಟೆ ಅಲ್ಲದೇ ಈ ಎಲ್ಲ ನಿಲುವುಗಳು ಬೂರ್ಜ್ವಾಸಿ ವರ್ಗದ ಆಶೋತ್ತರಗಳನ್ನು ಎತ್ತಿಹಿಡಿಯುವ ಆಯಾಮವನ್ನು ಹೊಂದಿರುತ್ತವೆ. ವಿಶ್ವಾತ್ಮಕ ಆಯಾಮಗಳನ್ನು ಹೊಂದಿರುವ ಇಂತಹ ಸಂಗತಿ ಇಲ್ಲವೇ ವಿದ್ಯಮಾನಗಳೂ ಹೇಗೆ ಒಂದು ನಿರ್ದಿಷ್ಟತೆಯನ್ನು ಪಡೆದುಕೊಳ್ಳುತ್ತವೆ ಎಂಬ ಕಟು ವಾಸ್ತವವನ್ನು ಸಾರ್ತೃ ಅತ್ಯಂತ ವಿಮರ್ಶಾತ್ಮಕವಾಗಿ ವಿಶ್ಲೇಷಿಸಿದ್ದಾರೆ.

ಬುದ್ಧಿಜೀವಿಗಳ ಲಕ್ಷಣ, ಸ್ವರೂಪ, ಕ್ರಿಯಾಶೀಲತೆ ಹಾಗೂ ಅವರು ಪ್ರತಿನಿಧಿಸಬಹುದಾದ ವಿನ್ಯಾಸಗಳನ್ನು ಕುರಿತು ಇಷ್ಟೊಂದು ತಲಸ್ಪರ್ಶಿಯಾಗಿ ಚರ್ಚಿಸಿರುವುದು ವಿರಳ. ತಾನು ಹುಟ್ಟಿ ಬೆಳೆದ ಸಮುದಾಯದಿಂದಲೇ ಈ ಬುದ್ಧಿಜೀವಿ ಹೇಗೆ ಪ್ರತ್ಯೇಕಗೊಳ್ಳುತ್ತಾನೆ ಹಾಗೂ ಇಂತಹ ಪ್ರತ್ಯೇಕತೆಯನ್ನು ನೆಲೆಗೊಳಿಸುವಲ್ಲಿ ಪ್ರಭುತ್ವ, ಶಿಕ್ಷಣ ಮತ್ತು ಸವಲತ್ತುಗಳು ಹೇಗೆ ಕಾರಣವಾಗುತ್ತವೆ ಎಂಬುದನ್ನು ವಿಸ್ತೃತವಾಗಿ ಚರ್ಚಿಸಲಾಗಿದೆ. ತಜ್ಞರನ್ನು ರೂಪಿಸುವ ಕ್ರಿಯೆಗೆ ಬೇಕಾಗುವ ತಾತ್ವಿಕತೆಯನ್ನು ಮತ್ತು ಕಾರ್ಯವಿಧಾನಗಳನ್ನು ನಿಯಂತ್ರಿಸಲು ಅಗತ್ಯವಾದ ತಕ್ಕ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಲಾಗಿದೆ (ಪು.51). ಈ ತಜ್ಞರನ್ನು ಒಂದು ನಿಗದಿಯಾದ ವಲಯದ ತಜ್ಞರನ್ನಾಗಿ ರೂಪಿಸುವ ಮತ್ತು ಪ್ರಭುತ್ವದ ಯಜಮಾನ್ಯವನ್ನು ಸಂರಕ್ಷಿಸುವ ಹೊಣೆಯನ್ನು ನಿರ್ವಹಿಸುವಂತೆ ಇವರಿಗೆ ತರಬೇತಿ ನೀಡಲಾಗುತ್ತದೆ.

ಈ ಪ್ರಕ್ರಿಯೆಯಲ್ಲಿಯೇ ಶಿಕ್ಷಣ ಹೇಗೆ ಒಂದು ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತದೆ ಅನ್ನುವದನ್ನು ಗಮನಿಸಬಹುದು. ತಜ್ಞರು ರೂಪಿಸುವ ವಿಶ್ಲೇಷಣೆಗಳು ಬಹುತೇಕವಾಗಿ ಪ್ರಭುತ್ವದ ಹಿತಾಸಕ್ತಿಯನ್ನು ಕಾಪಾಡುವ ಇರಾದೆಯನ್ನು ಹೊಂದಿರುತ್ತವೆ ಎಂಬುದು ಇಲ್ಲಿಯ ಚರ್ಚೆಗಳ ಮೂಲಕ ಸಾಬೀತುಗೊಂಡಿದೆ. ಆದರೆ ಆಳುವ ವರ್ಗವು ತಜ್ಞರಿಗೆಂದು ತಾನು ನಿಗದಿಗೊಳಿಸಿರುವ ಸಾಮಾಜಿಕ ಚೌಕಟ್ಟಿನಲ್ಲಿಯೇ ಅಡಕವಾಗಿರುವ ಪರಸ್ಪರ ವಿರೋಧಾತ್ಮಕ ಸಂಗತಿಗಳೇ ಕಾರಣವಾಗಿ ಬುದ್ಧಿಜೀವಿಯು ಮೈದಾಳುತ್ತಾನೆ. ಇಂತಹ ಸಂಗತಿಗಳು ಕೃತಿಯಲ್ಲಿ ವಿಸ್ತೃತವಾಗಿ ಚರ್ಚೆಗೆ ಒಳಗಾಗಿವೆ.

ಕೃತಿ: ಬುದ್ಧಿಜೀವಿ ಬಿಕ್ಕಟ್ಟುಗಳು

ಕನ್ನಡ ನಿರೂಪಣೆ: ಕೆ.ವಿ. ನಾರಾಯಣ

ಪ್ರ: ಋತುಮಾನ

ಸಂ: 9480009997

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT