ಹೆಚ್ಚು ರೋಚಕತೆ ಮತ್ತು ಕುತೂಹಲಕರ ವಿಷಯಗಳಿಂದ ಕೂಡಿರುವುದು ವೀರಪ್ಪನ್ ಮತ್ತು ಅವನ ತಂಡದ ವಿರುದ್ಧದ ಕಾರ್ಯಾಚರಣೆ. ಆ ಪ್ರದೇಶದ ಚಿತ್ರಣ, ವೀರಪ್ಪನ್ ಸಹಚರರ ನಿಖರವಾದ ಸಂಖ್ಯೆಗಳು, ಅವನ ಸಹಚರರ ತಂಡವನ್ನು ದುರ್ಬಲಗೊಳಿಸಿದ ಕತೆಗಳು ಇಲ್ಲಿವೆ. ಇಷ್ಟೇ ಪ್ರಾಮುಖ್ಯವನ್ನು ಪಡೆದದ್ದು ಬಳ್ಳಾರಿ ಜಿಲ್ಲಾ ಎಸ್ಪಿ ಆಗಿದ್ದಾಗ ಕುಖ್ಯಾತ ಅಪರಾಧಿ ಭೀಮ್ಲಾ ನಾಯ್ಕನ ಹತ್ಯೆ ಪ್ರಕರಣ. ಇದಕ್ಕಾಗಿ ಬಿದರಿ ಅವರು ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳಿಂದ ಗೌರವ ಪಡೆದ ಸಂಗತಿಯೂ ಕೃತಿಯಲ್ಲಿದೆ.ಬಾಲ್ಯ, ವಿದ್ಯಾರ್ಥಿ ಜೀವನ, ಬದುಕಿನ ವಿವಿಧ ಮಜಲುಗಳು, ಕಾನೂನು ಸುವ್ಯವಸ್ಥೆಯಲ್ಲಿ ನಿರ್ವಹಿಸಿದ ಮಹತ್ವದ ಘಟನೆ, ವೈಯಕ್ತಿಕ ಬದುಕು ಎಲ್ಲವನ್ನೂ ಹದವಾಗಿ ವಿವರಿಸಿದ್ದಾರೆ. ದೇವರು, ಧರ್ಮದ ಬಗೆಗಿನ ಅವರ ನಂಬಿಕೆಗಳು, ಅವರು ಪ್ರೀತಿಸುವ, ಪೂಜಿಸುವ ವ್ಯಕ್ತಿಗಳೂ ಈ ಕೃತಿಯಲ್ಲಿ ಹಾದು ಹೋಗಿದ್ದಾರೆ. ಗುರುಲಿಂಗ ಕಾಪಸೆ ಅವರ ಸುದೀರ್ಘ ಮುನ್ನುಡಿ ಈ ಕೃತಿಗಿದೆ. ಪೊಲೀಸ್ ಬದುಕಿನ ಸಾಧನೆಯ ಆಕಾಂಕ್ಷಿಗಳು, ಸ್ಫೂರ್ತಿ ಪಡೆಯಬಯಸುವ ಕುತೂಹಲಿಗಳು ಓದಬೇಕಾದ ಕೃತಿ.