ಅಕ್ರಮ ಪಡಿತರ ದಾಸ್ತಾನು: ವ್ಯಕ್ತಿ ಬಂಧನ

ಧಾರವಾಡ: ಇಲ್ಲಿಯ ಮಣಕಿಲ್ಲಾದ ಗೋದಾಮಿನಲ್ಲಿ ಪಡಿತರ ಚೀಟಿದಾರರಿಗೆ ಪೂರೈಸಬೇಕಿದ್ದ ಗೋಧಿ ಹಾಗೂ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಆರೋಪಿಯನ್ನು ಶಹರ ಠಾಣೆ ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದಾರೆ.
ಮಾಳಾಪುರದ ಜಾಫರ್ ಜೈಲಾನಿ ಅಮ್ಮಿನಬಾವಿ ಬಂಧಿತ. ಈತ ಸೂಪರ್ ಮಾರ್ಕೆಟ್ನಲ್ಲಿ ಅಂಗಡಿ ಇಟ್ಟುಕೊಂಡಿದ್ದಾನೆ. ಇತ್ತೀಚೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸೇರಿದ 13 ಚೀಲ ಗೋದಿ, 4 ಚೀಲ ಅಕ್ಕಿಯನ್ನು ಜಾಫರ್, ತನ್ನ ಮಣಕಿಲ್ಲಾದ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದ ಪೊಲೀಸರು, 17 ಕ್ವಿಂಟಾಲ್ ಧಾನ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸಿಪಿ ಎಚ್.ಎಸ್.ಕೇರಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಬಸವೇಶ್ವರ ಹೀರಾ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಇನ್ಸ್ಪೆಕ್ಟರ್ ಶೇಖರಪ್ಪ ಹಾಗೂ ಸಿಬ್ಬಂದಿ ಇದ್ದರು.
ಅಮರಗೋಳದಲ್ಲೂ ಪರಿಶೀಲನೆ
ಹುಬ್ಬಳ್ಳಿ: ಇಲ್ಲಿನ ಬಂಕಾಪುರ ಚೌಕದ ಗೋದಾಮಿನಲ್ಲಿ ಪಡಿತರ ಅಕ್ಕಿ ವಶಪಡಿಸಿಕೊಂಡ ಪ್ರಕರಣಕ್ಕೆ ಪೂರಕವಾಗಿ ಅಮರಗೋಳದ ಎಪಿಎಂಸಿ ಪ್ರಾಂಗಣದಲ್ಲಿರುವ ಉಗ್ರಾಣವೊಂದರ ಮೇಲೆ ಎಸಿಪಿ ಯಶೋದಾ ಒಂಟಗೋಡಿ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು.
ಬಂಕಾಪುರ ಚೌಕದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ಎಪಿಎಂಸಿ ಪ್ರಾಂಗಣದ ಆ ಉಗ್ರಾಣದಿಂದ ಖರೀದಿಸಲಾಗಿತ್ತು ಎಂಬ ಮಾಹಿತಿಯ ಹಿನ್ನೆಲೆಯಲ್ಲಿದಾಳಿ ನಡೆಸಲಾಗಿತ್ತು. ದಾಳಿಯ ವೇಳೆ ಪಡಿತರ ಅಕ್ಕಿ ಸೇರಿದಂತೆ ಯಾವುದೇ ಧಾನ್ಯಗಳ ಅಕ್ರಮ ದಾಸ್ತಾನು ಕಂಡುಬರಲಿಲ್ಲ ಎನ್ನಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.