ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇನು ಮಾಡುತ್ತಿದೆ ಮಹಿಳಾ ಆಯೋಗ?

Last Updated 14 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

`ಯಾರಾದರೂ ಸೆಕ್ಸಿ ಎಂದು ಕರೆದರೆ ಅದಕ್ಯಾಕೆ ನೀವು ಬೇಜಾರು ಮಾಡಿಕೊಳ್ಳಬೇಕು? ಬದಲಾಗಿ ಖುಷಿ ಪಡಿ, ಹೆಮ್ಮೆ ಪಡಿ~- ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮ ಅವರು ತೇರಾಪಂಥ್ ಸಂಘಟನೆ ಜೈಪುರದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣವೊಂದರಲ್ಲಿ ಯುವತಿಯರಿಗೆ ಹೀಗೆ ಕರೆ ಕೊಟ್ಟಾಗ ಅಲ್ಲಿ ನೆರೆದಿದ್ದ ಮಹಿಳೆಯರು, ಸಾಧ್ವಿಗಳು ಒಮ್ಮೆಗೇ ದಂಗಾದರು.
 
ಈ ಹೇಳಿಕೆ ದೇಶದಾದ್ಯಂತ ಅಪಾರ ಟೀಕೆಗೆ ಗುರಿಯಾಯಿತು. `ಸೆಕ್ಸಿ~ ಎಂದರೆ ಕಾಮಪ್ರಚೋದಕ, ಲೈಂಗಿಕ ವಿಷಯಗಳಲ್ಲಿ ಅತ್ಯಾಸಕ್ತಿಯುಳ್ಳ ಎಂಬರ್ಥ ಪದಕೋಶದಲ್ಲಿದೆ, ಹೀಗಿರುವಾಗ ಅಂತಹ ಪದವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಲು ಹೇಗೆ ಸಾಧ್ಯ?, ಮಮತಾ ಅವರ ಮನೆಯ ಹೆಣ್ಣು ಮಕ್ಕಳಿಗೇ ಯಾರಾದರೂ ಹೀಗೆ ಹೇಳಿದರೆ ಅವರು ಇಷ್ಟೇ ತಣ್ಣಗೆ ಅದನ್ನು ಸ್ವೀಕರಿಸುವರೇ ಎಂದು ಮಹಿಳಾ ಸಂಘಟನೆಗಳು ತರಾಟೆಗೆ ತೆಗೆದುಕೊಂಡವು.

ಕೆಲ ರಾಜಕೀಯ ಪಕ್ಷಗಳು ಮಮತಾ ಅವರ ರಾಜೀನಾಮೆಗೆ ಆಗ್ರಹಿಸಿದವು. ಆದರೆ ಈ ಪದ ಈಗಾಗಲೇ ಬಳಸಿ ಬಳಸಿ ಕ್ಲೀಷೆಗೊಳಗಾಗಿ ಹೋಗಿರುವುದರಿಂದ ಅದನ್ನು ಇಷ್ಟೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಬೇಕಾದ ಪ್ರಮೇಯವೇ ಇಲ್ಲ ಎಂದು ಇನ್ನು ಕೆಲವರು ವಾದಿಸಿದರು.

ಮಮತಾ ರಾಜಸ್ತಾನದ ಪ್ರಮುಖ ಕಾಂಗ್ರೆಸ್ ರಾಜಕಾರಣಿ ಆಗಿದ್ದರಿಂದ ಬಿಜೆಪಿ ಮುಖಂಡರಂತೂ ಅವರ ಹೇಳಿಕೆಯ ವಿರುದ್ಧ ಹುಯಿಲೆಬ್ಬಿಸಿದರು. ಕಾಂಗ್ರೆಸ್‌ನ ಮಹಿಳಾಮಣಿಗಳು ಅದಕ್ಕೆ ಪ್ರತ್ಯುತ್ತರ ನೀಡಿ, ಎದುರಾಳಿಗಳ ಬಾಯಿ ಮುಚ್ಚಿಸಲು ಮುಂದಾದರು. ಅಂತೂ ಇಂತೂ ವಿವಾದ ಕೆಲ ದಿನಗಳ ಬಳಿಕ ತಾನೇತಾನಾಗಿ ತಣ್ಣಗಾಯಿತು.

ಗುವಾಹಟಿಯಲ್ಲಿ ಈಚೆಗೆ ಯುವತಿಯೊಬ್ಬಳ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆಯಿತು. ಘಟನೆಯ ತನಿಖೆಗೆಂದು ಬಂದ ರಾಷ್ಟ್ರೀಯ ಮಹಿಳಾ ಆಯೋಗದ ಸತ್ಯಶೋಧನಾ ಸಮಿತಿಯ ಸದಸ್ಯರು ಪ್ರವಾಸದ ಮೂಡ್‌ನಲ್ಲಿದ್ದರು. ಸದಸ್ಯೆ ಅಲ್ಕಾ ಲಂಬಾ ಅವರಂತೂ ಸಮಿತಿ ಅಂತಿಮ ವರದಿಯನ್ನು ಸರ್ಕಾರದ ಕೈಗಿಡುವ ಮೊದಲೇ ಪತ್ರಿಕಾಗೋಷ್ಠಿ ಕರೆದು, ಅದರಲ್ಲಿನ ವಿಷಯಗಳನ್ನೆಲ್ಲಾ ಹೊರಗೆಡವಿದರು.

ಅಷ್ಟೇ ಆಗಿದ್ದರೆ ಅದು ಅಷ್ಟೊಂದು ದೊಡ್ಡ ಸುದ್ದಿಯಾಗುತ್ತಿರಲಿಲ್ಲವೇನೋ. ಆದರೆ ಅವರು ಮಾಡಬಾರದ ಅನಾಹುತ ಮಾಡಿಬಿಟ್ಟಿದ್ದರು. ಹೆಸರಿನ ಸಮೇತ ಸಂತ್ರಸ್ತ ಯುವತಿಯ ಎಲ್ಲ ಮಾಹಿತಿಯನ್ನೂ ಜಗಜ್ಜಾಹೀರು ಮಾಡಿದ್ದರು. ಇಂತಹ ಅಚಾತುರ್ಯದ ಜೊತೆಗೆ, ಮಾಡೆಲಿಂಗ್‌ಗೆ ಬಂದವರಂತೆ ಗೋಷ್ಠಿಗೆ ಅವರು ತೊಟ್ಟು ಬಂದಿದ್ದ ಅಸ್ಸಾಂನ ಸಾಂಪ್ರದಾಯಿಕ ಬೃಹತ್ ಟೋಪಿ ಮತ್ತು ಶಾಲು ಸಹ ವಿವಾದಕ್ಕೆ ಕಾರಣವಾದವು.

ಸಂತ್ರಸ್ತ ಮಹಿಳೆಯರು ಮತ್ತು ಮಕ್ಕಳ ಮಾಹಿತಿ ಬಹಿರಂಗಪಡಿಸಬಾರದೆಂಬ ಸುಪ್ರೀಂಕೋರ್ಟ್‌ನ ನಿಯಮವನ್ನು ಲೆಕ್ಕಿಸದ ಕಾಂಗ್ರೆಸ್ ಕಾರ್ಯಕರ್ತೆ ಲಂಬಾ ಅವರ ವಿರುದ್ಧ ಮಹಿಳಾ ಸಂಘಟನೆಗಳು ತಿರುಗಿಬಿದ್ದವು. ಕೂಡಲೇ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಅವರನ್ನು ಸತ್ಯಶೋಧನಾ ಸಮಿತಿಯಿಂದ ಕೈಬಿಟ್ಟಿತು.

ಬಳಿಕ ಮತ್ತೊಮ್ಮೆ ವಿವಾದಕ್ಕೆ ಒಳಗಾಗುವ ಸರದಿ ಮಮತಾ ಶರ್ಮ ಅವರದು. ಹುಡುಗಿಯರು ತಮ್ಮ ದಿರಿಸಿನ ಬಗ್ಗೆ ಎಚ್ಚರ ವಹಿಸಬೇಕು, ಇಂತಹ ಘಟನೆಗಳೆಲ್ಲಾ ಪಶ್ಚಿಮದವರ ಅಂಧಾನುಕರಣೆಯ ಫಲ ಎಂದು ಹೇಳಿ ಅವರು ಇನ್ನೊಂದು ಕಿಡಿ ಹೊತ್ತಿಸಿದರು.

ನಾಲ್ಕೈದು ವರ್ಷದ ಮುಗ್ಧ ಕಂದಮ್ಮಗಳ ಮೇಲೇ ಅತ್ಯಾಚಾರ ನಡೆಯುತ್ತಿರುವ ಈ ದಿನಗಳಲ್ಲಿ, ವಿಕೃತ ಮನಸ್ಸಿನವರು ಎಸಗುವ ಅಪರಾಧಗಳಿಗೆ ಯುವತಿಯರು ಧರಿಸುವ ವಸ್ತ್ರ ಹೇಗೆ ಕಾರಣವಾಗುತ್ತದೆ?, ಅದರಲ್ಲೂ ಮಹಿಳಾ ಆಯೋಗದ ಅಧ್ಯಕ್ಷೆ ಇಂತಹ ಭಾವನೆ ಹೊಂದಿರುವುದು ಆಘಾತಕಾರಿ ಮತ್ತು ಸ್ತ್ರೀ ಕುಲಕ್ಕೆ ಅಪಮಾನ ಎಂದೇ ಹಲವರು ದೂರಿದರು.

ಹರಿಯಾಣಾದ ಕಾಂಗ್ರೆಸ್ ಪ್ರಮುಖ ಗೋಪಾಲ್ ಕಾಂಡ ಆರೋಪಿಯಾಗಿರುವ ಗಗನಸಖಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣದಲ್ಲಿ, 17 ದಿನ ಕಳೆದರೂ ರಾಜ್ಯ ಮಹಿಳಾ ಆಯೋಗ ತುಟಿಕ್‌ಪಿಟಿಕ್ ಎನ್ನಲಿಲ್ಲ. ಕಾಂಡಾ ಅವರಂತಹ ಪ್ರಮುಖ ರಾಜಕಾರಣಿಯನ್ನು ಎದುರು ಹಾಕಿಕೊಳ್ಳುವ ಧೈರ್ಯ ಮಾಡಲು, ಅದೇ ಕಾಂಗ್ರೆಸ್ ಸರ್ಕಾರದಿಂದಲೇ ನೇಮಕಗೊಂಡಿರುವ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಗೆ ಸಾಧ್ಯವಾಗಲಿಲ್ಲ.

ಇಷ್ಟೇ ಅಲ್ಲ ಹರಿಯಾಣದಲ್ಲೇ ನಡೆದ ರುಚಿಕಾ ಲೈಂಗಿಕ ದೌರ್ಜನ್ಯ, ಜೆಸ್ಸಿಕಾ ಲಾಲ್ ಹತ್ಯೆ, ರೋಹ್ಟಕ್‌ನ ಪುನರ್ವಸತಿ ಕೇಂದ್ರದ ಮಹಿಳಾ ಸಂತ್ರಸ್ತರ ಮೇಲಿನ ಲೈಂಗಿಕ ಹಿಂಸಾಚಾರ, ಖಾಪ್ ಪಂಚಾಯಿತಿಯ ಅತಿರೇಕಗಳ ವಿರುದ್ಧವೂ ಆಯೋಗ ಈವರೆಗೆ ದನಿ ಎತ್ತಿದ್ದೇ ಇಲ್ಲ.
ಇವು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಮತ್ತು ರಾಜ್ಯ ಮಹಿಳಾ ಆಯೋಗಗಳು ಆಗಿಂದಾಗ್ಗೆ ತೀವ್ರ ವಿವಾದಗಳಿಗೆ ಗುರಿಯಾಗುತ್ತಿರುವುದಕ್ಕೆ ಕೆಲವು ಉದಾಹರಣೆಗಳು ಅಷ್ಟೆ.

ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸುತ್ತಾ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾವಲುಪಡೆಯಂತೆ ಕಾರ್ಯ ನಿರ್ವಹಿಸಬೇಕಾದ ಆಯೋಗಗಳು ಪದೇ ಪದೇ ಯಾಕೆ ಇಂತಹ ವಿವಾದಗಳಿಗೆ ಸಿಲುಕಿಕೊಳ್ಳುತ್ತಿವೆ? ಮಹಿಳಾ ಸಂಘಟನೆಗಳೇ ಯಾಕೆ ಅವುಗಳ ವಿರುದ್ಧ ತಿರುಗಿ ಬೀಳುತ್ತಿವೆ?

ಅಚ್ಚರಿಯ ಸಂಗತಿಯಲ್ಲ
ಮಹಿಳಾ ಆಯೋಗಕ್ಕೆ ಇಂತಹ ವಿವಾದಗಳು ಹೊಸವೇನೂ ಅಲ್ಲ. 1992ರಲ್ಲಿ ಅಸ್ತಿತ್ವಕ್ಕೆ ಬಂದಲಾಗಾಯ್ತಿನಿಂದಲೂ ಅದು ಒಂದಿಲ್ಲೊಂದು ತೊಡಕುಗಳಿಗೆ ಸಿಲುಕಿಕೊಳ್ಳುತ್ತಲೇ ಇದೆ. ಅಧ್ಯಕ್ಷೆಯರ ಹೇಳಿಕೆಗಳು ರಾಜಕೀಯ ರಂಗಿನಿಂದ ಚರ್ವಿತಚರ್ವಣ ರೂಪ ಪಡೆಯುತ್ತಾ, ಕಡೆಗೆ ನಿಜವಾದ ಸಮಸ್ಯೆಯೇ ತೀವ್ರತೆ ಕಳೆದುಕೊಂಡು ಮೂಲೆಗುಂಪಾಗಿಬಿಡುತ್ತಿದೆ.

ಮಮತಾ ಶರ್ಮ ಅಧ್ಯಕ್ಷರಾಗಿ ಆಯ್ಕೆಯಾಗುವಾಗಲೇ ವಿವಾದ ಎಬ್ಬಿಸಿದ್ದವರು. ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ರಾಜಸ್ತಾನ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದ್ದ ಅವರ ನೇಮಕಕ್ಕೆ ಪಕ್ಷದೊಳಗೇ ವಿರೋಧ ಇತ್ತು. ಕಡೆಗೆ ಈ ಆರೋಪದಲ್ಲಿ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ ಪ್ರಧಾನಿ ಕಚೇರಿ, ಅವರ ಆಯ್ಕೆಗೆ ಹಸಿರು ನಿಶಾನೆ ತೋರಿತ್ತು.

ಲಂಪಟ ಹೆಂಡತಿಯ ವಿರುದ್ಧ ಗಂಡ ಕಾನೂನು ಕ್ರಮಕ್ಕೆ ಮುಂದಾಗುವಂತಿಲ್ಲ ಎಂಬ ಅಭಿಪ್ರಾಯ 2006ರ ಕೊನೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದಿಂದ ವ್ಯಕ್ತವಾಯಿತು. ದಾರಿ ತಪ್ಪುವ ಮಹಿಳೆಯರನ್ನು ಗಂಡಸರಿಗೆ ಸರಿಸಮನಾಗಿ ದಂಡಿಸಬಾರದು, ಏಕೆಂದರೆ ಮಹಿಳೆಯರು ಎಂದಿಗೂ ತಪ್ಪಿತಸ್ಥರಲ್ಲ, ಅವರೇನಿದ್ದರೂ ಸಂತ್ರಸ್ತರಷ್ಟೇ ಎಂದು ಆಯೋಗದ ಅಧ್ಯಕ್ಷೆ ಗಿರಿಜಾ ವ್ಯಾಸ್ ವಾದಿಸಿದ್ದರು. ಬಹಳಷ್ಟು ಮಹಿಳೆಯರೇ ಇದನ್ನು ವಿರೋಧಿಸಿದ್ದರು.

ನಮ್ಮ ಕರ್ನಾಟಕದ ಮಹಿಳಾ ಆಯೋಗ ಸಹ ಇಂತಹ ದೂರುಗಳಿಂದ, ವಿವಾದಗಳಿಂದ ಹೊರತಾಗಿಲ್ಲ. 2009ರ ಜನವರಿಯಲ್ಲಿ ಮಂಗಳೂರಿನ ಬಾರೊಂದರಲ್ಲಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಶ್ರೀರಾಮ ಸೇನೆ ಏಕಾಏಕಿ ದಾಳಿ ನಡೆಸಿ, ಅಲ್ಲಿದ್ದ 8 ಯುವತಿಯರನ್ನು ಅಟ್ಟಾಡಿಸಿ ಹೊಡೆದದ್ದು, ಕೂದಲು ಹಿಡಿದು ಎಳೆದಾಡಿದ್ದು, ಪಬ್‌ನಿಂದ ಹೊರಕ್ಕೆ ತಳ್ಳಿದ್ದು ದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು.

ಒಂದು ವೇಳೆ ಆ ಯುವತಿಯರು ಅಲ್ಲಿ ಅನುಚಿತವಾಗಿ ವರ್ತಿಸಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಇದೆ, ನ್ಯಾಯಾಂಗ ಇದೆ. ಹಾಗಿದ್ದರೂ ಕಾನೂನನ್ನು ಕೈಗೆತ್ತಿಕೊಂಡು ತಮ್ಮಿಷ್ಟ ಬಂದಂತೆ `ತಪ್ಪಿತಸ್ಥರನ್ನು~ ಶಿಕ್ಷಿಸಲು ಹೊರಟ ಶ್ರೀರಾಮ ಸೇನೆಯ ಕ್ರಮ ಪ್ರಜ್ಞಾವಂತ ನಾಗರಿಕರಲ್ಲಿ ದಿಗ್ಭ್ರಮೆ ಮೂಡಿಸಿತ್ತು.

ಹೀಗಿರುವಾಗ ಘಟನೆಯ ಸತ್ಯಾಸತ್ಯತೆ ಪರಿಶೀಲನೆಗೆಂದು ಬಂದ, ಕರ್ನಾಟಕದವರೇ ಆದ ಎನ್‌ಸಿಡಬ್ಲ್ಯು ಸದಸ್ಯೆ ನಿರ್ಮಲಾ ವೆಂಕಟೇಶ್ `ಪಬ್‌ನಲ್ಲಿ ಸೂಕ್ತ ಭದ್ರತೆ ಇರಲಿಲ್ಲ, ಹೀಗಾಗಿ ಯುವತಿಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಿತ್ತು. ಅವರು ಧರಿಸಿದ್ದ ಪ್ರಚೋದನಾತ್ಮಕ ಉಡುಪೇ ಇಷ್ಟಕ್ಕೆಲ್ಲಾ ಕಾರಣ~ ಎಂದು ಜರಿದಿದ್ದರು.

ಇದು ಸಮಾಜದಲ್ಲಿ ಕೋಲಾಹಲ ಸೃಷ್ಟಿಸಿದ ಬಳಿಕ ನಿರ್ಮಲಾ ಅವರ ವರದಿಯನ್ನು ಒಪ್ಪಿಕೊಳ್ಳದಿರಲು ಆಯೋಗ ತೀರ್ಮಾನಿಸಿತು. ಆದರೆ ಅದು ಸತ್ಯಶೋಧನೆಗಾಗಿ ಮಂಗಳೂರಿಗೆ ಮತ್ತೊಂದು ತಂಡವನ್ನು ಕಳುಹಿಸುವ ಕಷ್ಟವನ್ನೇ ತೆಗೆದುಕೊಳ್ಳಲಿಲ್ಲ. ಟೀಕಾಸ್ತ್ರಗಳ ಸುರಿಮಳೆ ಅತಿಯಾದಾಗ, ಅಶಿಸ್ತಿನ ಕಾರಣದ ಮೇಲೆ ನಿರ್ಮಲಾ ಅವರನ್ನು ಆಯೋಗದಿಂದ ತೆಗೆದುಹಾಕಲು ಪ್ರಧಾನಿ ಕಚೇರಿ ಒಪ್ಪಿಗೆ ನೀಡಿತು. ಇದರ ಪರಿಣಾಮವೆಂದರೆ, ಆವರೆಗೂ ಕಾಂಗ್ರೆಸ್ ಪಕ್ಷದಲ್ಲಿದ್ದ ನಿರ್ಮಲಾ ಬಳಿಕ ಬಿಜೆಪಿ ಸೇರಿಕೊಂಡರು.

ಅದೇ ಮಂಗಳೂರಿನ ಪಡೀಲ್ ಹೋಂ ಸ್ಟೇಯಲ್ಲಿ ಇತ್ತೀಚೆಗೆ ನಡೆಯುತ್ತಿದ್ದ ಹುಟ್ಟುಹಬ್ಬದ ಪಾರ್ಟಿ ಮೇಲೆ ಎರಗಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಅಲ್ಲಿದ್ದ ಯುವತಿಯರನ್ನು ಹೇಗೆಂದರೆ ಹಾಗೆ ಎಳೆದಾಡಿ ದೌರ್ಜನ್ಯ ಎಸಗಿದಾಗಲೂ ರಾಜ್ಯ ಆಯೋಗದ ಪ್ರತಿಕ್ರಿಯೆ ಇದೇ ಮಾದರಿಯದಾಗಿತ್ತು. ಆದರೆ ವ್ಯಕ್ತಿ ಮಾತ್ರ ಬದಲಾಗಿದ್ದರು ಅಷ್ಟೆ. ಘಟನಾ ಸ್ಥಳಕ್ಕೆ ತೆರಳಿದ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ, ಮುಂಜಾಗ್ರತೆ ವಹಿಸದ ಪೊಲೀಸರ ನಿರ್ಲಕ್ಷ್ಯವೇ ಇಷ್ಟಕ್ಕೆಲ್ಲಾ ಕಾರಣ ಎಂದು ಹೇಳಿ ಕೈತೊಳೆದುಕೊಂಡರು.

ಮಂಜುಳಾ ಅವರ ರಾಜಕೀಯ ಹಿನ್ನೆಲೆ ತಿಳಿದವರ‌್ಯಾರಿಗೂ ಅವರ ಇಂತಹ ಹೇಳಿಕೆ ಅಚ್ಚರಿಯನ್ನೇನೂ ಮೂಡಿಸದು. ಬಿಜೆಪಿಯ ಸಕ್ರಿಯ ಕಾರ್ಯಕರ್ತೆಯಾಗಿದ್ದ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು ಸಹಜವಾಗಿಯೇ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸರ್ಕಾರದ ಆಯ್ಕೆಯಾಗಿದ್ದರು.

ಹೀಗಿರುವಾಗ ಬಿಜೆಪಿಯ ಅಂಗ ಸಂಘಟನೆಯೊಂದರ ವಿರುದ್ಧ ದನಿ ಎತ್ತಲು, ಅದರ ದುಂಡಾ ವರ್ತನೆಯನ್ನು ಖಂಡಿಸಲು ಅವರಿಗೆ ಹೇಗೆ ತಾನೇ ಸಾಧ್ಯವಾಗುತ್ತದೆ? ಅವರಿಂದ ಇನ್ನೆಂತಹ ಪ್ರತಿಕ್ರಿಯೆಯನ್ನು ತಾನೇ ನಾವು ನಿರೀಕ್ಷಿಸಲು ಸಾಧ್ಯ?
ಅವರ ನಂತರ ಮಂಗಳೂರಿಗೆ ಬಂದ ಎನ್‌ಸಿಡಬ್ಲ್ಯು ಸದಸ್ಯೆ ಶಮೀನಾ ಶಫೀಕ್ ಅವರ ಪ್ರತಿಕ್ರಿಯೆಯೂ ಮಂಜುಳಾರ ವರದಿಯನ್ನು ಖಂಡಿಸುವ ಸಲುವಾಗಿಯೇ ಅವರಿಲ್ಲಿಗೆ ಬಂದರೇನೋ ಎಂಬಂತಿತ್ತು.

ಉತ್ತರ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಮತ್ತು ಎಐಸಿಸಿ ಸದಸ್ಯತ್ವದಂತಹ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿರುವ ನಿಷ್ಠಾವಂತ ಕಾಂಗ್ರೆಸ್ ಸದಸ್ಯೆ ಶಮೀನಾ ಅವರ ಭೇಟಿ ಸಂಪೂರ್ಣ ರಾಜಕೀಯ ಪ್ರೇರಿತ ಆಗಿದ್ದುದರಲ್ಲಿ ಅಚ್ಚರಿಯೇನೂ ಇಲ್ಲ.
`ಅಂತರ ರಾಷ್ಟ್ರೀಯ ಖ್ಯಾತಿ ಪಡೆದಿರುವ ಮಂಗಳೂರು ಸಾಂಸ್ಕೃತಿಕವಾಗಿಯೂ ಸಂಪದ್ಭರಿತವಾಗಿದೆ.
 
ಇಂತಹ ನಗರದ ಪ್ರತಿಷ್ಠೆ ಕಾಯ್ದುಕೊಳ್ಳಲು ಈ ಬಗೆಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು~ ಎಂದು ಮಂಜುಳಾ ಹೇಳಿದ್ದರು. ಮಂಗಳೂರಿನ ಬಗ್ಗೆ ಇಷ್ಟೆಲ್ಲಾ ಕಳಕಳಿ ಮಹಿಳಾ ಆಯೋಗದ ಅಧ್ಯಕ್ಷರಿಗಿದ್ದರೂ, ಹಿಂದೊಮ್ಮೆ ಇಂತಹುದೇ ಘಟನೆ ಅಲ್ಲಿ ಜರುಗಿ ಸಾಕಷ್ಟು ಖಂಡನೆಗೆ ಗುರಿಯಾಗಿದ್ದರೂ ಆಯೋಗದ ಒಬ್ಬ ಪ್ರತಿನಿಧಿಯೂ ಈ ಜಿಲ್ಲೆಯಲ್ಲಿ ಇಲ್ಲ ಎಂಬುದು ಮಾತ್ರ ವಾಸ್ತವ.
 
30 ಜಿಲ್ಲೆಗಳಲ್ಲಿ ಕೇವಲ 7 ಕಡೆ ಸರ್ಕಾರ ಆಯೋಗಕ್ಕೆ ಅಧಿಕಾರಿಗಳನ್ನು ನಿಯೋಜಿಸಿದೆ. ಉಳಿದೆಲ್ಲ ಜಿಲ್ಲೆಗಳ ಸಂತ್ರಸ್ತರೂ ತಮ್ಮ ದೂರು ದುಮ್ಮಾನ ಹೇಳಿಕೊಳ್ಳಲು ಬೆಂಗಳೂರಿನಲ್ಲಿರುವ ಆಯೋಗದ ಕಚೇರಿಗೇ ಬರಬೇಕು. ಸಂಸ್ಕೃತಿಯ ಹೆಸರಿನಲ್ಲಿ ಮಹಿಳೆಯರು ನೈತಿಕ ಪೊಲೀಸರ ಕ್ರೌರ್ಯಕ್ಕೆ ತುತ್ತಾಗುತ್ತಲೇ ಇರುವ ಮಂಗಳೂರು, ಅಧಿಕಾರಿಗಳು ಇಲ್ಲದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಸೇರಿದೆ.

ಕೃಪಾಕಟಾಕ್ಷ ಹೊತ್ತವರು
ಆಯೋಗದ ಅಧ್ಯಕ್ಷೆಯರ ಇಂತಹ ಎಲ್ಲ ಪ್ರಮಾದಗಳಿಗೆ ಬಹು ಮುಖ್ಯ ಕಾರಣ ಅವರ ಆಯ್ಕೆ ಪ್ರಕ್ರಿಯೆ ಮತ್ತು ಅವರಿಗೆಲ್ಲಾ ಇರುವ ರಾಜಕೀಯ ಹಿನ್ನೆಲೆ. ಆಯಾಯ ಆಡಳಿತಾರೂಢ ಪಕ್ಷಗಳು ಚುನಾವಣಾ ಲೆಕ್ಕಾಚಾರದ ಮೇಲೆ ಬಹುತೇಕ ತಮ್ಮ ಮಹಿಳಾ ಅಭ್ಯರ್ಥಿಗಳನ್ನೇ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಕ ಮಾಡುತ್ತವೆ.

ಇಂತಹ ಕೃಪಾಕಟಾಕ್ಷ ಹೊತ್ತು ಕೃತಾರ್ಥರಾಗುವ ಅವರು ಸಮಾಜಘಾತುಕ ಶಕ್ತಿಗಳನ್ನು ಬಗ್ಗುಬಡಿಯಲು ಕಟಿಬದ್ಧವಾಗಬೇಕಾದ, ಮಂಗಳೂರಿನಂತಹ ಘಟನೆಗಳ ನೈತಿಕ ಹೊಣೆ ಹೊರಬೇಕಾದ ಸರ್ಕಾರದ ಮೇಲೆ ಅಥವಾ ಅಧಿಕಾರಾರೂಢರ ಬೆಂಬಲದ ಬಲದಿಂದಲೇ ದುಷ್ಕೃತ್ಯಗಳಲ್ಲಿ ತೊಡಗುವ ಸಂಘಟನೆಗಳ ಮೇಲಿನ ಆರೋಪಗಳನ್ನು ಎತ್ತಿ ಹಿಡಿಯುವುದು ಸುಲಭದ ಮಾತಲ್ಲ.

ಇದಕ್ಕೆ ಇನ್ನೊಂದು ಜ್ವಲಂತ ಉದಾಹರಣೆ ಗುಜರಾತ್‌ನ ಕೋಮು ಗಲಭೆ. ಗೋಧ್ರಾ ಹತ್ಯಾಕಾಂಡದ ನಂತರ ಗುಜರಾತ್ ಹೊತ್ತಿ ಉರಿದದ್ದು, ರೈಲು ಬೋಗಿಗಳಲ್ಲಿ ರಾಮಭಕ್ತರನ್ನು ಸಜೀವವಾಗಿ ದಹಿಸಿದ್ದಕ್ಕೆ ಪ್ರತಿಯಾಗಿ ನೂರಾರು ಅಲ್ಪಸಂಖ್ಯಾತರ ಮಾರಣಹೋಮ ನಡೆದದ್ದು ಜಗಜ್ಜನಿತ. ಹೀಗಿರುವಾಗ ಎನ್‌ಸಿಡಬ್ಲ್ಯು ಸತ್ಯಶೋಧನಾ ಸಮಿತಿಯ ಆಗಿನ ನಡೆ ಮಾತ್ರ ಇಂತಹದ್ದೊಂದು ಆಯೋಗದ ಔಚಿತ್ಯವನ್ನೇ ಪ್ರಶ್ನೆ ಮಾಡುವಂತಿತ್ತು.

ಗಲಭೆ ಯಾವುದೇ ಒಂದು ಕೋಮನ್ನು ಗುರಿಯಾಗಿಸಿಕೊಂಡಿರಲಿಲ್ಲ ಎಂದು ಮಹಿಳಾ ಆಯೋಗ ವರದಿ ನೀಡಿತ್ತು. ಇದು ರಾಷ್ಟ್ರೀಯ ಮಾನವ ಹಕ್ಕು ಆಯೋಗ (ಎನ್‌ಎಚ್‌ಆರ್‌ಸಿ) ಮತ್ತು ಸುಪ್ರೀಂಕೋರ್ಟ್ ಗಮನಕ್ಕೆ ಬಂದಿದ್ದ ವರದಿಗಳಿಗೆ ತದ್ವಿರುದ್ಧವಾದ ಅಭಿಪ್ರಾಯವಾಗಿತ್ತು.

ಈ ಮೂಲಕ ಮಹಿಳಾ ಆಯೋಗ ಸುಪ್ರೀಂಕೋರ್ಟ್‌ನ ಕೆಂಗಣ್ಣಿಗೂ ಗುರಿಯಾಯಿತು. ಆ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರಲ್ಲೂ ಒಂದೇ ಪಕ್ಷ ಅಧಿಕಾರದಲ್ಲಿ ಇದ್ದುದು ಗಮನಾರ್ಹ.

ಸಂವೇದನೆ ಇಲ್ಲದವರು
ರಾಷ್ಟ್ರೀಯ ಆಯೋಗವೇ ಇರಲಿ, ರಾಜ್ಯ ಆಯೋಗಗಳೇ ಆಗಿರಲಿ ಅವುಗಳ ಈಗಿನ ದುಃಸ್ಥಿತಿಗೆ ಪ್ರಮುಖ ಮಹಿಳಾ ಕಾರ್ಯಕರ್ತರು ಸಾಕಷ್ಟು ಕಾರಣಗಳನ್ನು ಬೊಟ್ಟು ಮಾಡುತ್ತಾರೆ. ಮಹಿಳೆಯರ ಹಕ್ಕುಗಳ ಸಂರಕ್ಷಣೆಗೆ ಬದ್ಧರಾಗಿರಬೇಕಾದ ರಾಷ್ಟ್ರೀಯ ಆಯೋಗದ ಅಧ್ಯಕ್ಷರನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಆಯೋಗಗಳ ಅಧ್ಯಕ್ಷರನ್ನು ಆಯಾಯ ರಾಜ್ಯ ಸರ್ಕಾರಗಳು ನೇಮಿಸುತ್ತವೆ.
 
ಸಹಜವಾಗಿಯೇ ಅವರು ಆಡಳಿತಾರೂಢ ಪಕ್ಷಕ್ಕೆ ಸೇರಿರುವುದರಿಂದ ಆಯೋಗದ ಕಾರ್ಯಚಟುವಟಿಕೆಗಳಲ್ಲಿ ಇತರ ಸಂಘ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಹೆಚ್ಚಾಗಿ ಇರುವುದಿಲ್ಲ. ಮಹಿಳಾ ಚಳವಳಿಯ ಮೂಸೆಯಿಂದ ಅರಳಿ ಬಂದವರು ಸಹ ಅವರಾಗಿಲ್ಲದಿರುವುದರಿಂದ ಸ್ತ್ರೀ ಸಂವೇದನೆಗಳ ಸೂಕ್ಷ್ಮ ಗ್ರಹಿಕೆಯ ಕೊರತೆಯೂ ಅವರಿಗೆ ಇದ್ದೇ ಇರುತ್ತದೆ.
 
ಹೀಗಾಗಿ ಯಾರಿಗಾಗಿ ಆಯೋಗ ಅಸ್ತಿತ್ವಕ್ಕೆ ಬಂದಿದೆಯೋ ಅವರ ಬಗ್ಗೆ ಕಾಳಜಿಯೇ ಇಲ್ಲದೆ ಅದು ಕೇವಲ ರಾಜಕೀಯ ಆಜ್ಞಾನುವರ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಹೀಗೆ ಮಹಿಳಾ ಸಬಲೀಕರಣದ ಮಾರ್ದನಿಯಾಗಬೇಕಾದ ಮಹತ್ವದ ಸ್ಥಾನವೊಂದು ರಾಜಕೀಯ ಹಿಂಬಾಲಕರ ಆಶ್ರಯ ತಾಣವಾಗುತ್ತಿದೆ.
 
ಅದರ ಫಲಶ್ರುತಿಯಾಗಿ, ಮಹಿಳಾ ಆಯೋಗ ಮತ್ತು ಮಹಿಳಾ ಸಂಘಟನೆಗಳ ನಡುವಿನ ಅಂತರ ಹೆಚ್ಚುತ್ತಲೇ ಹೋಗುತ್ತಿದೆ, ವಿವೇಚನೆಯಿಂದ, ವಿಶಾಲ ದೃಷ್ಟಿಕೋನದಿಂದ ಬಗೆಹರಿಸಬೇಕಾದ ಮಹಿಳಾಪರ ಸಮಸ್ಯೆಗಳಿಗೆ ರಾಜಕೀಯ ರಾಡಿ ಮೆತ್ತಿಕೊಳ್ಳುತ್ತಿದೆ ಎಂದು ಅವರು ವಿಶ್ಲೇಷಿಸುತ್ತಾರೆ.

ಮಹಿಳೆಯರ ಮೇಲಿನ ಹಿಂಸಾಚಾರಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ವಿಫಲವಾಗಿರುವ ಆಯೋಗದ ನಡವಳಿಕೆಯಿಂದ ಭ್ರಮನಿರಸನಗೊಂಡಿರುವ ದೇಶದಾದ್ಯಂತದ 90ಕ್ಕೂ ಹೆಚ್ಚು ಮಹಿಳಾ ಸಂಘಟನೆಗಳು ಆಯೋಗದ ಪುನಶ್ಚೇತನಕ್ಕೆ, ಸಿಬ್ಬಂದಿಯ ಪಾರದರ್ಶಕ ನೇಮಕಕ್ಕೆ ಒಕ್ಕೊರಲಿನಿಂದ ಆಗ್ರಹಿಸಿವೆ.

ಮಹಿಳಾ ಆಯೋಗ ನಿಜವಾದ ಅರ್ಥದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಾಮಾಜಿಕ, ಆರ್ಥಿಕ ಹಾಗೂ ಕಾನೂನು ಸುಧಾರಣೆಗೆ ಶ್ರಮಿಸಬೇಕಾದರೆ ಮೊದಲು ಅದರ ಅಧ್ಯಕ್ಷರು ಮತ್ತು ಸದಸ್ಯರಆಯ್ಕೆ ಪ್ರಜಾಸತ್ತಾತ್ಮಕವಾಗಿ, ನಿಷ್ಪಕ್ಷಪಾತವಾಗಿ ನಡೆಯುವಂತಾಗಬೇಕು.
ಆ ಮೂಲಕ ಇಡೀ ಆಯೋಗದ ಸಾಂಸ್ಥಿಕ ಸುಧಾರಣೆ ಹಾಗೂ ಸಮಗ್ರ ಪರಾಮರ್ಶೆ ಆಗಬೇಕು. ಅದಿಲ್ಲದೆ ಬರೀ ವಿವಾದಗಳನ್ನು ಹುಟ್ಟುಹಾಕುವುದರಲ್ಲೇ ತೃಪ್ತಿ ಕಾಣುವಂತಾದರೆ, ಆಯೋಗ ಮುಂದೆಯೂ ಈಗಿನಂತೆ ಬರೀ ಕಾಗದದ ಹುಲಿಯಾಗಿಯೇ ಇರಬೇಕಾಗುತ್ತದೆ ಅಷ್ಟೆ.  

ಪಾರದರ್ಶಕ ಆಯ್ಕೆ ಆಗಲಿ
ರಾಜಕೀಯ ಮಧ್ಯಸ್ಥಿಕೆಯಿಂದಲೇ ಮಹಿಳಾ ಆಯೋಗ ಅಂಗವಿಕಲವಾಗಿದೆ ಎಂದು ಹೇಳಬಹುದು. ನಿಸ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎನ್ನುವ ಮನಸ್ಸಿದ್ದರೂ ಹಾಗೆ ಮಾಡಲು ಆಯೋಗದ ಅಧ್ಯಕ್ಷರಿಂದ/ ಸದಸ್ಯರಿಂದ ಸಾಧ್ಯವಾಗುತ್ತಿಲ್ಲ.



ರಾಜಕೀಯ ದಯೆಯಿಂದ ಆ ಕುರ್ಚಿಯಲ್ಲಿ ಕುಳಿತ ಅವರು ಹಾಗೆ ವರ್ತಿಸಬೇಕಾದ ಅನಿವಾರ್ಯಕ್ಕೆ ಸಿಲುಕಿದಂತಾಗುತ್ತದೆ. ರಾಜಕೀಯ ಹಿಡಿತದಿಂದ ಬಿಡುಗಡೆ ಹೊಂದುವವರೆಗೂ ಮಹಿಳಾ ಆಯೋಗದಿಂದ ಯಾವುದೇ ರೀತಿಯ ಉತ್ತಮ ಕಾರ್ಯಗಳ ಅಪೇಕ್ಷೆ ಮಾಡುವಂತಿಲ್ಲ ಎಂಬುದು ಸುಸ್ಪಷ್ಟ.

ಸಾರ್ವಜನಿಕ ವಲಯದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಮಹಿಳೆಯರನ್ನು ಆಯೋಗಕ್ಕೆ ಆಯ್ಕೆ ಮಾಡಬೇಕು. ಮಹಿಳೆಯರ ಬಗ್ಗೆ ಕಾಳಜಿ ಇರುವ ಪುರುಷರನ್ನು ಸದಸ್ಯರ ಪಟ್ಟಿಗೆ ಸೇರಿಸಿದರೂ ತಪ್ಪಿಲ್ಲ. ಮಹಿಳಾ ಆಯೋಗ ಎನ್ನುವುದು ಪುರುಷ ದ್ವೇಷಿ ಸಂಘಟನೆಯಲ್ಲ.

ಮಹಿಳೆಯರ ಬಗ್ಗೆ ನಡೆಯುವ ದೌರ್ಜನ್ಯದ ವಿರುದ್ಧ ನಿಜವಾದ ಅರ್ಥದಲ್ಲಿ ಕೆಲಸ ಮಾಡುವ ಮನಸ್ಸುಗಳು ಮಹಿಳಾ ಆಯೋಗಕ್ಕೆ ಸೇರ್ಪಡೆಯಾಗಬೇಕು. ಅದೊಂದು ಸಂಪೂರ್ಣ ಸ್ವತಂತ್ರ ಆಯೋಗವಾಗಬೇಕು. ಅಗತ್ಯ ಸೌಲಭ್ಯಗಳನ್ನು ನೀಡಬೇಕು. ಲೋಕಾಯುಕ್ತರ ಆಯ್ಕೆಯ ಮಾದರಿಯಲ್ಲಿ ಪಾರದರ್ಶಕ ಆಯ್ಕೆ ನಡೆಯಬೇಕು.
-ಹೇಮಲತಾ ಮಹಿಷಿ, ಲೇಖಕಿ/ ಕಾನೂನು ತಜ್ಞೆ

ಸಕ್ರಿಯ ಸಹಭಾಗಿತ್ವ ಅಗತ್ಯ
ಮಹಿಳಾ ಆಯೋಗ ತನ್ನ ಕ್ಷೇತ್ರವೇನು, ತಾನೇನು ಕೆಲಸ ಮಾಡಬಹುದು, ಹೇಗೆ ಕಾರ್ಯ ನಿರ್ವಹಿಸಬಹುದು ಎಂಬ ಬಗ್ಗೆ ಸ್ಪಷ್ಟ ನಿಲುವು ಹೊಂದಬೇಕಾದ ಅಗತ್ಯವಿದೆ. ಏಕೆಂದರೆ ಅದರ ಕಾರ್ಯಕ್ಷೇತ್ರ ಬಹಳ ವಿಶಾಲವಾಗಿದೆ.



ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ. ಸಹಜವಾಗಿಯೇ ಸಮಸ್ಯೆಗಳೂ ಹೆಚ್ಚುತ್ತಿವೆ. ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಹಾಗೂ ಅವರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ನಿಷ್ಪಕ್ಷಪಾತ ಕ್ರಮ ಕೈಗೊಳ್ಳಬೇಕಾದ ಹೊಣೆ ಆಯೋಗದ ಮೇಲಿದೆ.

ಆದರೆ ಆಯೋಗದ ಅಧ್ಯಕ್ಷರಿಂದ/ ಸದಸ್ಯರಿಂದ ನಿರೀಕ್ಷಿತ ಮಟ್ಟದ ಕೆಲಸ- ಕಾರ್ಯಗಳು ಆಗುತ್ತಿಲ್ಲ. ಯಾವುದೇ ಒಂದು ಪ್ರಕರಣವನ್ನು ತೆಗೆದುಕೊಂಡು ನಮ್ಮ ಸಂಘದಿಂದ ಆಯೋಗದ ಬಾಗಿಲಿಗೆ ಹೋದಾಗಲೂ ಹೆಚ್ಚಿನ ಸಂದರ್ಭಗಳಲ್ಲಿ ನಿರಾಸೆಯೇ ಕಾದಿರುತ್ತದೆ. ಒಂದು ಕೆಲಸಕ್ಕೆ ಹತ್ತಾರು ಬಾರಿ ಓಡಾಡಬೇಕು. ಅಗತ್ಯವಿದ್ದಾಗ ಅಧಿಕಾರಿಗಳು ಸಿಗುವುದೇ ಇಲ್ಲ.

ಆಯೋಗದ ಅಧಿಕಾರಿಗಳಿಂದ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಗದೇ ನಾವು ಸಾಕಷ್ಟು ತೊಂದರೆ ಅನುಭವಿಸುತ್ತೇವೆ. ಮಹಿಳೆಯರಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಬಗ್ಗೆ ಅವರಿಗೆ ಸಾಕಷ್ಟು ಜ್ಞಾನವೂ ಇರುವುದಿಲ್ಲ. ಆಯಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಬಹುದು ಎಂಬುದನ್ನೂ ಎಷ್ಟೋ ಬಾರಿ ನಾವೇ ಹೇಳಬೇಕಾಗಿ ಬರುತ್ತದೆ.
 
ಒಟ್ಟಾರೆ ಹೇಳಬೇಕೆಂದರೆ ಮಹಿಳಾ ಆಯೋಗಕ್ಕೆ ಸಕ್ರಿಯ ಸಹಭಾಗಿತ್ವದ ಅಗತ್ಯವಿದೆ. ಮನಸ್ಸು ಮಾಡಿದರೆ ಅದು ಸಾಕಷ್ಟು ಕೆಲಸಗಳನ್ನು ಮಾಡುವ ಮೂಲಕ ಇತರ ಆಯೋಗಗಳಿಗೂ ಮಾದರಿಯಾಗಬಹುದು.
-ಉಷಾ ಬಿ.ಎನ್, ಹೆಂಗಸರ ಹಕ್ಕಿನ ಸಂಘ

ತಪ್ಪು ತಿದ್ದಿಕೊಳ್ಳಲಿ
ಮಹಿಳಾ ಆಯೋಗಕ್ಕೆ ತನ್ನದೇ ಆದ ಗೊಂದಲಗಳಿವೆ. ತನ್ನ ಅಧಿಕಾರದ ವ್ಯಾಪ್ತಿಯೇ ಅದಕ್ಕೆ ತಿಳಿದಂತಿಲ್ಲ. ಯಾವುದೇ ಒಂದು ವಿಷಯದ ಬಗ್ಗೆ ಪೂರ್ವಾಪರ ಆಲೋಚಿಸದೇ ಮಾತನಾಡುವ ಅಧ್ಯಕ್ಷರು/ ಸದಸ್ಯರಿಂದ ನಾವೇನು ನಿರೀಕ್ಷಿಸಲು ಸಾಧ್ಯ?
ಆದರೆ ಮನುಷ್ಯ ತಪ್ಪುಗಳಿಂದ ಕಲಿಯುತ್ತಾ ಹೋಗುತ್ತಾನೆ.



ಈಗಲಾದರೂ ಅದು ಎಚ್ಚೆತ್ತುಕೊಂಡು ತನ್ನ ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತವಾಗಬೇಕು. ಮಹಿಳಾ ಆಯೋಗ ಯಾವುದೇ ರಾಜಕೀಯ ಪಕ್ಷದ ಮುಖವಾಣಿಯಲ್ಲ, ಮಹಿಳೆಯರ ಪರವಾಗಿ ಕೆಲಸ ಮಾಡಲು ಇರುವ ಒಂದು ಸಂಸ್ಥೆ ಎಂಬುದನ್ನು ಮನಗಾಣಬೇಕು. ಕರ್ನಾಟಕ ಮಹಿಳಾ ಸಮಾಜ ಅದರತ್ತ ಭರವಸೆಯ ಕಣ್ಣುಗಳಿಂದ ನೋಡುತ್ತಿದೆ.

ಆ ಮಹಿಳಾ ಸಮಾಜಕ್ಕೆ ಇನ್ನೂ ನಿರಾಸೆಯನ್ನೇ ಮೂಡಿಸದೆ ಅವರ ನಿರೀಕ್ಷೆಯನ್ನು ಮುಟ್ಟಬೇಕು. ಕೇವಲ ಪತ್ರಿಕಾಗೋಷ್ಠಿಗಳಲ್ಲಿ ಬಾಲಿಶ ಹೇಳಿಕೆಗಳನ್ನು ಕೊಡುವುದು ಮುಖ್ಯವಲ್ಲ, ಸಮಾಜದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಇನ್ನೂ ಪರಿಣಾಮಕಾರಿಯಾಗಿ ತಡೆಗಟ್ಟುವುದು ಹೇಗೆ, ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಆಲೋಚಿಸುವುದು, ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸುವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈಗಾಗಲೇ ಆಗಿರುವ ಪ್ರಮಾದವನ್ನು ಸರಿಪಡಿಸಿಕೊಳ್ಳಬೇಕು.
 
ಅದು ತನ್ನಿಂದ ಸಾಧ್ಯವಿಲ್ಲ ಎಂದಾದರೆ ಅದರ ಅಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಮತ್ತು ರಾಜಕೀಯ ಕಪಿಮುಷ್ಟಿಯಿಂದ ಮುಕ್ತವಾಗಿ ಕೆಲಸ ಮಾಡುವ ಮಹಿಳಾ ಪರ ಹಿತ ಚಿಂತಕರು ಆ ಸ್ಥಾನಕ್ಕೆ ಆಯ್ಕೆಯಾಗಬೇಕು.
-ವಸುಂಧರಾ ಭೂಪತಿ, ಅಧ್ಯಕ್ಷೆ, ಕರ್ನಾಟಕ ಲೇಖಕಿಯರ ಸಂಘ
 
ಗಿರಿ ವಿಷಾದ
1995ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಹೊಸ ರೂಪ ಕೊಡಲು ಸಾಕಷ್ಟು ಶ್ರಮಿಸಿದ ಆಗಿನ ಅಧ್ಯಕ್ಷೆ ಮೋಹಿನಿ ಗಿರಿ, ಆಯೋಗದ ಈಚಿನ ವರ್ಷಗಳ ಅಪ್ರಬುದ್ಧ

ಕಾರ್ಯನಿರ್ವಹಣೆಗೆ ವಿಷಾದ ವ್ಯಕ್ತಪಡಿಸುತ್ತಾರೆ.

ಆಡಳಿತಾರೂಢ, ವಿರೋಧ ಪಕ್ಷದಿಂದ ತಲಾ ಇಬ್ಬರು, ಇತರ ಕ್ಷೇತ್ರಗಳಿಂದ ಇಬ್ಬರು ಪ್ರಮುಖರನ್ನು ಒಳಗೊಂಡ ಆಯ್ಕೆ ಸಮಿತಿ ರಚನೆ, ಎನ್‌ಎಚ್‌ಆರ್‌ಸಿ ಮಾದರಿಯಲ್ಲಿ ಸೂಕ್ತ ತನಿಖಾ ಘಟಕ ಅಸ್ತಿತ್ವಕ್ಕೆ ತರಬೇಕೆಂಬ ಶಿಫಾರಸುಗಳನ್ನು ಅವರು ಸರ್ಕಾರಕ್ಕೆ ಮಾಡಿದ್ದರು.
ಆದರೆ ಅವರ ಈ ಶಿಫಾರಸುಗಳೆಲ್ಲಾ ಕಸದ ಬುಟ್ಟಿ ಸೇರಿದವು.

ಆಯೋಗಕ್ಕೆ ಸ್ವಾಯತ್ತತೆ ದೊರಕಿಸುವ ಪ್ರಯತ್ನದಲ್ಲೂ ಗಿರಿ ಹಿಂದುಳಿದಿರಲಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಅನಗತ್ಯ ಮೂಗುತೂರಿಸುವಿಕೆಯಿಂದ ಬೇಸತ್ತಿದ್ದ ಅವರು, ಆಗಿನ ಪ್ರಧಾನಿ ಎಚ್.ಡಿ.ದೇವೇಗೌಡರ ಬಳಿ ತೆರಳಿ ರಾಜೀನಾವೆು ಸಲ್ಲಿಸಲು ಮುಂದಾಗಿದ್ದರು. ಸಚಿವಾಲಯದ ಮಧ್ಯಪ್ರವೇಶ ತಡೆಗಟ್ಟುವ ಭರವಸೆ ಆಗ ಅವರಿಗೆ ದೊರಕಿತ್ತು. ಆದರೆ ಅದು ಕಾರ್ಯರೂಪಕ್ಕೆ ಮಾತ್ರ ಬರಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT