ಕುಷ್ಟಗಿ: ಭ್ರಷ್ಟಾಚಾರ ತನಿಖೆಗೆ ಆದೇಶ
ವಿಶೇಷ ವರದಿ
ಕುಷ್ಟಗಿ: ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಕೆಲ ಗ್ರಾಮ ಪಂಚಾಯಿತಿಗಳು ಅಪಾರ ಪ್ರಮಾಣದಲ್ಲಿ ಹಣ ಖರ್ಚು ಮಾಡಿರುವುದಕ್ಕೆ ದಂಗಾಗಿರುವ ಕೊಪ್ಪಳ ಜಿಲ್ಲಾ ಪಂಚಾಯಿತಿ ಹಣ ಪಾವತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿದು ಭ್ರಷ್ಟಾಚಾರದ ತನಿಖೆಗೆ ಆದೇಶಿಸಿರುವುದು ತಿಳಿದುಬಂದಿದೆ.
ವ್ಯಾಪಕ ಅಕ್ರಮ, ದೂರುಗಳ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಕುಷ್ಟಗಿ ಸೇರಿದಂತೆ ಕೊಪ್ಪಳ ಜಿಲ್ಲೆಯ ಕೆಲ ತಾಲ್ಲೂಕುಗಳ ಗ್ರಾಮ ಪಂಚಾಯಿತಿ ಖಾತರಿ ವೆಬ್ಸೈಟ್ ಅನ್ನು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ತಾತ್ಕಾಲಿಕವಾಗಿ ತಡೆ ಹಿಡಿದಿದ್ದು ಪಾಸ್ವರ್ಡ್ ಕದ್ದು ಅಕ್ರಮ ಮಾಹಿತಿಯನ್ನು ಭರ್ತಿ ಮಾಡುವ ಆತುರದಲ್ಲಿದ್ದ ಕೆಲ ಪಟ್ಟಭದ್ರರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ಕಳೆದ ಜನವರಿಯಲ್ಲಿ ಶೇ. 10ರಷ್ಟೂ ಪ್ರಗತಿ ಸಾಧಿಸದ ಬಹುತೇಕ ಗ್ರಾಮ ಪಂಚಾಯಿತಿಗಳ ಸಾಧನೆಯ ಸೂಚ್ಯಂಕ ಫೆಬ್ರುವರಿಯಲ್ಲಿ ದಿಢೀರ್ ಏರಿದ್ದು ‘ವೇಗದ ಪ್ರಗತಿ’ಗೆ ಬೆಚ್ಚಿಬಿದ್ದಿರುವ ಸರ್ಕಾರ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳ ದಾಖಲೆಗಳ ಪರಿಶೀಲನೆಗೆ ಮುಂದಾಗಿದೆ.
ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿರುವ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನಿಗದಿಪಡಿಸಿದ ಗ್ರಾಮ ಪಂಚಾಯಿತಿಗಳಿಗೆ ಖುದ್ದಾಗಿ ತೆರಳಿ ವಾಸ್ತವ ಅಂಶಗಳ ಪಟ್ಟಿಯೊಂದಿಗೆ ಮಾರ್ಚ್ 19ರೊಳಗೆ ವರದಿ ನೀಡುವಂತೆ ಆದೇಶಿಸಿದ್ದರು. ಆದರೆ ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿಗಳ ಅಸಹಕಾರದಿಂದಾಗಿ ಪರಿಶೀಲನೆಗೆ ಇನ್ನೂ ಕೆಲ ದಿನಗಳೇ ಬೇಕಾಗಬಹುದು ಎಂದು ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಗೆ ಕೆಲ ನೋಡಲ್ ಅಧಿಕಾರಿಗಳು ಹೇಳಿದರು.
ಪ್ರಸಕ್ತ ವರ್ಷದ ಯೋಜನೆ ಕೆಲಸ ಕಾಮಗಾರಿಗಳು, ನೋಂದಾಯಿತ ಕೂಲಿಕಾರರ ಅಧಿಕೃತ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿ ನೋಡಲ್ ಅಧಿಕಾರಿಗಳಿಗೆ ನೀಡಿದೆ. ಖರ್ಚಾದ ಹಣಕ್ಕೆ ಸಂಬಂಧಿಸಿದ ಅಳತೆ ಪುಸ್ತಕ (ಎಂ.ಬಿ), ಎನ್.ಎಂ.ಆರ್ (ಕೂಲಿಕಾರರ ಪಟ್ಟಿ), ಹಣ ಪಾವತಿಗೆ ಅಂಚೆ ಕಚೇರಿಗೆ ಗ್ರಾಮ ಪಂಚಾಯಿತಿಗಳು ಸಲ್ಲಿಸಿದ ಡಿಮ್ಯಾಂಡ್ ಡ್ರಾಫ್ಟ್ಗಳು ಮತ್ತಿತರೆ ದಾಖಲೆಗಳ ತಾಳೆ ನೋಡುವ ಕೆಲಸ ಅಧಿಕಾರಿಗಳದ್ದಾಗಿದೆ. ಖಾತರಿ ಪಾಸ್ವರ್ಡ್ ಕಳವು ಮಾಡಿದ ಸಾಕಷ್ಟು ಜನ ಗ್ರಾಮ ಪಂಚಾಯಿತಿಗಳ ಗಮನಕ್ಕೆ ಬಾರದಂತೆ ಎಲ್ಲಿಯೋ ಕುಳಿತು ಆನ್ಲೈನ್ನಲ್ಲಿ ನಕಲಿ ಕೂಲಿಕಾರರು ಮತ್ತು ಬೋಗಸ್ ಕೆಲಸಗಳ ಮಾಹಿತಿ ಭರ್ತಿ ಮಾಡಿರುವುದು ಬೆಳಕಿಗೆ ಬಂದಿದೆ.
ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಭಾರಿ ಪ್ರಮಾಣದಲ್ಲಿ ‘ಗೋಲ್ಮಾಲ್’ ನಡೆದಿದ್ದು ಖರ್ಚಾಗಿರುವ ಹಣಕ್ಕೆ ‘ರಾಮನ ಲೆಕ್ಕ ಕೃಷ್ಣನ ಲೆಕ್ಕ’ ತೋರಿಸಿರುವುದರಿಂದ ಯಾವ ಮಾಹಿತಿಯೂ ತಾಳೆಯಾಗುತ್ತಿಲ್ಲ. ವ್ಯವಹಾರ-ಅವ್ಯವಹಾರದ ಸ್ಥಿತಿಯನ್ನು ಜಿಲ್ಲಾ ಪಂಚಾಯಿತಿಗೆ ವರದಿ ಮಾಡುವುದಷ್ಟೇ ತಮ್ಮ ಕೆಲಸ ಎಂದು ನೋಡಲ್ ಅಧಿಕಾರಿಯೊಬ್ಬರು ತಿಳಿಸಿದರು.
ಈ ಮಧ್ಯೆ ಅನೇಕ ಗ್ರಾಮ ಪಂಚಾಯಿತಿಗಳು ಲಕ್ಷಾಂತರ ಹಣ ಪಾವತಿ ಮಾಡಲು ಅಂಚೆ ಕಚೇರಿಗಳಿಗೆ ಡಿ.ಡಿ ನೀಡಿದ್ದು ಅವುಗಳ ಸಾಚಾತನವನ್ನೂ ಪರಿಶೀಲಿಸಲಾಗುತ್ತಿದೆ. ಉದಾಹರಣೆಗೆ ಒಂದೇ ತಿಂಗಳಲ್ಲಿ ಕುಷ್ಟಗಿ ತಾಲ್ಲೂಕಿನ ಹನಮನಾಳ ಗ್ರಾಮ ಪಂಚಾಯಿತಿ ರೂ. 1.84 ಕೋಟಿ, ಕಂದಕೂರು ರೂ. 1.30 ಕೋಟಿ, ದೊಟಿಹಾಳ ರೂ. 1.5 ಕೋಟಿ, ಹಿರೇಮನ್ನಾಪೂರ ರೂ. 43 ಲಕ್ಷಕ್ಕೆ ಡಿಡಿ ನೀಡಿವೆ.
ನಕಲಿ ಖಾತೆ: ಅಲ್ಲದೆ ಅಂಚೆ ಕಚೇರಿಗಳಲ್ಲಿ ಬೇನಾಮಿ ಖಾತೆಗಳ ಹಾವಳಿ ಮುಂದುವರೆದಿದೆ. ನಕಲಿ ಕೂಲಿಕಾರರ ಹೆಸರಿನಲ್ಲೇ ಅಂಚೆ ಸಿಬ್ಬಂದಿ ಹಣ ಪಾವತಿಸುತ್ತಿದ್ದರೂ ಜಿಲ್ಲಾ ಪಂಚಾಯಿತಿ ಅದನ್ನು ಗಮನಿಸಿಲ್ಲ ಎಂಬ ದೂರು ಸಾಮಾನ್ಯವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.