<p>ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣಾ ಫಲಿತಾಂಶ ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆಯ ಗಂಟೆ ಮತ್ತು ಸತತ ಸೋಲುಗಳಿಂದ ಕಂಗೆಟ್ಟುಹೋಗಿರುವ ಕಾಂಗ್ರೆಸ್ ಪಾಲಿಗೆ ಕತ್ತಲ ಸುರಂಗದ ತುದಿಯ ಬೆಳಕು. ಇದು ಮುಂದಿನ ದಿನಗಳಲ್ಲಿ ನಡೆಯಲಿರುವ ರಾಜಕೀಯ ಬದಲಾವಣೆಯ ದಿಕ್ಸೂಚಿಯೂ ಹೌದು. <br /> <br /> ಉಡುಪಿಯೂ ಸೇರಿದಂತೆ ಕರಾವಳಿಯ ಜಿಲ್ಲೆಗಳು ಬಿಜೆಪಿಯ ಭದ್ರಕೋಟೆ, ದತ್ತಪೀಠ ಚಳವಳಿಯ ಕೇಂದ್ರ ಸ್ಥಾನವಾದ ಚಿಕ್ಕಮಗಳೂರು ಸಂಘ ಪರಿವಾರದ ಹಿಂದುತ್ವದ ಪ್ರಯೋಗ ಶಾಲೆ, ಜತೆಗೆ ಇದು ಮುಖ್ಯಮಂತ್ರಿಯವರ ಸ್ವಂತ ಕ್ಷೇತ್ರ-ಈ ಕಾರಣಗಳಿಂದ ಉಪ ಚುನಾವಣೆ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. <br /> <br /> ಭ್ರಷ್ಟಾಚಾರದ ಆರೋಪ ಮತ್ತು ಭಿನ್ನಮತೀಯ ಚಟುವಟಿಕೆಗಳಿಂದಾಗಿ ನೈತಿಕವಾಗಿ ಕುಸಿದುಹೋಗಿದ್ದ ಪಕ್ಷ ಮುಖ ಉಳಿಸಿಕೊಳ್ಳಲಿಕ್ಕಾದರೂ ಈ ಚುನಾವಣೆ ಗೆಲ್ಲಬೇಕಾಗಿತ್ತು.<br /> <br /> ಈ ಹಿನ್ನೆಲೆಯಿಂದಾಗಿಯೇ ಬಿಜೆಪಿ ಪಾಲಿಗೆ ಇದು ಮುಖಭಂಗದ ಸೋಲು. ಮತದಾರರು ಪ್ರತೀಕಾರ ಕೈಗೊಳ್ಳುವವರಂತೆ ಬಿಜೆಪಿ ಅಭ್ಯರ್ಥಿಯನ್ನು ಭಾರಿ ಅಂತರದಿಂದ ಸೋಲಿಸಿಬಿಟ್ಟಿದ್ದಾರೆ. ಕೋಮುವಾದದ ರಾಜಕೀಯವನ್ನು ತಿರಸ್ಕರಿಸಿದ್ದಾರೆ.<br /> <br /> ಇನ್ನೊಂದು ವರ್ಷದ ಅವಧಿಯಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಗೆಲುವು ಮರೀಚಿಕೆಯಾಗಿತ್ತು. ನಿರಂತರ ಸೋಲುಗಳ ಹೊಡೆತದಿಂದಾಗಿ ಪಕ್ಷ ತನ್ನ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡು ಕುಸಿದುಹೋಗಿತ್ತು. <br /> <br /> ಸಮರ್ಥ ಅಭ್ಯರ್ಥಿಯ ಆಯ್ಕೆ, ಪಕ್ಷದ ನಾಯಕರ ಒಗ್ಗಟ್ಟಿನ ಪ್ರಯತ್ನ ಮತ್ತು ಆತ್ಮವಿಶ್ವಾಸದಿಂದ ಕೂಡಿದ ಪ್ರಚಾರ ಏನೆಲ್ಲ ಅಚ್ಚರಿಯನ್ನು ಉಂಟುಮಾಡಬಲ್ಲದು ಎನ್ನುವುದಕ್ಕೆ ಕಾಂಗ್ರೆಸ್ ಪಕ್ಷದ ಗೆಲುವು ಉತ್ತಮ ಉದಾಹರಣೆ.<br /> <br /> ಎಲ್ಲ ಚುನಾವಣೆಗಳ ಫಲಿತಾಂಶದಲ್ಲಿಯೂ ರಾಜಕೀಯ ಪಕ್ಷಗಳು ಕಲಿಯಬೇಕಾದ ಪಾಠಗಳಿರುತ್ತವೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೂ ಈ ಶ್ರೇಯಸ್ಸಿನಲ್ಲಿ ಅಭ್ಯರ್ಥಿಯ ವ್ಯಕ್ತಿತ್ವದ ಪಾಲು ಅಷ್ಟೇ ಮಹತ್ವದ್ದು. <br /> <br /> ಭ್ರಷ್ಟಾಚಾರ ಮತ್ತು ನೀತಿಗೆಟ್ಟ ನಡವಳಿಕೆಗಳಿಂದಾಗಿ ರಾಜಕಾರಣಿಗಳು ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ತತ್ವಭ್ರಷ್ಟತೆಯಿಂದಾಗಿ ಎಲ್ಲ ರಾಜಕೀಯ ಪಕ್ಷಗಳು ಒಂದೇ ಎಂಬ ಭಾವನೆ ಕೂಡಾ ಜನರಲ್ಲಿದೆ. <br /> <br /> ಇಂತಹ ಸಂದರ್ಭದಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಮತದಾರರು ಜಾತಿ, ಧರ್ಮ ಮತ್ತು ಪಕ್ಷ ಭೇದಗಳನ್ನು ಮರೆತು ಬೆಂಬಲಿಸುತ್ತಾರೆ ಎಂಬ ಸಂದೇಶವನ್ನು ಈ ಚುನಾವಣೆ ನೀಡಿದೆ. <br /> <br /> ಗೆದ್ದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ರಾಜಕಾರಣಿಗಳಲ್ಲಿ ಅಪರೂಪವಾದ ಸಜ್ಜನಿಕೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡವರು. ಮತದಾರರು ಅದನ್ನು ಗುರುತಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ವರ್ಚಸ್ಸಿನ ಎದುರು ಬಿಜೆಪಿ ಅಭ್ಯರ್ಥಿ ಮಂಕಾಗಿ ಹೋಗಿದ್ದು ಸ್ಪಷ್ಟ.<br /> <br /> ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜಾತಿ, ದುಡ್ಡು ಮತ್ತು ತೋಳ್ಬಲದಿಂದ ಕೂಡಿದ ಗೆಲ್ಲಬಲ್ಲ ಸಾಮರ್ಥ್ಯವೊಂದನ್ನೇ ಮುಖ್ಯ ಮಾನದಂಡವನ್ನಾಗಿ ಇಟ್ಟುಕೊಳ್ಳುವ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲು ಈ ಫಲಿತಾಂಶ ಪ್ರೇರಣೆಯಾಗಬೇಕು. <br /> <br /> ಜಾತಿ ಮತ್ತು ದುಡ್ಡಿನ ಬಲವನ್ನು ಮುಂದೊಡ್ಡಿ ನಾಯಕತ್ವದ ಪೈಪೋಟಿಗಿಳಿದಿರುವ ಬಿಜೆಪಿ ನಾಯಕರು ಕೂಡಾ ಎಚ್ಚೆತ್ತುಕೊಳ್ಳಲು ಇದು ಸಕಾಲ. ಗೋಡೆಯ ಮೇಲಿನ ಬರಹವನ್ನು ಅವರು ಓದದೆ ಹೋದರೆ ಬುದ್ಧಿ ಕಲಿಸಲು ಮತದಾರರು ಸಿದ್ಧವಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣಾ ಫಲಿತಾಂಶ ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆಯ ಗಂಟೆ ಮತ್ತು ಸತತ ಸೋಲುಗಳಿಂದ ಕಂಗೆಟ್ಟುಹೋಗಿರುವ ಕಾಂಗ್ರೆಸ್ ಪಾಲಿಗೆ ಕತ್ತಲ ಸುರಂಗದ ತುದಿಯ ಬೆಳಕು. ಇದು ಮುಂದಿನ ದಿನಗಳಲ್ಲಿ ನಡೆಯಲಿರುವ ರಾಜಕೀಯ ಬದಲಾವಣೆಯ ದಿಕ್ಸೂಚಿಯೂ ಹೌದು. <br /> <br /> ಉಡುಪಿಯೂ ಸೇರಿದಂತೆ ಕರಾವಳಿಯ ಜಿಲ್ಲೆಗಳು ಬಿಜೆಪಿಯ ಭದ್ರಕೋಟೆ, ದತ್ತಪೀಠ ಚಳವಳಿಯ ಕೇಂದ್ರ ಸ್ಥಾನವಾದ ಚಿಕ್ಕಮಗಳೂರು ಸಂಘ ಪರಿವಾರದ ಹಿಂದುತ್ವದ ಪ್ರಯೋಗ ಶಾಲೆ, ಜತೆಗೆ ಇದು ಮುಖ್ಯಮಂತ್ರಿಯವರ ಸ್ವಂತ ಕ್ಷೇತ್ರ-ಈ ಕಾರಣಗಳಿಂದ ಉಪ ಚುನಾವಣೆ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. <br /> <br /> ಭ್ರಷ್ಟಾಚಾರದ ಆರೋಪ ಮತ್ತು ಭಿನ್ನಮತೀಯ ಚಟುವಟಿಕೆಗಳಿಂದಾಗಿ ನೈತಿಕವಾಗಿ ಕುಸಿದುಹೋಗಿದ್ದ ಪಕ್ಷ ಮುಖ ಉಳಿಸಿಕೊಳ್ಳಲಿಕ್ಕಾದರೂ ಈ ಚುನಾವಣೆ ಗೆಲ್ಲಬೇಕಾಗಿತ್ತು.<br /> <br /> ಈ ಹಿನ್ನೆಲೆಯಿಂದಾಗಿಯೇ ಬಿಜೆಪಿ ಪಾಲಿಗೆ ಇದು ಮುಖಭಂಗದ ಸೋಲು. ಮತದಾರರು ಪ್ರತೀಕಾರ ಕೈಗೊಳ್ಳುವವರಂತೆ ಬಿಜೆಪಿ ಅಭ್ಯರ್ಥಿಯನ್ನು ಭಾರಿ ಅಂತರದಿಂದ ಸೋಲಿಸಿಬಿಟ್ಟಿದ್ದಾರೆ. ಕೋಮುವಾದದ ರಾಜಕೀಯವನ್ನು ತಿರಸ್ಕರಿಸಿದ್ದಾರೆ.<br /> <br /> ಇನ್ನೊಂದು ವರ್ಷದ ಅವಧಿಯಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಗೆಲುವು ಮರೀಚಿಕೆಯಾಗಿತ್ತು. ನಿರಂತರ ಸೋಲುಗಳ ಹೊಡೆತದಿಂದಾಗಿ ಪಕ್ಷ ತನ್ನ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡು ಕುಸಿದುಹೋಗಿತ್ತು. <br /> <br /> ಸಮರ್ಥ ಅಭ್ಯರ್ಥಿಯ ಆಯ್ಕೆ, ಪಕ್ಷದ ನಾಯಕರ ಒಗ್ಗಟ್ಟಿನ ಪ್ರಯತ್ನ ಮತ್ತು ಆತ್ಮವಿಶ್ವಾಸದಿಂದ ಕೂಡಿದ ಪ್ರಚಾರ ಏನೆಲ್ಲ ಅಚ್ಚರಿಯನ್ನು ಉಂಟುಮಾಡಬಲ್ಲದು ಎನ್ನುವುದಕ್ಕೆ ಕಾಂಗ್ರೆಸ್ ಪಕ್ಷದ ಗೆಲುವು ಉತ್ತಮ ಉದಾಹರಣೆ.<br /> <br /> ಎಲ್ಲ ಚುನಾವಣೆಗಳ ಫಲಿತಾಂಶದಲ್ಲಿಯೂ ರಾಜಕೀಯ ಪಕ್ಷಗಳು ಕಲಿಯಬೇಕಾದ ಪಾಠಗಳಿರುತ್ತವೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೂ ಈ ಶ್ರೇಯಸ್ಸಿನಲ್ಲಿ ಅಭ್ಯರ್ಥಿಯ ವ್ಯಕ್ತಿತ್ವದ ಪಾಲು ಅಷ್ಟೇ ಮಹತ್ವದ್ದು. <br /> <br /> ಭ್ರಷ್ಟಾಚಾರ ಮತ್ತು ನೀತಿಗೆಟ್ಟ ನಡವಳಿಕೆಗಳಿಂದಾಗಿ ರಾಜಕಾರಣಿಗಳು ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ತತ್ವಭ್ರಷ್ಟತೆಯಿಂದಾಗಿ ಎಲ್ಲ ರಾಜಕೀಯ ಪಕ್ಷಗಳು ಒಂದೇ ಎಂಬ ಭಾವನೆ ಕೂಡಾ ಜನರಲ್ಲಿದೆ. <br /> <br /> ಇಂತಹ ಸಂದರ್ಭದಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಮತದಾರರು ಜಾತಿ, ಧರ್ಮ ಮತ್ತು ಪಕ್ಷ ಭೇದಗಳನ್ನು ಮರೆತು ಬೆಂಬಲಿಸುತ್ತಾರೆ ಎಂಬ ಸಂದೇಶವನ್ನು ಈ ಚುನಾವಣೆ ನೀಡಿದೆ. <br /> <br /> ಗೆದ್ದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ರಾಜಕಾರಣಿಗಳಲ್ಲಿ ಅಪರೂಪವಾದ ಸಜ್ಜನಿಕೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡವರು. ಮತದಾರರು ಅದನ್ನು ಗುರುತಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ವರ್ಚಸ್ಸಿನ ಎದುರು ಬಿಜೆಪಿ ಅಭ್ಯರ್ಥಿ ಮಂಕಾಗಿ ಹೋಗಿದ್ದು ಸ್ಪಷ್ಟ.<br /> <br /> ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜಾತಿ, ದುಡ್ಡು ಮತ್ತು ತೋಳ್ಬಲದಿಂದ ಕೂಡಿದ ಗೆಲ್ಲಬಲ್ಲ ಸಾಮರ್ಥ್ಯವೊಂದನ್ನೇ ಮುಖ್ಯ ಮಾನದಂಡವನ್ನಾಗಿ ಇಟ್ಟುಕೊಳ್ಳುವ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲು ಈ ಫಲಿತಾಂಶ ಪ್ರೇರಣೆಯಾಗಬೇಕು. <br /> <br /> ಜಾತಿ ಮತ್ತು ದುಡ್ಡಿನ ಬಲವನ್ನು ಮುಂದೊಡ್ಡಿ ನಾಯಕತ್ವದ ಪೈಪೋಟಿಗಿಳಿದಿರುವ ಬಿಜೆಪಿ ನಾಯಕರು ಕೂಡಾ ಎಚ್ಚೆತ್ತುಕೊಳ್ಳಲು ಇದು ಸಕಾಲ. ಗೋಡೆಯ ಮೇಲಿನ ಬರಹವನ್ನು ಅವರು ಓದದೆ ಹೋದರೆ ಬುದ್ಧಿ ಕಲಿಸಲು ಮತದಾರರು ಸಿದ್ಧವಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>