ಸಿಗದ ಮೇವು; ಗೋ ಶಾಲೆ ತೆರೆಯಲು ಆಗ್ರಹ
ಗೌರಿಬಿದನೂರು: ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯಲ್ಲಿ ನೀರಿನ ಸಮಸ್ಯೆ ಸ್ವಲ್ಪ ಸುಧಾರಿಸಿದೆಯಾದರೂ ಜಾನುವಾರುಗಳಿಗೆ ಅಗತ್ಯ ಮೇವು ದೊರೆಯುತ್ತಿಲ್ಲ.
ಸಾಕಿದ ಜಾನುವಾರುಗಳಿಗೆ ಅಗತ್ಯ ಮೇವು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದೆ. ತಕ್ಷಣ ಗೋ ಶಾಲೆ ಆರಂಭಿಸುವಂತೆ ಆಗ್ರಹಿಸಿದ್ದಾರೆ.
ನೀರಿನ ಸೌಲಭ್ಯ ಹೊಂದಿರುವ ಕೆಲ ರೈತರು ತಾವು ಬೆಳೆದ ಮುಸುಕಿನ ಜೋಳದ ಮೇವನ್ನು ಪಟ್ಟಣದ ವ್ಯಾಪಾರಿಗಳಿಗೆ ಮಾರುತ್ತಿದ್ದರು. ಜೋಳದ ತೆನೆ ಬಿಡಿಸಿದ ಮೇಲೆ ಜಮೀನು ಮಾಲೀಕರು ಜಾನುವಾರುಗಳು ಹೊಂದಿರುವ ರೈತರಿಗೆ ಮೇವು ನೀಡುತ್ತಿದ್ದರು.
ಕೂಲಿ-ನಾಲಿ ಮಾಡುವ ರೈತರು ಅಷ್ಟು-ಇಷ್ಟು ಮೇವನ್ನು ದನಕರುಗಳಿಗೆ ತರುತ್ತಿದ್ದರು. ಆದರೆ ಈಗ ಈ ಅವಕಾಶವು ಇಲ್ಲದಂತಾಗಿದೆ.
`ಮಳೆಯಿಲ್ಲದ ಕಾರಣ ಬಯಲು ಪ್ರದೇಶದಲ್ಲೂ ಜಾನುವಾರುಗಳಿಗೆ ಹುಲ್ಲು ಸಿಗುತ್ತಿಲ್ಲ. ರಸ್ತೆಗಳ ಬದಿಯ್ಲ್ಲಲೇ ಬೆಳೆದಿರುವ ಅರಳಿಮರ, ಆಲದಮರ ಮತ್ತು ಇತರ ಮರದ ಸೊಪ್ಪನ್ನು ಕಡಿದು ಜಾನುವಾರುಗಳಿಗೆ ನೀಡುತ್ತಿದ್ದಾರೆ. ಬರದಿಂದ ತೀವ್ರ ಸಂಕಷ್ಟ ಸ್ಥಿತಿಯಲ್ಲಿರುವ ಕೆಲ ರೈತರು ಜಾನುವಾರುಗಳನ್ನು ಸಾಕಲಾಗದೆ ಮಾರುತ್ತಿದ್ದಾರೆ~ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಶಿವಶಂಕರ್ `ಪ್ರಜಾವಾಣಿ~ಗೆ ತಿಳಿಸಿದರು.
`ತಾಲ್ಲೂಕಿನ ಅಲಕಾಪುರ ಗ್ರಾಮದಲ್ಲಿ ಗೋಶಾಲೆ ತೆರೆಯಲಾಗಿದೆ. ಮಂಚೇನಹಳ್ಳಿ ಹೋಬಳಿಯಲ್ಲಿ ಮೇವಿನ ಸಮಸ್ಯೆ ಇರುವುದರಿಂದ ರಾಜ್ಯ ಸರ್ಕಾರವು ಮಂಚೇನಹಳ್ಳಿ ಸಮೀಪದ ಮಿಣಕನಗುರ್ಕಿ ದೇವಾಲಯದ ಬಳಿ ಮತ್ತು ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಗೋಶಾಲೆ ತೆರೆಯಬೇಕು. ಇದರಿಂದಾಗಿ ರೈತರಿಗೆ ಅನುಕೂಲವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು~ ಎಂದು ಅವರು ಒತ್ತಾಯಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.