ನವದೆಹಲಿ: ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರು ಸಬ್ ಅರ್ಬನ್ ಮತ್ತು ಬೆಂಗಳೂರು–ಚೆನ್ನೈ ಎಕ್ಸ್ಪ್ರೆಸ್ ರೈಲು ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ದು, ಬೆಂಗಳೂರಿಗರ ಹರ್ಷಕ್ಕೆ ಕಾರಣವಾಗಿದೆ.
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ವಿಚಾರ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್ ಅವರು, ‘ಈ ಯೋಜನೆಗೆ ₹18600 ಕೋಟಿ ಮೀಸಲು ಇರಿಸುವ ಮೂಲಕ ಶೇ.60 ರಷ್ಟು ಅನುದಾನ ನೀಡಲಾಗುವುದು’ ಎಂದು ತಿಳಿಸಿದರು.
‘2023ರ ಒಳಗೆ ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ ರೈಲು ಯೋಜನೆ ಮುಗಿಸಲು ಅಗತ್ಯ ಕ್ರಮಗೊಳ್ಳಲಾಗಿದೆ’ ಎಂದರು.
ಬೃಹತ್ ಸೋಲಾರ್ ಯೋಜನೆಗೆ ರೂಪರೇಷೆ
‘ರೈಲ್ವೇ ಟ್ರ್ಯಾಕ್ ಬದಿ ಇರುವ ಖಾಲಿ ಜಾಗದಲ್ಲಿ ಸೋಲಾರ್ ಫಲಕಗಳ ಅಳವಡಿಕೆಗೆ ಹೊಸ ಯೋಜನೆ ರೂಪಿಸಲಾಗುವುದು. ಆ ಮೂಲಕ ದೇಶದಾದ್ಯಂತ ರೈಲ್ವೆ ಹಳಿಗಳ ಪಕ್ಕ ಸೋಲಾರ್ ಪ್ಯಾನೆಲ್ ನಿರ್ಮಿಸಲಾಗುವುದು‘ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿ ಬಜೆಟ್ನಲ್ಲಿ ಮಂಡಿಸಿದ ಪ್ರಮುಖ ಅಂಶಗಳು
11,000 ಟ್ರ್ಯಾಕ್ ವಿದ್ಯುದ್ದೀಕರಣ ಮಾಡಲಾಗುವುದು
ರೈಲ್ವೆ ನಿಲ್ದಾಣಗಳಲ್ಲಿ 550 ವೈ-ಫೈ ಸೌಲಭ್ಯ ಕಲ್ಪಿಸಲಾಗುವುದು
ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಗೆ ಹೆಚ್ಚು ಒತ್ತು ನೀಡಲಾಗುವುದು
ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸಲು ಹೆಚ್ಚಿನ ತೇಜಸ್ ರೈಲುಗಳ ನಿಯೋಜಿಸಲಾಗುವುದು
ತೇಜಸ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಎಲ್ಲ ರಾಜ್ಯಗಳಿಗೆ ವಿಸ್ತರಿಸಲಾಗುವುದು