ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ದಾಂದಲೆ ಪ್ರಕರಣ: ವಿಸ್ಟ್ರಾನ್‌ಗೆ ಹೊಸ ಗುತ್ತಿಗೆ ಇಲ್ಲ ಎಂದ ಆ್ಯಪಲ್‌

Last Updated 19 ಡಿಸೆಂಬರ್ 2020, 19:47 IST
ಅಕ್ಷರ ಗಾತ್ರ

ಬೆಂಗಳೂರು: ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಕಾರ್ಖಾನೆಯನ್ನು ಹೊಂದಿರುವ ವಿಸ್ಟ್ರಾನ್‌ ಕಂಪನಿಯು ‘ಲೋಪಗಳನ್ನು ಪರಿಹರಿಸುವ ಕ್ರಮ ಕೈಗೊಳ್ಳುವವರೆಗೆ’ ಆ ಕಂಪನಿಗೆ ತನ್ನ ಕಡೆಯಿಂದ ಯಾವುದೇ ಹೊಸ ವಾಣಿಜ್ಯ ಗುತ್ತಿಗೆಗಳನ್ನು ನೀಡಲಾಗುವುದಿಲ್ಲ ಎಂದು ಆ್ಯಪಲ್‌ ಹೇಳಿದೆ. ಲೋಪ ಸರಿಪಡಿಸಿಕೊಳ್ಳುವಲ್ಲಿ ಯಾವ ಪ್ರಗತಿ ಆಗಿದೆ ಎಂಬುದರ ಮೇಲೆ ಗಮನ ಇರಿಸಲಾಗುವುದು ಎಂದೂ ಆ್ಯಪಲ್ ತಿಳಿಸಿದೆ.

ವಿಸ್ಟ್ರಾನ್‌ ಕಂಪನಿಯ ಆವರಣದಲ್ಲಿ ಈಚೆಗೆ ನಡೆದ ದಾಂದಲೆಯ ಬಳಿಕ ಅದಕ್ಕೆ ಕಾರಣ ಏನು ಎಂಬುದನ್ನು ಪರಿಶೀಲಿಸಲು ಆ್ಯಪಲ್‌, ತಂಡವೊಂದನ್ನು ರವಾನಿಸುವುದಾಗಿ ಹೇಳಿತ್ತು. ಆ್ಯಪಲ್‌ ಕಂಪನಿಗೆ ಕೆಲವು ಮಾದರಿಯ ಫೋನ್‌ಗಳನ್ನು ವಿಸ್ಟ್ರಾನ್‌ ಗುತ್ತಿಗೆ ಆಧಾರದಲ್ಲಿ ಸಿದ್ಧಪಡಿಸಿ ಕೊಡುತ್ತಿದೆ.

‘ವಿಸ್ಟ್ರಾನ್‌ ಆವರಣದಲ್ಲಿ ನಡೆದ ವಿದ್ಯಮಾನದ ಬಗ್ಗೆ ನಮ್ಮ ನೌಕರರು ಹಾಗೂ ನಾವು ನೇಮಿಸಿರುವ ಸ್ವತಂತ್ರ ಪರಿಶೀಲನಾ ತಂಡದ ಸದಸ್ಯರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಇನ್ನೂ ಮುಗಿದಿಲ್ಲ. ಆದರೆ, ಕೆಲಸದ ಅವಧಿಯ ನಿರ್ವಹಣಾ ವ್ಯವಸ್ಥೆಯನ್ನು ಸರಿಯಾಗಿ ಅನುಷ್ಠಾನಕ್ಕೆ ತಾರದಿರುವುದು, ನಮಗೆ ಉತ್ಪನ್ನಗಳನ್ನು ಪೂರೈಸುವವರಿಗಾಗಿ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ವ್ಯವಸ್ಥೆಯನ್ನು ಸರಿಯಾಗಿ ಅನುಷ್ಠಾನಕ್ಕೆ ತರದಿದ್ದುದರಿಂದ ಕೆಲವು ಕೆಲಸಗಾರರಿಗೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳ ಪಾವತಿಯಲ್ಲಿ ವಿಳಂಬ ಆಗಿದೆ’ ಎಂದು ಆ್ಯಪಲ್ ಹೇಳಿದೆ.

‘ನಮಗೆ ವಸ್ತುಗಳನ್ನು ಪೂರೈಸುವ ಕಂಪನಿಗಳಿಗೆ ಸೇರಿದವರನ್ನೂ ಘನತೆಯಿಂದ ಕಾಣುವ ಸ್ಥಿತಿ ಇರಬೇಕು ಎಂಬುದು ನಮ್ಮ ಆದ್ಯತೆ. ಇಲ್ಲಿರುವ ಲೋಪಗಳನ್ನು ಸರಿಪಡಿಸಲು ನಾವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ವಿಸ್ಟ್ರಾನ್ ಕೂಡ ಶಿಸ್ತು ಕ್ರಮ ಕೈಗೊಂಡಿದ್ದು, ನರಸಾಪುರದಲ್ಲಿನ ನೇಮಕಾತಿ ಮತ್ತು ವೇತನ ತಂಡಗಳಲ್ಲಿ ಬದಲಾವಣೆ ತರುತ್ತಿದೆ. ನೌಕರರಿಗೆ ನೆರವಾಗುವ ಕ್ರಮಗಳನ್ನು ಅವರು ಜಾರಿಗೆ ತಂದಿದ್ದಾರೆ. ಅಸಮಾಧಾನಗಳನ್ನು ಹೇಳಿಕೊಳ್ಳಲು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ದಿನದ 24 ತಾಸುಗಳೂ ಕಾರ್ಯನಿರ್ವಹಿಸುವ ಸಹಾಯವಾಣಿ ಆರಂಭಿಸಿದ್ದಾರೆ. ಈ ಸಹಾಯವಾಣಿ ಮೂಲಕ ಕಾರ್ಮಿಕರು ತಮ್ಮ ಅನಿಸಿಕೆಗಳನ್ನು ಹೆಸರು ಬಹಿರಂಗಪಡಿಸದೆಯೇ ಹೇಳಿಕೊಳ್ಳುವ ಅವಕಾಶ ಇದೆ’ ಎಂದು ಆ್ಯಪಲ್‌ನ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಎಲ್ಲ ಕೆಲಸಗಾರರನ್ನು ಘನತೆಯಿಂದ, ಗೌರವದಿಂದ ಕಾಣುವ ಸ್ಥಿತಿ ನಿರ್ಮಾಣವಾಗಬೇಕು. ಅವರಿಗೆ ಸೂಕ್ತ ವೇತನ ಸಿಗಬೇಕು ಎಂಬುದು ತನ್ನ ಮುಖ್ಯ ಉದ್ದೇಶ ಎಂದು ಕೂಡ ಆ್ಯಪಲ್ ಹೇಳಿದೆ.

ಕ್ಷಮೆ ಕೇಳಿದ ವಿಸ್ಟ್ರಾನ್‌
ಬೆಂಗಳೂರು:
‘ನರಸಾಪುರದ ಕಾರ್ಖಾನೆಯಲ್ಲಿ ನಡೆದ ದುರದೃಷ್ಟಕರ ಘಟನೆಗಳ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ, ಕೆಲವು ಕೆಲಸಗಾರರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಆಗದಿದ್ದುದನ್ನು ಕಂಡುಕೊಂಡಿದ್ದೇವೆ. ಇದಕ್ಕಾಗಿ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ, ನಮ್ಮೆಲ್ಲ ಕೆಲಸಗಾರರಲ್ಲಿ ಕ್ಷಮೆ ಯಾಚಿಸುತ್ತಿದ್ದೇವೆ’ ಎಂದು ವಿಸ್ಟ್ರಾನ್‌ ಹೇಳಿದೆ.

‘ನರಸಾಪುರದಲ್ಲಿ ಇರುವುದು ಹೊಸ ಕಾರ್ಖಾನೆ. ನಾವು ಇಲ್ಲಿ ವಿಸ್ತರಣೆ ಮಾಡಿದಂತೆಲ್ಲ ಕೆಲವು ತಪ್ಪುಗಳನ್ನು ಮಾಡಿರುವುದು ಗೊತ್ತಾಗಿದೆ. ನಮ್ಮೆಲ್ಲ ಕೆಲಸಗಾರರಿಗೆ ತಕ್ಷಣ ಪಾವತಿ ಆಗಬೇಕು ಎಂಬುದು ನಮ್ಮ ಮುಖ್ಯ ಆದ್ಯತೆ. ಅದಕ್ಕಾಗಿ ಶ್ರಮಿಸುತ್ತಿದ್ದೇವೆ. ಭಾರತದಲ್ಲಿನ ನಮ್ಮ ವಹಿವಾಟು ಹಾಗೂ ಇಲ್ಲಿನ ನೌಕರರ ಬಗ್ಗೆ ನಮಗೆ ಬದ್ಧತೆ ಇದೆ’ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT