ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 40 ಸಾವಿರ ದಾಟಿದ ಕೆಂಪಡಿಕೆ ದರ

ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಸಿಗದ ಪರಿಸ್ಥಿತಿ
Last Updated 20 ಫೆಬ್ರುವರಿ 2020, 19:44 IST
ಅಕ್ಷರ ಗಾತ್ರ

ಶಿರಸಿ: ಕೆಂಪಡಿಕೆ ದರ ಕ್ವಿಂಟಲ್‌ವೊಂದಕ್ಕೆ ₹40,000 ದಾಟುವ ಮೂಲಕ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಗುರುವಾರದ ವಹಿವಾಟಿನ ಅಂತ್ಯದಲ್ಲಿ ಶಿರಸಿ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಕೆಂಪಡಿಕೆಗೆ ಗರಿಷ್ಠ ₹ 40,200 ದಾಖಲಾಗಿದ್ದರೆ, ಯಲ್ಲಾಪುರ ಮಾರುಕಟ್ಟೆಯಲ್ಲಿ ₹ 43,900 ಬೆಲೆ ದೊರೆತಿದೆ.

ಈ ಬಾರಿ ಹಂಗಾಮಿನ ಆರಂಭದಲ್ಲೇ ಕೆಂಪಡಿಕೆಗೆ ಉತ್ತಮ ದರ ಬಂದಿರುವುದರಿಂದ ರೈತರು ಉತ್ಸಾಹದಿಂದ ಕೆಂಪಡಿಕೆ ಸಿದ್ಧಪಡಿಸುತ್ತಿದ್ದಾರೆ. ಆದರೆ, ಶೇ 40–50ರಷ್ಟು ಬೆಳೆ ಕಡಿಮೆಯಾಗಿರುವುದರಿಂದ ಬೆಲೆ ಇದ್ದರೂ, ಉತ್ಪನ್ನವಿಲ್ಲದೇ ಕೈ ಹೊಸಕಿಕೊಳ್ಳುತ್ತಿದ್ದಾರೆ.

ಕೆಂಪಡಿಕೆಗೆ 2014–15ರ ಜುಲೈ ವೇಳೆಗೆ ಕ್ವಿಂಟಲ್‌ಗೆ ಗರಿಷ್ಠ ₹ 81ಸಾವಿರ ದರ ದೊರೆತಿತ್ತು. ಆನಂತರದ ವರ್ಷಗಳಲ್ಲಿ ಸರಾಸರಿ ₹35 ಸಾವಿರ ದರಕ್ಕೆ ರೈತರು ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. 2017ರಲ್ಲಿ ಒಮ್ಮೆ ಮಾತ್ರ ಕೆಂಪಡಿಕೆ ದರ ಏರುಗತಿಯಲ್ಲಿ ಸಾಗಿ ₹ 49 ಸಾವಿರ ತಲುಪಿತ್ತು.

‘ಸಾಮಾನ್ಯವಾಗಿ ಹಂಗಾಮಿನ ಕೊನೆಯಲ್ಲೇ ಬೆಲೆ ಹೆಚ್ಚಳವಾಗುತ್ತದೆ. ಐದು ವರ್ಷಗಳ ಹಿಂದೆ ಬೆಲೆ ಏರಿಕೆಯಾದಾಗಲೂ ಸಣ್ಣ ಹಿಡುವಳಿದಾರರಿಗೆ ಈ ದರ ಸಿಕ್ಕಿರಲಿಲ್ಲ. ಈ ಬಾರಿ ಮಳೆಗಾಲದಲ್ಲಿ ಕೊಳೆರೋಗದಿಂದ ಶೇ 25ರಷ್ಟು ಬೆಳೆ ಮಾತ್ರ ಉಳಿದಿದೆ. ವರ್ಷಕ್ಕೆ ಸರಾಸರಿ ಆರು ಕ್ವಿಂಟಲ್ ಸಿಗುತ್ತಿದ್ದ ಕೆಂಪಡಿಕೆ, ಈ ಬಾರಿ ಒಂದು ಕ್ವಿಂಟಲ್‌ ಆಗಿದೆ’ ಎನ್ನುತ್ತಾರೆ ಬೆಳೆಗಾರ ರಾಮಕೃಷ್ಣ ಹೆಗಡೆ.

‘ಈ ವರ್ಷ ಏಪ್ರಿಲ್–ಮೇನಲ್ಲಿ ಮಳೆಯಾಗಿಲ್ಲ. ನಂತರ ಅತಿಯಾದ ಮಳೆಯಿಂದ ಬೆಳೆ ನಷ್ಟವಾಗಿದೆ. ಉತ್ತರ ಕನ್ನಡ ಮಾತ್ರವಲ್ಲ, ಶಿವಮೊಗ್ಗ ಭಾಗದಲ್ಲೂ ಶೇ 25ರಷ್ಟು ಅಡಿಕೆ ಬೆಳೆ ಕಡಿಮೆಯಿದೆ. ಅಲ್ಲದೇ ಈ ಬಾರಿ ಒಟ್ಟು ಬೆಳೆಯಲ್ಲಿ ಶೇ 20ರಷ್ಟು ಮಾತ್ರ ಕೆಂಪಡಿಕೆ ತಯಾರಾಗಿದೆ. ಈ ಕಾರಣಕ್ಕೆ ದರ ಏರಿಕೆಯಾಗಿರಬಹುದು. ಹಾಗೆಂದು, ಹೊರ ರಾಜ್ಯಗಳಲ್ಲಿ ಅಡಿಕೆ ಬೇಡಿಕೆ ಹೆಚ್ಚಾಗಿಲ್ಲ. ಆವಕ ಇಳಿಮುಖವಾಗಿರುವುದರಿಂದ ಮಾರುಕಟ್ಟೆಯಲ್ಲಿ ದರ ಸ್ಥಿರತೆ ಸಾಧ್ಯವಾಗಬಹುದು. ಟಿಎಸ್‌ಎಸ್‌ನಲ್ಲಿ ಕಳೆದ ವರ್ಷ ಡಿಸೆಂಬರ್‌ನಿಂದ ಫೆಬ್ರುವರಿವರೆಗೆ 3,000 ಕ್ವಿಂಟಲ್ ಕೆಂಪಡಿಕೆ ಖರೀದಿಯಾಗಿದ್ದರೆ, ಈ ಬಾರಿ ಇಲ್ಲಿಯ ತನಕ 1,000 ಕ್ವಿಂಟಲ್ ಖರೀದಿಯಾಗಿದೆ’ ಎನ್ನುತ್ತಾರೆ ಇಲ್ಲಿನ ಪ್ರಮುಖ ಅಡಿಕೆ ಮಾರುಕಟ್ಟೆಯಾಗಿರುವ ಟಿಎಸ್‌ಎಸ್‌ನ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ.

*
ಸಾಲದ ಭಾರ ಹೊಂದಿರುವ ಕೆಲವರು ಈ ದರಕ್ಕೆ ತೃಪ್ತಿಪಟ್ಟುಕೊಂಡು ಉತ್ಪನ್ನ ಮಾರಾಟ ಮಾಡುತ್ತಾರೆ. ಇನ್ನು ಕೆಲವರು ಬಡ್ಡಿ ಹೆಚ್ಚಿದರೂ ತೊಂದರೆಯಿಲ್ಲವೆಂದು ದರ ಹೆಚ್ಚಳಕ್ಕೆ ಕಾಯುತ್ತಾರೆ. ಅದು ರೈತರ ಮನಃಸ್ಥಿತಿಯ ಮೇಲೆ ನಿರ್ಧರಿತವಾಗುತ್ತದೆ
–ರಾಮಕೃಷ್ಣ ಹೆಗಡೆ, ಅಡಿಕೆ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT