ನವದೆಹಲಿ: ಆದೇಶ ಪಾಲನೆಯಾಗದಿರುವ ಬಗ್ಗೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ದೂರ ಸಂಪರ್ಕ ಇಲಾಖೆ ಟೆಲಿಕಾಂ ಕಂಪನಿಗಳಿಗೆ ಕೂಡಲೇ ಬಾಕಿ ಪಾವತಿಸುವಂತೆ ತಾಕೀತು ಮಾಡಿತು. ಭಾರ್ತಿ ಏರ್ಟೆಲ್ ₹10,000 ಕೋಟಿ ಪಾವತಿಸಿರುವುದಾಗಿ ಸೋಮವಾರ ಹೇಳಿದೆ.
'ಭಾರ್ತಿ ಏರ್ಟೆಲ್, ಭಾರ್ತಿ ಹೆಕ್ಸಾಕಾಮ್ ಹಾಗೂ ಟೆಲಿನಾರ್ ಪರವಾಗಿ ಒಟ್ಟು ₹10,000 ಕೋಟಿ ಪಾವತಿಸಲಾಗಿದೆ. ತೆರಿಗೆ ಲೆಕ್ಕಾಚಾರ ಸೇರಿದಂತೆ ಇತರೆ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಬಾಕಿ ಮೊತ್ತ ಪಾವತಿಸಲಿದ್ದೇವೆ. ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ದಿನದೊಳಗೆ ಬಾಕಿ ಪಾವತಿ ಆಗಲಿದೆ' ಎಂದು ಭಾರ್ತಿ ಏರ್ಟೆಲ್ ಹೇಳಿದೆ.
ತರಂಗಾಂತರ ಬಳಕೆ ಹಾಗೂ ಪರವಾನಗಿ ಶುಲ್ಕ ಸೇರಿದಂತೆ ಭಾರ್ತಿ ಏರ್ಟೆಲ್ ಸರ್ಕಾರಕ್ಕೆ ₹35,586 ಕೋಟಿ ಪಾವತಿಸಬೇಕಿದೆ. ಫೆಬ್ರುವರಿ 14ರಂದು ದೂರ ಸಂಪರ್ಕ ಇಲಾಖೆ ತಕ್ಷಣ ಬಾಕಿ ಮೊತ್ತ ಪಾವತಿಸುವಂತೆ ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಸೇರಿದಂತೆ ಇತರೆ ಟೆಲಿಕಾಂ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಫೆಬ್ರುವರಿ 20ರೊಳಗೆ ₹10,000 ಕೋಟಿ ಹಾಗೂ ಉಳಿದ ಮೊತ್ತವನ್ನು ಮಾರ್ಚ್ 17ರೊಳಗೆ ಪಾವತಿಸುವುದಾಗಿ ಏರ್ಟೆಲ್ ತಿಳಿಸಿತ್ತು.
ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್) ಸಂಬಂಧಿಸಿ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ₹1.47 ಲಕ್ಷ ಕೋಟಿ ಪಾವತಿಸುವ ಬಗ್ಗೆ ನೀಡಿದ್ದ ಆದೇಶ ಪಾಲನೆಯಾಗದ್ದಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಸುಪ್ರೀಂ ಕೋರ್ಟ್ 2019ರ ಅಕ್ಟೋಬರ್ 24ರಂದು ನೀಡಿದ್ದ ಆದೇಶದ ಪ್ರಕಾರ ಜನವರಿ 23ರಂದು ಟೆಲಿಕಾಂ ಆಪರೇಟರ್ಗಳು ಬಾಕಿ ಮೊತ್ತ ಸರ್ಕಾರಕ್ಕೆ ಪಾವತಿಸಬೇಕಿತ್ತು.
ಇತರೆ ಟೆಲಿಕಾಂ ಕಂಪನಿಗಳ ಬಾಕಿ ಮೊತ್ತ
₹53,000 ಕೋಟಿ -ವೊಡಾಫೋನ್ ಐಡಿಯಾ
₹16,456 ಕೋಟಿ -ರಿಲಯನ್ಸ್ ಕಮ್ಯುನಿಕೇಷನ್ಸ್
₹14,000 ಕೋಟಿ -ಟಾಟಾ ಟೆಲಿ ಸರ್ವಿಸಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.