ಬೆಂಗಳೂರು: ಕೋವಿಡ್ ಎರಡನೇ ಅಲೆಯ ಅಬ್ಬರ ಮಧ್ಯೆಯೂ ರಾಜ್ಯಕ್ಕೆ ₹13,487.11 ಕೋಟಿ ಬಂಡವಾಳ ಹೂಡಿಕೆ ಹರಿದು ಬಂದಿದೆ. ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿಯು ಬುಧವಾರ ಸಂಜೆ ಸಭೆ ಸೇರಿ 9 ಹೊಸ ಯೋಜನೆಗಳು ಮತ್ತು 1 ಹೆಚ್ಚುವರಿ ಬಂಡವಾಳ ಯೋಜನೆಗೆ ಒಪ್ಪಿಗೆ ನೀಡಿದೆ. ಇದರಿಂದ ರಾಜ್ಯದಲ್ಲಿ ಒಟ್ಟು 6,256 ಉದ್ಯೋಗಗಳು ಸೃಷ್ಟಿಯಾಗಲಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು.
ಹೂಡಿಕೆ ವಿವರ:
* ಜೆಎಸ್ಡಬ್ಲ್ಯೂ ಟೆಕ್ನೊ ಪ್ರಾಜೆಕ್ಟ್, ಬಳ್ಳಾರಿ ಜಿಲ್ಲೆ ತೋರಣಗಲ್ಲಿನಲ್ಲಿ ದ್ರವ ರೂಪದ ಆಮ್ಲಜನಕ, ದ್ರವೀಕೃತ ನೈಟ್ರೋ ಜನ್ ಇತ್ಯಾದಿಗಳ ಉತ್ಪಾದನಾ ಘಟಕ ಸ್ಥಾಪಿಸಲಿದೆ. ₹892.3 ಕೋಟಿ ಬಂಡವಾಳ ಹೂಡಲಿದ್ದು, 32 ಮಂದಿಗೆ ಉದ್ಯೋಗ ಸಿಗಲಿದೆ.
* ಶ್ರೀ ಸಿಮೆಂಟ್ಸ್ ದೊಡ್ಡಬಳ್ಳಾಪುರದ ವಡ್ಡರಹಳ್ಳಿಯಲ್ಲಿ ಕ್ಲಿಂಕರ್ ಗ್ರೈಂಡಿಂಗ್, ಸಿಮೆಂಟ್ ಬ್ಯಾಗಿಂಗ್ ಘಟಕ ಸ್ಥಾಪಿಸಲಿದ್ದು, ₹600 ಕೋಟಿ ಬಂಡವಾಳ ಹೂಡಲಿದ್ದು, 300 ಉದ್ಯೋಗ ಸೃಷ್ಟಿಯಾಗಲಿದೆ.
* ಚಿತ್ರದುರ್ಗ ಜಿಲ್ಲೆಯ ಡಿ.ಎಸ್.ಹಳ್ಳಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹ ಮತ್ತು ವಿಲೇವಾರಿ ಘಟಕ ಸ್ಥಾಪಿಸಲಿದ್ದು, ₹554.40 ಕೋಟಿ ಹೂಡಿಕೆ ಮಾಡಲಿದೆ. 52 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ.
* ಗಾಸಿಮ್ ಇಂಡಸ್ಟ್ರೀಸ್ ಚಾಮರಾಜನಗರ ಜಿಲ್ಲೆಯಲ್ಲಿ ಸಾಲ್ವೆಂಟ್ ಆಧಾರಿತ ಪೈಂಟ್ ತಯಾರಿಕಾ ಘಟಕ ಸ್ಥಾಪಿಸಲಿದ್ದು, ₹731.79 ಕೋಟಿ ಹೂಡಿಕೆ ಮಾಡಲಿದೆ. 270 ಮಂದಿಗೆ ಉದ್ಯೋಗ ಸಿಗಲಿದೆ.
* ವೈ.ಜಿ.ಕಟ್ಟಿಂಗ್ ಚಿಕ್ಕಬಳ್ಳಾಪುರದಲ್ಲಿ ₹1,000 ಕೋಟಿ ವೆಚ್ಚದಲ್ಲಿ ಘಟಕ ಸ್ಥಾಪಿಸಲಿದೆ. 710 ಮಂದಿಗೆ ಉದ್ಯೋಗ ಸಿಗಲಿದೆ.
* ಎನ್ಎಕ್ಸ್ಟಿ ಟೆಕ್ ಪಾರ್ಕ್ ಬಿಡದಿಯಲ್ಲಿ ಡೆಟಾ ಸೆಂಟರ್ ಆರಂಭಿಸಲಿದ್ದು, ₹2,000 ಕೋಟಿ ಬಂಡವಾಳ ಹೂಡಲಿದೆ. 60 ಮಂದಿಗೆ ಉದ್ಯೋಗ.
* ರಸರಿ ಟೆಕ್ಪಾರ್ಕ್ ಯಲಹಂಕ ಹೋಬಳಿಯಲ್ಲಿ ₹4,042.95 ಕೋಟಿ ಬಂಡವಾಳ ಹೂಡಲಿದೆ. 3,000 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ.
* ಗೋಲ್ಡ್ ಪ್ಲಸ್ ಗ್ಲಾಸ್ ಮಂಗಳೂರಿನ ಎಂಎಸ್ಇಝಡ್ನಲ್ಲಿ ₹2,527 ಕೋಟಿ ಬಂಡವಾಳ ಹೂಡಲಿದ್ದು, 956 ಮಂದಿಗೆ ಉದ್ಯೋಗ ಸಿಗಲಿದೆ.