ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್: ವಿಮೆ ತಿರಸ್ಕೃತ ಆಗುವ ಸಾಧ್ಯತೆ ಕಡಿಮೆ’

Last Updated 26 ಏಪ್ರಿಲ್ 2021, 21:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ವಿಮೆ ಕ್ಲೇಮ್‌ ಅರ್ಜಿಯು ಕಾರ್ಪೊರೇಟ್‌ ವಲಯದಿಂದ, ಬೇರೆ ಬೇರೆ ಕಂಪನಿಗಳ ಸಮೂಹ ವಿಮೆಗೆ ಒಳಪಟ್ಟ ನೌಕರರಿಂದ ಬಂದಿದ್ದರೆ, ಅದು ತಿರಸ್ಕೃತವಾಗುವುದು ತೀರಾ ಕಡಿಮೆ’ ಎಂದು ವಿಮಾ ಕಂಪನಿಗಳ ಪ್ರತಿನಿಧಿಗಳು ಹಾಗೂ ಟಿಪಿಎ (ನೌಕರ ಕೆಲಸ ಮಾಡುವ ಕಂಪನಿ ಮತ್ತು ವಿಮಾ ಕಂಪನಿ ನಡುವಿನ ಮಧ್ಯವರ್ತಿ) ಪ್ರತಿನಿಧಿಗಳು ಹೇಳುತ್ತಾರೆ.

‘ಕಂಪನಿ ಕಡೆಯಿಂದ ಅಥವಾ ವೈಯಕ್ತಿಕವಾಗಿ ಆರೋಗ್ಯ ವಿಮಾ ಸೌಲಭ್ಯ ಪಡೆದುಕೊಂಡಿರುವವರು ಕೋವಿಡ್–19 ಕಾಯಿಲೆಗೆ ವಿಮಾ ಸೌಲಭ್ಯ ಪಡೆಯಬೇಕು ಎಂದಾದರೆ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಎಂಬ ವರದಿ ಬಂದಿರಲೇಬೇಕು. ಬೇರೆ ಯಾವುದೇ ಪರೀಕ್ಷೆಗಳಲ್ಲಿ ಕೋವಿಡ್–19 ಪಾಸಿಟಿವ್‌ ಬಂದಿದ್ದರೂ, ಅದು ವಿಮಾ ಸೌಲಭ್ಯ ಪಡೆಯಲು ನೆರವಾಗುವುದಿಲ್ಲ’ ಎಂದು ಟಿಪಿಎ ಪ್ರತಿನಿಧಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವ್ಯಕ್ತಿಯು ಚಿಕಿತ್ಸೆ ಪಡೆಯಲು ಮಾಡಿರುವ ವೆಚ್ಚ ಹಾಗೂ ವಿಮಾ ಕಂಪನಿಯಿಂದ ಮಂಜೂರಾಗುವ ಮೊತ್ತದ ನಡುವೆ ವ್ಯತ್ಯಾಸ ಆಗುವ ಸಾಧ್ಯತೆಗಳು ಇರುತ್ತವೆ. ಈ ವ್ಯತ್ಯಾಸಕ್ಕೆ, ವ್ಯಕ್ತಿ ಪಡೆದಿರುವ ವಿಮಾ ಯೋಜನೆಯ ನಿಬಂಧನೆಗಳು ಕಾರಣವಾಗಿರುತ್ತವೆ ಎಂದು ಅವರು ಹೇಳಿದರು.

‘ಕೆಲವು ಆಸ್ಪತ್ರೆಗಳು ಕೋವಿಡ್–19 ರೋಗಿಗಳಿಗೆ ವಿಮಾ ಸೌಲಭ್ಯವಿದ್ದರೂ ನಗದುರಹಿತ ಚಿಕಿತ್ಸೆಸೌಲಭ್ಯ ನೀಡದಿರುವ ವರದಿಗಳು ಇವೆ. ಆದರೆ, ವಿಮಾ ಕಂಪನಿ ಹಾಗೂ ಆಸ್ಪತ್ರೆ ನಡುವೆ ನಗದುರಹಿತ ಚಿಕಿತ್ಸೆಯ ಒಪ್ಪಂದ ಇದ್ದರೆ, ಅಂತಹ ಆಸ್ಪತ್ರೆಗಳು ರೋಗಿಗಳಿಗೆಈ ಸೌಲಭ್ಯ ನಿರಾಕರಿಸುವಂತೆ ಇಲ್ಲ’ ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಈಚೆಗೆ ತಾಕೀತು ಮಾಡಿದೆ.

ಟಾಪ್–ಅಪ್ ಸೌಲಭ್ಯ: ಗಮನದಲ್ಲಿ ಇರಲಿ
ವಿಮಾ ಕವರೇಜ್ ಮೊತ್ತ ಸಾಕಾಗುವುದಿಲ್ಲ ಎಂದು ಅನ್ನಿಸಿದರೆ ಅದನ್ನು ಹೆಚ್ಚು ಮಾಡಿಕೊಳ್ಳಲು ಟಾಪ್‌–ಅಪ್‌ ಸೌಲಭ್ಯ ಇದೆ. ಆದರೆ, ಟಾಪ್‌–ಅಪ್‌ ಸೌಲಭ್ಯವನ್ನು ಕಾಯಿಲೆಗೆ ತುತ್ತಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ತೆಗೆದುಕೊಳ್ಳಲು ಅವಕಾಶವಿಲ್ಲ ಎಂದು ವಿಮಾ ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದರು.

‘ಆರೋಗ್ಯ ವಿಮೆಯ ಮೊತ್ತ ಸಾಕಾಗದು ಎಂದು ಗ್ರಾಹಕರಿಗೆ ಅನ್ನಿಸಿದರೆ ಟಾಪ್‌–ಅಪ್‌ ಪಾಲಿಸಿಯನ್ನು ವ್ಯಕ್ತಿ ಆರೋಗ್ಯವಾಗಿ ಇರುವಾಗಲೇ ಖರೀದಿಸಬೇಕು. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದಾಗ, ಮೂಲ ಮೊತ್ತ ಖಾಲಿ ಆದಾಗ ತಕ್ಷಣಕ್ಕೆ ಟಾಪ್–ಅಪ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಭಾರತೀಯ ಜೀವ ವಿಮಾ ನಿಗಮದ ಅಧಿಕಾರಿ ಬೂಕನಕೆರೆ ವಿಜಯೇಂದ್ರ ತಿಳಿಸಿದರು.

ಕೋವಿಡ್‌–19 ಕಾಯಿಲೆಗೆ ವಿಮಾ ಸೌಲಭ್ಯ ಪಡೆದುಕೊಳ್ಳಲು ‘ಕಾಯುವಿಕೆಯ ಅವಧಿ’ ಇಲ್ಲ. ಹಿಂದಿನ ದಿನ ವಿಮೆ ಮಾಡಿಸಿದ್ದರೂ, ಮಾರನೆಯ ದಿನ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟರೆ ವಿಮಾ ಸೌಲಭ್ಯ ತೆಗೆದುಕೊಳ್ಳಲು ಅಡ್ಡಿ ಇಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT