ನವದೆಹಲಿ:ಆರ್ಥಿಕ ಉತ್ತೇಜನಾ ಕೊಡುಗೆಗಳ ಭಾಗವಾಗಿ, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ಸಂಬಳ ಪಾವತಿಸಲು ಬ್ಯಾಂಕ್ಗಳು ನೀಡುವ ಹೆಚ್ಚುವರಿ ಸಾಲಕ್ಕೆ ಮರುಪಾವತಿಯ ಖಾತರಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಕಾರ್ಮಿಕರಿಗೆ ವೇತನ ನೀಡಲು ‘ಎಂಎಸ್ಎಂಇ’ಗಳಿಗೆ ಹೆಚ್ಚುವರಿ ಸಾಲ ನೀಡುವ ಬ್ಯಾಂಕ್ಗಳ ಸಾಲಕ್ಕೆ ಭದ್ರತೆ ಒದಗಿಸಲು ಸಾಲ ಖಾತರಿ ನಿಧಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ನೌಕರರ ವೇತನ ಪಾವತಿಸುವ ಉದ್ದೇಶಕ್ಕೆ ಪಡೆಯುವ ಸಾಲವನ್ನು ಕೈಗಾರಿಕೆಗಳು ಒಂದು ವೇಳೆ ಮರುಪಾವತಿಸದಿದ್ದರೆ ಸಾಲ ಖಾತರಿ ನಿಧಿಯಿಂದ ಬ್ಯಾಂಕ್ಗಳ ಹಣಕ್ಕೆ ಭದ್ರತೆ ಒದಗಿಸುವುದು ಸರ್ಕಾರದ ಆಲೋಚನೆಯಾಗಿದೆ.
ಸದ್ಯಕ್ಕೆ ಬ್ಯಾಂಕ್ಗಳು ದುಡಿಯುವ ಬಂಡವಾಳದ ಮಿತಿ ಆಧರಿಸಿ ಶೇ 10ರಷ್ಟು ಹೆಚ್ಚುವರಿ ಸಾಲ ನೀಡುತ್ತಿವೆ. ಈ ಸಾಲಕ್ಕೆ ಗರಿಷ್ಠ ₹ 200 ಕೋಟಿಯ ಮಿತಿ ನಿಗದಿಪಡಿಸಲಾಗಿದೆ. ಈ ಮೊತ್ತವನ್ನು ಈಗ ಶೇ 15ಕ್ಕೆ ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ.
ಎರಡು ತಿಂಗಳಿನಿಂದ ತಯಾರಿಕೆ ಚಟುವಟಿಕೆ ಸ್ಥಗಿತಗೊಳಿಸಿರುವುದರಿಂದ ಬಹುತೇಕ ‘ಎಂಎಸ್ಎಂಇ’ಗಳ ಬಳಿ ಕಾರ್ಮಿಕರ ವೇತನ ಪಾವತಿಗೂ ಹಣ ಇಲ್ಲದಂತಾಗಿದೆ. ಹೀಗಾಗಿ ಅವುಗಳಿಗೆ ಹೆಚ್ಚುವರಿ ಹಣಕಾಸು ನೆರವು ಕಲ್ಪಿಸುವುದನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ಕೃಷಿ ನಂತರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಅವಕಾಶ ಕಲ್ಪಿಸಿರುವ ಈ ವಲಯಕ್ಕೆ ಹೆಚ್ಚುವರಿ ಸಾಲದ ನೆರವು ಕಲ್ಪಿಸುವುದು ಅಗತ್ಯವಾಗಿದೆ.
ದಿಗ್ಬಂಧನ ಜಾರಿಗೆ ಬಂದ ದಿನದಿಂದ ಇದುವರೆಗೆ ಬ್ಯಾಂಕ್ಗಳು ‘ಎಂಎಸ್ಎಂಇ’ಗಳೂ ಸೇರಿದಂತೆ ಕೈಗಾರಿಕಾ ವಲಯಕ್ಕೆ ₹ 42 ಸಾವಿರ ಕೋಟಿ ಮೊತ್ತದ ಸಾಲ ವಿತರಿಸಿವೆ. ಸಣ್ಣ ಕೈಗಾರಿಕೆಗಳು ಅಸ್ತಿತ್ವ ಉಳಿಸಿಕೊಳ್ಳಲು ತುರ್ತು ಸಾಲ ಸೌಲಭ್ಯದಡಿ ಈ ನೆರವು ಕಲ್ಪಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ನ ಸೂಚನೆಯಂತೆ ’ಎಂಎಸ್ಎಂಇ’ಗಳು ಸಾಲ ಮರುಪಾವತಿಯನ್ನು ಮೂರು ತಿಂಗಳ ಕಾಲ ಮುಂದೂಡುವ ಸೌಲಭ್ಯವನ್ನೂ ಬಳಸಿಕೊಳ್ಳುತ್ತಿವೆ.
***
ಅಂಕಿ ಅಂಶ
28 %: ಜಿಡಿಪಿಗೆ ‘ಎಂಎಸ್ಎಂಇ’ ವಲಯದ ಕೊಡುಗೆ
40% ಕ್ಕೂ ಹೆಚ್ಚು: ರಫ್ತು ವಹಿವಾಟಿನಲ್ಲಿನ ಪಾಲು
11 ಕೋಟಿ: ಉದ್ಯೋಗ ಅವಕಾಶಗಳು
₹ 27,426 ಕೋಟಿ: ಲಾಕ್ಡೌನ್ನಿಂದೀಚೆಗೆ ‘ಎಂಎಸ್ಎಂಇ’ಗಳಿಗೆ ಒದಗಿಸಿದ ತುರ್ತು ಸಾಲ
10 ಲಕ್ಷ: ತುರ್ತು ಸಾಲದ ನೆರವು ಪಡೆದ ‘ಎಂಎಸ್ಎಂಇ’ಗಳು
₹ 14,735 ಕೋಟಿ: ದೊಡ್ಡ ಕಂಪನಿಗಳಿಗೆ ನೀಡಿದ ಸಾಲದ ಮೊತ್ತ
6,428: ಸಾಲದ ನೆರವು ಪಡೆದ ಕಾರ್ಪೊರೇಟ್ಗಳು
***
₹ 5.66 ಲಕ್ಷ ಕೋಟಿ: ಮಾರ್ಚ್, ಏಪ್ರಿಲ್ನಲ್ಲಿ ಬ್ಯಾಂಕ್ಗಳು ಮಂಜೂರು ಮಾಡಿದ ಸಾಲ
3.2 ಕೋಟಿ: ಸಾಲ ಮರುಪಾವತಿ ಮುಂದೂಡಿಕೆ ಪ್ರಯೋಜನ ಪಡೆದಿರುವ ಸಾಲಗಾರರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.