ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕದ ಮೊತ್ತವನ್ನು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಸಂಪನ್ಮೂಲ ಕ್ರೂಡೀಕರಣಕ್ಕೆ ಬಳಸಲಾಗಿದೆ. ದೇಶದ ಸದ್ಯದ ಹಣಕಾಸು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ಪೆಟ್ರೋಲ್ ದರ ಮೇ ತಿಂಗಳಲ್ಲಿ ಲೀಟರ್ಗೆ ₹ 3.83 ಹೆಚ್ಚಾಗಿತ್ತು. ಜೂನ್ನಲ್ಲಿ ₹ 4.58, ಜುಲೈನಲ್ಲಿ (16ರ ವರೆಗೆ) ₹ 2.73 ಹೆಚ್ಚಾಗಿದೆ ಎಂದು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ.
ಏಪ್ರಿಲ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ಪ್ರತಿ ಲೀಟರ್ಗೆ 16 ಪೈಸೆ ಮತ್ತು 14 ಪೈಸೆ ಇಳಿಕೆಯಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಡೀಸೆಲ್ನ ಚಿಲ್ಲರೆ ಮಾರಾಟ ದರ ಮೇ ತಿಂಗಳಲ್ಲಿ ₹ 4.42ರಷ್ಟು ಹೆಚ್ಚಾಗಿತ್ತು. ಜೂನ್ನಲ್ಲಿ ₹ 4.03, ಜುಲೈನಲ್ಲಿ (16ರ ವರೆಗೆ) ₹0.69ರಷ್ಟು ಹೆಚ್ಚಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ನ ಎಕ್ಸೈಸ್ ಸುಂಕವಾಗಿ ₹ 94,181 ಕೋಟಿ ಸಂಗ್ರಹಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕಳೆದ ವರ್ಷ ಗರಿಷ್ಠ ಮಟ್ಟಕ್ಕೆ ಏರಿಕೆ ಮಾಡಿದ ಬಳಿಕ ಸುಂಕ ಸಂಗ್ರಹವು ಶೇಕಡ 88ರಷ್ಟು ಹೆಚ್ಚಾಗಿದ್ದು ₹ 3.35 ಲಕ್ಷ ಕೋಟಿಗೆ ತಲುಪಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೆಲಿ ಅವರು ಸೋಮವಾರ ಲೋಕಸಭೆಗೆ ತಿಳಿಸಿದ್ದರು.