ನವದೆಹಲಿ: ಆಮದಾಗಿರುವ ಈರುಳ್ಳಿ ಖರೀದಿಸಲು ರಾಜ್ಯಗಳು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಪ್ರತಿ ಕೆ.ಜಿಗೆ ₹ 22 ರಿಂದ ₹ 23ರ ದರದಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಆಮದಾಗಿರುವ ಈರುಳ್ಳಿಯನ್ನು ಪ್ರತಿ ಕೆ.ಜಿಗೆ ₹ 58ರಂತೆ ರಾಜ್ಯಗಳಿಗೆ ವಿತರಿಸಲಾಗುತ್ತಿದೆ. ಸಾರಿಗೆ ವೆಚ್ಚವನ್ನು ಕೇಂದ್ರವೇ ಭರಿಸುತ್ತಿದೆ.
ಹೊಸ ಬೆಳೆ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಹೀಗಾಗಿ ಆಮದಾಗಿರುವ ಸರಕನ್ನು ಗರಿಷ್ಠ ಬೆಲೆಗೆ ಖರೀದಿಸಲು ಯಾರೊಬ್ಬರೂ ಆಸಕ್ತಿ ತೋರಿಸುತ್ತಿಲ್ಲ. ಇದರಿಂದಾಗಿ ಭಾರಿ ಪ್ರಮಾಣದ ಸರಕು ಬಂದರಿನಲ್ಲಿಯೇ ಉಳಿಯುವಂತಾಗಿದೆ.
ಆಮದು ಈರುಳ್ಳಿಯ ರುಚಿಯಲ್ಲಿ ವ್ಯತ್ಯಾಸ ಇದೆ ಎನ್ನುವ ಕಾರಣಕ್ಕೆ ಗ್ರಾಹಕರು ಖರೀದಿಸಲು ಮುಂದಾಗುತ್ತಿಲ್ಲ. ಹೀಗಾಗಿ ಹಲವು ರಾಜ್ಯಗಳು ಆಮದು ಈರುಳ್ಳಿಗೆ ಸಲ್ಲಿಸಿದ್ದ ಬೇಡಿಕೆಯನ್ನು ಹಿಂದಕ್ಕೆ ಪಡೆದಿವೆ.
ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ 2019ರ ನವೆಂಬರ್ನಲ್ಲಿ 1.2 ಲಕ್ಷ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ನಿರ್ಧರಿಸಿತ್ತು. ಇದುವರೆಗೆ ಎಂಎಂಟಿಸಿ 14 ಸಾವಿರ ಟನ್ಗಳಷ್ಟನ್ನೇ ವಿದೇಶದಿಂದ ಖರೀದಿಸಿದೆ.