ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ| ಆರ್ಥಿಕ ಸಮೀಕ್ಷೆ ಅರ್ಥ ವ್ಯವಸ್ಥೆಗೆ ದಿಕ್ಸೂಚಿ

Last Updated 29 ಜನವರಿ 2021, 19:26 IST
ಅಕ್ಷರ ಗಾತ್ರ

ದೇಶದ ಅರ್ಥ ವ್ಯವಸ್ಥೆಯ ಸ್ಥಿತಿಗತಿಯ ಚಿತ್ರಣವನ್ನು ಕಟ್ಟಿಕೊಡುವ ವಿವರಣಾತ್ಮಕ ವರದಿಯೇ ಆರ್ಥಿಕ ಸಮೀಕ್ಷೆ. ಹಿಂದಿನ ಆರ್ಥಿಕ ವರ್ಷದಲ್ಲಿ ದೇಶದ ಕಾರ್ಯಕ್ಷಮತೆಯ ಸಂಪೂರ್ಣ ವಿವರ ಆರ್ಥಿಕ ಸಮೀಕ್ಷೆಯಲ್ಲಿ ಇರುತ್ತದೆ. ಮುಂಬರುವ ಆರ್ಥಿಕ ವರ್ಷದಲ್ಲಿ ದೇಶವು ಎದುರಿಸಲಿರುವ ಪ್ರಮುಖ ಸವಾಲುಗಳನ್ನು ಈ ಸಮೀಕ್ಷೆಯ ವರದಿಯಲ್ಲಿ ಅಂದಾಜಿಸಲಾಗಿರುತ್ತದೆ. ಜತೆಗೆ ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಕ್ರಮಗಳನ್ನೂ ಸೂಚಿಸಲಾಗುತ್ತದೆ. ಈ ಬಾರಿಯ ಆರ್ಥಿಕ ಸಮೀಕ್ಷೆಯ ಮಹತ್ವದ ಅಂಶಗಳು ಹೀಗಿವೆ:

ಸಮೀಕ್ಷೆ ಏಕೆ ಮುಖ್ಯ?

ಆರ್ಥಿಕ ಸಮೀಕ್ಷೆಯು ಅತ್ಯಂತ ಮಹತ್ವದ ವರದಿಯಾಗಿದೆ. ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸರ್ಕಾರ ಈವರೆಗೆ ಏನೇ ಹೇಳಿದ್ದರೂ, ಆರ್ಥಿಕ ಸಮೀಕ್ಷೆಯಲ್ಲಿ ವಿವರಿಸಲಾದ ಮಾಹಿತಿ ಅಧಿಕೃತವಾದುದು. ದೇಶದ ಆರ್ಥಿಕತೆ ಹೇಗಿದೆ ಎಂಬುದರ ಬಗೆಗಿನ ಅಧಿಕೃತ ದಾಖಲೆ ಇದು.

ಕೇಂದ್ರ ಆರ್ಥಿಕ ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯು ಈ ಸಮೀಕ್ಷೆಯನ್ನು ಸಿದ್ಧಪಡಿಸುತ್ತದೆ. ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಲು ಯಾವ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ಸಮೀಕ್ಷೆಯ ವರದಿಯಲ್ಲಿ ವಿವರಿಸಲಾಗುತ್ತದೆ. ಅದರ ಜತೆಯಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಶಿಫಾರಸುಗಳನ್ನೂ ಇದು ಒಳಗೊಂಡಿರುತ್ತದೆ.

ಆರ್ಥಿಕ ಸಮೀಕ್ಷೆಯಲ್ಲಿನ ಶಿಫಾರಸುಗಳಿಗೆ ಸರ್ಕಾರವು ಬದ್ಧವಾಗಿರಬೇಕು ಎಂಬ ನಿಯಮವೇನೂ ಇಲ್ಲ. ಆರ್ಥಿಕ ಸಮೀಕ್ಷೆಯಲ್ಲಿನ ಸಲಹೆಗಳನ್ನು ತಿರಸ್ಕರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುತ್ತದೆ. ಆದರೆ ಅದು ಬಹಳ ಮಹತ್ವದ ವರದಿ ಆಗಿರುವುದರಿಂದ ಅದನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.

ಕೃಷಿ ಕಾಯ್ದೆಗಳಿಗೆ ಸಮರ್ಥನೆ

ವಿವಾದ ಸೃಷ್ಟಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಆರ್ಥಿಕ ಸಮೀಕ್ಷೆಯಲ್ಲಿ ಬಲವಾಗಿ ಸಮರ್ಥಿಸಿಕೊಳ್ಳಲಾಗಿದೆ. ಈ ಕಾಯ್ದೆಗಳು ಮುಕ್ತ ಮಾರುಕಟ್ಟೆಯ ಹೊಸ ಯುಗವನ್ನು ಆರಂಭಿಸಲಿವೆ ಮತ್ತು ಸಣ್ಣ ಮತ್ತು ಮಧ್ಯಮ ರೈತರ ಜೀವನ ಮಟ್ಟದ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

ದೇಶದ ಒಟ್ಟು ರೈತರಲ್ಲಿ ಸಣ್ಣ ಮತ್ತು ಮಧ್ಯಮ ರೈತರ ಪ್ರಮಾಣವೇ ಶೇ 85ರಷ್ಟು. ಇವರು ಎಪಿಎಂಸಿಯ ನಿಯಂತ್ರಿತ ಮಾರುಕಟ್ಟೆಯಿಂದಾಗಿ ದಮನಕ್ಕೆ ಒಳಗಾಗಿದ್ದರು. ಈ ವರ್ಗದ ಅಭಿವೃದ್ಧಿಗಾಗಿಯೇ ಮೂರು ಕೃಷಿ ಕಾಯ್ದೆಗಳನ್ನು ರೂಪಿಸಲಾಗಿದೆ.

ಈ ಹಿಂದಿನ ಹಲವು ಆರ್ಥಿಕ ಸಮೀಕ್ಷೆಗಳು ಎಪಿಎಂಸಿಯ ಕಾರ್ಯನಿರ್ವಹಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. 2011–12ನೇ ವರ್ಷದ ನಂತರದ ಬಹುತೇಕ ಎಲ್ಲ ಆರ್ಥಿಕ ಸಮೀಕ್ಷೆಗಳು ಎಪಿಎಂಸಿ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು ಎಂದಿವೆ. ಎಪಿಎಂಸಿಯು ಏಕಸ್ವಾಮ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಆತಂಕವನ್ನು ಎಲ್ಲ ಸಮೀಕ್ಷೆಗಳು ವ್ಯಕ್ತಪಡಿಸಿವೆ.

ತಮ್ಮ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿ ರೈತರು ಹಲವು ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ. ಉತ್ಪನ್ನಗಳನ್ನು ಎಪಿಎಂಸಿ ಯಾರ್ಡ್‌ನಿಂದ ಹೊರಗಡೆ ಮಾರಾಟ ಮಾಡುವುದಕ್ಕೆ ರೈತರಿಗೆ ನಿರ್ಬಂಧ ಇದೆ. ಸರ್ಕಾರದಲ್ಲಿ ನೋಂದಿತರಾಗಿರುವ ವರ್ತಕರಿಗೆ ಮಾತ್ರ ಉತ್ಪನ್ನಗಳನ್ನು ಮಾರಬೇಕು ಎಂಬ ನಿಯಮವೂ ಇದೆ. ವಿವಿಧ ರಾಜ್ಯಗಳು ರೂಪಿಸಿದ ಕಾಯ್ದೆಗಳಿಂದಾಗಿ ರಾಜ್ಯ–ರಾಜ್ಯಗಳ ನಡುವೆ ಕೃಷಿ ಉತ್ಪನ್ನದ ಸುಲಲಿತ ಸಾಗಾಟವೂ ಸಾಧ್ಯವಿರಲಿಲ್ಲ. ಇಂತಹ ಹಲವು ಸಮಸ್ಯೆಗಳನ್ನು ಹೊಸ ಕಾಯ್ದೆಗಳು ಪರಿಹರಿಸಿವೆ.

ಮಹಿಳಾ ನೌಕರರಿಗೆ ಪ್ರೋತ್ಸಾಹ

ವೇತನ ಹೆಚ್ಚಳ, ಸಕಾಲದಲ್ಲಿ ಬಡ್ತಿ ಮುಂತಾದವು ಕಾರ್ಮಿಕರಲ್ಲಿ ಉತ್ಸಾಹ ತುಂಬುತ್ತವೆ. ಅದರಂತೆ, ಮಹಿಳೆಯರಿಗೆ ಸಾಮಾಜಿಕ ಭದ್ರತೆ ಹೆಚ್ಚಾದರೆ ದೇಶದ ಒಟ್ಟಾರೆ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ, ಕೆಲಸದ ಸ್ಥಳದಲ್ಲಿ ತಾರತಮ್ಯ ರಹಿತ ವ್ಯವಸ್ಥೆ ರೂಪಿಸುವುದು ಅಗತ್ಯವಾಗಿದೆ.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕ್ಷೇತ್ರಕ್ಕೆ ಬರುವಂತೆ ಮಾಡಲು ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ಮಕ್ಕಳ ಆರೈಕೆ ಕೇಂದ್ರಗಳು, ಮಕ್ಕಳ ಆರೈಕೆಗೆ ವೇತನಸಹಿತ ರಜೆ, ಕುಟುಂಬಸ್ನೇಹಿ ಕೆಲಸದ ವಾತಾವರಣ ಹಾಗೂ ಹಿರಿಯರ ಆರೈಕೆಗೆ ಸಹಾಯಕವಾಗುವ ವ್ಯವಸ್ಥೆ ರೂಪಿಸಬೇಕು.

***

ಹೆಚ್ಚಲಿದೆ ವಿಮಾನ ಹಾರಾಟ

ಸಮೀಕ್ಷೆಯ ಪ್ರಕಾರ, 2021ರ ಆರಂಭದ ತಿಂಗಳುಗಳಲ್ಲೇ ದೇಶದ ವಿಮಾನಯಾನ ಕ್ಷೇತ್ರವು ಕೋವಿಡ್‌ ಪೂರ್ವ ಸ್ಥಿತಿಗೆ ಬರಲಿದೆ. ವಿಮಾನಗಳ ಹಾರಾಟ ಹಾಗೂ ಪ್ರಯಾಣಿಕರ ಸಂಖ್ಯೆ ಶೀಘ್ರದಲ್ಲೇ ಹೆಚ್ಚಾಗಲಿವೆ.

ಕೊರೊನಾ ಸಂಕಷ್ಟದ ಹೊರತಾಗಿಯೂ ಕಳೆದ ವರ್ಷದ ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿ ಭಾರತದ ವಿಮಾನಯಾನ ಸಂಸ್ಥೆಗಳು 44 ವಿಮಾನಗಳನ್ನು ಖರೀದಿಸಿವೆ. ಪ್ರಸಕ್ತ ವಿಶ್ವದ ಮೂರನೇ ಅತಿ ದೊಡ್ಡ ಆಂತರಿಕ ವಿಮಾನ ಯಾನ ಮಾರುಕಟ್ಟೆಯಾಗಿರುವ ಭಾರತವು 2025ರ ವೇಳೆಗೆ ಜಗತ್ತಿನ ಮೂರನೇ ಅತಿ ದೊಡ್ಡ (ಆಂತರಿಕ ಮತ್ತು ಅಂತರರಾಷ್ಟ್ರೀಯ ಹಾರಾಟ ಸೇರಿ) ಮಾರುಕಟ್ಟೆ ಎನಿಸಲಿದೆ.

ಪ್ರಮುಖ ಅಂಶಗಳು

l 2030ರ ವೇಳಗೆ 20,000 ಹೆಕ್ಟೇರ್‌ನಲ್ಲಿ 5 ಕೋಟಿ ಮರಗಳನ್ನು ಬೆಳೆಸಲು ಯೋಜನೆ

l ಈರುಳ್ಳಿ ಬೆಲೆಯನ್ನು ನಿಯಂತ್ರಣದಲ್ಲಿ ಇರಿಸಲು ಸರ್ಕಾರವು ತನ್ನ ಸಂಗ್ರಹ ನೀತಿಯಲ್ಲಿ ಬದಲಾವಣೆ ತರಬೇಕು. ಕೊನೆಯ ಕ್ಷಣದಲ್ಲಿ ರಫ್ತು ನಿಷೇಧದಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಇದರಿಂದ ಹೆಚ್ಚು ಪರಿಣಾಮವೇನೂ ಆಗಿಲ್ಲ. ಹೀಗಾಗಿ ಅಂತಹ ಸ್ಥಿತಿ ಬರದಂತೆ ತಡೆಯಲು ಸಮರ್ಥವಾದ ನೀತಿಯನ್ನು ರೂಪಿಸಬೇಕು. ಸಂಗ್ರಹವು ಹಾಳಾಗದಂತೆ, ಸಮರ್ಥ ನಿರ್ವಹಣೆ ಮತ್ತು ಸಂಗ್ರಹವನ್ನು ಸೂಕ್ತ ಸಮಯದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವಂತಹ ಬದಲಾವಣೆಗಳನ್ನು ಜಾರಿಗೆ ತರಬೇಕು

l ಕೋವಿಡ್‌ ಪೂರ್ವ ಅವಧಿಯಲ್ಲಿ ಪ್ರತಿದಿನ ಸರಾಸರಿ 30 ಕಿ.ಮೀ.ನಷ್ಟು ರಸ್ತೆಯನ್ನು ನಿರ್ಮಿಸಲಾಗುತ್ತಿತ್ತು. ಕೋವಿಡ್‌ ಕಾರಣದಿಂದ, ಪ್ರತಿದಿನ ನಿರ್ಮಿಸಿದ ರಸ್ತೆಯ ಸರಾಸರಿ ಉದ್ದ 22 ಕಿ.ಮೀ.ಗೆ ಇಳಿದಿದೆ. ಇದು ಮುಂದಿನ ಆರ್ಥಿಕ ವರ್ಷದಲ್ಲಿ ಪ್ರತಿದಿನ ಸರಾಸರಿ 30 ಕಿ.ಮೀ.ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ಆರ್ಥಿಕತೆಯ ಚೇತರಿಕೆಗೆ ಕೊಡುಗೆ ನೀಡಲಿದೆ

l ವಿದ್ಯುತ್ ಪೂರೈಕೆ ಮತ್ತು ವಿತರಣೆಯಲ್ಲಿ ಶೇ 20ರಷ್ಟು ಸೋರಿಕೆಯಾಗುತ್ತಿದೆ. ಇದು ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಸೋರಿಕೆಗಿಂತ ದುಪ್ಪಟು ಹೆಚ್ಚು. ಸೋರಿಕೆ ಪ್ರಮಾಣವು ಕಡಿಮೆಯಾದರೆ, ಪೂರೈಕೆ ಮತ್ತು ವಿತರಣೆ ವೆಚ್ಚವು ಇಳಿಕೆಯಾಗಲಿದೆ. ಇದರಿಂದ ಒಟ್ಟಾರೆ ವಿದ್ಯುತ್ ಉತ್ಪಾದನಾ ವೆಚ್ಚ ಕಡಿಮೆಯಾಗಲಿದೆ. ಸೋರಿಕೆ ಪ್ರಮಾಣವನ್ನು ಶೇ 7-8ಕ್ಕೆ ಇಳಿಸಬೇಕು. ಇದನ್ನು ಇಳಿಕೆ ಮಾಡಿದರೆ, ಗ್ರಾಹಕರ ಮೇಲಿನ ಹೊರೆಯೂ ಕಡಿಮೆಯಾಗಲಿದೆ

ತಾರತಮ್ಯ ನಿವಾರಣೆಗೆ ಇ–ಶಿಕ್ಷಣ

ಕೋವಿಡ್‌ ಕಾಲದಲ್ಲಿ ಹೆಚ್ಚು ಬಳಕೆಗೆ ಬಂದ ಆನ್‌ಲೈನ್ ಶಿಕ್ಷಣವನ್ನು ಸರಿಯಾಗಿ ಬಳಸಿಕೊಂಡು ಶೈಕ್ಷಣಿಕ ತಾರತಮ್ಯವನ್ನು ಕಡಿಮೆ ಮಾಡಬಹುದು.

ಶೈಕ್ಷಣಿಕ ಸ್ಥಿತಿಯ ವಾರ್ಷಿಕ ವರದಿ 2020ರ (ಏಸರ್‌) ಪ್ರಕಾರ, 2018ರಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕಲಿಯುವ ಶೇ 36.5 ವಿದ್ಯಾರ್ಥಿಗಳಲ್ಲಿ ಮಾತ್ರ ಸ್ಮಾರ್ಟ್‌ ಫೋನ್‌ ಇತ್ತು. 2020ರಲ್ಲಿ ಈ ಪ್ರಮಾಣವು ಶೇ 61.8ರಷ್ಟಕ್ಕೆ ಏರಿದೆ.

ಆನ್‌ಲೈನ್‌ ಶಿಕ್ಷಣದ ಸರಿಯಾದ ಬಳಕೆಯು ಗ್ರಾಮೀಣ ಮತ್ತು ನಗರ, ಹೆಣ್ಣು ಮತ್ತು ಗಂಡು, ವಯಸ್ಸು ಮತ್ತು ಆದಾಯ ವರ್ಗಗಳ ನಡುವೆ ಇರುವ ಡಿಜಿಟಲ್‌ ಅಂತರವನ್ನು ಕೂಡ ತಗ್ಗಿಸುತ್ತದೆ.

ಶಿಕ್ಷಣವು ಎಲ್ಲ ಮಕ್ಕಳಿಗೆ ದೊರಕಬೇಕು ಎಂಬ ಕಾರಣಕ್ಕೆ ಮತ್ತು ಕಲಿಕೆಯನ್ನು ಇನ್ನಷ್ಟು ಉತ್ತೇಜಿಸುವುದಕ್ಕೆ ಕೇಂದ್ರ ಸರ್ಕಾರವು ಕೋವಿಡ್‌ ಕಾಲದಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಪಿಎಂ ಇ–ವಿದ್ಯಾ ಅಂತಹ ಒಂದು ಕಾರ್ಯಕ್ರಮ. ಸ್ವಯಂ ಕಾರ್ಯಕ್ರಮದಲ್ಲಿ 1.5 ಕೋಟಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.ಮುಂದಿನ ದಶಕದ ಹೊತ್ತಿಗೆ ಅತಿ ಹೆಚ್ಚು ಯುವ ಜನರು ಇರುವ ದೇಶವಾಗಿ ಭಾರತವು ಬದಲಾಗಲಿದೆ. ಯುವ ಜನರಿಗೆ ಒದಗಿಸುವ ಅತ್ಯುತ್ತಮ ಗುಣಮಟ್ಟದ ಶಿಕ್ಷಣವೇ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ.

ತೆರಿಗೆ ದೂರು ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ

ತೆರಿಗೆ ಸಂಬಂಧಿ ದೂರುಗಳ ನಿರ್ವಹಣೆಗೆ ಇರುವ ವ್ಯವಸ್ಥೆಯನ್ನು ಬಲಪಡಿಸಬೇಕು. ಇದನ್ನು ತೆರಿಗೆ ಇಲಾಖೆಯಿಂದ ಪ್ರತ್ಯೇಕಿಸಬೇಕು. ಈ ಮೂಲಕ ತೆರಿಗೆ ವಿಚಾರದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಅಮೆರಿಕ, ಕೆನಡ ಮತ್ತು ಬ್ರಿಟನ್‌ನಂತಹ ದೇಶಗಳಲ್ಲಿ ತೆರಿಗೆ ದೂರು ನಿರ್ವಹಣೆಯು ಪ್ರತ್ಯೇಕವಾದ ವ್ಯವಸ್ಥೆ. ಅದರಿಂದಾಗಿ ಅಲ್ಲಿನ ತೆರಿಗೆದಾರರು ಮತ್ತು ತೆರಿಗೆ ಪ್ರಾಧಿಕಾರಗಳ ನಡುವೆ ಹೆಚ್ಚು ವಿಶ್ವಾಸ ಇದೆ. ಆ ದೇಶಗಳಲ್ಲಿ ತೆರಿಗೆ ಮತ್ತು ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಅನುಪಾತವು ಹೆಚ್ಚು. ತೆರಿಗೆ ಪಾವತಿಗೆ ತೆರಿಗೆದಾರರು ತೆಗೆದುಕೊಳ್ಳುವ ಸಮಯ ಕಡಿಮೆ.

ತೆರಿಗೆದಾರರ ಹಕ್ಕುಗಳನ್ನು ಸ್ಪಷ್ಟವಾಗಿ ಗುರುತಿಸಬೇಕು. ತೆರಿಗೆದಾರರ ದೃಷ್ಟಿಕೋನದಿಂದ ವಿವಾದಗಳನ್ನು ನೋಡುವ ಪ್ರತ್ಯೇಕ ವ್ಯವಸ್ಥೆ ಸೃಷ್ಟಿಯಾಗಬೇಕು. ಈ ಮೂಲಕ ತೆರಿಗೆದಾರರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡುತ್ತದೆ. ತಮ್ಮನ್ನು ನ್ಯಾಯಯುತವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ನಂಬಿಕೆ ಬರುತ್ತದೆ. ಮುಂದಿನ ಹಂತದಲ್ಲಿ, ತೆರಿಗೆದಾರರ ಹಕ್ಕುಗಳ ಜಾರಿಯತ್ತ ಗಮನ ಹರಿಸಬಹುದು.

ಶಾಲೆಯಲ್ಲಿ ವೃತ್ತಿ ಶಿಕ್ಷಣ

9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ವೃತ್ತಿ ಕೋರ್ಸ್‌ಗಳನ್ನು ನಡೆಸಬೇಕು. ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ 3.0 ಅನ್ನು ಬಳಸಿಕೊಂಡು ವಿದ್ಯಾರ್ಥಿಗಳ ಮುಂದೆ ಕೌಶಲ ಅಭಿವೃದ್ಧಿ ಅವಕಾಶಗಳನ್ನು ತೆರೆದಿಡಬೇಕು. ಕಳೆದ ವರ್ಷದ ಸಮೀಕ್ಷೆಯ ಪ್ರಕಾರ, 15–59 ವರ್ಷದೊಳಗಿನ ಕೆಲಸಗಾರರಲ್ಲಿ ಔಪಚಾರಿಕ ವೃತ್ತಿ ತರಬೇತಿ ಪಡೆದವರು ಶೇ 2.4ರಷ್ಟು ಮಾತ್ರ. ಶೇ 8.9ರಷ್ಟು ಮಂದಿ ಅನೌಪಚಾರಿಕ ಮೂಲಗಳಿಂದ ತರಬೇತಿ ಪಡೆದಿದ್ದಾರೆ.

ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿ ಸೇವೆಗಳ ಕೋರ್ಸ್‌ಗಳಿಗೆ ಅತಿ ಹೆಚ್ಚು ಬೇಡಿಕೆ ಇದೆ. ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌, ಮೆಕ್ಯಾನಿಕಲ್ ಎಂಜಿನಿಯರಿಂಗ್‌, ತಯಾರಿಕೆ, ಕಚೇರಿ ಮತ್ತು ವ್ಯಾಪಾರ ಸಂಬಂಧಿ ಸೇವೆಗಳು, ಕೈಮಗ್ಗ ಮತ್ತು ಜವುಳಿ, ಆರೋಗ್ಯ ಸೇವೆ ಮುಂತಾದ ವಿಚಾರಗಳಲ್ಲಿ ಕೋರ್ಸ್‌ಗಳನ್ನು ಆರಂಭಿಸಬಹುದು.ಶಿಕ್ಷಣ ಸಚಿವಾಲಯದ ಸಮನ್ವಯದಲ್ಲಿ ವೃತ್ತಿ ಕೋರ್ಸ್‌ಗಳನ್ನು ನಡೆಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT