ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ ಮೀಸಲು ನಿಧಿಯ ಪ್ರಮಾಣ ನಿರ್ಧರಿಸಲು ರಚಿಸಲಾಗಿರುವ ಬಿಮಲ್ ಜಲನ್ ಸಮಿತಿಯು ಏಪ್ರಿಲ್ ತಿಂಗಳಲ್ಲಿ ವರದಿ ಸಲ್ಲಿಸುವ ನಿರೀಕ್ಷೆ ಇದೆ.
ಆರ್ಬಿಐನ ಮಾಜಿ ಗವರ್ನರ್ ಬಿಮಲ್ ಜಲನ್ ನೇತೃತ್ವದ ಸಮಿತಿಯು ಮಂಗಳವಾರ ಮೊದಲ ಬಾರಿಗೆ ಸಭೆ ಸೇರಿ ಚರ್ಚೆ ನಡೆಸಿತು.ಹಣಕಾಸು ವ್ಯವಹಾರಗಳ ಮಾಜಿ ಕಾರ್ಯದರ್ಶಿ ರಾಕೇಶ್ ಮೋಹನ್ ಅವರು ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ.
ಕೇಂದ್ರೀಯ ಬ್ಯಾಂಕ್ನ ಮೀಸಲು ನಿಧಿಗೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಬಳಕೆಯಲ್ಲಿ ಇರುವ ನಿಯಮಗಳನ್ನು ಪರಿಶೀಲಿಸಿ ಭಾರತಕ್ಕೆ ಹೊಂದಾಣಿಕೆಯಾಗುವಂತಹ ವ್ಯವಸ್ಥೆ ಶಿಫಾರಸು ಮಾಡಲು ಸಮಿತಿಗೆ ಸೂಚಿಸಲಾಗಿದೆ.
ಆರ್ಬಿಐ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತುರ್ತು ನಿಧಿ ಹೊಂದುವುದೂ ಸೇರಿದಂತೆ, ಲಾಭ ವಿತರಣೆಯ ಹೊಸ ಪ್ರಸ್ತಾವವನ್ನು ಸಮಿತಿಯು ಮುಂದಿಡಲಿದೆ.
ಆರ್ಬಿಐ ಬಳಿ ಇರುವ ₹ 9.6 ಲಕ್ಷ ಕೋಟಿ ಹೆಚ್ಚುವರಿ ಬಂಡವಾಳದಲ್ಲಿ ಕೆಲ ಪಾಲನ್ನು ತನಗೆ ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರ ಪಟ್ಟು ಹಿಡಿದಿತ್ತು. ಇದಕ್ಕೆ ಆರ್ಬಿಐನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಅವರು ವಿರೋಧ ವ್ಯಕ್ತಪಡಿಸಿದ್ದರು. ಇದು ಸಂಘರ್ಘಕ್ಕೆ ಎಡೆಮಾಡಿಕೊಟ್ಟಿತ್ತು.
ಈ ಕಾರಣಕ್ಕೆ ಆರ್ಬಿಐ ನವೆಂಬರ್ 19ರ ಸಭೆಯಲ್ಲಿ ಮೀಸಲು ನಿಧಿಯ ಹೊಸ ಸ್ವರೂಪ ನಿಗದಿಪಡಿಸಲು ಸಮಿತಿ ರಚಿಸಲು ನಿರ್ಧರಿಸಿತ್ತು.