ಮಂಗಳೂರು: ಕರ್ಣಾಟಕ ಬ್ಯಾಂಕ್ ಸಾರ್ವಜನಿಕರಿಗೆ ಆರೋಗ್ಯ ರಕ್ಷಾಕವಚ ನೀಡುವ ವಿಶೇಷ ಕೊರೊನಾ ವಿಮಾ ಯೋಜನೆ ಜಾರಿಗೊಳಿಸಿದೆ.
‘ಕೊರೊನಾ ಸೋಂಕಿನಿಂದ ಪೀಡಿತರಾದವರಿಗೆ ಅವರ ಸಂಕಷ್ಟದ ಕಾಲದಲ್ಲಿ ನೆರವಾಗುವ ನಿಟ್ಟಿನಲ್ಲಿ ಯುನಿವರ್ಸಲ್ ಸೋಂಪೊ ಜನರಲ್ ಇನ್ಶುರೆನ್ಸ್ ಕಂಪನಿ ಸಹಯೋಗದೊಂದಿಗೆ ವಿಮೆ ಯೋಜನೆ ಆರಂಭಿಸಲಾಗಿದೆ. ಆಸ್ಪತ್ರೆಯ ವೆಚ್ಚಗಳಿಗಾಗಿ ಕೇವಲ ₹ 399 (ಎಲ್ಲ ತೆರಿಗೆಗಳೂ ಸೇರಿ) ಕಂತನ್ನು ನೀಡುವ ಮೂಲಕ ಈ ವಿಮೆ ಪಡೆಯಬಹುದಾಗಿದೆ’ ಎಂದು ಬ್ಯಾಂಕ್ನ ಸಿಇಒ ಮಹಾಬಲೇಶ್ವರ ಎಂ.ಎಸ್. ತಿಳಿಸಿದ್ದಾರೆ.
‘ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಉಂಟಾದಲ್ಲಿ ವಿಮಾದಾರರಿಗೆ ₹3 ಲಕ್ಷದವರೆಗೆ ಆಸ್ಪತ್ರೆಯ ಖರ್ಚನ್ನು ಹಾಗೂ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ ₹3ಸಾವಿರದವರೆಗಿನ ಔಷಧಿಗಳ ಖರ್ಚನ್ನು ಅಥವಾ 14 ದಿನಗಳ ಕ್ವಾರಂಟೈನ್ಗೆ ಒಳಪಟ್ಟಲ್ಲಿ ದಿನವೊಂದಕ್ಕೆ ₹1ಸಾವಿರದವರೆಗೆ ಸರ್ಕಾರಿ ಅಥವಾ ಮಿಲಿಟರಿ ಆಸ್ಪತ್ರೆಗಳ ಕ್ವಾರಂಟೈನ್ ವೆಚ್ಚ ಭರಿಸಲು ಅವಕಾಶವಿದೆ’ ಎಂದು ಹೇಳಿದ್ದಾರೆ.
‘ವಿಮೆಯ ಅವಧಿ 120 ದಿನಗಳು. ಈ ವಿಮೆಯ ಸೌಲಭ್ಯ 18 ರಿಂದ 65 ವಯಸ್ಸಿನ ವಯೋಮಿತಿಯ ಬ್ಯಾಂಕಿನ ಎಲ್ಲ ಗ್ರಾಹಕರಿಗೆ ಲಭ್ಯವಿದೆ. ಗ್ರಾಹಕರಲ್ಲದವರೂ, ಗ್ರಾಹಕರಾಗಿ ವಿಮಾ ಕಂತನ್ನು ಪಾವತಿಸಿ, ವಿಮೆ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಸಮೂಹ ವಿಮೆಯ ಈ ಯೋಜನೆಯ ಬಗ್ಗೆ ನಿಮ್ಮ ಹತ್ತಿರದ ಕರ್ಣಾಟಕ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿದಲ್ಲಿ ಸಿಬ್ಬಂದಿ ಮಾಹಿತಿ ನೀಡಲಿದ್ದಾರೆ. ಅವಶ್ಯಕತೆ ಇರುವವರೆಲ್ಲರೂ ಈ ಸೌಲಭ್ಯವನ್ನು ಹೊಂದುವ ಮೂಲಕ ನೆಮ್ಮದಿಯಿಂದ ಇರಬಹುದು’ ಎಂದು ತಿಳಿಸಿದ್ದಾರೆ.