ಬೆಂಗಳೂರು: ದೇಶದಾದ್ಯಂತ ಜಾರಿಯಲ್ಲಿ ಇರುವ ದಿಗ್ಬಂಧನಿಂದಾಗಿ ₹ 400 ಕೋಟಿ ಮೊತ್ತದ 21 ಸಾವಿರ ಟನ್ಗಳಷ್ಟು ಕಾಫಿ ರಫ್ತಿಗೆ ಅಡಚಣೆ ಎದುರಾಗಿದೆ.
‘ರಫ್ತು ಪರ್ಮೀಟ್ ನೀಡಲು ಕಾಫಿ ಮಂಡಳಿಯು ಒಲವು ಹೊಂದಿದ್ದರೂ ಪರ್ಮೀಟ್ ಪಡೆಯಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಸರಕನ್ನು ಹೊರಗೆ ಸಾಗಿಸಲು ಜಿಲ್ಲಾಡಳಿತವು ಕ್ಯೂರಿಂಗ್ ಸೆಂಟರ್ಗಳಿಗೆ ಅನುಮತಿ ನೀಡುತ್ತಿಲ್ಲ‘ ಎಂದು ಕಾಫಿ ರಫ್ತುದಾರರ ಸಂಘದ (ಸಿಇಎ) ಅಧ್ಯಕ್ಷ ರಮೇಶ್ ರಾಜಾ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಚಿಕ್ಕಮಗಳೂರು, ಮಂಗಳೂರು, ಕುಶಾಲನಗರ ಮತ್ತಿತರ ಕಡೆಗಳಲ್ಲಿನ ಕ್ಯೂರಿಂಗ್ ಸೆಂಟರ್ಗಳಲ್ಲಿ ಅಂದಾಜು 20 ಸಾವಿರ ಟನ್ ಕಾಫಿ ಮತ್ತು ಮಂಗಳೂರು ಹಾಗೂ ಕೊಚ್ಚಿ ಬಂದರ್ನಲ್ಲಿ 1 ಸಾವಿರ ಟನ್ನಷ್ಟು ಕಾಫಿ ದಾಸ್ತಾನು ರಫ್ತಾಗದೇ ಉಳಿದಿದೆ. ಇದರಿಂದಾಗಿ ಮಾರ್ಚ್ಗೆ ಕೊನೆಗೊಂಡ 2019–20ನೇ ಹಣಕಾಸು ವರ್ಷದಲ್ಲಿ ದೇಶದ ಒಟ್ಟಾರೆ ಕಾಫಿ ರಫ್ತು ವಹಿವಾಟು ಶೇ 3.2ರಷ್ಟು ಕಡಿಮೆಯಾಗಿದೆ.
ರಫ್ತು ಪ್ರಮಾಣ ಕಡಿಮೆಯಾಗಲು ಪ್ರತಿಕೂಲ ಹವಾಮಾನದಿಂದಾಗಿ ಕಾಫಿ ಉತ್ಪಾದನೆಯು ಕುಸಿದಿರುವುದೂ ಕಾರಣವಾಗಿದೆ. ಈ ಹಣಕಾಸು ವರ್ಷದಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ ಎಂದು ರಫ್ತುದಾರರು ಅಂದಾಜಿಸಿದ್ದಾರೆ. 2018–19ರಲ್ಲಿ ದೇಶದ ಕಾಫಿ ರಫ್ತು ವಹಿವಾಟು 3.53 ಲಕ್ಷ ಟನ್ಗಳಷ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.