ನವದೆಹಲಿ: ‘ಬಜೆಟ್ನಲ್ಲಿ ಪ್ರಸ್ತಾಪಿಸಿರುವ ಹೊಸ ಕಡಿಮೆ ದರದ ಆದಾಯ ತೆರಿಗೆ ವ್ಯವಸ್ಥೆಯು ತೆರಿಗೆ ಉಳಿಸಲು ಕಡ್ಡಾಯವಾಗಿ ಹೂಡಿಕೆ ಮಾಡಲು ಬಯಸದವರ ಬಳಿ ಹೆಚ್ಚು ಹಣ ಉಳಿಸಲಿದೆ’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
‘ವೈಯಕ್ತಿಕ ಆದಾಯ ತೆರಿಗೆ ಪಾವತಿಸುವವರು ಹಾಲಿ ವಿನಾಯ್ತಿ ಮತ್ತು ಕಡಿತ ಕೈಬಿಟ್ಟು ಹೊಸ ಕಡಿಮೆ ತೆರಿಗೆ ದರಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಸದ್ಯಕ್ಕೆ ಜಾರಿಯಲ್ಲಿ ಇರುವ ಮತ್ತು ಉದ್ದೇಶಿತ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಯಾವುದು ಹೆಚ್ಚು ಪ್ರಯೋಜನಕರ ಮತ್ತು ಯಾವುದು ಲಾಭಕರವಲ್ಲವೆಂದು ನಾವು (ಸರ್ಕಾರ) ಹೇಳುವುದಿಲ್ಲ. ತೆರಿಗೆದಾರರಿಗೆ ಆಯ್ಕೆ ಅವಕಾಶ ಕಲ್ಪಿಸಲಾಗಿದೆಯಷ್ಟೆ. ಯಾರೊಬ್ಬರ ಮೇಲೂ ನಿರ್ಬಂಧ ವಿಧಿಸಿಲ್ಲ. ಈ ಪ್ರಸ್ತಾವವು ತೆರಿಗೆದಾರರಿಗೆ ಪ್ರಯೋಜನ ಕಲ್ಪಿಸಲಿದೆಯೇ ಹೊರತು ಯಾವುದೇ ಹಾನಿ ಒದಗಿಸುವುದಿಲ್ಲ’ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
‘ತೆರಿಗೆದಾರರು ಚಾಲ್ತಿಯಲ್ಲಿ ಇರುವ ₹ 50 ಸಾವಿರದ ಸ್ಟ್ಯಾಂಡರ್ಡ್ ಡಿಡಕ್ಷನ್, ಉಳಿತಾಯ ಯೋಜನೆಗಳಲ್ಲಿ ₹ 1.5 ಲಕ್ಷ ಹೂಡಿಕೆ ಮಾಡಿ ತಮ್ಮ ಆದಾಯಕ್ಕೆ ಅನುಗುಣವಾಗಿ ತೆರಿಗೆ ಪಾವತಿಸಬಹುದು. ಇದು ಬೇಡ ಎನಿಸಿದರೆ ತೆರಿಗೆ ಕಡಿತದ ವಿನಾಯ್ತಿಗೆ ಅವಕಾಶ ಇರದ ಕಡಿಮೆ ತೆರಿಗೆ ದರದ ಹೊಸ ವ್ಯವಸ್ಥೆಗೆ ಬದಲಾಗಬಹುದು.
‘ತೆರಿಗೆದಾರರು ಹಳೆಯ ಪದ್ಧತಿಯನ್ನೇ ಮುಂದುವರೆಸಬಹುದು. ಒಂದು ವೇಳೆ ಹೊಸ ವ್ಯವಸ್ಥೆಯೇ ಅವರಿಗೆ ಹೆಚ್ಚು ಆಕರ್ಷಕವಾಗಿ ಕಂಡರೆ ಅದನ್ನೇ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಆಯ್ಕೆ ಮಾಡಿಕೊಳ್ಳದೆ ಇರಬಹುದು. ಹೀಗಾಗಿ ಯಾವುದೇ ಗೊಂದಲ ಅಥವಾ ಕಳವಳಕ್ಕೆ ಅವಕಾಶವೇ ಇಲ್ಲ’ ಎಂದು ಹೇಳಿದ್ದಾರೆ.