<p>ಯಾವುದೇ ಮಹಾನಗರದ ಯಾವುದಾದರೂ ಗಡಿಬಿಡಿಯಾದ ರಸ್ತೆಯಲ್ಲಿ ನಿಂತು ನೋಡಿ. ಅಲ್ಲಿ ನಡೆಯುವ ಯಾವುದೂ ನಮಗೆ ಸಂಬಂಧಪಟ್ಟದ್ದಲ್ಲ ಎಂದು ಕಲ್ಪಿಸಿಕೊಳ್ಳಿ. ರಸ್ತೆ ಬದಿಯಲ್ಲಿ ಕಾಲುನಡಿಗೆಯಲ್ಲಿ ದೌಡಿಕ್ಕುತ್ತಿರುವ ಮಂದಿ ಕಾಣುತ್ತಾರೆ.<br /> <br /> ರಸ್ತೆಯಲ್ಲಿ ವಿವಿಧ ಗಾಡಿಗಳನ್ನೇರಿ ಅತ್ತಿತ್ತ ವೇಗವಾಗಿ ಚಲಿಸುತ್ತಿರುವವರನ್ನು ನೋಡಿ. ಎಲ್ಲರೂ ಎಲ್ಲಿಗೋ ಓಡುತ್ತಿದ್ದಾರೆ ಅನ್ನುವುದಕ್ಕಿಂತಲೂ ಯಾವುದರಿಂದಲೋ ಓಡಿಹೋಗುತ್ತಿರುವಂತೆ ಕಾಣುತ್ತದೆ.<br /> <br /> ಒಂದು ಅಮೆರಿಕನ್ ನಾಟಕದಲ್ಲಿ ಕಥಾನಾಯಕ ಬ್ಯಾಂಕಿನಿಂದ ಸಾಲ ಪಡೆದು ಮನೆ ಕೊಳ್ಳುತ್ತಾನೆ. ಆದರೆ ಸಾಲ ತೀರಿಸುವ ಮೊದಲು ಅವನೇ ಗೋತಾ ಹೊಡೆದುಬಿಡುತ್ತಾನೆ.<br /> <br /> ಹಟ ಮಾಡಿ ಪ್ರೀತಿಸಿ ಮನೆಯವರಿಗೆ ಸೆಡ್ಡುಹೊಡೆದು ಪ್ರೇಮವಿವಾಹ ಮಾಡಿಕೊಂಡ ಹುಡುಗ ಹುಡುಗಿ ಆರು ತಿಂಗಳು ಕಳೆಯುವುದರಲ್ಲಿ ಕೋರ್ಟಿನ ಮೆಟ್ಟಿಲೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ.<br /> <br /> ಹಗಲಿರುಳೂ ಕಾಸು ಕೂಡಿಡಬೇಕೆಂದು ಪಣತೊಟ್ಟ ವ್ಯಕ್ತಿ ಕಾಸು ಕೂಡುತ್ತಾ ಹೋದ ಹಾಗೆ ಹೆಚ್ಚುಹೆಚ್ಚು ರೋಗಿಯೂ ಅಶಾಂತನೂ ಆಗುತ್ತಾ ಹೋಗುತ್ತಾನೆ.<br /> ಅಶಾಂತಿಯಿಂದ ಮುಕ್ತಿ ಪಡೆಯಲೆಂದು ಪ್ರಶಾಂತ ಜಾಗಕ್ಕೆ ಹೋದವರ ಮನಸಿನಲ್ಲಿ ಆ ಪ್ರಶಾಂತ ಜಾಗದಲ್ಲೂ ಒಂದು ಜ್ವಾಲಾಮುಖಿ ಏಳುತ್ತದೆ.<br /> <br /> ಬಯಸಿ ಬಂದದ್ದು ತನಗೇ ಕುತ್ತಾಗುವ ಅನೇಕ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಆದರೆ ಯಾಕೆ ಹೀಗಾಗುತ್ತದೆ? ಎಲ್ಲರೂ ಮುಂದೊಮ್ಮೆ ಶಾಂತಿ ಸಿಗಬಹುದೆಂಬ ಭರವಸೆಯಿಂದ ದಿನಾ ಗಾಣ ಸುತ್ತುತ್ತಿರುತ್ತಾರೆ. ಇದು ಮಗುವೊಂದು ಚಂದ್ರನನ್ನು ಹಿಡಿಯಲು ಹೋದ ಹಾಗೆ. ನಾವು ಹಿಂಬಾಲಿಸಿದಷ್ಟೂ ಅದು ದೂರ ಹೋಗುತ್ತಿರುತ್ತದೆ.<br /> <br /> ಮುಂದಿನ ಬೆನ್ನಿಗೆ ಬಿದ್ದು ಇಂದು ಅಸಹನೀಯವಾದಾಗ ಮನಸ್ಸು ಹಿಂದನ್ನು ಬಯಸತೊಡಗುತ್ತದೆ. ಆದರೆ ಕಾಲದ ಎಂಜಿನ್ನು ನಮ್ಮನ್ನು ಮುಂದೆ ಮುಂದೆ ತಳ್ಳುತ್ತಿರುತ್ತದೆ.<br /> <br /> ಹಿಂದುಮುಂದುಗಳ ದಂದುಗದಿಂದ ಪಾರಾಗಿ ಇಂದು ಸಿಕ್ಕಿದ್ದರಲ್ಲಿ ತೃಪ್ತಿ ಪಡೆದು ಕೊಳ್ಳಲಾದೀತೆ? ಆದರೆ ಇಂದಿನಲ್ಲಿ ಬದುಕುವವರು ಬೆರಳೆಣಿಕೆಗೂ ಕಡಿಮೆ.<br /> ಜಗತ್ತಿನಲ್ಲೇ ಅತ್ಯಂತ ಸುಖಿಯಾಗಿರುವ ಮನುಷ್ಯನ ಕತೆ ನೆನಪಾಗುತ್ತದೆ:ಒಬ್ಬನಿದ್ದ. <br /> ಬಡವನಾಗಿದ್ದ. ಹಣ ಸಂಪಾದಿಸಿದ. ಒಂಟಿಯಾಗಿದ್ದ. ಪ್ರೇಮಿಸಿ ಮದುವೆಯಾದ. <br /> <br /> ಬಾಡಿಗೆ ಮನೆಯಿಂದ ಸ್ವಂತಮನೆಗೆ ಬಂದ. ಅದು ಸಾಲದೆಂದು ಇನ್ನೆಷ್ಟೋ ಮನೆ ಕಟ್ಟಿಸಿ ಬಾಡಿಗೆ ಕೊಟ್ಟ. ಮಕ್ಕಳನ್ನು ಓದಿಸಿ ಮದುವೆ ಮಾಡಿಸಿದ. ಅವರೂ ಕೈತುಂಬ ದುಡಿಯತೊಡಗಿದರು. ಪತಿವ್ರತೆಯಾದ ಹೆಂಡತಿ ಸದಾ ಅವನ ಸೇವೆಗೆ ಸಿದ್ಧಳಾಗಿದ್ದರೂ ಹೊರಗಡೆಯೂ ಹೋಗಿ ಮಜಾ ಮಾಡುತ್ತಿದ್ದ. <br /> <br /> ಆರೋಗ್ಯ ತುಸು ಕೆಟ್ಟರೂ ಅದನ್ನು ಕೂಡಲೇ ರಿಪೇರಿ ಮಾಡುವ ಡಾಕ್ಟರುಗಳ ಸೇನಾಪಡೆಯನ್ನೇ ಕೊಂಡುಕೊಂಡಿದ್ದ. ಆದರೆ ಸ್ವಾಸ್ಥ್ಯವಾಗಲಿ, ಸಂಭೋಗವಾಗಲಿ, ಧನ-ಸಂಪತ್ತಾಗಲಿ ಅವನಿಗೆ ತೃಪ್ತಿ ಕೊಡಲಿಲ್ಲವಾಗಿ ಬಾಬಗಳ ಬಾಲ ಹಿಡಿದ. ಅಲ್ಲೂ ಕಾಸು ಕಕ್ಕಿದ. ಅವರು ಹೇಳಿದ್ದನ್ನು ಮಾಡಿದ. <br /> <br /> ಅದೇ ಸಮಯದಲ್ಲಿ ಜ್ಯೋತಿಷದ ಗೀಳು ಹತ್ತಿಸಿಕೊಂಡ. ನಾಡಿಗ್ರಂಥಗಳನ್ನೋದಿಸಲು ವೈದೀಶ್ವರನ್ಗೂ ಹೋಗಿ ಬಂದ. ಅವರು ಹೇಳಿದ ಎಲ್ಲ ಪರಿಹಾರವನ್ನೂ ಮಾಡಿದ. ಆದರೂ ಶಾಂತಿ ಸಿಗಲಿಲ್ಲ. ಆಗ ಅವನನ್ನು ಅಪೂರ್ವ ತೇಜಸ್ವಿಯಾದ ಜ್ಞಾನಿ ಭೆಟ್ಟಿ ಮಾಡಿದ. `ಯಾಕಿಷ್ಟು ಸೋತಿದ್ದೀಯ~ ಎಂದು ಕೇಳಿದ. ತಾನು ಏನೇನು ಮಾಡಿದೆ ಎಂದವನಿಗೆ ವಿವರಿಸಿ ತಾನು ಇನ್ನೂ ಅಸುಖಿಯಾಗಿರುವುದರಿಂದ `ಸುಖದ ಹಾದಿಯನ್ನು ತೋರು~ ಎಂದು ಬೇಡಿಕೊಂಡ.<br /> <br /> <strong> ಮನ ಕರಗಿದ ಜ್ಞಾನಿ ಹೇಳಿದ: </strong>`ನಾನು ಆ ಸುಖದ ಹುಡುಕಾಟ ಬಿಟ್ಟಿದ್ದೇನೆ. ಯಾಕೆಂದರೆ ಜಗತ್ತಿನ ಅತ್ಯಂತ ಸುಖಿಯಾದ ಮನುಷ್ಯನನ್ನು ಕಂಡು ಬಂದಿದ್ದೇನೆ~ ಎಂದು ಹೇಳಿದ. ಆಗ ನಮ್ಮ ಕಥಾನಾಯಕ ಆ ವ್ಯಕ್ತಿಯನ್ನು ತನಗೂ ತೋರಿಸೆಂದು ಕೇಳಿದ. `ಅವನನ್ನು ಯಾರು ಬೇಕಾದರೂ ಭೆಟ್ಟಿ ಮಾಡಬಹುದು. ಇಗೋ ಈ ವಿಳಾಸದಲ್ಲಿದ್ದಾನೆ. ಹೋಗಿ ನೋಡು~ ಎಂದ.<br /> <br /> ಆ ವಿಳಾಸವನ್ನು ಈಸಿಕೊಂಡು ಈತ ಕೂಡಲೇ ಆ ಊರಿನ ಆ ಬೀದಿಯ ಆ ಮನೆಯನ್ನು ಸೇರಿದಾಗ ತಾನು ಕಾಣಬಂದ ವ್ಯಕ್ತಿ ಎರಡು ದಿನ ಹಿಂದೆ ಇನ್ನೊದು ಊರಿಗೆ ಹೋದ ಎಂದು ತಿಳಿದುಬಂತು. ಆ ವಿಳಾಸಕ್ಕೆ ಹೋದರೆ ಅವನು ಇನ್ನೊಂದು ಕಡೆ ಹೋಗಿದ್ದಾನೆಂದು ತಿಳಿದುಬಂತು. ಆ ವಿಳಾಸಕ್ಕೆ ಹೋದರೂ ಅವನು ಇನ್ನೆಲ್ಲಿಗೋ ಹೋಗಿಬಿಟ್ಟಿರುತ್ತಿದ್ದ. <br /> <br /> ಹೀಗೆ ಎಷ್ಟೋ ವಿಳಾಸಗಳಲ್ಲಿ ಅವನನ್ನು ಕಾಣದೆ ನಿರಾಶನಾಗುತ್ತಿರುವಾಗ ಇದೇ ಕಡೆಯ ಪ್ರಯತ್ನ ಎಂದುಕೊಂಡು ಒಂದೂರಿಗೆ ಹೋಗಿ ಮಹಾಪುರುಷನ ಬಗೆಗೆ ವಿಚಾರಿಸಿದಾಗ `ಅಗೋ ಆ ಜೋಪಡಿಯಲ್ಲಿ ಅವನಿದ್ದಾನೆ~ ಎಂದು ತಿಳಿಸಲು ,ಕೊನೆಗಾದರೂ ಸಿಕ್ಕಿದನಲ್ಲ ಅನ್ನೋ ಸಮಾಧಾನದಿಂದ ಅಲ್ಲಿಗೆ ಹೋಗಿ ನೋಡಿದಾಗ ಆಶ್ಚರ್ಯವಾಯಿತು. ಅಲ್ಲಿ ಕೂತಿದ್ದ ಹರುಕಂಗಿಯ ವ್ಯಕ್ತಿ ಇವನನ್ನು ನೋಡಿ ಗಹಗಹಿಸಿ ನಗತೊಡಗಿದ. <br /> <br /> <strong>ಸಿಟ್ಟು</strong> <strong>ಬಂದರೂ ಈತ ಕೇಳಿದ:</strong> `ನಾನಿಲ್ಲಿ ಬಂದದ್ದು ನಿನ್ನ ಹುಚ್ಚು ನಗೆಕೇಳಿಸಿಕೊಳ್ಳುವುದಕ್ಕಲ್ಲ, ಅತ್ಯಂತ ಸುಖಿಯಾದ ಮಹಾಪುರುಷನನ್ನು ನೋಡಲು~ ಎಂದ. ಆಗ ಆ ವ್ಯಕ್ತಿ ಹೇಳಿದ: `ನಾನೇ ಆ ಮಹಾಸುಖಿಯಾದ ಮಹಾಪುರುಷ.~ ನಮ್ಮ ಕಥಾ ನಾಯಕನಿಗೆ ಕಥೆಯ ನೀತಿ ಗೊತ್ತಾಗಲಿಲ್ಲ. ಅವಾಕ್ಕಾದ.<br /> <br /> ನಾವಾದರೂ ಅರ್ಥಮಾಡಿಕೊಳ್ಳಬಲ್ಲೆವೆ? ನಾವು ಯಾಕೆ ಒಂದರ ಕಡೆಯಿಂದ ಇನ್ನೊಂದರ ಕಡೆಗೆ ಸದಾ ಓಡುತ್ತಿದ್ದೇವೆ?ಎರಡು ಕಾರಣಗಳಿರುವಂತೆ ತೋರುತ್ತದೆ. ಮೊದಲನೆಯದು ಇಂದಿನ ಮನೋಧರ್ಮ. ತಂದೆ-ತಾಯಿಗಳಿಂದ, ಸುತ್ತಲ ಸಮಾಜದಿಂದ ಮಕ್ಕಳು ಅದನ್ನು ತಮ್ಮದಾಗಿಸಿಕೊಳ್ಳುತ್ತಾ ಹೋಗುತ್ತಾರೆ. <br /> <br /> ಅದು ಸ್ಪರ್ಧೆಯ ಮನೋಧರ್ಮ. `ನೋಡು ಅವನೆಷ್ಟು ಬುದ್ಧಿವಂತ, ಆದರೆ ನೀನು?~-ಎಂದು ಮೂದಲಿಸುತ್ತಾರೆ ತಂದೆ-ತಾಯಿಗಳು. ಶಾಲೆಗಳಲ್ಲಿ ಮಕ್ಕಳ ಯೋಗ್ಯತೆಯನ್ನು ಅವರು ಪಡೆಯುವ ಅಂಕಗಳಿಂದ ಅಳೆಯುತ್ತಾರೆ ಉಪಾಧ್ಯಾಯರು. ವಿದ್ಯೆಯಲ್ಲಿ, ಆಟಗಳಲ್ಲಿ, ಬಟ್ಟೆಬರೆ ತೊಡುವುದರಲ್ಲಿ ಎಲ್ಲದರಲ್ಲೂ ಪೈಪೋಟಿ. <br /> <br /> ಶಿಕ್ಷಣ ಪಡೆದು ನೌಕರಿ ಸಿಕ್ಕಿ ಮದುವೆಯಾದಮೇಲೆ `ಅವನೆಷ್ಟು ಸಂಪಾದಿಸುತ್ತಿದ್ದಾನೆ, ನೀನು ಮಾತ್ರ ಯಾಕೆ ಹೀಗೆ~ ಎಂದು ಕೊರಗುತ್ತಾರೆ ಮಡದಿಯರು. ಈಚೆಗೆ ಬಹುತೇಕ ಮಡದಿಯರೂ ಸಂಪಾದನೆಗಿಳಿದಿರುವುದರಿಂದ ಅವರೂ ಪೈಪೋಟಿಯ ಕಣದಲ್ಲಿ ಸೇರಿದ್ದಾರೆ. ದುಡಿಯುವುದಕ್ಕೋಸುಗ ಇನ್ನೂ ದುಡಿಯತೊಡಗುತ್ತಾರೆ; ಪಡೆದುದರಿಂದ ತೃಪ್ತಿಯಾಗದೆ ಇನ್ನೂ ಪಡೆಯತೊಡಗುತ್ತಾರೆ. ಕಡಿಮೆ ಕೌಟುಂಬಿಕ ಹೊಣೆಗಳಿರುವವರ ಕಥೆಯೇ ಹೀಗಾದಾಗ ಇನ್ನು ಗುರುತರವಾದ ಸಾಂಸಾರಿಕ ಜವಾಬ್ದಾರಿಗಳುಳ್ಳವರ ಕತೆ ಇನ್ನೂ ಕರುಣಾಜನಕ.<br /> <br /> ಈ ಅಶಾಂತಿಯ ನಡುವೆ ಅವರಿಗೆ ಕ್ಷಣಿಕ ಶಾಂತಿ ನೀಡುವ ಸಾಧನಗಳನ್ನು ಸಮಕಾಲೀನ ಜಗತ್ತು ಸೃಷ್ಟಿಸಿದೆ. ಸಿನಿಮಾ. ಟಿವಿ ಮುಂತಾದವು ಅವರ ವಿರಾಮರಹಿತ ಬದುಕಿನೊಳಗೆ ಆಗಾಗ ಅಲ್ಪವಿರಾಮ ನೀಡುತ್ತವೆ. ಸರಕು ಸಂಸ್ಕೃತಿಯ ಬೆಳವಣಿಗೆ ಚಿಟಿಕೆ ಹೊಡೆಯುವಷ್ಟರಲ್ಲಿ ಅವರ ಅಗತ್ಯಗಳನ್ನು ಪೂರೈಸುವ ಹೊಸಹೊಸ ಭರವಸೆಗಳನ್ನು ನೀಡುತ್ತಿದೆ.<br /> <br /> ಜಾಹಿರಾತುಗಳು ಈ ಥರದ ಕಾರು ಕೊಂಡವನಿಗೆ, ಈ ಥರದ ಕಾಚಾ ತೊಟ್ಟವನಿಗೆ ಇಂಥಾ ಸುರಸುಂದರಿ ಬೇಸ್ತುಬೀಳುತ್ತಾಳೆಂದು; ಈ ಥರದ ಒಡವೆ ತೊಟ್ಟವಳಿಗೆ ಸಾಕ್ಷಾತ್ ಶಾರೂಕ್ ಖಾನ್ನೇ ಪ್ರತ್ಯಕ್ಷನಾಗುತ್ತಾನೆಂದು ಆಸೆ ತೋರಿಸುತ್ತವೆ. ಇವನ್ನು ಕೊಳ್ಳಲು ನಿಮ್ಮ ಸಂಪಾದನೆ ಸಾಲದೆ? ಬನ್ನಿ. <br /> <br /> ಬೇಕಾದಷ್ಟು ಸಾಲ ಕೊಡುತ್ತೇವೆಂದು ಹುರಿದುಂಬಿಸುವ ಬ್ಯಾಂಕುಗಳಿವೆ. ಹಿಂದೆ ಸಾಲಗಾರರು ಸಾಲ ಕೊಡುವವರ ಬೇಟೆಯಲ್ಲಿದ್ದರು; ಇಂದು ಸಾಲಿಗರು ಸಾಲಗಾರರ ಬೇಟೆಯಲ್ಲಿದ್ದಾರೆ. ಮನಸೋ ಇಚ್ಛೆ ಸಾಲ ತೆಗೆದುಕೊಳ್ಳಿ, ಆದರೆ ಬಡ್ಡಿಯ ಹೊರೆಯ ಬಗ್ಗೆ ಈಗ ಯೋಚಿಸಬೇಡಿ - ಇದು ಸಾಲ ನೀಡಿಕೆ ಬ್ಯಾಂಕುಗಳ ಮಹಾವಾಕ್ಯ.<br /> <br /> ಹೀಗೆ ಚಡಪಡಿಕೆಯನ್ನೇ ಚಟ ಮಾಡಿಸುವ ಕ್ಷುದ್ರಶಕ್ತಿಗಳು ಎಲ್ಲೆಲ್ಲೂ ತಾಂಡವವಾಡುತ್ತಿವೆ. ಲಾಭವನ್ನೇ ಪರಮಾದರ್ಶವಾಗಿಸಿರುವ ಮಾರುಕಟ್ಟೆ ಸಂಸ್ಕೃತಿ ಇವೆಲ್ಲಕ್ಕೂ ಅದ್ಭುತ ಭಿತ್ತಿ ಮಾಡಿಕೊಟ್ಟಿದೆ.<br /> <br /> ಎರಡನೇ ಕಾರಣ ನಮ್ಮ ಪಾರಂಪರಿಕ ಧರ್ಮಗಳು ನಮ್ಮಲ್ಲಿ ಬಿತ್ತಿರುವ ಸುಳ್ಳುಗಳು. ಜಗತ್ತು ಮಾಯೆಯೆಂದು, ಅಪಾಯಗಳ ಆಗರವೆಂದು ಅವು ನಮ್ಮನ್ನು ಆಳದಲ್ಲಿ ನಂಬಿಸಿವೆ. ಹೀಗೆ ಜಗತ್ತಿನ ಬಗೆಗೆ ಸ್ವಾಭಾವಿಕವಾದ ಅಪನಂಬಿಕೆಯನ್ನು ಹುಟ್ಟಿಸಿವೆ. ಜಗತ್ತನ್ನು ನಂಬದವರು ಜನಗಳನ್ನೂ ನಂಬುವುದಿಲ್ಲ.<br /> </p>.<p>ಮಾಯಾತತ್ತ್ವವನ್ನು ಬೋಧಿಸಿ ನಶ್ವರತೆಯನ್ನು ಅನುಭವಿಸುವಂತೆ ಮಾಡುವ ಆಚಾರ-ವಿಚಾರಗಳನ್ನು ಇತರರಿಗೆ ಕಲಿಸಿ ಭಕ್ತರ ದೇಣಿಗೆಗಳಿಂದ ಅಪಾರ ಸಂಪತ್ತು ಗಳಿಸುತ್ತಾ ಎಲ್ಲಾ ಸುಖ-ವೈಭವಗಳ ಸಾಮ್ರೋಜ್ಯ ಕಟ್ಟಿಕೊಂಡಿರುವ ಗುರುಗಳು ಈ ಸಂದರ್ಭದಲ್ಲಿ ಅನಿವಾರ್ಯವಾಗಿದ್ದಾರೆ.<br /> <br /> ಇನ್ನೊಬ್ಬರ ಕತ್ತು ಕೊಯ್ಯದೆ ನಮಗೆ ಉಳಿಗಾಲವಿಲ್ಲವೆನ್ನುವ ಇಂದಿನ ಧೋರಣೆ, ಈ ಜಗತ್ತಿಗೇ ಉಳಿಗಾಲವಿಲ್ಲವೆನ್ನುವ ಧರ್ಮ ಎರಡೂ ಇಂದಿನ ಸುತ್ತುನೆಲೆಯಲ್ಲಿ ಹೊಯ್ಕಯ್ಯೊಗಿ ಎಲ್ಲರ ಬದುಕನ್ನೂ ನರಕಗೊಳಿಸುತ್ತಿವೆ. ಅರ್ಥಹೀನವಾಗಿ ಕಾಣುವ ಜಗತ್ತಲ್ಲಿ ಅರ್ಥಗಳನ್ನು ಹುಡುಕಿ, ಸಣ್ಣಸಣ್ಣ ಸೋಜಿಗಗಳನ್ನು ತೋರಿ ನೆಲದ ಬದುಕನ್ನು ಹದಗೊಳಿಸಬೇಕಾದ ಕಲೆ-ಸಂಸ್ಕೃತಿಗಳು ಲಾಭಕೋರತನದ ಹುಚ್ಚುಕುದುರೆಯನ್ನೇರಿಸಿ ಜನರನ್ನು ಕೊರಕಲಿನಲ್ಲಿ ಕೆಡವುತ್ತಿವೆ.<br /> <br /> ಅಶಾಂತಿಯ ತವರಾಗಿರುವ ನಮ್ಮ ಜಗತ್ತು ಭವಿಷ್ಯದ ಸ್ವರ್ಗಕ್ಕೆ ಮುನ್ನುಡಿಗಳೆಂದು ಸಾರಿದ ಸಿದ್ಧಾಂತಗಳು ಹಳಸು ಹಳಸಾಗಿವೆ. ಯಾಕೆಂದರೆ ಆ ಉಜ್ವಲ ಭವಿಷ್ಯದ ಮೇಲೆ ಕಣ್ಣು ನೆಟ್ಟು ಸಮುದಾಯಗಳು ಕೊರಕಲಿಗೆ ಎಷ್ಟೋ ಸಲ ಬಿದ್ದಿವೆ. ಸತ್ತಮೇಲೆ ಸುಖವುಂಟೆಂದು ಹೇಳಿದ ಧರ್ಮಗಳಂತೆ ಅವೂ ಬೇಕಾರಾಗಿವೆ. <br /> <br /> ಈ ಮಧ್ಯೆ ಒಂದು ಕರೆಯನ್ನು ಕೊಟ್ಟು ಎಲ್ಲವನ್ನು ಸ್ವಚ್ಛಗೊಳಿಸುವೆಂದು ಭರವಸೆ ಕೊಡುವ ಸ್ವಯಂಘೋಷಿತ ನಾಯಕರು ಪ್ರತ್ಯಕ್ಷವಾಗುತ್ತಾರೆ. ಕಂಗೆಟ್ಟ ಜನ ಅವರನ್ನೇ ಅವತಾರ ಪುರುಷನೆಂದು ನಂಬಿ ಹಿಂಬಾಲಿಸಲೂ ತೊಡಗುತ್ತಾರೆ. ಆದರೆ ಆ ನಾಯಕಮಣಿಗಳು ಮತ್ತವರ ಅನುಯಾಯಿಗಳು ನಾವಂದುಕೊಂಡದ್ದಕ್ಕಿಂತ ಮೊದಲೇ ಹಾಸ್ಯಾಸ್ಪದವಾಗಿ ದಬಾರೆಂದು ಕೆಳಗೆಬೀಳುತ್ತಾರೆ.<br /> <br /> ಈ ಜಗತ್ತು ಹೀಗೇ ಇರುವುದೆಂಬ ತತ್ವಕ್ಕೆ ಮತ್ತೆ ಶರಣಾಗಿ ಅದೇ ಚಕ್ರ ಅದೇ ರೀತಿ ತಿರುಗತೊಡಗುತ್ತದೆ.ನಮ್ಮ ಮುಂದಿನ ಸವಾಲು ಇವೊತ್ತು ಇದನ್ನು ಬದಲಾಯಿಸಬೇಕೆಂಬುದಲ್ಲ. ಇದರ ಒಂದು ಭಾಗವಾಗದೆ ಹೇಗೆ ಬದುಕಬೇಕೆಂಬುದು. ಈ ಓಟದಿಂದ ನಾವು ಹೊರಬರಬೇಕು. ತುಸು ಶಾಂತವಾಗಿ ಸುತ್ತಲೂ ನೋಡಬೇಕು. ಅದಕ್ಕಾಗಿ ಸುಮ್ಮನಾಗಬೇಕು. ನಮ್ಮ ದೇಹಮನಸ್ಸುಗಳಲ್ಲಿ ಒಂದು ತಂಗುದಾಣವನ್ನು ಹುಡುಕಿಕೊಳ್ಳಬೇಕು.<br /> <br /> ಪಾಂಡವಪುರದ ಶಿವಾನಂದಾವಧೂತರು ನನಗೊಂದು ಕತೆ ಹೇಳಿದ್ದರು:<br /> ಒಮ್ಮೆ ಸಂತ ಕನಕದಾಸರು ಸಂಚಾರದಲ್ಲಿದ್ದರಂತೆ. ಒಂದು ಹಳ್ಳಿಗೆ ಬಂದಾಗ ಸುಡುಸುಡು ಹಗಲು. ಒಂದು ಮನೆಯ ನೆರಳಿದ್ದ ಜಗುಲಿಯ ಮೇಲೆ ಸ್ವಲ್ಪ ಕೂತು ವಿಶ್ರಾಂತಿ ಪಡೆದು ಆಮೇಲೆ ಮುಂದೆ ಹೋಗೋಣವೆಂದುಕೊಂಡರು. ಅಂತಹ ಒಂದು ಆರಾಮಾದ ಜಗುಲಿ ಸಿಕ್ಕಿತು.<br /> <br /> ಆ ಜಗುಲಿ ಮೇಲೆ ಚಾಪೆ ಹಾಕಿಕೊಂಡು ಒಂದು ಅಜ್ಜಿ ರಾಗಿ ಬೀಸುತ್ತಿತ್ತು. ಕನಕದಾಸರಿಗೆ ನೀರು-ಬೆಲ್ಲಗಳನ್ನು ದಣಿವಾರಿಸಲು ತಂದುಕೊಟ್ಟು ಅಜ್ಜಿ ತನ್ನ ಕಾಯಕ ಮುಂದುವರಿಸಿತು. ಆ ರಾಗಿಬೀಸುವಿಕೆಯನ್ನು ಕನಕದಾಸರು ತದೇಕಚಿತ್ತರಾಗಿ ನೋಡತೊಡಗಿದರು. ಅವರಿಗೆ ಅಳು ಬಂದು ಬಿಕ್ಕಿಬಿಕ್ಕಿ ಅಳತೊಡಗಿದರು. ಅಜ್ಜಿಗೆ ಅಯ್ಯೋ ಅನಿಸಿ ಏನಾಯಿತೆಂದು ಕೇಳಿತು. <br /> <br /> ಕನಕದಾಸರು ಹೇಳಿದರು: `ಈ ರಾಗಿಕಲ್ಲು ಇಡೀ ಸಂಸಾರದ ಹಾಗೆ ಕಾಣುತ್ತಿದೆ. ರಾಗಿಕಾಳುಗಳು ಅದರ ನಡುವೆ ಸಿಕ್ಕಿ ನುಚ್ಚುನೂರಾಗುತ್ತಿವೆ. ಇದೇ ರೀತಿ ಈ ಲೋಕದ ಜೀವಿಗಳು ಪಾಪ ಸಂಸಾರಚಕ್ರಕ್ಕೆ ಸಿಕ್ಕಿ ನುಚ್ಚುನೂರಾಗುತ್ತಿದ್ದಾರಲ್ಲ. ಅದನ್ನು ನೆನೆದು ದುಃಖ ತಡೆಯಲಾಗಲಿಲ್ಲ~ ಅಂದರು.<br /> <br /> <strong> ಅಜ್ಜಿ ಹೇಳಿತು</strong>: `ನೀವು ಹೇಳಿದ್ದೇನೋ ನಿಜ. ಎಷ್ಟೋ ಜೀವಗಳು ಹೀಗೆ ನಾಶವಾಗುತ್ತಾ ಇವೆ. ಆದರೆ ಇಲ್ಲಿ ನೋಡಿ. ಈ ರಾಗಿ ಗೂಟದ ಬಳಿ ಇರುವ ಕಾಳುಗಳು ಸುರಕ್ಷಿತವಾಗಿಯೇ ಇವೆ.~ <br /> <br /> ಸುತ್ತುತ್ತಿರುವ ರಾಗಿ ಕಲ್ಲಿನ ನಡುವೆ ಸ್ಥಿರವಾಗಿರುವ ಗೂಟದ ಕೆಳಗಿನ ಕಾಳುಗಳಂತೆ ನಾವಿಂದು ಅಶಾಂತ ಜಗತ್ತಿನಲ್ಲಿ ಶಾಂತಿಯುತವಾಗಿ ಬಾಳಲು ಸಾಧ್ಯವೆ?<br /> <strong>(ನಿಮ್ಮ ಅನಿಸಿಕೆ ತಿಳಿಸಿ: </strong><a href="mailto:.editpagefeedback@prajavani.co.in"><strong>.editpagefeedback@prajavani.co.in</strong></a><strong>)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾವುದೇ ಮಹಾನಗರದ ಯಾವುದಾದರೂ ಗಡಿಬಿಡಿಯಾದ ರಸ್ತೆಯಲ್ಲಿ ನಿಂತು ನೋಡಿ. ಅಲ್ಲಿ ನಡೆಯುವ ಯಾವುದೂ ನಮಗೆ ಸಂಬಂಧಪಟ್ಟದ್ದಲ್ಲ ಎಂದು ಕಲ್ಪಿಸಿಕೊಳ್ಳಿ. ರಸ್ತೆ ಬದಿಯಲ್ಲಿ ಕಾಲುನಡಿಗೆಯಲ್ಲಿ ದೌಡಿಕ್ಕುತ್ತಿರುವ ಮಂದಿ ಕಾಣುತ್ತಾರೆ.<br /> <br /> ರಸ್ತೆಯಲ್ಲಿ ವಿವಿಧ ಗಾಡಿಗಳನ್ನೇರಿ ಅತ್ತಿತ್ತ ವೇಗವಾಗಿ ಚಲಿಸುತ್ತಿರುವವರನ್ನು ನೋಡಿ. ಎಲ್ಲರೂ ಎಲ್ಲಿಗೋ ಓಡುತ್ತಿದ್ದಾರೆ ಅನ್ನುವುದಕ್ಕಿಂತಲೂ ಯಾವುದರಿಂದಲೋ ಓಡಿಹೋಗುತ್ತಿರುವಂತೆ ಕಾಣುತ್ತದೆ.<br /> <br /> ಒಂದು ಅಮೆರಿಕನ್ ನಾಟಕದಲ್ಲಿ ಕಥಾನಾಯಕ ಬ್ಯಾಂಕಿನಿಂದ ಸಾಲ ಪಡೆದು ಮನೆ ಕೊಳ್ಳುತ್ತಾನೆ. ಆದರೆ ಸಾಲ ತೀರಿಸುವ ಮೊದಲು ಅವನೇ ಗೋತಾ ಹೊಡೆದುಬಿಡುತ್ತಾನೆ.<br /> <br /> ಹಟ ಮಾಡಿ ಪ್ರೀತಿಸಿ ಮನೆಯವರಿಗೆ ಸೆಡ್ಡುಹೊಡೆದು ಪ್ರೇಮವಿವಾಹ ಮಾಡಿಕೊಂಡ ಹುಡುಗ ಹುಡುಗಿ ಆರು ತಿಂಗಳು ಕಳೆಯುವುದರಲ್ಲಿ ಕೋರ್ಟಿನ ಮೆಟ್ಟಿಲೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ.<br /> <br /> ಹಗಲಿರುಳೂ ಕಾಸು ಕೂಡಿಡಬೇಕೆಂದು ಪಣತೊಟ್ಟ ವ್ಯಕ್ತಿ ಕಾಸು ಕೂಡುತ್ತಾ ಹೋದ ಹಾಗೆ ಹೆಚ್ಚುಹೆಚ್ಚು ರೋಗಿಯೂ ಅಶಾಂತನೂ ಆಗುತ್ತಾ ಹೋಗುತ್ತಾನೆ.<br /> ಅಶಾಂತಿಯಿಂದ ಮುಕ್ತಿ ಪಡೆಯಲೆಂದು ಪ್ರಶಾಂತ ಜಾಗಕ್ಕೆ ಹೋದವರ ಮನಸಿನಲ್ಲಿ ಆ ಪ್ರಶಾಂತ ಜಾಗದಲ್ಲೂ ಒಂದು ಜ್ವಾಲಾಮುಖಿ ಏಳುತ್ತದೆ.<br /> <br /> ಬಯಸಿ ಬಂದದ್ದು ತನಗೇ ಕುತ್ತಾಗುವ ಅನೇಕ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಆದರೆ ಯಾಕೆ ಹೀಗಾಗುತ್ತದೆ? ಎಲ್ಲರೂ ಮುಂದೊಮ್ಮೆ ಶಾಂತಿ ಸಿಗಬಹುದೆಂಬ ಭರವಸೆಯಿಂದ ದಿನಾ ಗಾಣ ಸುತ್ತುತ್ತಿರುತ್ತಾರೆ. ಇದು ಮಗುವೊಂದು ಚಂದ್ರನನ್ನು ಹಿಡಿಯಲು ಹೋದ ಹಾಗೆ. ನಾವು ಹಿಂಬಾಲಿಸಿದಷ್ಟೂ ಅದು ದೂರ ಹೋಗುತ್ತಿರುತ್ತದೆ.<br /> <br /> ಮುಂದಿನ ಬೆನ್ನಿಗೆ ಬಿದ್ದು ಇಂದು ಅಸಹನೀಯವಾದಾಗ ಮನಸ್ಸು ಹಿಂದನ್ನು ಬಯಸತೊಡಗುತ್ತದೆ. ಆದರೆ ಕಾಲದ ಎಂಜಿನ್ನು ನಮ್ಮನ್ನು ಮುಂದೆ ಮುಂದೆ ತಳ್ಳುತ್ತಿರುತ್ತದೆ.<br /> <br /> ಹಿಂದುಮುಂದುಗಳ ದಂದುಗದಿಂದ ಪಾರಾಗಿ ಇಂದು ಸಿಕ್ಕಿದ್ದರಲ್ಲಿ ತೃಪ್ತಿ ಪಡೆದು ಕೊಳ್ಳಲಾದೀತೆ? ಆದರೆ ಇಂದಿನಲ್ಲಿ ಬದುಕುವವರು ಬೆರಳೆಣಿಕೆಗೂ ಕಡಿಮೆ.<br /> ಜಗತ್ತಿನಲ್ಲೇ ಅತ್ಯಂತ ಸುಖಿಯಾಗಿರುವ ಮನುಷ್ಯನ ಕತೆ ನೆನಪಾಗುತ್ತದೆ:ಒಬ್ಬನಿದ್ದ. <br /> ಬಡವನಾಗಿದ್ದ. ಹಣ ಸಂಪಾದಿಸಿದ. ಒಂಟಿಯಾಗಿದ್ದ. ಪ್ರೇಮಿಸಿ ಮದುವೆಯಾದ. <br /> <br /> ಬಾಡಿಗೆ ಮನೆಯಿಂದ ಸ್ವಂತಮನೆಗೆ ಬಂದ. ಅದು ಸಾಲದೆಂದು ಇನ್ನೆಷ್ಟೋ ಮನೆ ಕಟ್ಟಿಸಿ ಬಾಡಿಗೆ ಕೊಟ್ಟ. ಮಕ್ಕಳನ್ನು ಓದಿಸಿ ಮದುವೆ ಮಾಡಿಸಿದ. ಅವರೂ ಕೈತುಂಬ ದುಡಿಯತೊಡಗಿದರು. ಪತಿವ್ರತೆಯಾದ ಹೆಂಡತಿ ಸದಾ ಅವನ ಸೇವೆಗೆ ಸಿದ್ಧಳಾಗಿದ್ದರೂ ಹೊರಗಡೆಯೂ ಹೋಗಿ ಮಜಾ ಮಾಡುತ್ತಿದ್ದ. <br /> <br /> ಆರೋಗ್ಯ ತುಸು ಕೆಟ್ಟರೂ ಅದನ್ನು ಕೂಡಲೇ ರಿಪೇರಿ ಮಾಡುವ ಡಾಕ್ಟರುಗಳ ಸೇನಾಪಡೆಯನ್ನೇ ಕೊಂಡುಕೊಂಡಿದ್ದ. ಆದರೆ ಸ್ವಾಸ್ಥ್ಯವಾಗಲಿ, ಸಂಭೋಗವಾಗಲಿ, ಧನ-ಸಂಪತ್ತಾಗಲಿ ಅವನಿಗೆ ತೃಪ್ತಿ ಕೊಡಲಿಲ್ಲವಾಗಿ ಬಾಬಗಳ ಬಾಲ ಹಿಡಿದ. ಅಲ್ಲೂ ಕಾಸು ಕಕ್ಕಿದ. ಅವರು ಹೇಳಿದ್ದನ್ನು ಮಾಡಿದ. <br /> <br /> ಅದೇ ಸಮಯದಲ್ಲಿ ಜ್ಯೋತಿಷದ ಗೀಳು ಹತ್ತಿಸಿಕೊಂಡ. ನಾಡಿಗ್ರಂಥಗಳನ್ನೋದಿಸಲು ವೈದೀಶ್ವರನ್ಗೂ ಹೋಗಿ ಬಂದ. ಅವರು ಹೇಳಿದ ಎಲ್ಲ ಪರಿಹಾರವನ್ನೂ ಮಾಡಿದ. ಆದರೂ ಶಾಂತಿ ಸಿಗಲಿಲ್ಲ. ಆಗ ಅವನನ್ನು ಅಪೂರ್ವ ತೇಜಸ್ವಿಯಾದ ಜ್ಞಾನಿ ಭೆಟ್ಟಿ ಮಾಡಿದ. `ಯಾಕಿಷ್ಟು ಸೋತಿದ್ದೀಯ~ ಎಂದು ಕೇಳಿದ. ತಾನು ಏನೇನು ಮಾಡಿದೆ ಎಂದವನಿಗೆ ವಿವರಿಸಿ ತಾನು ಇನ್ನೂ ಅಸುಖಿಯಾಗಿರುವುದರಿಂದ `ಸುಖದ ಹಾದಿಯನ್ನು ತೋರು~ ಎಂದು ಬೇಡಿಕೊಂಡ.<br /> <br /> <strong> ಮನ ಕರಗಿದ ಜ್ಞಾನಿ ಹೇಳಿದ: </strong>`ನಾನು ಆ ಸುಖದ ಹುಡುಕಾಟ ಬಿಟ್ಟಿದ್ದೇನೆ. ಯಾಕೆಂದರೆ ಜಗತ್ತಿನ ಅತ್ಯಂತ ಸುಖಿಯಾದ ಮನುಷ್ಯನನ್ನು ಕಂಡು ಬಂದಿದ್ದೇನೆ~ ಎಂದು ಹೇಳಿದ. ಆಗ ನಮ್ಮ ಕಥಾನಾಯಕ ಆ ವ್ಯಕ್ತಿಯನ್ನು ತನಗೂ ತೋರಿಸೆಂದು ಕೇಳಿದ. `ಅವನನ್ನು ಯಾರು ಬೇಕಾದರೂ ಭೆಟ್ಟಿ ಮಾಡಬಹುದು. ಇಗೋ ಈ ವಿಳಾಸದಲ್ಲಿದ್ದಾನೆ. ಹೋಗಿ ನೋಡು~ ಎಂದ.<br /> <br /> ಆ ವಿಳಾಸವನ್ನು ಈಸಿಕೊಂಡು ಈತ ಕೂಡಲೇ ಆ ಊರಿನ ಆ ಬೀದಿಯ ಆ ಮನೆಯನ್ನು ಸೇರಿದಾಗ ತಾನು ಕಾಣಬಂದ ವ್ಯಕ್ತಿ ಎರಡು ದಿನ ಹಿಂದೆ ಇನ್ನೊದು ಊರಿಗೆ ಹೋದ ಎಂದು ತಿಳಿದುಬಂತು. ಆ ವಿಳಾಸಕ್ಕೆ ಹೋದರೆ ಅವನು ಇನ್ನೊಂದು ಕಡೆ ಹೋಗಿದ್ದಾನೆಂದು ತಿಳಿದುಬಂತು. ಆ ವಿಳಾಸಕ್ಕೆ ಹೋದರೂ ಅವನು ಇನ್ನೆಲ್ಲಿಗೋ ಹೋಗಿಬಿಟ್ಟಿರುತ್ತಿದ್ದ. <br /> <br /> ಹೀಗೆ ಎಷ್ಟೋ ವಿಳಾಸಗಳಲ್ಲಿ ಅವನನ್ನು ಕಾಣದೆ ನಿರಾಶನಾಗುತ್ತಿರುವಾಗ ಇದೇ ಕಡೆಯ ಪ್ರಯತ್ನ ಎಂದುಕೊಂಡು ಒಂದೂರಿಗೆ ಹೋಗಿ ಮಹಾಪುರುಷನ ಬಗೆಗೆ ವಿಚಾರಿಸಿದಾಗ `ಅಗೋ ಆ ಜೋಪಡಿಯಲ್ಲಿ ಅವನಿದ್ದಾನೆ~ ಎಂದು ತಿಳಿಸಲು ,ಕೊನೆಗಾದರೂ ಸಿಕ್ಕಿದನಲ್ಲ ಅನ್ನೋ ಸಮಾಧಾನದಿಂದ ಅಲ್ಲಿಗೆ ಹೋಗಿ ನೋಡಿದಾಗ ಆಶ್ಚರ್ಯವಾಯಿತು. ಅಲ್ಲಿ ಕೂತಿದ್ದ ಹರುಕಂಗಿಯ ವ್ಯಕ್ತಿ ಇವನನ್ನು ನೋಡಿ ಗಹಗಹಿಸಿ ನಗತೊಡಗಿದ. <br /> <br /> <strong>ಸಿಟ್ಟು</strong> <strong>ಬಂದರೂ ಈತ ಕೇಳಿದ:</strong> `ನಾನಿಲ್ಲಿ ಬಂದದ್ದು ನಿನ್ನ ಹುಚ್ಚು ನಗೆಕೇಳಿಸಿಕೊಳ್ಳುವುದಕ್ಕಲ್ಲ, ಅತ್ಯಂತ ಸುಖಿಯಾದ ಮಹಾಪುರುಷನನ್ನು ನೋಡಲು~ ಎಂದ. ಆಗ ಆ ವ್ಯಕ್ತಿ ಹೇಳಿದ: `ನಾನೇ ಆ ಮಹಾಸುಖಿಯಾದ ಮಹಾಪುರುಷ.~ ನಮ್ಮ ಕಥಾ ನಾಯಕನಿಗೆ ಕಥೆಯ ನೀತಿ ಗೊತ್ತಾಗಲಿಲ್ಲ. ಅವಾಕ್ಕಾದ.<br /> <br /> ನಾವಾದರೂ ಅರ್ಥಮಾಡಿಕೊಳ್ಳಬಲ್ಲೆವೆ? ನಾವು ಯಾಕೆ ಒಂದರ ಕಡೆಯಿಂದ ಇನ್ನೊಂದರ ಕಡೆಗೆ ಸದಾ ಓಡುತ್ತಿದ್ದೇವೆ?ಎರಡು ಕಾರಣಗಳಿರುವಂತೆ ತೋರುತ್ತದೆ. ಮೊದಲನೆಯದು ಇಂದಿನ ಮನೋಧರ್ಮ. ತಂದೆ-ತಾಯಿಗಳಿಂದ, ಸುತ್ತಲ ಸಮಾಜದಿಂದ ಮಕ್ಕಳು ಅದನ್ನು ತಮ್ಮದಾಗಿಸಿಕೊಳ್ಳುತ್ತಾ ಹೋಗುತ್ತಾರೆ. <br /> <br /> ಅದು ಸ್ಪರ್ಧೆಯ ಮನೋಧರ್ಮ. `ನೋಡು ಅವನೆಷ್ಟು ಬುದ್ಧಿವಂತ, ಆದರೆ ನೀನು?~-ಎಂದು ಮೂದಲಿಸುತ್ತಾರೆ ತಂದೆ-ತಾಯಿಗಳು. ಶಾಲೆಗಳಲ್ಲಿ ಮಕ್ಕಳ ಯೋಗ್ಯತೆಯನ್ನು ಅವರು ಪಡೆಯುವ ಅಂಕಗಳಿಂದ ಅಳೆಯುತ್ತಾರೆ ಉಪಾಧ್ಯಾಯರು. ವಿದ್ಯೆಯಲ್ಲಿ, ಆಟಗಳಲ್ಲಿ, ಬಟ್ಟೆಬರೆ ತೊಡುವುದರಲ್ಲಿ ಎಲ್ಲದರಲ್ಲೂ ಪೈಪೋಟಿ. <br /> <br /> ಶಿಕ್ಷಣ ಪಡೆದು ನೌಕರಿ ಸಿಕ್ಕಿ ಮದುವೆಯಾದಮೇಲೆ `ಅವನೆಷ್ಟು ಸಂಪಾದಿಸುತ್ತಿದ್ದಾನೆ, ನೀನು ಮಾತ್ರ ಯಾಕೆ ಹೀಗೆ~ ಎಂದು ಕೊರಗುತ್ತಾರೆ ಮಡದಿಯರು. ಈಚೆಗೆ ಬಹುತೇಕ ಮಡದಿಯರೂ ಸಂಪಾದನೆಗಿಳಿದಿರುವುದರಿಂದ ಅವರೂ ಪೈಪೋಟಿಯ ಕಣದಲ್ಲಿ ಸೇರಿದ್ದಾರೆ. ದುಡಿಯುವುದಕ್ಕೋಸುಗ ಇನ್ನೂ ದುಡಿಯತೊಡಗುತ್ತಾರೆ; ಪಡೆದುದರಿಂದ ತೃಪ್ತಿಯಾಗದೆ ಇನ್ನೂ ಪಡೆಯತೊಡಗುತ್ತಾರೆ. ಕಡಿಮೆ ಕೌಟುಂಬಿಕ ಹೊಣೆಗಳಿರುವವರ ಕಥೆಯೇ ಹೀಗಾದಾಗ ಇನ್ನು ಗುರುತರವಾದ ಸಾಂಸಾರಿಕ ಜವಾಬ್ದಾರಿಗಳುಳ್ಳವರ ಕತೆ ಇನ್ನೂ ಕರುಣಾಜನಕ.<br /> <br /> ಈ ಅಶಾಂತಿಯ ನಡುವೆ ಅವರಿಗೆ ಕ್ಷಣಿಕ ಶಾಂತಿ ನೀಡುವ ಸಾಧನಗಳನ್ನು ಸಮಕಾಲೀನ ಜಗತ್ತು ಸೃಷ್ಟಿಸಿದೆ. ಸಿನಿಮಾ. ಟಿವಿ ಮುಂತಾದವು ಅವರ ವಿರಾಮರಹಿತ ಬದುಕಿನೊಳಗೆ ಆಗಾಗ ಅಲ್ಪವಿರಾಮ ನೀಡುತ್ತವೆ. ಸರಕು ಸಂಸ್ಕೃತಿಯ ಬೆಳವಣಿಗೆ ಚಿಟಿಕೆ ಹೊಡೆಯುವಷ್ಟರಲ್ಲಿ ಅವರ ಅಗತ್ಯಗಳನ್ನು ಪೂರೈಸುವ ಹೊಸಹೊಸ ಭರವಸೆಗಳನ್ನು ನೀಡುತ್ತಿದೆ.<br /> <br /> ಜಾಹಿರಾತುಗಳು ಈ ಥರದ ಕಾರು ಕೊಂಡವನಿಗೆ, ಈ ಥರದ ಕಾಚಾ ತೊಟ್ಟವನಿಗೆ ಇಂಥಾ ಸುರಸುಂದರಿ ಬೇಸ್ತುಬೀಳುತ್ತಾಳೆಂದು; ಈ ಥರದ ಒಡವೆ ತೊಟ್ಟವಳಿಗೆ ಸಾಕ್ಷಾತ್ ಶಾರೂಕ್ ಖಾನ್ನೇ ಪ್ರತ್ಯಕ್ಷನಾಗುತ್ತಾನೆಂದು ಆಸೆ ತೋರಿಸುತ್ತವೆ. ಇವನ್ನು ಕೊಳ್ಳಲು ನಿಮ್ಮ ಸಂಪಾದನೆ ಸಾಲದೆ? ಬನ್ನಿ. <br /> <br /> ಬೇಕಾದಷ್ಟು ಸಾಲ ಕೊಡುತ್ತೇವೆಂದು ಹುರಿದುಂಬಿಸುವ ಬ್ಯಾಂಕುಗಳಿವೆ. ಹಿಂದೆ ಸಾಲಗಾರರು ಸಾಲ ಕೊಡುವವರ ಬೇಟೆಯಲ್ಲಿದ್ದರು; ಇಂದು ಸಾಲಿಗರು ಸಾಲಗಾರರ ಬೇಟೆಯಲ್ಲಿದ್ದಾರೆ. ಮನಸೋ ಇಚ್ಛೆ ಸಾಲ ತೆಗೆದುಕೊಳ್ಳಿ, ಆದರೆ ಬಡ್ಡಿಯ ಹೊರೆಯ ಬಗ್ಗೆ ಈಗ ಯೋಚಿಸಬೇಡಿ - ಇದು ಸಾಲ ನೀಡಿಕೆ ಬ್ಯಾಂಕುಗಳ ಮಹಾವಾಕ್ಯ.<br /> <br /> ಹೀಗೆ ಚಡಪಡಿಕೆಯನ್ನೇ ಚಟ ಮಾಡಿಸುವ ಕ್ಷುದ್ರಶಕ್ತಿಗಳು ಎಲ್ಲೆಲ್ಲೂ ತಾಂಡವವಾಡುತ್ತಿವೆ. ಲಾಭವನ್ನೇ ಪರಮಾದರ್ಶವಾಗಿಸಿರುವ ಮಾರುಕಟ್ಟೆ ಸಂಸ್ಕೃತಿ ಇವೆಲ್ಲಕ್ಕೂ ಅದ್ಭುತ ಭಿತ್ತಿ ಮಾಡಿಕೊಟ್ಟಿದೆ.<br /> <br /> ಎರಡನೇ ಕಾರಣ ನಮ್ಮ ಪಾರಂಪರಿಕ ಧರ್ಮಗಳು ನಮ್ಮಲ್ಲಿ ಬಿತ್ತಿರುವ ಸುಳ್ಳುಗಳು. ಜಗತ್ತು ಮಾಯೆಯೆಂದು, ಅಪಾಯಗಳ ಆಗರವೆಂದು ಅವು ನಮ್ಮನ್ನು ಆಳದಲ್ಲಿ ನಂಬಿಸಿವೆ. ಹೀಗೆ ಜಗತ್ತಿನ ಬಗೆಗೆ ಸ್ವಾಭಾವಿಕವಾದ ಅಪನಂಬಿಕೆಯನ್ನು ಹುಟ್ಟಿಸಿವೆ. ಜಗತ್ತನ್ನು ನಂಬದವರು ಜನಗಳನ್ನೂ ನಂಬುವುದಿಲ್ಲ.<br /> </p>.<p>ಮಾಯಾತತ್ತ್ವವನ್ನು ಬೋಧಿಸಿ ನಶ್ವರತೆಯನ್ನು ಅನುಭವಿಸುವಂತೆ ಮಾಡುವ ಆಚಾರ-ವಿಚಾರಗಳನ್ನು ಇತರರಿಗೆ ಕಲಿಸಿ ಭಕ್ತರ ದೇಣಿಗೆಗಳಿಂದ ಅಪಾರ ಸಂಪತ್ತು ಗಳಿಸುತ್ತಾ ಎಲ್ಲಾ ಸುಖ-ವೈಭವಗಳ ಸಾಮ್ರೋಜ್ಯ ಕಟ್ಟಿಕೊಂಡಿರುವ ಗುರುಗಳು ಈ ಸಂದರ್ಭದಲ್ಲಿ ಅನಿವಾರ್ಯವಾಗಿದ್ದಾರೆ.<br /> <br /> ಇನ್ನೊಬ್ಬರ ಕತ್ತು ಕೊಯ್ಯದೆ ನಮಗೆ ಉಳಿಗಾಲವಿಲ್ಲವೆನ್ನುವ ಇಂದಿನ ಧೋರಣೆ, ಈ ಜಗತ್ತಿಗೇ ಉಳಿಗಾಲವಿಲ್ಲವೆನ್ನುವ ಧರ್ಮ ಎರಡೂ ಇಂದಿನ ಸುತ್ತುನೆಲೆಯಲ್ಲಿ ಹೊಯ್ಕಯ್ಯೊಗಿ ಎಲ್ಲರ ಬದುಕನ್ನೂ ನರಕಗೊಳಿಸುತ್ತಿವೆ. ಅರ್ಥಹೀನವಾಗಿ ಕಾಣುವ ಜಗತ್ತಲ್ಲಿ ಅರ್ಥಗಳನ್ನು ಹುಡುಕಿ, ಸಣ್ಣಸಣ್ಣ ಸೋಜಿಗಗಳನ್ನು ತೋರಿ ನೆಲದ ಬದುಕನ್ನು ಹದಗೊಳಿಸಬೇಕಾದ ಕಲೆ-ಸಂಸ್ಕೃತಿಗಳು ಲಾಭಕೋರತನದ ಹುಚ್ಚುಕುದುರೆಯನ್ನೇರಿಸಿ ಜನರನ್ನು ಕೊರಕಲಿನಲ್ಲಿ ಕೆಡವುತ್ತಿವೆ.<br /> <br /> ಅಶಾಂತಿಯ ತವರಾಗಿರುವ ನಮ್ಮ ಜಗತ್ತು ಭವಿಷ್ಯದ ಸ್ವರ್ಗಕ್ಕೆ ಮುನ್ನುಡಿಗಳೆಂದು ಸಾರಿದ ಸಿದ್ಧಾಂತಗಳು ಹಳಸು ಹಳಸಾಗಿವೆ. ಯಾಕೆಂದರೆ ಆ ಉಜ್ವಲ ಭವಿಷ್ಯದ ಮೇಲೆ ಕಣ್ಣು ನೆಟ್ಟು ಸಮುದಾಯಗಳು ಕೊರಕಲಿಗೆ ಎಷ್ಟೋ ಸಲ ಬಿದ್ದಿವೆ. ಸತ್ತಮೇಲೆ ಸುಖವುಂಟೆಂದು ಹೇಳಿದ ಧರ್ಮಗಳಂತೆ ಅವೂ ಬೇಕಾರಾಗಿವೆ. <br /> <br /> ಈ ಮಧ್ಯೆ ಒಂದು ಕರೆಯನ್ನು ಕೊಟ್ಟು ಎಲ್ಲವನ್ನು ಸ್ವಚ್ಛಗೊಳಿಸುವೆಂದು ಭರವಸೆ ಕೊಡುವ ಸ್ವಯಂಘೋಷಿತ ನಾಯಕರು ಪ್ರತ್ಯಕ್ಷವಾಗುತ್ತಾರೆ. ಕಂಗೆಟ್ಟ ಜನ ಅವರನ್ನೇ ಅವತಾರ ಪುರುಷನೆಂದು ನಂಬಿ ಹಿಂಬಾಲಿಸಲೂ ತೊಡಗುತ್ತಾರೆ. ಆದರೆ ಆ ನಾಯಕಮಣಿಗಳು ಮತ್ತವರ ಅನುಯಾಯಿಗಳು ನಾವಂದುಕೊಂಡದ್ದಕ್ಕಿಂತ ಮೊದಲೇ ಹಾಸ್ಯಾಸ್ಪದವಾಗಿ ದಬಾರೆಂದು ಕೆಳಗೆಬೀಳುತ್ತಾರೆ.<br /> <br /> ಈ ಜಗತ್ತು ಹೀಗೇ ಇರುವುದೆಂಬ ತತ್ವಕ್ಕೆ ಮತ್ತೆ ಶರಣಾಗಿ ಅದೇ ಚಕ್ರ ಅದೇ ರೀತಿ ತಿರುಗತೊಡಗುತ್ತದೆ.ನಮ್ಮ ಮುಂದಿನ ಸವಾಲು ಇವೊತ್ತು ಇದನ್ನು ಬದಲಾಯಿಸಬೇಕೆಂಬುದಲ್ಲ. ಇದರ ಒಂದು ಭಾಗವಾಗದೆ ಹೇಗೆ ಬದುಕಬೇಕೆಂಬುದು. ಈ ಓಟದಿಂದ ನಾವು ಹೊರಬರಬೇಕು. ತುಸು ಶಾಂತವಾಗಿ ಸುತ್ತಲೂ ನೋಡಬೇಕು. ಅದಕ್ಕಾಗಿ ಸುಮ್ಮನಾಗಬೇಕು. ನಮ್ಮ ದೇಹಮನಸ್ಸುಗಳಲ್ಲಿ ಒಂದು ತಂಗುದಾಣವನ್ನು ಹುಡುಕಿಕೊಳ್ಳಬೇಕು.<br /> <br /> ಪಾಂಡವಪುರದ ಶಿವಾನಂದಾವಧೂತರು ನನಗೊಂದು ಕತೆ ಹೇಳಿದ್ದರು:<br /> ಒಮ್ಮೆ ಸಂತ ಕನಕದಾಸರು ಸಂಚಾರದಲ್ಲಿದ್ದರಂತೆ. ಒಂದು ಹಳ್ಳಿಗೆ ಬಂದಾಗ ಸುಡುಸುಡು ಹಗಲು. ಒಂದು ಮನೆಯ ನೆರಳಿದ್ದ ಜಗುಲಿಯ ಮೇಲೆ ಸ್ವಲ್ಪ ಕೂತು ವಿಶ್ರಾಂತಿ ಪಡೆದು ಆಮೇಲೆ ಮುಂದೆ ಹೋಗೋಣವೆಂದುಕೊಂಡರು. ಅಂತಹ ಒಂದು ಆರಾಮಾದ ಜಗುಲಿ ಸಿಕ್ಕಿತು.<br /> <br /> ಆ ಜಗುಲಿ ಮೇಲೆ ಚಾಪೆ ಹಾಕಿಕೊಂಡು ಒಂದು ಅಜ್ಜಿ ರಾಗಿ ಬೀಸುತ್ತಿತ್ತು. ಕನಕದಾಸರಿಗೆ ನೀರು-ಬೆಲ್ಲಗಳನ್ನು ದಣಿವಾರಿಸಲು ತಂದುಕೊಟ್ಟು ಅಜ್ಜಿ ತನ್ನ ಕಾಯಕ ಮುಂದುವರಿಸಿತು. ಆ ರಾಗಿಬೀಸುವಿಕೆಯನ್ನು ಕನಕದಾಸರು ತದೇಕಚಿತ್ತರಾಗಿ ನೋಡತೊಡಗಿದರು. ಅವರಿಗೆ ಅಳು ಬಂದು ಬಿಕ್ಕಿಬಿಕ್ಕಿ ಅಳತೊಡಗಿದರು. ಅಜ್ಜಿಗೆ ಅಯ್ಯೋ ಅನಿಸಿ ಏನಾಯಿತೆಂದು ಕೇಳಿತು. <br /> <br /> ಕನಕದಾಸರು ಹೇಳಿದರು: `ಈ ರಾಗಿಕಲ್ಲು ಇಡೀ ಸಂಸಾರದ ಹಾಗೆ ಕಾಣುತ್ತಿದೆ. ರಾಗಿಕಾಳುಗಳು ಅದರ ನಡುವೆ ಸಿಕ್ಕಿ ನುಚ್ಚುನೂರಾಗುತ್ತಿವೆ. ಇದೇ ರೀತಿ ಈ ಲೋಕದ ಜೀವಿಗಳು ಪಾಪ ಸಂಸಾರಚಕ್ರಕ್ಕೆ ಸಿಕ್ಕಿ ನುಚ್ಚುನೂರಾಗುತ್ತಿದ್ದಾರಲ್ಲ. ಅದನ್ನು ನೆನೆದು ದುಃಖ ತಡೆಯಲಾಗಲಿಲ್ಲ~ ಅಂದರು.<br /> <br /> <strong> ಅಜ್ಜಿ ಹೇಳಿತು</strong>: `ನೀವು ಹೇಳಿದ್ದೇನೋ ನಿಜ. ಎಷ್ಟೋ ಜೀವಗಳು ಹೀಗೆ ನಾಶವಾಗುತ್ತಾ ಇವೆ. ಆದರೆ ಇಲ್ಲಿ ನೋಡಿ. ಈ ರಾಗಿ ಗೂಟದ ಬಳಿ ಇರುವ ಕಾಳುಗಳು ಸುರಕ್ಷಿತವಾಗಿಯೇ ಇವೆ.~ <br /> <br /> ಸುತ್ತುತ್ತಿರುವ ರಾಗಿ ಕಲ್ಲಿನ ನಡುವೆ ಸ್ಥಿರವಾಗಿರುವ ಗೂಟದ ಕೆಳಗಿನ ಕಾಳುಗಳಂತೆ ನಾವಿಂದು ಅಶಾಂತ ಜಗತ್ತಿನಲ್ಲಿ ಶಾಂತಿಯುತವಾಗಿ ಬಾಳಲು ಸಾಧ್ಯವೆ?<br /> <strong>(ನಿಮ್ಮ ಅನಿಸಿಕೆ ತಿಳಿಸಿ: </strong><a href="mailto:.editpagefeedback@prajavani.co.in"><strong>.editpagefeedback@prajavani.co.in</strong></a><strong>)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>