<p>ಕನ್ನಡ ಚಿತ್ರರಂಗದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. `ಇಷ್ಟೊಂದು ಸಿನಿಮಾಗಳನ್ನು ನಿರ್ಮಿಸಿದರೆ ನೋಡುವವರ್ಯಾರು?~ ಎಂದು ಹಿರಿಯ ನಟಿ ಪ್ರತಿಮಾದೇವಿ ಅವರು ಮುಗ್ಧವಾಗಿ ಪ್ರಶ್ನಿಸುತ್ತಾರೆ. <br /> <br /> ಈ ಪ್ರಶ್ನೆ ಕೇಳಿ, ಒಂದುವಾರದೊಳಗೆ `ಐ ಯಾಮ್ ಸಾರಿ, ಮತ್ತೆ ಬನ್ನಿ ಪ್ರೀತ್ಸೋಣ~ ಎನ್ನುವ ಕನ್ನಡ ಚಿತ್ರವನ್ನು 49 ಚಿತ್ರಮಂದಿರಗಳಲ್ಲಿ, ಬಿಡುಗಡೆಯಾದ ಮೂರೇ ದಿನದೊಳಗೆ ವಾಪಸು ತೆಗೆದುಕೊಳ್ಳಲಾಗುತ್ತಿದೆ ಎಂದು ಚಿತ್ರದ ನಿರ್ಮಾಪಕರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿ ವೇದನೆ ತೋಡಿಕೊಂಡರು. <br /> <br /> ಹೊಸ ಸಿನಿಮಾ ಆದರೂ, ವಿಭಿನ್ನ ನಿರೂಪಣೆ ಇದ್ದರೂ, ಈ ಚಿತ್ರವನ್ನು ಜನ ನೋಡಲು ಬರಲಿಲ್ಲ. ಚಿತ್ರಮಂದಿರಗಳ ದುಬಾರಿ ಬಾಡಿಗೆ ಕೊಡಲು ಸಾಧ್ಯವಿಲ್ಲ ಎಂದು ಅವರು ಕಂಗಾಲಾಗಿದ್ದರು.<br /> <br /> ಇದಾದ ಕೆಲದಿನಗಳಲ್ಲೇ ಟೀವಿ ಧಾರಾವಾಹಿ ನಿರ್ಮಾಪಕ, ನಿರ್ದೇಶಕ ಹಿರಿಯೂರು ರಾಘವೇಂದ್ರ ಸಾಲದ ಹೊರೆ ತಾಳಲಾಗದೆ ಪತ್ರಿಕಾಗೋಷ್ಠಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದರು.<br /> <br /> ಜನ ಒಮ್ಮೆಲೆ ಚಿತ್ರಮಂದಿರದಿಂದಲೂ, ಧಾರಾವಾಹಿಗಳಿಂದಲೂ ದೂರ ಸರಿದರೇ? ರೈತರ ಹಾಗೆ ಸಿನಿಮಾ ಮಂದಿಯೂ ಆತ್ಮಹತ್ಯೆಯ ಹಾದಿ ಹಿಡಿದರೇ? <br /> ಸಾಯಿಪ್ರಕಾಶ್ ಕೂಡ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದನ್ನು ಗಮನಿಸಿ. ತೀರಾ ಇತ್ತೀಚೆಗೆ `ಗನ್~ ಚಿತ್ರದ ನಾಯಕ, ಹರೀಶ್ರಾಜ್, ಚಿತ್ರಮಂದಿರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದರು.<br /> <br /> ಹೆಚ್ಚು ಚಿತ್ರ ತಯಾರಾಗುವ ಕಾಲದಲ್ಲಿನ ಪ್ರಶ್ನೆ ಇದಲ್ಲ. 1951ರಲ್ಲಿ ನಟ, ನಿರ್ದೇಶಕ ಕೆಂಪರಾಜ ಅರಸು ಅವರು ಕೂಡ ಇದೇ ತರಹದ ಪರಿಸ್ಥಿತಿಯನ್ನು ಎದುರಿಸಿದ್ದರು. <br /> <br /> `ರಾಜಾ ವಿಕ್ರಮ~ ಚಿತ್ರ ಯಶಸ್ಸಾದರೂ, ನಿರ್ಮಾಪಕರಿಗೆ ಹಣ ವಾಪಸು ಬರುವುದಿಲ್ಲ. ವಿತರಕನಿಗೆ ಲಾಭ. ತಯಾರಿಸಿದವನಿಗೆ ಸಾಲದ ಹೊರೆ. ವಿತರಕರಿಂದ ಮೋಸವಾಯಿತು ಎಂದು ಕೆಂಪರಾಜರು ನ್ಯಾಯಾಲಯದ ಮೊರೆ ಹೋಗುತ್ತಾರೆ. <br /> <br /> ಅವರ ಮತ್ತೊಂದು ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದರೂ, ಅದನ್ನು ಚಿತ್ರಮಂದಿರದಿಂದ ಎತ್ತಂಗಡಿ ಮಾಡಿದಾಗ, ಚಿತ್ರಮಂದಿರದ ಮುಂದೆ ಕುಳಿತು ಪ್ರತಿಭಟಿಸುತ್ತಾರೆ. ಚಿತ್ರರಂಗದ ಪರಿಸ್ಥಿತಿ ಅಂದೂ-ಇಂದೂ ಒಂದೇ ರೀತಿ ಇದೆ.<br /> <br /> 1947ರಲ್ಲಿ `ಮಹಾನಂದ~ ಎನ್ನುವ ಕನ್ನಡ ಚಿತ್ರ ಬಿಡುಗಡೆಯಾಗಿ, ಕೇವಲ 14 ದಿನ ಮಾತ್ರ ನಡೆಯುತ್ತದೆ (ಆ ವರ್ಷ ಕನ್ನಡದಲ್ಲಿ ತಯಾರಾದದ್ದು ಕೇವಲ 4 ಚಿತ್ರ ಮಾತ್ರ). <br /> <br /> ಅದೇ ಸಮಯದಲ್ಲಿ ಬೆಂಗಳೂರಿನಲ್ಲಿ ಹಿಂದೀ ಚಿತ್ರವೊಂದು ಶತದಿನ ಆಚರಿಸಿಕೊಳ್ಳುತ್ತದೆ! `ಮಹಾನಂದ~ ಲಾಸ್ ಆದದ್ದು ನಿರ್ಮಾಪಕರಿಗೆ ಬೇಸರವಾಗಿ ಜನ ಏಕೆ ಇದನ್ನು ತಿರಸ್ಕರಿಸಿದರು ಎನ್ನುವುದು ಗೊತ್ತಾಗದೆ, ಮತ್ತೆ ಇದೇ ಚಿತ್ರವನ್ನು 1950ರಲ್ಲಿ `ಶಿವ ಪಾರ್ವತಿ~ ಎನ್ನುವ ಹೆಸರಿನಲ್ಲಿ ಬಿಡುಗಡೆ ಮಾಡುತ್ತಾರೆ. <br /> <br /> ಈ ಚಿತ್ರವನ್ನೂ ಜನ ತಿರಸ್ಕರಿಸುತ್ತಾರೆ. ನಿರ್ಮಾಪಕರಿಗೆ ತಮ್ಮ ಕೆಟ್ಟ ಚಿತ್ರವನ್ನು ತೋರಿಸಿಯೇ ತೀರುವ ಹಠ. ಪ್ರೇಕ್ಷಕರಿಗೆ ನೋಡಲೇ ಬಾರದು ಎನ್ನುವ ಹಠ. ಈ ಜೂಟಾಟ ಸಿನಿಮಾ ಇತಿಹಾಸದಲ್ಲಿ ಪುನರಾವರ್ತನೆಯಾಗುತ್ತಲೇ ಇದೆ.<br /> <br /> ನಮ್ಮ ಸಿನಿಮಾ ಪ್ರೇಕ್ಷಕರು ಅಂದೂ, ಇಂದೂ ಒಂದೇ ಎನ್ನುವುದು ಈ ಮೂಲಕ ಸಾಬೀತಾಗುತ್ತಿದೆ. ಸಾಮಾನ್ಯವಾಗಿ ಸಿನಿಮಾಗಳ ಇಂಥ ಸೋಲಿಗೆ, ಪ್ರೇಕ್ಷಕರನ್ನು ದೂರಲಾಗುತ್ತದೆ.<br /> <br /> ಚಿತ್ರ ವಿತರಕರನ್ನು, ಚಿತ್ರಮಂದಿರದ ಮಾಲೀಕರನ್ನು, ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಹಾಗೂ ಚಿತ್ರಮಂದಿರಗಳ ಮೇಲೆ ಬಿಗಿ ಹಿಡಿತ ಹೊಂದಿರುವ ಪಟ್ಟಭದ್ರರನ್ನು ಹೊಣೆ ಮಾಡಲಾಗುತ್ತದೆ. <br /> <br /> ಹೊಸದಾಗಿ ಚಿತ್ರರಂಗ ಪ್ರವೇಶಿಸುವ ನಿರ್ಮಾಪಕರು ಈ ಎಲ್ಲ ವ್ಯವಸ್ಥೆಯ ಒಳಗೆ ಕಕ್ಕಾಬಿಕ್ಕಿಯಾಗುವ ಸಂಭವವೇ ಹೆಚ್ಚು. ಪುನೀತ್ ಹಾಗೂ ಉಪೇಂದ್ರ ಅಭಿನಯದ ಚಿತ್ರಗಳನ್ನೂ 169 ಚಿತ್ರ ಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿ ಹಣ ದೋಚುವ ಮಾರ್ಗ ಒಂದು ಕಡೆ ಇದೆ. <br /> <br /> ಚಿತ್ರ ಬಿಡುಗಡೆಯಾದ ಎರಡನೇ ದಿನಕ್ಕೇ ನನ್ನ ಚಿತ್ರವನ್ನು ಚಿತ್ರಮಂದಿರದಿಂದ ಹಿಂತೆಗೆದುಕೊಳ್ಳುತ್ತೇನೆ, ಬಾಡಿಗೆ ಕಟ್ಟಲು ಹಣ ಇಲ್ಲ ಎಂದು ಹೇಳುವ ನಿರ್ಮಾಪಕ ವರ್ಗ ಮತ್ತೊಂದು ಕಡೆ ಇದೆ. <br /> <br /> ಈ ಎರಡೂ ವರ್ಗದವರೂ ಚಲನಚಿತ್ರ ಕ್ಷೇತ್ರದಲ್ಲಿ ವ್ಯವಹಾರ ನಡೆಸಲೆಂದೇ ಬಂದವರು. ಸಿನಿಮಾವೊಂದನ್ನು ನೂರು ದಿನ ಪ್ರದರ್ಶಿಸಿ ದಾಖಲೆ ಮಾಡುವುದು ಇನ್ನು ಮುಂದೆ ಕನಸು ಎಂದೇ ಎಲ್ಲ ನಿರ್ಮಾಪಕರು ಹೇಳುತ್ತಾರೆ. ಹಾಗಾದರೆ ಪ್ರೇಕ್ಷಕ ಬದಲಾದನೇ?<br /> <br /> ಖಂಡಿತಾ ಇಲ್ಲ, ಚಲನಚಿತ್ರಗಳ ಮೋಹ ನಮ್ಮ ಪ್ರೇಕ್ಷಕರಿಗೆ ಎಂದೂ ಬಿಟ್ಟು ಹೋಗುವುದಿಲ್ಲ. ಸಿನಿಮಾಗಳು ತಾಂತ್ರಿಕ ನಿಕಷಕ್ಕೆ ಒಳಪಟ್ಟು ಬದಲಾವಣೆಗೆ ಒಗ್ಗಿಕೊಳ್ಳುತ್ತಾ ಹೋದಂತೆ ಪ್ರೇಕ್ಷಕನ ಅಭಿರುಚಿ ಕೂಡ ಹೊಸತನಕ್ಕಾಗಿ ಹಂಬಲಿಸಲಾರಂಭಿಸುತ್ತದೆ. <br /> <br /> ನಮ್ಮಲ್ಲಿ ವರ್ಷಕ್ಕೆ ಸಾವಿರ ಚಿತ್ರಗಳು ತಯಾರಾದರೂ ಅದರಲ್ಲಿ ಪ್ರೇಕ್ಷಕನ ಆಯ್ಕೆ ಹತ್ತು ಮಾತ್ರವಾಗಿರುತ್ತದೆ. ಉಳಿದವು ಪ್ರೇಕ್ಷಕರ ಪಾಲಿಗೆ ಕಾಗಕ್ಕ ಗುಬ್ಬಕ್ಕನ ಕಥೆಗಳೇ. <br /> <br /> ಹೀಗಾಗಿ ಪ್ರೇಕ್ಷಕ ಚಿತ್ರಮಂದಿರಕ್ಕೆ ಅಷ್ಟು ಸುಲಭವಾಗಿ ಹೋಗುವುದಿಲ್ಲ.<br /> ಮನರಂಜನಾ ಮಾಧ್ಯಮವಾಗಿ ಜನ ಸ್ವೀಕರಿಸಿರುವ ಟೀವಿ ಧಾರಾವಾಹಿಗಳ ಕತೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.<br /> <br /> ಚಲನಚಿತ್ರಗಳನ್ನು ನಮ್ಮ ಪ್ರೇಕ್ಷಕ ಹೇಗೆ ತಿರಸ್ಕರಿಸಿದ್ದಾನೋ ಅದೇ ರೀತಿ ಕಿರುತೆರೆ ಕಾರ್ಯಕ್ರಮಗಳ ಬಗ್ಗೆಯೂ ಜಿಗುಪ್ಸೆಗೊಂಡಿದ್ದಾನೆ ಎಂಬುದು ನಿರ್ಮಾಪಕನ ಆತ್ಮಹತ್ಯೆ ಘಟನೆಯಿಂದ ಸ್ಪಷ್ಟವಾಗುತ್ತದೆ. <br /> <br /> ಕಿರುತೆರೆ ನಿರ್ಮಾಪಕರು, ನಿರ್ದೇಶಕರು, ಸಿನಿಮಾ ನಿರ್ದೇಶಕರು ಆತ್ಮಹತ್ಯೆಗೆ ಯತ್ನಿಸುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ನ್ಯಾಯವಾಗಿ ಅದನ್ನು ವೀಕ್ಷಿಸುವ ಪ್ರೇಕ್ಷಕರಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕು! <br /> <br /> ಕಿರುತೆರೆ ಚಾನಲ್ಗಳು ಸಂಖ್ಯೆಯಲ್ಲಿ ಹೆಚ್ಚು ಹೆಚ್ಚಾದಂತೆ, ಇಪ್ಪತ್ತನಾಲ್ಕು ಗಂಟೆಯೂ ಕಾರ್ಯಕ್ರಮಗಳನ್ನು ಕೊಡುತ್ತಾ ಜನರನ್ನು ಸೆಳೆಯಲು ನಾನಾ ತಂತ್ರಗಳನ್ನು ಬಳಸುತ್ತಿರುವುದು ಎಲ್ಲರಿಗೂ ಗೊತ್ತಾಗುವಂತೆಯೇ ಇದೆ. <br /> <br /> ಪ್ರಸಾರವಾಗುವ ಧಾರಾವಾಹಿಗಳಲ್ಲೇ ಒಂದನ್ನು ಆಯ್ಕೆ ಮಾಡಿಕೊಂಡು, ನೋಡಲೇಬೇಕಾದ ದಯನೀಯ ಸ್ಥಿತಿ ಇಂದಿನ ಪ್ರೇಕ್ಷಕರದ್ದು. ಪ್ರೇಕ್ಷಕನ ಬಗ್ಗೆ ಚಾನಲ್ ಮಾಲೀಕರಿಗಾಗಲೀ, ಧಾರಾವಾಹಿ ನಿರ್ದೇಶಕ, ನಿರ್ಮಾಪಕರಿಗಾಗಲಿ ಕಿಂಚಿತ್ತೂ ಗೌರವವಿಲ್ಲ ಎನ್ನುವುದು ಸ್ಪಷ್ಟ. <br /> <br /> ತಮಗೆ ಬೇಕಾದವರನ್ನು ವಿಜೃಂಭಿಸಲು ಧಾರಾವಾಹಿಗಳನ್ನು ನಿರ್ಮಿಸುವುದು, ವ್ಯಾಪಕ ಪ್ರಚಾರದ ಮೂಲಕ ಟಿ.ಆರ್.ಪಿ. ಸೃಷ್ಟಿಸುವುದು, ಧಾರಾವಾಹಿ ಪ್ರಸಾರಕ್ಕೆ ಚಾನಲ್ನವರು ಲಂಚ ಪಡೆಯುವುದು- ಇವೆಲ್ಲಾ ಇಲ್ಲಿ ಹೊಸ ವಿಷಯಗಳಲ್ಲ. <br /> <br /> ಬೇಕಾದವರನ್ನೂ ಬೇಡವಾದವರನ್ನೂ ಕರೆದು, ಕೂರಿಸಿಕೊಂಡು ಹರಟೆ ಹೊಡೆಯುವ ನೆಪದಲ್ಲಿ ನಿರೂಪಕರು ತಮಗೆ ತೋಚಿದ್ದನ್ನೇ ಹೇಳಿ, ಎಲ್ಲರ ಮೇಲೆ ತಮ್ಮ ಅಭಿಪ್ರಾಯವನ್ನೇ ಹೇರಿ, ನಾಟಕ ಮಾಡುವ ಸಂಗತಿಯೂ ಈಗ ಹಳಸಲಾಯಿತು.<br /> <br /> ಬೆಳಿಗ್ಗೆ ಎದ್ದ ಕೂಡಲೇ ಭವಿಷ್ಯ ಹೇಳುವ ಖಯಾಲಿಯನ್ನು ಆರಂಭಿಸಿ, ಜನರನ್ನು ಮತ್ತಷ್ಟು ಮೌಢ್ಯಕ್ಕೆ ತಳ್ಳುತ್ತಿರುವುದೂ ಟೀವಿ ಚಾನಲ್ಗಳೇ. ಈಗಾಗಲೇ ಟೀವಿಗಳಲ್ಲಿ ಭವಿಷ್ಯ ಕೇಳುವ, ಹೇಳುವ ಪಿಡುಗು ವ್ಯಾಪಿಸಿಬಿಟ್ಟಿದೆ. <br /> <br /> ಬ್ರಹ್ಮಾಂಡದ ಹೆಸರಿನಲ್ಲಿ ಜನರನ್ನು ಬೆಚ್ಚಿಬೀಳಿಸುವ ಕಾರ್ಯಕ್ರಮಗಳಿಗೆ ಸರ್ಕಾರ ಇನ್ನೂ ಅಂಕುಶ ಹಾಕಿಲ್ಲ. ಆದರೆ, ಲಂಡನ್ನಲ್ಲಿ ಟೀವಿ ಚಾನಲ್ಲೊಂದು ಭವಿಷ್ಯ ವಿಭಾಗ ತೆರೆದು, ಅಸಂಬದ್ಧ ಸಂಗತಿಗಳನ್ನೆಲ್ಲಾ ಹೇಳಲಾರಂಭಿಸುತ್ತಿದ್ದಂತೆಯೇ ಅಲ್ಲಿನ ಸರ್ಕಾರ, ಕಿರುತೆರೆಯಲ್ಲಿ ಭವಿಷ್ಯ ಪ್ರಸಾರ ನಿಷೇಧಿಸಿ ಆದೇಶ ಹೊರಡಿಸಿತು. ನಾವಿನ್ನೂ ಸಹಿಸಿಕೊಂಡಿದ್ದೇವೆ.<br /> <br /> ನಮ್ಮ ಚಾನಲ್ಗಳಿಗೆ ಬದ್ಧತೆ ಎಂಬುದೇ ಇಲ್ಲ. ಕಾರ್ಯಕ್ರಮಗಳಲ್ಲಿ ಒಂದು ಸುಸಂಬದ್ಧತೆ ಇಲ್ಲ. ರೀಮೇಕಿಗೂ ಸೈ, ಡಬ್ಬಿಂಗಿಗೂ ಸೈ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರ ತುತ್ತೂರಿ ಊದುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಇದೂ ಒಂದು ರೀತಿಯಲ್ಲಿ `ಕಾಸಿಗಾಗಿ ಕಾರ್ಯಕ್ರಮ~. <br /> <br /> ಈ ಹಿನ್ನೆಲೆ ಇಟ್ಟುಕೊಂಡಿರುವ, ಕಣ್ಣಿಗೆ ರಾಚುವಂತ ಬೌದ್ಧಿಕ ಭ್ರಷ್ಟಾಚಾರದಲ್ಲಿ ನಿರತವಾಗಿರುವ ಚಾನಲ್ಗಳಿಂದ ಒಳ್ಳೆಯ ಧಾರಾವಾಹಿಗಳನ್ನಾಗಲಿ, ಕಾರ್ಯಕ್ರಮಗಳನ್ನಾಗಲೀ ನಿರೀಕ್ಷಿಸಲು ಸಾಧ್ಯವೇ? ಪತ್ರಿಕಾಗೋಷ್ಠಿ ಕರೆದು ಆತ್ಮಹತ್ಯೆಗೆ ಯತ್ನಿಸಿದ ರಾಘವೇಂದ್ರ ಅವರು ಸ್ವಲ್ಪ ಯೋಚಿಸಬೇಕಿತ್ತು. <br /> <br /> ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುವ ಭರಾಟೆಯಲ್ಲಿ ರಿಯಾಲಿಟಿ ಶೋ ಒಂದರ ಕತೆ ಕೇಳಿಲ್ಲವೇ? ಶಿಲ್ಪಾ ಶೆಟ್ಟಿ ಕತೆ ಹಳತಾಯಿತು. ಇತ್ತೀಚೆಗೆ ಕನ್ನಡದ ಚಾನಲ್ನಲ್ಲಿ `ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್~ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಅಕ್ಷತಾ ಎಂಬ ಯುವತಿ, ಅಲ್ಲಿ ನಡೆಯುತ್ತಿರುವ ಶೋಷಣೆ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಆರೋಪಿಸಿದ್ದರು. <br /> <br /> ಪ್ರತಿಯೊಂದು ಕಾರ್ಯಕ್ರಮದಲ್ಲೂ ಒಂದೊಂದು ಗಿಮಿಕ್ ಸೃಷ್ಟಿಸುವುದು ಚಾನೆಲ್ಗಳ ಕೆಲಸ. ಹೀಗಾಗಿ ಪ್ರೇಕ್ಷಕರಿಗೆ ಈಗ ಸಿನಿಮಾಗಳೆಂದರೂ ಅಲರ್ಜಿ, ಟೀವಿ ಕಾರ್ಯಕ್ರಮಗಳೆಂದರೂ ಅಲರ್ಜಿ. ಸಿನಿಮಾ ಜನ ಇದನ್ನು ಅರಿತು ಆತ್ಮಹತ್ಯೆಯ ದಾರಿ ತೊರೆದು ಪ್ರೇಕ್ಷಕರನ್ನು ಗೆಲ್ಲುವ ತಂತ್ರಗಳನ್ನು ಹುಡುಕಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡ ಚಿತ್ರರಂಗದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. `ಇಷ್ಟೊಂದು ಸಿನಿಮಾಗಳನ್ನು ನಿರ್ಮಿಸಿದರೆ ನೋಡುವವರ್ಯಾರು?~ ಎಂದು ಹಿರಿಯ ನಟಿ ಪ್ರತಿಮಾದೇವಿ ಅವರು ಮುಗ್ಧವಾಗಿ ಪ್ರಶ್ನಿಸುತ್ತಾರೆ. <br /> <br /> ಈ ಪ್ರಶ್ನೆ ಕೇಳಿ, ಒಂದುವಾರದೊಳಗೆ `ಐ ಯಾಮ್ ಸಾರಿ, ಮತ್ತೆ ಬನ್ನಿ ಪ್ರೀತ್ಸೋಣ~ ಎನ್ನುವ ಕನ್ನಡ ಚಿತ್ರವನ್ನು 49 ಚಿತ್ರಮಂದಿರಗಳಲ್ಲಿ, ಬಿಡುಗಡೆಯಾದ ಮೂರೇ ದಿನದೊಳಗೆ ವಾಪಸು ತೆಗೆದುಕೊಳ್ಳಲಾಗುತ್ತಿದೆ ಎಂದು ಚಿತ್ರದ ನಿರ್ಮಾಪಕರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿ ವೇದನೆ ತೋಡಿಕೊಂಡರು. <br /> <br /> ಹೊಸ ಸಿನಿಮಾ ಆದರೂ, ವಿಭಿನ್ನ ನಿರೂಪಣೆ ಇದ್ದರೂ, ಈ ಚಿತ್ರವನ್ನು ಜನ ನೋಡಲು ಬರಲಿಲ್ಲ. ಚಿತ್ರಮಂದಿರಗಳ ದುಬಾರಿ ಬಾಡಿಗೆ ಕೊಡಲು ಸಾಧ್ಯವಿಲ್ಲ ಎಂದು ಅವರು ಕಂಗಾಲಾಗಿದ್ದರು.<br /> <br /> ಇದಾದ ಕೆಲದಿನಗಳಲ್ಲೇ ಟೀವಿ ಧಾರಾವಾಹಿ ನಿರ್ಮಾಪಕ, ನಿರ್ದೇಶಕ ಹಿರಿಯೂರು ರಾಘವೇಂದ್ರ ಸಾಲದ ಹೊರೆ ತಾಳಲಾಗದೆ ಪತ್ರಿಕಾಗೋಷ್ಠಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದರು.<br /> <br /> ಜನ ಒಮ್ಮೆಲೆ ಚಿತ್ರಮಂದಿರದಿಂದಲೂ, ಧಾರಾವಾಹಿಗಳಿಂದಲೂ ದೂರ ಸರಿದರೇ? ರೈತರ ಹಾಗೆ ಸಿನಿಮಾ ಮಂದಿಯೂ ಆತ್ಮಹತ್ಯೆಯ ಹಾದಿ ಹಿಡಿದರೇ? <br /> ಸಾಯಿಪ್ರಕಾಶ್ ಕೂಡ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದನ್ನು ಗಮನಿಸಿ. ತೀರಾ ಇತ್ತೀಚೆಗೆ `ಗನ್~ ಚಿತ್ರದ ನಾಯಕ, ಹರೀಶ್ರಾಜ್, ಚಿತ್ರಮಂದಿರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದರು.<br /> <br /> ಹೆಚ್ಚು ಚಿತ್ರ ತಯಾರಾಗುವ ಕಾಲದಲ್ಲಿನ ಪ್ರಶ್ನೆ ಇದಲ್ಲ. 1951ರಲ್ಲಿ ನಟ, ನಿರ್ದೇಶಕ ಕೆಂಪರಾಜ ಅರಸು ಅವರು ಕೂಡ ಇದೇ ತರಹದ ಪರಿಸ್ಥಿತಿಯನ್ನು ಎದುರಿಸಿದ್ದರು. <br /> <br /> `ರಾಜಾ ವಿಕ್ರಮ~ ಚಿತ್ರ ಯಶಸ್ಸಾದರೂ, ನಿರ್ಮಾಪಕರಿಗೆ ಹಣ ವಾಪಸು ಬರುವುದಿಲ್ಲ. ವಿತರಕನಿಗೆ ಲಾಭ. ತಯಾರಿಸಿದವನಿಗೆ ಸಾಲದ ಹೊರೆ. ವಿತರಕರಿಂದ ಮೋಸವಾಯಿತು ಎಂದು ಕೆಂಪರಾಜರು ನ್ಯಾಯಾಲಯದ ಮೊರೆ ಹೋಗುತ್ತಾರೆ. <br /> <br /> ಅವರ ಮತ್ತೊಂದು ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದರೂ, ಅದನ್ನು ಚಿತ್ರಮಂದಿರದಿಂದ ಎತ್ತಂಗಡಿ ಮಾಡಿದಾಗ, ಚಿತ್ರಮಂದಿರದ ಮುಂದೆ ಕುಳಿತು ಪ್ರತಿಭಟಿಸುತ್ತಾರೆ. ಚಿತ್ರರಂಗದ ಪರಿಸ್ಥಿತಿ ಅಂದೂ-ಇಂದೂ ಒಂದೇ ರೀತಿ ಇದೆ.<br /> <br /> 1947ರಲ್ಲಿ `ಮಹಾನಂದ~ ಎನ್ನುವ ಕನ್ನಡ ಚಿತ್ರ ಬಿಡುಗಡೆಯಾಗಿ, ಕೇವಲ 14 ದಿನ ಮಾತ್ರ ನಡೆಯುತ್ತದೆ (ಆ ವರ್ಷ ಕನ್ನಡದಲ್ಲಿ ತಯಾರಾದದ್ದು ಕೇವಲ 4 ಚಿತ್ರ ಮಾತ್ರ). <br /> <br /> ಅದೇ ಸಮಯದಲ್ಲಿ ಬೆಂಗಳೂರಿನಲ್ಲಿ ಹಿಂದೀ ಚಿತ್ರವೊಂದು ಶತದಿನ ಆಚರಿಸಿಕೊಳ್ಳುತ್ತದೆ! `ಮಹಾನಂದ~ ಲಾಸ್ ಆದದ್ದು ನಿರ್ಮಾಪಕರಿಗೆ ಬೇಸರವಾಗಿ ಜನ ಏಕೆ ಇದನ್ನು ತಿರಸ್ಕರಿಸಿದರು ಎನ್ನುವುದು ಗೊತ್ತಾಗದೆ, ಮತ್ತೆ ಇದೇ ಚಿತ್ರವನ್ನು 1950ರಲ್ಲಿ `ಶಿವ ಪಾರ್ವತಿ~ ಎನ್ನುವ ಹೆಸರಿನಲ್ಲಿ ಬಿಡುಗಡೆ ಮಾಡುತ್ತಾರೆ. <br /> <br /> ಈ ಚಿತ್ರವನ್ನೂ ಜನ ತಿರಸ್ಕರಿಸುತ್ತಾರೆ. ನಿರ್ಮಾಪಕರಿಗೆ ತಮ್ಮ ಕೆಟ್ಟ ಚಿತ್ರವನ್ನು ತೋರಿಸಿಯೇ ತೀರುವ ಹಠ. ಪ್ರೇಕ್ಷಕರಿಗೆ ನೋಡಲೇ ಬಾರದು ಎನ್ನುವ ಹಠ. ಈ ಜೂಟಾಟ ಸಿನಿಮಾ ಇತಿಹಾಸದಲ್ಲಿ ಪುನರಾವರ್ತನೆಯಾಗುತ್ತಲೇ ಇದೆ.<br /> <br /> ನಮ್ಮ ಸಿನಿಮಾ ಪ್ರೇಕ್ಷಕರು ಅಂದೂ, ಇಂದೂ ಒಂದೇ ಎನ್ನುವುದು ಈ ಮೂಲಕ ಸಾಬೀತಾಗುತ್ತಿದೆ. ಸಾಮಾನ್ಯವಾಗಿ ಸಿನಿಮಾಗಳ ಇಂಥ ಸೋಲಿಗೆ, ಪ್ರೇಕ್ಷಕರನ್ನು ದೂರಲಾಗುತ್ತದೆ.<br /> <br /> ಚಿತ್ರ ವಿತರಕರನ್ನು, ಚಿತ್ರಮಂದಿರದ ಮಾಲೀಕರನ್ನು, ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಹಾಗೂ ಚಿತ್ರಮಂದಿರಗಳ ಮೇಲೆ ಬಿಗಿ ಹಿಡಿತ ಹೊಂದಿರುವ ಪಟ್ಟಭದ್ರರನ್ನು ಹೊಣೆ ಮಾಡಲಾಗುತ್ತದೆ. <br /> <br /> ಹೊಸದಾಗಿ ಚಿತ್ರರಂಗ ಪ್ರವೇಶಿಸುವ ನಿರ್ಮಾಪಕರು ಈ ಎಲ್ಲ ವ್ಯವಸ್ಥೆಯ ಒಳಗೆ ಕಕ್ಕಾಬಿಕ್ಕಿಯಾಗುವ ಸಂಭವವೇ ಹೆಚ್ಚು. ಪುನೀತ್ ಹಾಗೂ ಉಪೇಂದ್ರ ಅಭಿನಯದ ಚಿತ್ರಗಳನ್ನೂ 169 ಚಿತ್ರ ಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿ ಹಣ ದೋಚುವ ಮಾರ್ಗ ಒಂದು ಕಡೆ ಇದೆ. <br /> <br /> ಚಿತ್ರ ಬಿಡುಗಡೆಯಾದ ಎರಡನೇ ದಿನಕ್ಕೇ ನನ್ನ ಚಿತ್ರವನ್ನು ಚಿತ್ರಮಂದಿರದಿಂದ ಹಿಂತೆಗೆದುಕೊಳ್ಳುತ್ತೇನೆ, ಬಾಡಿಗೆ ಕಟ್ಟಲು ಹಣ ಇಲ್ಲ ಎಂದು ಹೇಳುವ ನಿರ್ಮಾಪಕ ವರ್ಗ ಮತ್ತೊಂದು ಕಡೆ ಇದೆ. <br /> <br /> ಈ ಎರಡೂ ವರ್ಗದವರೂ ಚಲನಚಿತ್ರ ಕ್ಷೇತ್ರದಲ್ಲಿ ವ್ಯವಹಾರ ನಡೆಸಲೆಂದೇ ಬಂದವರು. ಸಿನಿಮಾವೊಂದನ್ನು ನೂರು ದಿನ ಪ್ರದರ್ಶಿಸಿ ದಾಖಲೆ ಮಾಡುವುದು ಇನ್ನು ಮುಂದೆ ಕನಸು ಎಂದೇ ಎಲ್ಲ ನಿರ್ಮಾಪಕರು ಹೇಳುತ್ತಾರೆ. ಹಾಗಾದರೆ ಪ್ರೇಕ್ಷಕ ಬದಲಾದನೇ?<br /> <br /> ಖಂಡಿತಾ ಇಲ್ಲ, ಚಲನಚಿತ್ರಗಳ ಮೋಹ ನಮ್ಮ ಪ್ರೇಕ್ಷಕರಿಗೆ ಎಂದೂ ಬಿಟ್ಟು ಹೋಗುವುದಿಲ್ಲ. ಸಿನಿಮಾಗಳು ತಾಂತ್ರಿಕ ನಿಕಷಕ್ಕೆ ಒಳಪಟ್ಟು ಬದಲಾವಣೆಗೆ ಒಗ್ಗಿಕೊಳ್ಳುತ್ತಾ ಹೋದಂತೆ ಪ್ರೇಕ್ಷಕನ ಅಭಿರುಚಿ ಕೂಡ ಹೊಸತನಕ್ಕಾಗಿ ಹಂಬಲಿಸಲಾರಂಭಿಸುತ್ತದೆ. <br /> <br /> ನಮ್ಮಲ್ಲಿ ವರ್ಷಕ್ಕೆ ಸಾವಿರ ಚಿತ್ರಗಳು ತಯಾರಾದರೂ ಅದರಲ್ಲಿ ಪ್ರೇಕ್ಷಕನ ಆಯ್ಕೆ ಹತ್ತು ಮಾತ್ರವಾಗಿರುತ್ತದೆ. ಉಳಿದವು ಪ್ರೇಕ್ಷಕರ ಪಾಲಿಗೆ ಕಾಗಕ್ಕ ಗುಬ್ಬಕ್ಕನ ಕಥೆಗಳೇ. <br /> <br /> ಹೀಗಾಗಿ ಪ್ರೇಕ್ಷಕ ಚಿತ್ರಮಂದಿರಕ್ಕೆ ಅಷ್ಟು ಸುಲಭವಾಗಿ ಹೋಗುವುದಿಲ್ಲ.<br /> ಮನರಂಜನಾ ಮಾಧ್ಯಮವಾಗಿ ಜನ ಸ್ವೀಕರಿಸಿರುವ ಟೀವಿ ಧಾರಾವಾಹಿಗಳ ಕತೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.<br /> <br /> ಚಲನಚಿತ್ರಗಳನ್ನು ನಮ್ಮ ಪ್ರೇಕ್ಷಕ ಹೇಗೆ ತಿರಸ್ಕರಿಸಿದ್ದಾನೋ ಅದೇ ರೀತಿ ಕಿರುತೆರೆ ಕಾರ್ಯಕ್ರಮಗಳ ಬಗ್ಗೆಯೂ ಜಿಗುಪ್ಸೆಗೊಂಡಿದ್ದಾನೆ ಎಂಬುದು ನಿರ್ಮಾಪಕನ ಆತ್ಮಹತ್ಯೆ ಘಟನೆಯಿಂದ ಸ್ಪಷ್ಟವಾಗುತ್ತದೆ. <br /> <br /> ಕಿರುತೆರೆ ನಿರ್ಮಾಪಕರು, ನಿರ್ದೇಶಕರು, ಸಿನಿಮಾ ನಿರ್ದೇಶಕರು ಆತ್ಮಹತ್ಯೆಗೆ ಯತ್ನಿಸುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ನ್ಯಾಯವಾಗಿ ಅದನ್ನು ವೀಕ್ಷಿಸುವ ಪ್ರೇಕ್ಷಕರಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕು! <br /> <br /> ಕಿರುತೆರೆ ಚಾನಲ್ಗಳು ಸಂಖ್ಯೆಯಲ್ಲಿ ಹೆಚ್ಚು ಹೆಚ್ಚಾದಂತೆ, ಇಪ್ಪತ್ತನಾಲ್ಕು ಗಂಟೆಯೂ ಕಾರ್ಯಕ್ರಮಗಳನ್ನು ಕೊಡುತ್ತಾ ಜನರನ್ನು ಸೆಳೆಯಲು ನಾನಾ ತಂತ್ರಗಳನ್ನು ಬಳಸುತ್ತಿರುವುದು ಎಲ್ಲರಿಗೂ ಗೊತ್ತಾಗುವಂತೆಯೇ ಇದೆ. <br /> <br /> ಪ್ರಸಾರವಾಗುವ ಧಾರಾವಾಹಿಗಳಲ್ಲೇ ಒಂದನ್ನು ಆಯ್ಕೆ ಮಾಡಿಕೊಂಡು, ನೋಡಲೇಬೇಕಾದ ದಯನೀಯ ಸ್ಥಿತಿ ಇಂದಿನ ಪ್ರೇಕ್ಷಕರದ್ದು. ಪ್ರೇಕ್ಷಕನ ಬಗ್ಗೆ ಚಾನಲ್ ಮಾಲೀಕರಿಗಾಗಲೀ, ಧಾರಾವಾಹಿ ನಿರ್ದೇಶಕ, ನಿರ್ಮಾಪಕರಿಗಾಗಲಿ ಕಿಂಚಿತ್ತೂ ಗೌರವವಿಲ್ಲ ಎನ್ನುವುದು ಸ್ಪಷ್ಟ. <br /> <br /> ತಮಗೆ ಬೇಕಾದವರನ್ನು ವಿಜೃಂಭಿಸಲು ಧಾರಾವಾಹಿಗಳನ್ನು ನಿರ್ಮಿಸುವುದು, ವ್ಯಾಪಕ ಪ್ರಚಾರದ ಮೂಲಕ ಟಿ.ಆರ್.ಪಿ. ಸೃಷ್ಟಿಸುವುದು, ಧಾರಾವಾಹಿ ಪ್ರಸಾರಕ್ಕೆ ಚಾನಲ್ನವರು ಲಂಚ ಪಡೆಯುವುದು- ಇವೆಲ್ಲಾ ಇಲ್ಲಿ ಹೊಸ ವಿಷಯಗಳಲ್ಲ. <br /> <br /> ಬೇಕಾದವರನ್ನೂ ಬೇಡವಾದವರನ್ನೂ ಕರೆದು, ಕೂರಿಸಿಕೊಂಡು ಹರಟೆ ಹೊಡೆಯುವ ನೆಪದಲ್ಲಿ ನಿರೂಪಕರು ತಮಗೆ ತೋಚಿದ್ದನ್ನೇ ಹೇಳಿ, ಎಲ್ಲರ ಮೇಲೆ ತಮ್ಮ ಅಭಿಪ್ರಾಯವನ್ನೇ ಹೇರಿ, ನಾಟಕ ಮಾಡುವ ಸಂಗತಿಯೂ ಈಗ ಹಳಸಲಾಯಿತು.<br /> <br /> ಬೆಳಿಗ್ಗೆ ಎದ್ದ ಕೂಡಲೇ ಭವಿಷ್ಯ ಹೇಳುವ ಖಯಾಲಿಯನ್ನು ಆರಂಭಿಸಿ, ಜನರನ್ನು ಮತ್ತಷ್ಟು ಮೌಢ್ಯಕ್ಕೆ ತಳ್ಳುತ್ತಿರುವುದೂ ಟೀವಿ ಚಾನಲ್ಗಳೇ. ಈಗಾಗಲೇ ಟೀವಿಗಳಲ್ಲಿ ಭವಿಷ್ಯ ಕೇಳುವ, ಹೇಳುವ ಪಿಡುಗು ವ್ಯಾಪಿಸಿಬಿಟ್ಟಿದೆ. <br /> <br /> ಬ್ರಹ್ಮಾಂಡದ ಹೆಸರಿನಲ್ಲಿ ಜನರನ್ನು ಬೆಚ್ಚಿಬೀಳಿಸುವ ಕಾರ್ಯಕ್ರಮಗಳಿಗೆ ಸರ್ಕಾರ ಇನ್ನೂ ಅಂಕುಶ ಹಾಕಿಲ್ಲ. ಆದರೆ, ಲಂಡನ್ನಲ್ಲಿ ಟೀವಿ ಚಾನಲ್ಲೊಂದು ಭವಿಷ್ಯ ವಿಭಾಗ ತೆರೆದು, ಅಸಂಬದ್ಧ ಸಂಗತಿಗಳನ್ನೆಲ್ಲಾ ಹೇಳಲಾರಂಭಿಸುತ್ತಿದ್ದಂತೆಯೇ ಅಲ್ಲಿನ ಸರ್ಕಾರ, ಕಿರುತೆರೆಯಲ್ಲಿ ಭವಿಷ್ಯ ಪ್ರಸಾರ ನಿಷೇಧಿಸಿ ಆದೇಶ ಹೊರಡಿಸಿತು. ನಾವಿನ್ನೂ ಸಹಿಸಿಕೊಂಡಿದ್ದೇವೆ.<br /> <br /> ನಮ್ಮ ಚಾನಲ್ಗಳಿಗೆ ಬದ್ಧತೆ ಎಂಬುದೇ ಇಲ್ಲ. ಕಾರ್ಯಕ್ರಮಗಳಲ್ಲಿ ಒಂದು ಸುಸಂಬದ್ಧತೆ ಇಲ್ಲ. ರೀಮೇಕಿಗೂ ಸೈ, ಡಬ್ಬಿಂಗಿಗೂ ಸೈ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರ ತುತ್ತೂರಿ ಊದುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಇದೂ ಒಂದು ರೀತಿಯಲ್ಲಿ `ಕಾಸಿಗಾಗಿ ಕಾರ್ಯಕ್ರಮ~. <br /> <br /> ಈ ಹಿನ್ನೆಲೆ ಇಟ್ಟುಕೊಂಡಿರುವ, ಕಣ್ಣಿಗೆ ರಾಚುವಂತ ಬೌದ್ಧಿಕ ಭ್ರಷ್ಟಾಚಾರದಲ್ಲಿ ನಿರತವಾಗಿರುವ ಚಾನಲ್ಗಳಿಂದ ಒಳ್ಳೆಯ ಧಾರಾವಾಹಿಗಳನ್ನಾಗಲಿ, ಕಾರ್ಯಕ್ರಮಗಳನ್ನಾಗಲೀ ನಿರೀಕ್ಷಿಸಲು ಸಾಧ್ಯವೇ? ಪತ್ರಿಕಾಗೋಷ್ಠಿ ಕರೆದು ಆತ್ಮಹತ್ಯೆಗೆ ಯತ್ನಿಸಿದ ರಾಘವೇಂದ್ರ ಅವರು ಸ್ವಲ್ಪ ಯೋಚಿಸಬೇಕಿತ್ತು. <br /> <br /> ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುವ ಭರಾಟೆಯಲ್ಲಿ ರಿಯಾಲಿಟಿ ಶೋ ಒಂದರ ಕತೆ ಕೇಳಿಲ್ಲವೇ? ಶಿಲ್ಪಾ ಶೆಟ್ಟಿ ಕತೆ ಹಳತಾಯಿತು. ಇತ್ತೀಚೆಗೆ ಕನ್ನಡದ ಚಾನಲ್ನಲ್ಲಿ `ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್~ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಅಕ್ಷತಾ ಎಂಬ ಯುವತಿ, ಅಲ್ಲಿ ನಡೆಯುತ್ತಿರುವ ಶೋಷಣೆ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಆರೋಪಿಸಿದ್ದರು. <br /> <br /> ಪ್ರತಿಯೊಂದು ಕಾರ್ಯಕ್ರಮದಲ್ಲೂ ಒಂದೊಂದು ಗಿಮಿಕ್ ಸೃಷ್ಟಿಸುವುದು ಚಾನೆಲ್ಗಳ ಕೆಲಸ. ಹೀಗಾಗಿ ಪ್ರೇಕ್ಷಕರಿಗೆ ಈಗ ಸಿನಿಮಾಗಳೆಂದರೂ ಅಲರ್ಜಿ, ಟೀವಿ ಕಾರ್ಯಕ್ರಮಗಳೆಂದರೂ ಅಲರ್ಜಿ. ಸಿನಿಮಾ ಜನ ಇದನ್ನು ಅರಿತು ಆತ್ಮಹತ್ಯೆಯ ದಾರಿ ತೊರೆದು ಪ್ರೇಕ್ಷಕರನ್ನು ಗೆಲ್ಲುವ ತಂತ್ರಗಳನ್ನು ಹುಡುಕಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>