ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ನಂದನ ಮಾದರಿ

Last Updated 24 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಧನ್ಯ ಹೊಲೆಯರ ನಂದ; ಹಿಡಿದುದವನನು ಕನಸು ಸ್ವರ್ಣಸಭೆಯಾ ಶೈವತಾಂಡವದ ಕನಸು ||
ಅನ್ಯಚಿಂತೆಗಳನದು ಬಿಡಿಸುತವನಾತ್ಮವನು |
ಚಿನ್ಮಯಕೆ ಸೇರಿಸಿತು – ಮಂಕುತಿಮ್ಮ || 764 ||

ಪದ-ಅರ್ಥ: ಹಿಡಿದುದವನನು=ಹಿಡಿದುದು+ಅವನನು, ಅನ್ಯಚಿಂತೆಗಳನದು=ಅನ್ಯ+ಚಿಂತೆಗಳನು+ಅದು, ಬಿಡಿಸುತವನಾತ್ಮವನು=ಬಿಡಿಸುತ+ಅವನ+ಆತ್ಮವನು.

ವಾಚ್ಯಾರ್ಥ: ಹೊಲೆಯರ ನಂದ ಧನ್ಯ. ಸ್ವರ್ಣಸಭೆಯಲ್ಲಿ ಶಿವನ ತಾಂಡವ ನ್ಯತ್ಯವನ್ನು ಕಾಣುವ ಕನಸು ಅವನನ್ನು ಹಿಡಿಯಿತು. ಅದು ಅವನ ಉಳಿದ ಚಿಂತೆಗಳನ್ನು ಬಿಡಿಸಿ, ಅವನಾತ್ಮವನ್ನು
ಶಾಶ್ವತವಾಗಿಸಿತು.

ವಿವರಣೆ: ಕಗ್ಗದಲ್ಲೊಂದು ಕಥೆ. ಸಮಾಜಕ್ಕೆ ಮಾದರಿಯಾದ, ಈಗಲೂ ಮಾದರಿಯಾಗಬಹುದಾದ ಕಥೆ. ತಮಿಳಿನ ಪೆರಿಯ ಪುರಾಣದಲ್ಲಿ ಅರವತ್ಮೂರು ಜನ ಮಹಾನ್ ಶೈವ ಭಕ್ತರ ಪರಂಪರೆ ಇದೆ. ಆ ಸಂತರನ್ನು ನಾಯನಾರ್‌ಗಳು ಎನ್ನುತ್ತಾರೆ. ಅವರಲ್ಲಿ ಹದಿನೆಂಟನೆಯವರನ್ನು ನಂದನಾರ್ ಅಥವಾ ತಿರುನಾಳೈಪೋವರ್ ನಾಯನಾರ್ ಎಂದು ಕರೆಯುತ್ತಾರೆ. ಅವರ ಹೆಸರು ನಂದ. ಆತ ಅಂದು ಹೊಲೆಯರ ಕುಟುಂಬಕ್ಕೆ ಸೇರಿದವ. ಅವನ ಕಾರ್ಯ ನಗಾರಿ ಮತ್ತು ಇತರ ವಾದ್ಯಗಳಿಗೆ ಚರ್ಮವನ್ನು ಸಿದ್ಧಪಡಿಸುವುದು. ಮತ್ತೆ ಅದರೊಂದಿಗೆ ಹೊಲದಲ್ಲಿ ಕೂಲಿ ಕೆಲಸ. ಅತ್ಯಂತ ಬಡತನದ ಸ್ಥಿತಿಯಲ್ಲಿ ಪುಳೈಪ್ಪಡಿ ಎಂಬ ಗ್ರಾಮದಲ್ಲಿ ಹುಟ್ಟಿ ಬೆಳೆದ ನಂದನಿಗೆ ಒಂದೇ ಕನಸು. ತಾನು ಚಿದಂಬರದಲ್ಲಿ ಶಿವ ತಾಂಡವ ನೃತ್ಯಮಾಡುವುದನ್ನು ಕಾಣಬೇಕು. ಅವನಿಗೆ ಚರ್ಮ ಹದಮಾಡುವಾಗ, ಬೆಳೆ ನಾಟಿಮಾಡುವಾಗ, ರಾಶಿ ಮಾಡುವಾಗ
ಕಾಣುತ್ತಿದ್ದುದು ಶಿವತಾಂಡವ ಮಾತ್ರ. ಅಂದಿನ ಜಾತಿ ವಿಷದ ಮಡುವಿನಲ್ಲಿದ್ದ ನಂದನಿಗೆ ಹೆದರಿಕೆ. ತಾನು ಚಿದಂಬರಂಗೆ ಹೋಗುವುದು ಸರಿಯೇ? ಮೇಲ್ವರ್ಗದವರು ತನ್ನನ್ನು ಬಿಟ್ಟಾರೆಯೆ? ಅಲ್ಲಿಗೆ ಹೋಗಬೇಕೆಂದವನು ನಾಳೆ ಹೋಗುತ್ತೇನೆ, ನಾಳೆ ಹೋಗುತ್ತೇನೆ ಎಂದು ಮುಂದೆ ಹಾಕುತ್ತ ಬಂದ. ಅದಕ್ಕೆ ಮುಂದೆ ಅವನ ಹೆಸರು ತಿರುನಾಳೈಪೋವರ್ ಎಂದಾಯಿತು. ಹಾಗೆಂದರೆ “ಈತ ನಾಳೆ ಹೋಗುತ್ತಾನೆ”. ಅಷ್ಟು ಹಿಂಜರಿದು ಕೊನೆಗೂ ಮನಸ್ಸು ಗಟ್ಟಿ ಮಾಡಿಕೊಂಡು ನಂದ ಚಿದಂಬರಕ್ಕೆ ಹೋದ. ಊರೊಳಗೆ ಹೋಗಲು ಧೈರ್ಯ ಸಾಲದೆ ಬರೀ ನಗರ ಪ್ರದಕ್ಷಿಣೆ ಮಾಡಿ, ದಣಿದು ಊರ ಹೊರಗೆ, ಮರದ ಕೆಳಗೆ ಮಲಗಿ ಬಿಟ್ಟ. ಶಿವ ತನ್ನ ಪರಮಭಕ್ತನ ಏಕಾಗ್ರತೆ, ಭಕ್ತಿಯನ್ನು ಕಂಡು ಮರುದಿನ ಬೆಳಿಗ್ಗೆ ದೇವಸ್ಥಾನದೊಳಗೆ ಬರಲು ಹೇಳಿದ. ದೇವಸ್ಥಾನದಲ್ಲಿದ್ದ ಮೂರು ಸಾವಿರ ಬ್ರಾಹ್ಮಣರಿಗೂ ಅವನನ್ನು ಸ್ವಾಗತಿಸಲು ಹೇಳಿ, ಅವನು ಬಂದಾಗ ಅವನನ್ನು ತನ್ನೊಳಗೆ ಸೇರಿಸಿಕೊಂಡ. ತನ್ನ ಆರಾಧ್ಯದೈವವನ್ನೇ ಸೇರಿಕೊಂಡ ನಂದ ಪರಮಭಕ್ತ ನಾಯನಾರ್ ಆದ. ಇದು ಕಥೆ. ಇದನ್ನು ಕಗ್ಗ ನಮಗೊಂದು ಆದರ್ಶವೆಂದು ನೀಡುತ್ತದೆ. ನಂದನ ಏಕಾಗ್ರತೆ, ತನ್ಮಯತೆ, ಸದಾ ಕಾಲದ ತುಡಿತ ಅವನ ಉಳಿದ ಚಿಂತೆಗಳನ್ನು ಮರೆಸಿಬಿಟ್ಟಿತ್ತು. ಅಷ್ಟೇ ಅಲ್ಲ ಅವನನ್ನು ಚಿನ್ಮಯನನ್ನಾಗಿಸಿತು, ಅಮರನಾಗಿಸಿತು. ಅಮರತ್ವಕ್ಕೆ, ಸಾರ್ಥಕ್ಯಕ್ಕೆ ನಂದನ ಗುಣಗಳೇ ನಮಗೆ ಮಾದರಿ. ಅವು, ಜೀವನಕ್ಕೊಂದು ಪರಮಾದರ್ಶದ ಗುರಿ, ಗುರಿಯ ಮೇಲಿನ ಕಣ್ಣು ತೆಗೆಯದ ತಾದಾತ್ಮ್ಯತೆ, ಸತತ ಪರಿಶ್ರಮ. ಇವು ಎಲ್ಲರಿಗೂ, ಯಾವ ಕಾಲಕ್ಕೂ ಮಾದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT