ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವ ಬದಲಾವಣೆ ಸೂಚಿಸುವುದೇನು?

ಬದಲಾವಣೆಯೊಂದಿಗೆ ಬಿಜೆಪಿ ನಾಯಕತ್ವ ಹೇಗೆ ನಿರಂತರತೆ ಕಾಯ್ದುಕೊಳ್ಳಬಹುದು ಎಂಬುದು ಆಸಕ್ತಿದಾಯಕ
Last Updated 26 ಜುಲೈ 2021, 19:30 IST
ಅಕ್ಷರ ಗಾತ್ರ

ಅಂತೂ ಕಡೆಗೆ, ನಾಯಕತ್ವ ಬದಲಾವಣೆಯನ್ನು ಕರ್ನಾಟಕ ಕಾಣುತ್ತಿದೆ. ಕರ್ನಾಟಕದಲ್ಲಿ ಹೊಸ ಮುಖ್ಯಮಂತ್ರಿಯೊಬ್ಬರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬುದು ನಮಗೆ ಗೊತ್ತು. ಆದರೆ ಈಗಲೂ ಆ ಮುಖ್ಯಮಂತ್ರಿ ಯಾರೆಂಬುದು ನಮಗೆ ಖಚಿತವಿಲ್ಲ! ಹೀಗಾಗಿ, ಈ ಸಂಕ್ರಮಣ ಕಾಲಘಟ್ಟದ ಮಧ್ಯದಲ್ಲಿದ್ದೇವೆ. ನಿರ್ಗಮನದ ಬಗ್ಗೆ ಖಚಿತತೆ ಇದೆ. ಆದರೆ ಹೊಸಬರ ಆಗಮನದ ಬಗ್ಗೆ ಅನಿಶ್ಚಯವಿದೆ!

ಬಿ.ಎಸ್‌. ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಈಗ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುತ್ತಿರುವ ಈ ಸಂದರ್ಭದಲ್ಲಿ ಹಲವು ವಿಚಾರಗಳು ಮುನ್ನೆಲೆಗೆ ಬರುತ್ತವೆ. ಅವರು ಮುಖ್ಯಮಂತ್ರಿಯಾಗಿದ್ದ ಈ ನಾಲ್ಕೂ ಅವಧಿಗಳು ಏರಿಳಿತಗಳಿಂದ ಕೂಡಿದ್ದವು. ಅದರಲ್ಲೂ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭವು ವಿಶೇಷ ಘಟನೆಗಳಿಂದ ಕೂಡಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಆಯ್ದ ಶಾಸಕರ ಗುಂಪೊಂದರ ಬಂಡಾಯದಿಂದಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕುಸಿದು ಯಡಿಯೂರಪ್ಪನವರು ಮುಖ್ಯಮಂತ್ರಿಯಾದರು.

ಅಧಿಕಾರದ ಗದ್ದುಗೆ ಏರಿದಾಗ ಯಡಿಯೂರಪ್ಪ ಅವರ ವಯಸ್ಸು, ಸಾರ್ವಜನಿಕ ಅಧಿಕಾರ ಸ್ಥಾನಗಳನ್ನು ಹೊಂದಲು ಅವರ ಪಕ್ಷವು ನಿಗದಿ ಮಾಡಿದ್ದಂತಹ ವಯಸ್ಸನ್ನು ಮೀರಿತ್ತು. ಪಕ್ಷದಲ್ಲಿನ ಹಳೆಯ ಕಾಲದ ನಿಷ್ಠರು ಹಾಗೂ ಹೊಸದಾಗಿ ಸೇರ್ಪಡೆಯಾದವರ ನಡುವೆ ಅವರದು ಕಠಿಣ ಸಮತೋಲನದ ನಡಿಗೆಯಾಗಿತ್ತು. ಈ ಹಿಂದಿನಂತೆ, ಸರ್ಕಾರವನ್ನು ನಡೆಸುವಲ್ಲಿ ಅವರದೇ ಮಾರ್ಗ ಯಡಿಯೂರಪ್ಪ ಅವರಿಗೆ ಇದ್ದಂತಿರಲಿಲ್ಲ. ಅವರ ಜೊತೆಗೆ ಇದ್ದ ಉಪಮುಖ್ಯಮಂತ್ರಿಗಳ ದಂಡು, ಯಡಿಯೂರಪ್ಪ ಅವರದೇ ಆಯ್ಕೆ ಎಂದೇನಾಗಿರಲಿಲ್ಲ. ಪಕ್ಷದ ನಾಯಕತ್ವದ ನಿರ್ದೇಶನಗಳ ಆಧಾರದಲ್ಲಿ ಸಚಿವ ಖಾತೆಗಳನ್ನು ಅವರು ಹಂಚಿದ್ದರು. ಹಲವು ಹಂತಗಳಲ್ಲಿ, ಅವರು ಪಕ್ಷದ ಕೇಂದ್ರ ನಾಯಕತ್ವದ ನಿರ್ದೇಶನಗಳಿಗೆ ಮಣಿದು ಅವುಗಳನ್ನು ಅನುಷ್ಠಾನಕ್ಕೆ ತರಬೇಕಾಗುತ್ತಿತ್ತು. ಈ ಅವಧಿಯಲ್ಲಿ, ಈ ಹಿಂದೆ ಅವರ ಟ್ರೇಡ್ ಮಾರ್ಕ್ ಎನಿಸಿದ್ದ ಎಂದಿನ ಭಾವೋದ್ರೇಕ, ಹುರುಪು ಹಾಗೂ ಉತ್ಸಾಹಗಳಿಲ್ಲದೆ ಸರ್ಕಾರವನ್ನು ಅವರು ಮುನ್ನಡೆಸುತ್ತಿದ್ದದ್ದು ಕಂಡುಬಂದಿತ್ತು. ಇನ್ನೇನು ಅಧಿಕಾರದಿಂದ ನಿರ್ಗಮಿಸುವುದು ಅವಶ್ಯಕವಾಗುತ್ತದೆ ಎಂಬುದು ಮುಖ್ಯಮಂತ್ರಿಯವರಿಗೆ ಗೊತ್ತಿದೆಯೇನೋ ಎಂಬಂತೆ ಭಾಸವಾಗುವಂತಿತ್ತು.

ಆದರೆ, ಈಗಿನ ಈ ಬದಲಾವಣೆ ತನ್ನದೇ ವಿಶಿಷ್ಟ ಅಂಶಗಳನ್ನು ಒಳಗೊಂಡಿದೆ. ಈ ಹಿಂದೆ ಬಿಜೆಪಿಯಲ್ಲಿ ಕಂಡುಬರುತ್ತಿದ್ದಂತಹ ರೀತಿಯ ಬದಲಾವಣೆ ಅಲ್ಲ ಇದು. ಇದು, ಪಕ್ಷದ ಕೇಂದ್ರೀಯ ನಾಯಕತ್ವದ ಸ್ಪಷ್ಟ ನಿರ್ದೇಶನ ದಲ್ಲಿ ಆಗುತ್ತಿರುವಂತಹ ಅಧಿಕಾರ ಹಸ್ತಾಂತರ. ಹೀಗಿದ್ದೂ, ಈ ಅಧಿಕಾರ ಹಸ್ತಾಂತರದಲ್ಲೂ ನಿರ್ದಿಷ್ಟವಾಗಿ ಕರ್ನಾಟಕದ ವಿಶಿಷ್ಟ ಗುಣವಿದೆ. ವಿಂಧ್ಯದ ದಕ್ಷಿಣದಲ್ಲಿ ಬಿಜೆಪಿಗಿರುವ ಏಕೈಕ ಕೋಟೆ ಎಂದರೆ ಕರ್ನಾಟಕ. ಈ ಹಿಂದೆ, ಯಡಿಯೂರಪ್ಪ ಅವರನ್ನು ನಯವಾಗಿ ಮುಖ್ಯಮಂತ್ರಿ ಸ್ಥಾನದಿಂದ ಹೊರಗಿಡಲಾಗಿತ್ತು ಹಾಗೂ ಇದು 2012ರಲ್ಲಿ ಪಕ್ಷ ಒಡೆಯಲು ಕಾರಣವಾಗಿತ್ತು. ಆ 2012, ಈಗಿನ 2021 ಅಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು.

ಕರ್ನಾಟಕದಲ್ಲಿ ಬಿಜೆಪಿಯ ಹುಟ್ಟು ಹಾಗೂ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರದು ಪ್ರಮುಖ ಪಾತ್ರ. ಅವರು, ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರೂ ಹೌದು. ಈ ಎಲ್ಲಾ ಅಂಶಗಳು, ಪಕ್ಷಕ್ಕೆ ಮತ್ತೊಂದು ರೀತಿಯಲ್ಲಿ ಯಾವುದೇ ಹಾನಿ ಆಗದಂತೆ ಈ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಅಳೆದೂ ಸುರಿದು ಮಾಡಬೇಕಾದುದರ ಅಗತ್ಯಕ್ಕೆ ಕಾರಣವಾಗಿವೆ. ಹೀಗಾಗಿ, ಸುದೀರ್ಘ ಕಾಲದ ಕಾರ್ಯತಂತ್ರ ಹಾಗೂ ಅತ್ಯಂತ ಕಠಿಣ ಸಂಧಾನ ಪ್ರಕ್ರಿಯೆಗಳ ಸಂಕಟಗಳನ್ನೂ ಇದು ಒಳ ಗೊಂಡಿದೆ. ಅಂತಿಮವಾದ ಅಧಿಕಾರ ಹಸ್ತಾಂತರದ ಕಡೆಯ ಹೆಜ್ಜೆಗಳನ್ನು ದಾಟಲಾಗಿದೆಯೇ ಎಂಬುದು ಇನ್ನೂ ಖಚಿತವಿಲ್ಲ. ಮುಂದಿನ ಕೆಲ ದಿನಗಳು ಇದಕ್ಕೆ ಸೂಚಕವಾಗಲಿವೆ.

ಕಳೆದ ಕೆಲವು ದಿನಗಳಿಂದ ಯಡಿಯೂರಪ್ಪ ಅವರ ಮಾತುಗಳು ಹಾಗೂ ತಮ್ಮ ಸರ್ಕಾರವು ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ತಮ್ಮ ‘ವಿದಾಯ ಭಾಷಣ’ದಲ್ಲಿ ಅವರು ಆಡಿದ ಮಾತುಗಳು ಅವರ ನಿಲುವಿಗೆ ಸಾಕಷ್ಟು ಸೂಚನೆಗಳನ್ನು ಒದಗಿಸಿವೆ. ಪಕ್ಷದ ಹೈಕಮಾಂಡ್‌ ನಿರ್ದೇಶಿಸಿದಾಗ ತಾವು ಅಧಿಕಾರದಿಂದ ಕೆಳಗಿಳಿಯುವುದಾಗಿ ಅವರು ಸ್ಪಷ್ಟಪಡಿಸಿದ್ದರು. ರಾಜ್ಯದ ಹೊರಗೆ ಯಾವುದೇ ಆಲಂಕಾರಿಕ ಹುದ್ದೆಯನ್ನು ಒಪ್ಪಿಕೊಳ್ಳುವುದಕ್ಕೂ ಅವರು ಸಿದ್ಧರಿಲ್ಲವೆಂಬುದು ಸ್ಪಷ್ಟ. ಪಕ್ಷಕ್ಕಾಗಿ ದುಡಿಯಲು ಹಾಗೂ ಮುಂದಿನ ಚುನಾವಣೆ ಗಳಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವುದಕ್ಕೆ ತಾವು ಬದ್ಧ ಎಂದು ಅವರು ಹೇಳಿದ್ದಾರೆ. ಪಕ್ಷದ ಹೈಕಮಾಂಡ್ ಕುರಿತಾಗಿ ತಮ್ಮ ವಿಶ್ವಾಸವನ್ನೂ ಅವರು ಪುನರುಚ್ಚರಿಸಿದ್ದಾರೆ. ಅವರು ಅಧಿಕಾರ ತ್ಯಾಗ ಮಾತ್ರ ಮಾಡುತ್ತಿದ್ದಾರೆ, ಸಕ್ರಿಯ ರಾಜಕಾರಣದಿಂದ ದೂರವಾಗುತ್ತಿಲ್ಲ ಎಂಬುದು ಸ್ಪಷ್ಟ.

ಕರ್ನಾಟಕ ರಾಜಕಾರಣದಲ್ಲಿ ಜಾತಿಯ ಅಂಶದ ಬಗ್ಗೆ ಸಾಕಷ್ಟು ಮಾತುಗಳು ಬಂದಿವೆ. 1990ರ ದಶಕದಿಂದ ಹಲವು ಕಾರಣಗಳಿಗಾಗಿ ಲಿಂಗಾಯತ ಮತಗಳು ಬಿಜೆಪಿಯತ್ತ ಚಲಿಸಿದ್ದವು ಎಂಬುದನ್ನು ಗಮನಕ್ಕೆ ತೆಗೆದು ಕೊಳ್ಳಬೇಕು. ರಾಮಕೃಷ್ಣ ಹೆಗಡೆ ಅವರ ‘ಲೋಕಶಕ್ತಿ’ ಜೊತೆಗಿನ ಮೈತ್ರಿಯು, ಈ ಸಮುದಾಯದ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಮಹತ್ವದ ಪಾತ್ರ ವಹಿಸಿತು. ನಾಯಕತ್ವದ ವಿಚಾರವು ಮಹತ್ವದ ಅಂಶವಾಗಿದ್ದರೂ, ಬೆಂಬಲ ಗಳಿಸಿಕೊಳ್ಳುವಲ್ಲಿ ಬಿಜೆಪಿಯ ಮೂಲ ಸಿದ್ಧಾಂತಗಳ ಪರಿಣಾಮವನ್ನೂ ಗಮನಕ್ಕೆ ತೆಗೆದುಕೊಳ್ಳದೇ ಇರುವುದು ಸಾಧ್ಯವಿಲ್ಲ. ಹೀಗಾಗಿ, ಲಿಂಗಾಯತ ಸಮುದಾಯದ ಪ್ರಮುಖ ನಾಯಕರೊಬ್ಬರು ಅಧಿಕಾರದಿಂದ ನಿರ್ಗಮಿಸುತ್ತಿದ್ದರೂ, ಇದರಿಂದ ಸಮುದಾಯವು ಬಿಜೆಪಿಯಿಂದ ಸಹಜವಾಗಿ ದೂರವಾಗುತ್ತದೆ ಎಂದೇನೂ ಇಲ್ಲ. ಲಿಂಗಾಯತ ಸಮುದಾಯದ ಬೆಂಬಲವು ಬರೀ ನಾಯಕತ್ವದ ಅಂಶವನ್ನಷ್ಟೇ ಆಧರಿಸಿಲ್ಲ.

ಯಡಿಯೂರಪ್ಪ ಅವರ ಉತ್ತರಾಧಿಕಾರಿಯ ಬಗ್ಗೆ ಬಿಜೆಪಿ ಕೈಗೊಳ್ಳುವ ನಿರ್ಧಾರದ ಬಗ್ಗೆ ಉಸಿರು ಬಿಗಿ ಹಿಡಿದು ಕಾಯುತ್ತಿರುವಾಗಲೇ ಉತ್ತರಾಧಿಕಾರಿಯ ಬಗ್ಗೆ ಕೆಲವು ಅಂಶಗಳು ನಿಚ್ಚಳವಾಗುತ್ತಿವೆ. ಈ ಉತ್ತರಾಧಿ ಕಾರಿಯು, ಪಕ್ಷದ ಹೈಕಮಾಂಡ್ ಸ್ವತಃ ಜತನದಿಂದ ಮಾಡಿದ ಆಯ್ಕೆಯಾಗಿರುತ್ತದೆ. ಇಂತಹ ಪ್ರಕಟಣೆಗಳನ್ನು ಮಾಡುವಾಗ ಒಂದಿಷ್ಟು ಅಚ್ಚರಿಗಳನ್ನು ಹೊರಹಾಕುವಲ್ಲಿಯೂ ಬಿಜೆಪಿ ನಾಯಕತ್ವ ಹೆಸರುವಾಸಿ. ಕರ್ನಾಟಕದ ಹೊಸ ಮುಖ್ಯಮಂತ್ರಿ ಯಾರೇ ಆಗಿರಲಿ ಅವರು ಪಕ್ಷದ ಹೈಕಮಾಂಡ್‌ನ ಸದ್ಭಾವನೆ ಹಾಗೂ ವಿಶ್ವಾಸವನ್ನು ಹೊಂದಿದವರಾಗಿರುತ್ತಾರೆ. ಹಿಂದಿನದರಿಂದ ಕಳಚಿಕೊಳ್ಳುವುದಕ್ಕಾಗಿ ನಾಯಕತ್ವ ಬದಲಾವಣೆಯನ್ನು ಒಂದು ಅವಕಾಶವನ್ನಾಗಿ ಬಿಜೆಪಿ ಯಾವಾಗಲೂ ಬಳಕೆ ಮಾಡಿಕೊಂಡಿದೆ. ಕರ್ನಾಟಕದಲ್ಲೂ ಅದನ್ನು ಪ್ರಯತ್ನಿಸಲಾಗುತ್ತದೆಯೇ ಎಂಬ ಬಗ್ಗೆ ಖಾತರಿ ಇಲ್ಲ. ಕಳೆದ ದಶಕದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಪ್ರಮುಖರ ದಂಡೇ ಬಿಜೆಪಿ ಶಾಸಕಾಂಗ ಪಕ್ಷದಲ್ಲಿ ಇರುವುದರಿಂದ, ಹಿಂದಿನದರಿಂದ ಕಳಚಿಕೊಳ್ಳುವ ಪ್ರಕ್ರಿಯೆ ಎಂದರೆನಿರೀಕ್ಷಿತವಲ್ಲದ ಬಿಕ್ಕಟ್ಟುಗಳಿಗೆ ದಾರಿಯಾಗದೇ ಇರುವುದು ಸಾಧ್ಯವಿಲ್ಲ.

ಬದಲಾವಣೆಯೊಂದಿಗೆ ನಿರಂತರತೆಯನ್ನು ಬಿಜೆಪಿ ನಾಯಕತ್ವ ಹೇಗೆ ಕಾಯ್ದುಕೊಳ್ಳುತ್ತದೆ ಎಂಬುದು ಆಸಕ್ತಿದಾಯಕ ಸಂಗತಿಯಾಗಲಿದೆ. ನಿರ್ಗಮಿಸುತ್ತಿರುವ ಮುಖ್ಯಮಂತ್ರಿ ನಿಮ್ಮ ಸುತ್ತಲೇ ಇರುತ್ತಾರೆ ಹಾಗೂ ರಾಜಕೀಯವಾಗಿ ಸಕ್ರಿಯರಾಗಿರುತ್ತಾರೆ ಎಂಬುದನ್ನು ಈ ನಿರಂತರತೆಯು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ ಹೊಸ ಮಾರ್ಗವನ್ನು ಸೃಷ್ಟಿಸಬೇಕೆನ್ನುವ ನಾಯಕತ್ವದ ಹಂಬಲವನ್ನು ಗಮನಿಸಿದಲ್ಲಿ ಬದಲಾವಣೆಯೂ ಇರಲಿದೆ. ಉದಯವಾಗಲಿರುವ ವೈರುಧ್ಯಗಳ ಜೊತೆಗೆ ಹೊಂದಿಕೊಳ್ಳುವುದು ದೊಡ್ಡ ಸವಾಲಾಗಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೂ ಈ ಬೆಳವಣಿಗೆಗಳನ್ನು ಹತ್ತಿರದಿಂದಲೇ ಗಮನಿಸುತ್ತಿರುತ್ತವೆ. ಬರಲಿರುವ ದಿನಗಳಲ್ಲಿ ರಾಜ್ಯದ ರಾಜಕೀಯವು ಆಸಕ್ತಿದಾಯಕವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT