ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಂತ ಶೆಟ್ಟಿ ಅಂಕಣ| ಆರ್ಟಿಫಿಷಿಯಲ್ ಇಂಟೆಲಿಜನ್ಸ್: ಮನುಕುಲದ ಮುಂದಿನ ದಿನಗಳು

‘ಚಾಟ್ ಜಿಪಿಟಿ’ ಮುಂದಿನ ದಿನಗಳಲ್ಲಿ ತರಬಹುದಾದ ತಲ್ಲಣ ಏನಿರಬಹುದು?
Last Updated 23 ಜನವರಿ 2023, 19:31 IST
ಅಕ್ಷರ ಗಾತ್ರ

ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನದ ಪ್ರಪಂಚದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹರಿದಾಡುತ್ತಿರುವುದು ಎರಡೇ ಸುದ್ದಿಗಳು. ಮೊದಲನೆಯದು, ಆರ್ಥಿಕ ಹಿಂಜರಿತದ ಭೀತಿಯಲ್ಲಿ ನವೋದ್ಯಮಗಳಿಂದ ಹಿಡಿದು ಗೂಗಲ್, ಅಮೆಜಾನ್, ಮೆಟಾದಂತಹ ಫಾರ್ಚ್ಯೂನ್ 500 ಕಂಪನಿಗಳವರೆಗೆ ಎಲ್ಲೆಡೆ ನಡೆಯುತ್ತಿರುವ, ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಸುದ್ದಿ. ಎರಡನೆಯದು, ಎಲ್ಲೆಡೆ ಸಂಚಲನ ಮೂಡಿಸುತ್ತಿರುವ ಕಟ್ಟು ಜಾಣ್ಮೆಯ (ಆರ್ಟಿಫಿಷಿಯಲ್ ಇಂಟೆಲಿಜನ್ಸ್) ಹೊಚ್ಚ ಹೊಸ ಸಾಧನ ‘ಚಾಟ್ ಜಿಪಿಟಿ’ ಹಾಗೂ ಅದು ಮತ್ತು ಅದರಂತಹ ತಂತ್ರಜ್ಞಾನಗಳು ಇನ್ನು ಕೆಲವೇ ವರ್ಷಗಳಲ್ಲಿ ಉಂಟುಮಾಡಬಹುದಾದ ಸಾಮಾಜಿಕ, ಆರ್ಥಿಕ ತಲ್ಲಣಗಳ ಕುರಿತಾದದ್ದು.

ಮೊದಲನೆಯ ಸುದ್ದಿಯಾದರೂ ಆಗಾಗ ಎದುರಾಗುವ ಆರ್ಥಿಕ ಹಿಂಜರಿತಕ್ಕೆ ಸಂಬಂಧಿಸಿದ್ದು. ಹೀಗಾಗಿ ಅಲ್ಲೇನೂ ಹೊಸತಿಲ್ಲ ಅಂದುಕೊಳ್ಳಬಹುದು. ಆದರೆ ಎರಡನೆಯ ಬೆಳವಣಿಗೆ, ಕೆಲ ದಶಕಗಳಲ್ಲಿ ತಂತ್ರಜ್ಞಾನವು ಮನುಕುಲದ ಮೇಲೆಯೇ ಸವಾರಿ ಮಾಡಬಹುದು ಅನ್ನುವ ಆತಂಕವನ್ನು ಗಟ್ಟಿಗೊಳಿಸುವಂತಿದೆ. ಏನಿದು ಚಾಟ್ ಜಿಪಿಟಿ?

ವಸಂತ ಶೆಟ್ಟಿ
ವಸಂತ ಶೆಟ್ಟಿ

ಸರಳವಾಗಿ ಹೇಳಬೇಕೆಂದರೆ, ಚಾಟ್ ಜಿಪಿಟಿ ಅನ್ನುವುದು ಬಳಸುಗರು ಕೇಳುವ ಪ್ರಶ್ನೆಗಳಿಗೆ ಕ್ಷಣದಲ್ಲೇ ಪಠ್ಯದ ರೂಪದಲ್ಲಿ ಮನುಷ್ಯರ ಭಾಷೆಯಲ್ಲಿ ಉತ್ತರವನ್ನು ಕೊಡುವ ಒಂದು ಎ.ಐ. ತಂತ್ರಜ್ಞಾನ. ಇದೊಂದು ಜಾಲತಾಣದ ರೂಪದಲ್ಲಿದೆ. ಈಗಾಗಲೇ ಗೂಗಲ್ ಥರದ ಹುಡುಕಾಟದ ವೇದಿಕೆ ಇರುವಾಗ ಇದು ಅದಕ್ಕಿಂತ ಹೇಗೆ ಬೇರೆಯಾದದ್ದು ಅನ್ನುವ ಪ್ರಶ್ನೆ ಎದುರಾದರೆ ಅದಕ್ಕಿರುವ ಸರಳ ಉತ್ತರ ಇಷ್ಟೇ: ಗೂಗಲ್ ನಿಮ್ಮ ಹುಡುಕಾಟಕ್ಕೆ ಸಾವಿರಾರು, ಲಕ್ಷಾಂತರ ತಾಣಗಳನ್ನು ಸೂಚಿಸಬಹುದು. ಅಲ್ಲಿಂದ ನಿಮಗೆ ಬೇಕಾದ ಮಾಹಿತಿ ಅರಸಿ, ಆಯ್ದು ಕೊಳ್ಳುವುದು ನಿಮ್ಮದೇ ಕೆಲಸ. ಆದರೆ ಚಾಟ್ ಜಿಪಿಟಿ ಹಾಗಲ್ಲ. ಅದು ವೈಯಕ್ತಿಕ ಸಹಾಯಕನೊಬ್ಬನ ಜೊತೆ ಕೂತು ಮಾತನಾಡುವಂತಹ ಅನುಭವ ನೀಡುತ್ತದೆ. ಇಲ್ಲಿ ಕೇಳಿದ ಪ್ರಶ್ನೆಗಳಿಗೆ ಕ್ಷಣದಲ್ಲೇ ಉತ್ತರ ಸಿಗುತ್ತದೆ. ಸಿಕ್ಕ ಉತ್ತರದ ಮೇಲೆ ಇನ್ನಷ್ಟು ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಅದು ಒಂದು ಆಪ್ತ ಮಾತುಕತೆ, ಚರ್ಚೆಯ ರೀತಿಯಲ್ಲಿ ಉತ್ತರಿಸುತ್ತಾ ಹೋಗುತ್ತದೆ. ಅದು ಉತ್ತರಿಸುವ ರೀತಿ, ವಾಕ್ಯಗಳ ರಚನೆ ಎಲ್ಲವೂ ಹೇಗಿರುತ್ತವೆ ಅಂದರೆ, ನೀವು ನಿಮ್ಮ ಅಗತ್ಯಗಳನ್ನು, ತೊಂದರೆಗಳನ್ನು ಒಬ್ಬ ಕೌನ್ಸಿಲರ್ ಬಳಿಯೋ ವಕೀಲರ ಬಳಿಯೋ ವೈದ್ಯರ ಬಳಿಯೋ ಮಾರ್ಕೆಟಿಂಗ್ ಪರಿಣತರ ಬಳಿಯೋ ಹೇಳಿಕೊಂಡು ಪರಿಹಾರ ಪಡೆಯುವ ರೂಪದಲ್ಲಿರುತ್ತವೆ.

ಒಂದು ಕವಿತೆ ಬರೆ ಅಂದರೆ ಅದು ಬರೆಯುತ್ತೆ. ಶಿಲಾಯುಗದ ಒಬ್ಬ ಮನುಷ್ಯನ ಬಗ್ಗೆ ಕತೆ ಬರೆ ಅಂದರೆ ಹೊಚ್ಚ ಹೊಸ ಕತೆಯೊಂದನ್ನು ಹೊಸೆಯುತ್ತೆ. ಯಾವುದೋ ಸಮಸ್ಯೆಗೆ ಸಾಫ್ಟ್‌ವೇರ್ ಕೋಡ್ ಬರೆ ಅಂದರೆ ಬರೆದು ಎದುರಿಗಿಡುತ್ತೆ. ನಿಮ್ಮ ಸಂಸ್ಥೆಯ ಪಾಲಿಸಿ, ಮಾರ್ಕೆಟಿಂಗ್‌ನಂತಹ ವಿಷಯಗಳ ಬಗ್ಗೆ ಒಂದು ನಿಖರವಾದ ಯೋಜನೆ ಕೊಡು ಅಂದರೆ ಕ್ಷಣದಲ್ಲೇ ಕೊಡುತ್ತೆ. ಇಂಟರ್‌ನೆಟ್‌ನಲ್ಲಿ ನಾಲ್ಕೈದು ದಶಕಗಳಲ್ಲಿ ಹುಟ್ಟುಹಾಕಲಾದ ಗಿಗಾ ಬೈಟ್‍ಗಟ್ಟಲೆ ಮಾಹಿತಿಯನ್ನು ಇದಕ್ಕೆ ಉಣಬಡಿಸಿ ಇದರ ಜಾಣ್ಮೆಯನ್ನು ಕಟ್ಟಲಾಗಿದೆ. ಇದು ಬರುವ ದಿನಗಳಲ್ಲಿ ಬಳಸುಗರು ಕೇಳುವ ಪ್ರಶ್ನೆ, ಕೊಡುವ ಮಾಹಿತಿಯನ್ನು ಬಳಸಿಕೊಂಡು ಇನ್ನಷ್ಟು ತಿಳಿವಳಿಕೆ ಹೆಚ್ಚಿಸಿಕೊಳ್ಳುವ ಕೆಲಸ ಮಾಡಬಹುದು.

ಸರಿ ಇಂತಹ ಹೊಸ ತಂತ್ರಜ್ಞಾನ ಬರುವುದು ಸಹಜ. ಬಂದಾಗಲೆಲ್ಲ ಮನುಕುಲ ಒಗ್ಗಿಕೊಳ್ಳುತ್ತಲೇ ಬಂದಿದೆ. ಚಾಟ್ ಜಿಪಿಟಿ ಮತ್ತಿತರ ಎ.ಐ. ತಂತ್ರಜ್ಞಾನಗಳು ದೊಡ್ಡಮಟ್ಟದ ಸಾಮಾಜಿಕ, ಆರ್ಥಿಕ ತಲ್ಲಣಗಳನ್ನು ಉಂಟು ಮಾಡಬಹುದು ಅನ್ನುವ ಮಾತು ಸರಿಯೇ ಅನ್ನುವ ಪ್ರಶ್ನೆ ಹಲವರಲ್ಲಿದೆ. ಈ ತಂತ್ರಜ್ಞಾನ ಈಗಷ್ಟೇ ಕಣ್ಣುಬಿಡುತ್ತಿರುವುದರಿಂದ ಅದರ ಪರಿಣಾಮ
ಹೀಗೆಯೇ ಆಗಲಿದೆ ಎಂದು ಹೇಳಲಾಗಲಿಕ್ಕಿಲ್ಲ ಅಂದು ಕೊಳ್ಳೋಣ. ಆದರೆ ಅದರ ಕುರಿತು ಕೆಲವು ಮುಖ್ಯವಾದ ಆತಂಕಗಳ ಬಗ್ಗೆ ಚರ್ಚೆಯಾಗುತ್ತಿದೆ. ಏನವು?

ಕೆಲಸಗಳೆತ: ಡಿಸೈನ್, ಮಾರ್ಕೆಟಿಂಗ್, ಎಲ್ಲ ರೀತಿಯ ಬರವಣಿಗೆ, ಕೌನ್ಸೆಲಿಂಗ್, ಗ್ರಾಹಕ ಸೇವೆ, ಡೇಟಾ ಎಂಟ್ರಿ, ಅನುವಾದ, ತಯಾರಿಕಾ ವಲಯ, ವಾಹನ ಚಾಲನೆ ಹೀಗೆ ಹಲವಾರು ಬಗೆಯ ಕೆಲಸಗಳಲ್ಲಿ ತೊಡಗಿಕೊಂಡವರ ಕೆಲಸವನ್ನು ಇಂತಹ ಎ.ಐ. ತಂತ್ರಜ್ಞಾನ ದೊಡ್ಡಮಟ್ಟದಲ್ಲಿ ಕಳೆದು ನಿರುದ್ಯೋಗದ ಸಮಸ್ಯೆ ಉಂಟು ಮಾಡಬಹುದು.

ಆರ್ಥಿಕ ತಾರತಮ್ಯದ ಹೆಚ್ಚಳ: ಇಂತಹ ಎ.ಐ. ತಂತ್ರಜ್ಞಾನಗಳು ಹೆಚ್ಚಿದಂತೆ ಇವು ಹೆಚ್ಚು ಕೌಶಲದ ಅಗತ್ಯವಿಲ್ಲದ ಕೆಳಮಟ್ಟದ ಕೆಲಸಗಳೆಲ್ಲವನ್ನೂ ಆಟೊಮೇಟ್ ಮಾಡುತ್ತ ಹೋಗುವುದರಿಂದ ಈ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳಲಾಗದ ಹಲವರು ನಿರುದ್ಯೋಗಿಗಳಾಗಬಹುದು. ಇಂತಹ ತಂತ್ರ ಜ್ಞಾನಗಳ ಮೇಲೆ ಅವಲಂಬನೆ ಹೆಚ್ಚಿದಂತೆ ಸ್ಪಷ್ಟವಾಗಿ, ವಸ್ತುನಿಷ್ಠವಾಗಿ ಯೋಚಿಸುವ ಶಕ್ತಿಯನ್ನು ಕೆಲವರು ಕಳೆದುಕೊಳ್ಳಬಹುದು ಮತ್ತು ಅದರಿಂದಾಗಿ ತಂತ್ರ ಜ್ಞಾನದ ತಲುಪುವಿಕೆ ಹೆಚ್ಚುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ಅವರು ಪಾಲ್ಗೊಳ್ಳುವ ಅವಕಾಶಗಳು ಕಡಿಮೆಯಾಗುತ್ತ ಹೋಗಬಹುದು.

ಚಿಕ್ಕ ಮತ್ತು ಮಧ್ಯಮ ಗಾತ್ರದ ಹಲವಾರು ಉದ್ದಿಮೆಗಳು ಇಂತಹ ತಂತ್ರಜ್ಞಾನ ತರುವ ದಕ್ಷತೆಯ ಎದುರು ಸೆಣಸಲಾಗದೆ ಮುಚ್ಚಬಹುದು ಮತ್ತು ಇವು ದೊಡ್ಡ ಗಾತ್ರದ ಉದ್ದಿಮೆಗಳ ಕೈಯನ್ನು ಇನ್ನಷ್ಟು ಬಲಪಡಿಸಬಹುದು. ಇವೆಲ್ಲವೂ ಆರ್ಥಿಕ ತಾರತಮ್ಯದ ಹೆಚ್ಚಳಕ್ಕೆ ಕಾರಣವಾಗಬಹುದು

ನೈತಿಕ ಬಿಕ್ಕಟ್ಟುಗಳು: ಈ ಕಟ್ಟು ಜಾಣ್ಮೆ ಇದಕ್ಕೆ ಉಣಬಡಿಸುವ ಮಾಹಿತಿಯ ಮೇಲೆಯೇ ತನ್ನ ತಿಳಿವಿನ ನೆಲೆಯನ್ನು ಹೊಂದಿರುವುದರಿಂದ ಇಂತಹ ಮಾಹಿತಿ ಯಲ್ಲಿ ಇರಬಹುದಾದ, ಸೇರಿಕೊಳ್ಳಬಹುದಾದ ಜನಾಂಗೀಯ, ಧಾರ್ಮಿಕ ಮತ್ತು ಜಾತಿಯ ಪಕ್ಷಪಾತದ ನಿಲುವುಗಳು, ಮೇಲುಕೀಳಿನ ಭಾವನೆಗಳು ಈ ತಂತ್ರಜ್ಞಾನದ ಮೂಲಕ ಇನ್ನಷ್ಟು ವ್ಯಾಪಕವಾಗಿ ಹಬ್ಬ ಬಹುದು. ಅಲ್ಲದೆ ಸುಳ್ಳುಸುದ್ದಿಗಳು ಇಂಟರ್‌ನೆಟ್ ಮೂಲಕ ವ್ಯಾಪಕವಾಗಿ ಹಬ್ಬಿ ಸಮಾಜದಲ್ಲಿ ಬಿರುಕು ಮೂಡಿಸುವುದನ್ನು ಈಗಾಗಲೇ ನೋಡುತ್ತಿರುವಾಗ, ಇಂತಹ ಹುಸಿಸುದ್ದಿಗಳನ್ನು ವ್ಯವಸ್ಥಿತವಾಗಿ ಕಟ್ಟುವ ಶಕ್ತಿಯಿರುವವರು ಈ ತಂತ್ರಜ್ಞಾನದ ಮೆದುಳನ್ನು ತೊಳೆಯದಂತೆ ಕಾಯುವುದು ಹೇಗೆ ಅನ್ನುವಂತಹ ನೈತಿಕ ಪ್ರಶ್ನೆಗಳು ನಮ್ಮ ಮುಂದಿವೆ.

ವೈಯಕ್ತಿಕ ಮಾಹಿತಿ ಮತ್ತು ಖಾಸಗಿತನದ ಸುರಕ್ಷೆ: ಇಂತಹ ಎ.ಐ. ತಂತ್ರಜ್ಞಾನಗಳು ಹೆಚ್ಚಿದಂತೆ ಅವುಗಳಿಗೆ ಉಣಿಸಲಾಗುವ ಗೋಪ್ಯ, ವೈಯಕ್ತಿಕ ಮಾಹಿತಿಯ ಪ್ರಮಾಣವೂ ಏರುತ್ತಲೇ ಹೋಗಬಹುದು. ಇವು ಹೆಚ್ಚಿನ ಸೈಬರ್ ದಾಳಿ, ಮಾಹಿತಿ ಕಳ್ಳತನ ಮತ್ತು ಸರ್ವಾಧಿಕಾರಿ ಸರ್ಕಾರಗಳು ಜನರ ಮೇಲೆ ಇನ್ನೂ ಹೆಚ್ಚಿನ ಕಣ್ಗಾವಲು ಇರಿಸುವುದನ್ನು ಸಾಧ್ಯವಾಗಿಸಬಹುದು.

ಹಾಗಿದ್ದರೆ ಇಂತಹ ತಂತ್ರಜ್ಞಾನದಿಂದ ಒಳಿತೇನೂ ಇಲ್ಲವೇ ಅನ್ನುವ ಪ್ರಶ್ನೆ ಎದುರಾಗಬಹುದು. ಖಂಡಿತವಾಗಿ ಒಳಿತೂ ಇದೆ. ಇಂತಹ ತಂತ್ರಜ್ಞಾನವನ್ನು ಬಳಸಿ ಮಾಹಿತಿ, ಜ್ಞಾನವನ್ನು ಹೆಚ್ಚೆಚ್ಚು ಜನರಿಗೆ ಹೆಚ್ಚು ಸುಲಭವಾಗಿ ತಲುಪಿಸಬಹುದು. ಸರ್ಕಾರವೊಂದು ಒಂದೇ ಭಾಷೆಯಲ್ಲಿ ಕಾನೂನುಗಳನ್ನು ರಚಿಸುತ್ತೇವೆ ಅಂದರೆ, ಇಂತಹ ಅನುವಾದ ತಂತ್ರಜ್ಞಾನದ ಸಹಾಯದೊಂದಿಗೆ ಕ್ಷಣದಲ್ಲೇ ಅಂತಹ ನೀತಿಯನ್ನು ಸಾಮಾನ್ಯ ಜನರಿಗೂ ಅರ್ಥವಾಗುವ ರೂಪದಲ್ಲಿ ಅನುವಾದಿಸಿ ಕೊಡಬಹುದು. ಲಕ್ಷಾಂತರ ವೈದ್ಯಕೀಯ ದಾಖಲೆಗಳನ್ನು ಓದುವ ಎ.ಐ. ತಂತ್ರಜ್ಞಾನವೊಂದು ಕ್ಷಣದಲ್ಲೇ ರೋಗಿಯೊಬ್ಬರ ದಾಖಲೆಗಳನ್ನು ಓದಿ, ಅತ್ಯಂತ ನಿಖರವಾಗಿ ಕಾಯಿಲೆ
ಪತ್ತೆ ಮಾಡಿ, ಪರಿಹಾರ ಸೂಚಿಸಬಹುದು. ವೈದ್ಯರ ಕೊರತೆ ಕಾಡುವ ನಮ್ಮಂತಹ ದೇಶದಲ್ಲಿ ಇದು ಎಷ್ಟು ದೊಡ್ಡ ಮಟ್ಟದಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸಬಹುದು ಎಂದು ಯೋಚಿಸಬಹುದು.

ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಯಲ್ಲೂ ಇದು ದೊಡ್ಡ ಮಟ್ಟದ ನೆರವು ಕಲ್ಪಿಸಬಹುದು. ಈ ತಂತ್ರಜ್ಞಾನ ಪ್ರತಿಯೊಬ್ಬ ವ್ಯಕ್ತಿಯ ಮಟ್ಟದಲ್ಲಿ ಅವರ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಸೂಚಿಸುವ ಶಕ್ತಿ ಹೊಂದಿರುವುದರಿಂದ ತಂತ್ರಜ್ಞಾನವನ್ನು ಬಳಸಿ ಹೆಚ್ಚು ಹೆಚ್ಚು ಜನರಿಗೆ ಅವರ ಜೀವನಕ್ಕೆ ಬೇಕಾದ ಮಾಹಿತಿ, ಜ್ಞಾನ ಹಂಚುವುದನ್ನು ಸಾಧ್ಯವಾಗಿಸುತ್ತದೆ.

ಪ್ರೊಫೆಸರ್ ಸ್ಟೀಫನ್ ಹಾಕಿಂಗ್ ಅವರು ಹೇಳಿದಂತೆ, ಶಕ್ತಿಶಾಲಿ ಎ.ಐ. ಒಂದೋ ಮನುಕುಲಕ್ಕೆ ತುಂಬಾ ಒಳಿತು ಮಾಡುತ್ತದೆ ಇಲ್ಲವೇ ತುಂಬಾ ಕೆಡುಕು ಮಾಡುತ್ತದೆ. ಯಾವುದು ನಿಜವಾಗಬಹುದು ಅನ್ನುವುದು ಇನ್ನೂ ನಮಗೆ ಗೊತ್ತಿಲ್ಲ. ಆಳುವವರು, ತಂತ್ರಜ್ಞಾನ ಪರಿಣತರು, ಚಿಂತಕರು ಎಲ್ಲರೂ ಇದರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪರಿಣಾಮಗಳ ಬಗ್ಗೆ ಗಮನಹರಿಸಲು ಶುರು ಮಾಡಬೇಕು ಅನ್ನುವುದಂತೂ ಇಂದಿನ ತುರ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT