ನಾವು ಇನ್ನೊಬ್ಬರಲ್ಲಿ ಸಹಾಯಕ್ಕಾಗಿ ಬೇಡುವಂಥ ಪರಿಸ್ಥಿತಿ ಹಲವು ಕಾರಣಗಳಿಂದ ಬರಬಹುದು. ನಮಗೆ ದುಡಿಯುವ ಶಕ್ತಿ ಇಲ್ಲದಿದ್ದಾಗ ಇನ್ನೊಬ್ಬರಲ್ಲಿ ಬೇಡುವುದು ಅನಿವಾರ್ಯವಾಗಬಹುದು. ನಮಗೆ ಶಕ್ತಿಯಿದ್ದರೂ ನಮ್ಮ ಸೋಮಾರಿತನವೇ ಇನ್ನೊಬ್ಬರ ಮುಂದೆ ಕೈ ಒಡ್ಡುವಂಥ ಸ್ಥಿತಿಯನ್ನು ಒಡ್ಡಬಹುದು. ಕಾರಣ ಏನೇ ಇರಲಿ, ಆದರೆ ಇನ್ನೊಬ್ಬರಲ್ಲಿ ಬೇಡುವಂಥ ಸಂದರ್ಭ ಎದುರಾಗುವುದು ಸಂತೋಷದ ಸಂಗತಿ ಏನಲ್ಲ. ಅದಕ್ಕೇ ಸುಭಾಷಿತ ಹೇಳುತ್ತಿದೆ, ದೇಹಿ ದೇಹಿ – ಕೊಡು ಕೊಡು – ಎಂದು ಬೇಡುವುದು ಅಪಮಾನದ ಕೆಲಸ. ನಮ್ಮ ಅಭಿಮಾನವನ್ನು ಗಾಳಿಗೆ ತೂರಿ ನಾವು ಬೇಡಬೇಕಾಗುತ್ತದೆ. ಇಂಥ ಹೀನಾಯ ಪರಿಸ್ಥಿತಿಯನ್ನು ತಂದುಕೊಳ್ಳುವುದಕ್ಕಿಂತಲೂ ನಾಲಗೆಯನ್ನು ಖಡ್ಗದಿಂದ ಸೀಳಿಕೊಳ್ಳುವುದೇ ಒಳ್ಳೆಯದು.