ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಧರ್ಮ ಮಾರ್ಗದ ಸಂಕಲ್ಪ

Last Updated 1 ಜನವರಿ 2021, 1:36 IST
ಅಕ್ಷರ ಗಾತ್ರ

ಇಜ್ಯಾಧ್ಯಯನದಾನಾನಿ ತಪಃ ಸತ್ಯಂ ಧೃತಿಃ ಕ್ಷಮಾ ।

ಅಲೋಭ ಇತಿ ಮಾರ್ಗೋsಯಂ ಧರ್ಮಸ್ಯಾಷ್ಟವಿಧಃ ಸ್ಮೃತಃ ।।

ಇದರ ತಾತ್ಪರ್ಯ ಹೀಗೆ:

‘ಯಾಗ, ಅಧ್ಯಯನ, ದಾನ, ತಪಸ್ಸು, ಸತ್ಯ, ಧೈರ್ಯ, ಕ್ಷಮಾಗುಣ, ಲೋಭ ಇಲ್ಲದಿರುವುದು – ಇವು ಎಂಟು ಧರ್ಮದ ಮಾರ್ಗಗಳು ಎಂದು ಹೇಳಲಾಗಿದೆ.’

ಇಂದಿನಿಂದ ನಮ್ಮ ಕ್ಯಾಲೆಂಡರ್‌ ಬದಲಾಗಲಿದೆ; 2020 ಹೋಗಿ 2021 ಬಂದಿದೆ. ಹೊಸ ಕ್ಯಾಲೆಂಡರ್‌ ವರ್ಷ ಆರಂಭವಾಗುತ್ತಿರುವಂತೆಯೇ ನಾವೆಲ್ಲ ಏನೇನೋ ಸಂಕಲ್ಪಗಳನ್ನು ಕೈಗೊಳ್ಳುತ್ತೇವೆ. ಈ ವರ್ಷದಲ್ಲಿ ಹಾಗಿರಬೇಕು, ಹೀಗಿರಬೇಕು; ಅದನ್ನು ಮಾಡಬೇಕು, ಇದನ್ನು ಮಾಡಬೇಕು; ಅದನ್ನು ಬಿಡಬೇಕು, ಇದನ್ನು ಬಿಡಬೇಕು – ಹೀಗೆ ಏನೇನೋ ಸಂಕಲ್ಪಗಳನ್ನು ಮಾಡುವ ಉಮೇದು ಹೊಸ ವರ್ಷದ ಆರಂಭದಲ್ಲಿ ತುಂಬಿ ತುಳುಕುತ್ತಿರುತ್ತದೆ. ಆದರೆ ನಮ್ಮ ನಿಜವಾದ ಸಂಕಲ್ಪ ಹೇಗಿರಬೇಕು, ಹೇಗಿದ್ದರೆ ನಮ್ಮ ಜೀವನ ಸುಂದರವೂ ಸುಖಮಯವೂ ಸಾರ್ಥಕಮಯವೂ ಆಗಿರಬಲ್ಲದು – ಎಂಬುದನ್ನು ನಾವು ಆಲೋಚಿಸಿದ್ದೇವೆಯೆ?

ಹೊಸ ವರ್ಷಕ್ಕೆ ಮಾತ್ರವೇ ಸಲ್ಲುವ ಸಂಕಲ್ಪಗಳನ್ನಷ್ಟೆ ಅಲ್ಲ, ಇಡಿಯ ಜೀವನದುದ್ದಕ್ಕೂ ಬೇಕಾಗುವ, ಬೆಳಕಾಗುವ ಸಂಕಲ್ಪಗಳ ಬಗ್ಗೆ ಈ ಸುಭಾಷಿತ ಹೇಳುತ್ತಿದೆ.

ಧರ್ಮಮಾರ್ಗದಲ್ಲಿ ನಡೆಯಬೇಕೆಂಬುದೇ ನಮ್ಮ ಜೀವನದ ಮಹಾಸಂಕಲ್ಪವಾಗಬೇಕು.

ಧರ್ಮಮಾರ್ಗ ಎಂದರೇನು?

ಸುಭಾಷಿತ ಅದರ ವಿವರಗಳನ್ನು ನೀಡಿದೆ. ಧರ್ಮದ ಎಂಟು ದಿಕ್ಕುಗಳು ಅಥವಾ ದಾರಿಗಳು ಯಾವುವು ಎಂಬುದನ್ನು ಅದು ಹೇಳಿದೆ.‘ಯಾಗ, ಅಧ್ಯಯನ, ದಾನ, ತಪಸ್ಸು, ಸತ್ಯ, ಧೈರ್ಯ, ಕ್ಷಮಾಗುಣ, ಲೋಭ ಇಲ್ಲದಿರುವುದು’ – ಇವೇ ಧರ್ಮದ ಎಂಟು ಆಯಾಮಗಳು.

ಯಾಗ ಎಂದರೆ ಕರ್ತವ್ಯಪ್ರಜ್ಞೆ, ಕೃತಜ್ಞತೆ, ವಿತರಣಶೀಲತೆ; ಅಧ್ಯಯನ ಎಂದರೆ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳುವ ದಾರಿ; ದಾನ ಎಂದರೆ ಸಾಮಾಜಿಕ ಸಮತೋಲನ, ನಮ್ಮಲ್ಲಿರುವ ವಸ್ತುಗಳನ್ನು ಹಂಚಿ ಬದುಕುವ ವಿಧಾನ; ತಪಸ್ಸು ಎಂದರೆ ನಮ್ಮ ಶರೀರ ಮತ್ತು ಮನಸ್ಸುಗಳ ಶುದ್ಧೀಕರಣ ಪ್ರಕ್ರಿಯೆ; ಸತ್ಯ ಎಂಬುದು ನಮ್ಮ ಅಂತರಂಗದ ಶುದ್ಧತೆ ಮತ್ತು ಗಟ್ಟಿತನ; ಧೈರ್ಯ ಎನ್ನುವುದು ನಮ್ಮ ಭಾವ–ಬುದ್ಧಿಗಳ ಸ್ಥಿರತೆ; ಕ್ಷಮಾಗುಣ ಎಂಬುದು ಸೌಹಾರ್ದಕ್ಕೆ ಸಾಧನ, ಇತರರನ್ನೂ ತನ್ನಂತೆ ತಿಳಿಯುವ ಮಾನಸಿಕ ಸ್ಥಿತಿ; ಲೋಭ ಇಲ್ಲದಿರುವುದು ಎಂದರೆ ಇತರರಲ್ಲಿ ನಂಬಿಕೆ, ನಾಳೆಯ ಬಗ್ಗೆ ಭರವಸೆ.

ಧರ್ಮಮಾರ್ಗದ ಈ ಎಲ್ಲ ಗುಣಗಳು ನಮ್ಮೆಲ್ಲರ ಜೀವನವನ್ನು ಸಾರ್ಥಕಗೊಳಿಸುವಂಥವು. ಇವನ್ನು ರೂಢಿಸಿಕೊಳ್ಳುವ, ಅನ್ವಯಿಸಿಕೊಳ್ಳುವ ಸಂಕಲ್ಪವನ್ನು ಮಾಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT