ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ ಎಂದರೆ ಕರಗುವುದು

Last Updated 20 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

‘ಶ್ರೀಗಂಧ ನಾನಾಗಿ ಹುಟ್ಟುತ್ತಿದ್ದರೆ ಆಗ, ನಿನ್ನ ಪಾದಾರ್ಚನೆಗೆ ಸವೆಯುತ್ತಿದ್ದೆ, ಗಿಡದಲ್ಲಿ ಹೂವಾಗಿ ಹುಟ್ಟುತ್ತಿದ್ದರೆ ಆಗ, ಪಾದಪೂಜೆಯ ಸಮಯ ಬಳಿ ಸೇರುತ್ತಿದ್ದೆ’ - ಇದೊಂದು ಭಕ್ತಿಪೂರ್ಣ ಭಾವಗೀತೆ ಅಥವಾ ಭಾವಪೂರ್ಣ ಭಕ್ತಿಗೀತೆ. ಎಚ್. ಶಂಕರನಾರಾಯಣ ಭಟ್ ಎನ್ನುವವರ ಈ ಕವಿತೆಯ ಸಾರ ‘ಸಮರ್ಪಣೆ’.

ಸಮರ್ಪಣೆಯನ್ನು ನಮ್ಮಲ್ಲಿ ಭಕ್ತಿ ಎನ್ನುವ ಹೆಸರಿನಿಂದಲೂ ಕರೆಯುವುದುಂಟು! ಭಕ್ತಿ ಇದ್ದರಷ್ಟೇ ಸಮರ್ಪಣೆಯಾಗಲು ಸಾಧ್ಯ. ಸಮರ್ಪಣೆ ಅನ್ನುವುದು ಅಪ್ಪಟ ಶರಣಭಾವ. ಹಾಗಾಗಿ ಭಕ್ತಿ ಎನ್ನುವುದೂ ಭಾವವೆಂದಾಯ್ತು.

ಭಕ್ತಿ ಎನ್ನುವುದನ್ನು ದೇವರ ಕಡೆಗಿನ ಆರಾಧನೆ ಎನ್ನುವುದು ಸಾಮಾನ್ಯ ಪ್ರಜ್ಞೆ. ಆದರೆ ಭಕ್ತಿಯ ಹರಹು ದೊಡ್ಡದು. ಅದು ಎಲ್ಲ ಮಾನವ ಸಂಬಂಧಗಳ ಮೂಲದ್ರವ್ಯ. ‘ತನ್ನಿಷ್ಟ ದೇವತೆಗೆ ಪೂಜೆಗೈಯುತ ದಿನವೂ ತನ್ನ ತಾನೇ ಮರೆವ ಭಕ್ತನಂತೆ, ಅದರ ಸಿಂಗಾರದಲಿ ನಿನ್ನ ನೀನೇ ಮರೆತೆ ಬೊಂಬೆಯಾಟದೊಳಿರುವ ಮಗುವಿನಂತೇ’ ತಾಯಿಯೊಬ್ಬಳು ಮಗುವಿನೆಡೆಗೆ ತೋರುವ ಮಮತೆ, ವ್ಯಾತ್ಸಲ್ಯವೂ ಭಕ್ತಿಯಂತೇ ಎನ್ನುವ ಕವಿವಾಣಿಯಿದು. ಭಕ್ತಿಯೆಂದರೆ ಆರ್ದ್ರವಾಗುವುದು. ನೀರಾಗುವುದು. ನೀರಾಗುವ ಶಕ್ತಿ ಇರುವುದಕ್ಕಷ್ಟೇ ಇನ್ನೊಂದರ ಜೊತೆಗೆ ಸಂಯೋಗವಾಗುವ ಭಾಗ್ಯ. ಅದ್ವೈತವಾಗುವ ಭಾಗ್ಯ. ಭಕ್ತಿಯಿಂದಷ್ಟೇ ಇದು ಫಲಿತಗೊಳ್ಳುವುದು.

ಮನಸ್ಸಿನ ಪ್ರಪಂಚದ ಅಷ್ಟೂ ವ್ಯಾಪಾರಗಳು ನಡೆಯುತ್ತಿರುವುದು ಭಕ್ತಿ ಎನ್ನುವ ಮಂತ್ರದ ಭಿನ್ನ ಭಿನ್ನ ಸ್ವರೂಪಗಳಿಂದಲೇ. ಇದಕ್ಕೆ ಯಾವ ಮನುಷ್ಯನೂ ಹೊರತಾಗಿಲ್ಲ. ಕನಕದಾಸರ ‘ದಾಸದಾಸರ ಮನೆಯ ದಾಸಾನುದಾಸ’ ಭಕ್ತಿಯ ಪರಾಕಾಷ್ಠೆಯ ನಿವೇದನೆ. ದೈವಕ್ಕಾಗಲಿ, ಸಂಬಂಧಕ್ಕಾಗಲಿ ಮನುಷ್ಯ ಇಷ್ಟು ತೀವ್ರತೆಯಲ್ಲಿ ಸಮರ್ಪಿತನಾಗುವ ಭಾವ ಮೂಡಿಸಿಕೊಂಡಾಗ ಮಾತ್ರ ಭಕ್ತಿಯ ಔನ್ನತ್ಯದ, ಆನಂದದ ಅರಿವಾಗುತ್ತದೆ. ಭಕ್ತಿಯಿಂದಷ್ಟೇ ಮಾನವ ಮಾಧವನಾಗಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT