ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ನರಕ ಚತುರ್ದಶಿ | ಸಂಭ್ರಮವೇ ಮೈದಳೆವ ಹಬ್ಬ: ದೀಪಾವಳಿ

Last Updated 23 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ಹಬ್ಬಗಳ ಸಾಲಿನಲ್ಲಿ ‘ದೀಪಾವಳಿ’, ‘ದೀಪವಲ್ಲಿ’, ‘ದೀಪಪ್ರತಿಪದೋತ್ಸವ’ ಇತ್ಯಾದಿ ಹೆಸರಿನ ದೀಪಗಳ ಹಬ್ಬಕ್ಕೆ ವಿಶಿಷ್ಟವಾದ ಸ್ಥಾನವಿದೆ. ಏಕೆಂದರೆ, ಉಳಿದ ಬಹುತೇಕ ಹಬ್ಬಗಳಂತೆ ಇದು ಆರಾಧನೆಯನ್ನು ಕೇಂದ್ರವಾಗುಳ್ಳ ಹಬ್ಬವಲ್ಲ; ಬದಲಿಗೆ ಲೌಕಿಕ ಬದುಕಿನ ಸೊಗಸನ್ನು ಮತ್ತು ಮಾನವೀಯ ಸಂತಸಗಳನ್ನು ಸಂಭ್ರಮಿಸುವ ಹಬ್ಬ. ಕರ್ನಾಟಕದ ಬಹುಭಾಗದಲ್ಲಿ ಈ ಹಬ್ಬವನ್ನು ದೊಡ್ಡ ಹಬ್ಬವೆಂದು ಕರೆಯುವ ರೂಢಿಯೂ ಇದೆ. ದೀಪಾವಳಿಯು ಸಾಂಪ್ರದಾಯಿಕವಾಗಿ ಐದು ದಿನಗಳ ಹಬ್ಬವಾಗಿದ್ದರೂ ವ್ಯಾಪಕವಾಗಿ ಎರಡು ದಿನಗಳ ಸಂಭ್ರಮವನ್ನು ಆಚರಿಸುವುದು ವಾಡಿಕೆ.

ಇಂದು ಏಷ್ಯಾದ ಸೀಮೆಯನ್ನೂ ದಾಟಿ ಯುರೋಪ್‌ ಮತ್ತು ಅಮೆರಿಕದಲ್ಲಿಯೂ ದೀಪಾವಳಿಯು ಜನಪ್ರಿಯವಾಗುತ್ತಿರುವುದನ್ನು ಕಾಣಬಹುದು. ಸಿಂಗಪುರ, ಮಲೇಷ್ಯಾ, ಮಾರಿಷಸ್, ಶ್ರೀಲಂಕಾ, ಮ್ಯಾನ್ಮಾರ್‌, ಬಾಂಗ್ಲಾ, ಪಾಕಿಸ್ತಾನ, ನೇಪಾಳ, ಫಿಜಿಗಳಲ್ಲಿಯೂ ದೀಪಾವಳಿಯ ಆಚರಣೆ ಇದೆ. ಇತ್ತೀಚೆಗೆ ಅಮೆರಿಕದ ಕೆಲವು ರಾಜ್ಯಗಳಲ್ಲಿ ದೀಪಾವಳಿಗೆ ಸಾರ್ವಜನಿಕ ರಜೆ ಘೋಷಿಸುವ ಪ್ರಸ್ತಾವನೆಯೂ ಚಾಲ್ತಿಯಲ್ಲಿದೆ. ಈ ಹಬ್ಬವನ್ನು ಹಿಂದೂ ಸಮುದಾಯಗಳಲ್ಲದೆ ಜೈನ, ಸಿಕ್ಖ, ಬೌದ್ಧರು ಸಹ ಬೇರೆ ಬೇರೆ ಹಿನ್ನೆಲೆಯಲ್ಲಿ ಆಚರಿಸುತ್ತಾರೆ.

ದೀಪಾವಳಿಯೊಂದಿಗೆ ಮಿಳಿತವಾಗಿರುವ ಕಥೆಗಳು ಹಲವಾರು. ಅವುಗಳಲ್ಲಿ ಪ್ರಸಿದ್ಧವಾಗಿರುವ ಪೌರಾಣಿಕ ಕಥೆಗಳೆಂದರೆ ರಾಮನ ಅಯೋಧ್ಯಾಗಮನ, ಲಕ್ಷ್ಮೀಸಂಭವ ಮತ್ತು ನರಕಾಸುರ ವಧೆ. ದಶಶಿರನಾದ ರಾವಣನ್ನು ರಾಮನು ತರಿದು ಮುಗಿಸಿದ್ದು ವಿಜಯದಶಮಿ
ಯಂದು. ಅದಕ್ಕಾಗಿಯೇ ವಿಜಯದಶಮಿಯನ್ನು ದಶಹರ/ದಸರಾ ಎಂದು ಕರೆಯುವುದು ರೂಢಿ. ಅಲ್ಲಿಂದಾಚೆ ಇಪ್ಪತ್ತು ದಿನಕ್ಕೆ ಲಂಕೆಯಿಂದ ರಾಮನು ಅಯೋಧ್ಯೆಯನ್ನು ತಲುಪುತ್ತಾನೆ ಎಂದಿಟ್ಟುಕೊಂಡರೆ, ಅದು ದೀಪಾವಳಿಯ ಸಮಯಕ್ಕೆ ಸರಿಹೊಂದುತ್ತದೆ. 14 ವರ್ಷಗಳಿಂದ ಅಯೋಧ್ಯೆಯಲ್ಲಿ ಕವಿದಿದ್ದ ಕತ್ತಲೆಯನ್ನು ಕಳೆಯುವ ಅಕಳಂಕ ಬೆಳಕಿನಂತೆ ರಾಮ ಅಯೋಧ್ಯೆಗೆ ಮರಳಿದ. ಅದರ ನೆನಪಲ್ಲಿ ಅಯೋಧ್ಯೆಯ ದೀಪಾವಳಿಗೆ ಲಕ್ಷ ಲಕ್ಷ ದೀಪಗಳನ್ನು ಬೆಳಗುವುದನ್ನು ಇವತ್ತಿಗೂ ನಾವು ಸಾಕ್ಷಾತ್ಕರಿಸಿಕೊಳ್ಳಬಹುದು.

ದೀಪಾವಳಿಯ ಅಂಗವಾಗಿ ಭಾರತೀಯ ಉಪಖಂಡದ ಬಹುತೇಕ ಎಲ್ಲಕಡೆ ಆಚರಣೆಯಲ್ಲಿರುವ ಸಂಪ್ರದಾಯಗಳಲ್ಲಿ ಲಕ್ಷ್ಮೀಪೂಜೆ ಪ್ರಸಿದ್ಧವಾದ್ದು. ‘ಧನತ್ರಯೋದಶಿ’ ಅಥವಾ ‘ಧನ್ ತೇರಸ್’ ಎಂದು ಆಚರಿಸಲ್ಪಡುವ ಈ ಹಬ್ಬ ಸಮೃದ್ಧಿಯ ದೇವತೆಯಾದ ಲಕ್ಷ್ಮೀಯನ್ನು ಕುರಿತಾದ್ದು. ದೇವಾಸುರರು ಅಮೃತಪ್ರಾಪ್ತಿಗಾಗಿ ಹಾಲ್ಗಡಲನ್ನು ಕಡೆವಾಗ ದೊರೆತ ಮಹತ್ತಮ ಉಪೋತ್ಪನ್ನಗಳಲ್ಲಿ ‘ಲಕ್ಷ್ಮೀ’ ಎಂಬ ಸಂಪತ್ತಿನ ದೇವತೆಯೂ ಒಬ್ಬಳು. ಇದೇ ಹಿನ್ನೆಲೆಯಲ್ಲಿ ದೀಪಾವಳಿ ಅಮಾವಾಸ್ಯೆಯ ಹಿಂದಿನ ತ್ರಯೋದಶಿಯಂದು ಲಕ್ಷ್ಮೀಪೂಜೆಯನ್ನು ಆಚರಿಸಲಾಗುತ್ತದೆ. ಸ್ವಚ್ಛತೆ ಮತ್ತು ನವತೆಯಿರುವಲ್ಲಿ ನೆಲೆಸುವ ದೇವತೆ ಇವಳಾದ್ದರಿಂದ ಲಕ್ಷ್ಮೀಪೂಜೆಗೂ ಮುಂಚೆ ಮನೆಯನ್ನು ಸ್ವಚ್ಛಗೊಳಿಸುವ, ಇರುವುದನ್ನೇ ತೊಳೆದು, ಬೆಳಗಿ, ಹೊಸದನ್ನಾಗಿಸುವ ಕಾರ್ಯವೂ ದೀಪಾವಳಿಯ ಭಾಗವೇ. ಇದು ಲಕ್ಷ್ಮಿಯ ವಿರುದ್ಧ ಸ್ವಭಾವದ ಜ್ಯೇಷ್ಠಾದೇವಿಯನ್ನು, ಅಲಕ್ಷ್ಮೀ ಅಥವಾ ದಾರಿದ್ರ್ಯ ತೊಡೆದುಹಾಕುವ ಪ್ರಕ್ರಿಯೆಯೂ ಹೌದು. ಅಶುಚಿ ಮತ್ತು ಅವ್ಯವಸ್ಥೆ ಇರುವಲ್ಲಿ ದಾರಿದ್ರ್ಯದೇವತೆ ಅಥವಾ ಅಲಕ್ಷ್ಮೀ ನೆಲೆಸುವಳಾದ್ದರಿಂದ ಕೊಳೆಯನ್ನು ತೊಳೆದು ಹೊಸತನವನ್ನು ಆವಾಹಿಸಿಕೊಳ್ಳುವುದು ಲಕ್ಷ್ಮೀ ಆವಾಹನೆಯ ಪ್ರಕ್ರಿಯೆಯೆನಿಸಿಕೊಳ್ಳುತ್ತದೆ. ಈ ರೀತಿ ಲಕ್ಷ್ಮೀಗಾಗಿ ಮನೆಯನ್ನು, ವಾಸಸ್ಥಾನ ಮತ್ತು ಕಾರ್ಯಕ್ಷೇತ್ರವನ್ನು ಶುದ್ಧಗೊಳಿಸುವ ಸಂಪ್ರದಾಯ ಬಹುಕಾಲದಿಂದ ರೂಢಿಯಲ್ಲಿತ್ತು ಎಂಬುದಕ್ಕೆ ಒಂಬತ್ತನೆಯ ಶತಮಾನದ ರಾಜಶೇಖರನ ‘ಕಾವ್ಯಮೀಮಾಂಸೆ’ಯಲ್ಲಿಯೂ ಉಲ್ಲೇಖವಿದೆ.

ದೀಪಾವಳಿಯ ಇನ್ನೊಂದು ಪ್ರಸಿದ್ಧವಾದ ಕಥೆ ನರಕಾಸುರನ ವಧೆಯನ್ನು ಕುರಿತಾದ್ದು. ತಾನು ಮಾಡಿದ ಪಾಪಗಳ ಫಲವಾಗಿ ಇವನು ಶ್ರೀಕೃಷ್ಣನಿಂದ ಹತನಾಗುತ್ತಾನೆ. ಈ ಹಿನ್ನೆಲೆಯಲ್ಲಿಯೇ ನರಕಚತುರ್ದಶಿ
ಯನ್ನು ಸಂಭ್ರಮಿಸುತ್ತೇವೆ. ನರಕಾಸುರವಧೆಯನ್ನು ಸಂಭ್ರಮಿಸಲೆಂಬಂತೆ ಈ ದಿನ ಪಟಾಕಿಗಳನ್ನು ಸಿಡಿಸುವುದು ತಲೆತಲಾಂತರದಿಂದ ಜಾರಿಯಲ್ಲಿದೆ.

ಬಳಿಕದ್ದು ಅಮಾವಾಸ್ಯೆಯ ಮತ್ತು ಪ್ರತಿಪದೆಯ (ಪಾಡ್ಯ) ಹಬ್ಬ. ಪ್ರತಿಪದೆಯ ಹಬ್ಬವನ್ನು ಸಾಮಾನ್ಯವಾಗಿ ಬಲಿಪಾಡ್ಯವೆಂದು ಕರೆದು, ಬಲಿಚಕ್ರವರ್ತಿಯ ಆಗಮನ ದಿನವೆಂದು ನೆನೆಯಲಾಗುತ್ತದೆ. ಈ ಸಂಪ್ರದಾಯಗಳು ಸಮುದಾಯ ಮತ್ತು ಪ್ರದೇಶಗಳಿಗನುಗುಣವಾಗಿ ಬದಲಾಗುವುದಿದೆ. ಇನ್ನು ದೀಪಾವಳಿಯೊಂದಿಗೆ ಮಿಳಿತವಾಗಿರುವ ಭಾರತೀಯ ಆಹಾರವೈವಿಧ್ಯವಂತೂ ಬಣ್ಣಿಸಲಸದಳವಾದ್ದು. ದೀಪಾವಳಿಗಾಗಿ ಮನೆಯನ್ನೆಲ್ಲ ಶುಚಿಗೊಳಿಸುವ, ದೀಪ ಬೆಳಗಿಸುವ, ಪಟಾಕಿ ಸಿಡಿಸುವ, ಹೊಸಬಟ್ಟೆತೊಡುವ ಸಂಭ್ರಮದ ಜೊತೆಯಲ್ಲಿಯೇ ಅನನ್ಯವಾದ ನಮ್ಮ ಆಹಾರಸಂಪ್ರದಾಯವನ್ನು ಕಾಪಿಟ್ಟುಕೊಳ್ಳುವ ಎಚ್ಚರವೂ ನಮ್ಮಲ್ಲಿ ಮೂಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT