<p>ರಾಮಾಯಣದ ಉದ್ದಕ್ಕೂ ಶ್ರೀರಾಮನ ಹಲವು ಗುಣಗಳ ವರ್ಣನೆಯಿದೆಯಷ್ಟೆ. ಅವುಗಳಲ್ಲಿ ಈ ಶ್ಲೋಕವೂ ಒಂದು; ರಾಮ ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ; ರಾಷ್ಟ್ರವೇ ರಾಮ, ರಾಮನೇ ರಾಷ್ಟ್ರ – ಎಂಬ ತತ್ತ್ವವನ್ನು ಈ ಮಾತಿನಲ್ಲಿ ನೋಡಬಹುದು:</p>.<p><strong>ನ ಹಿ ತದ್ಭವಿತಾ ರಾಷ್ಟ್ರಂ ಯತ್ರ ರಾಮೋ ನ ಭೂಪತಿಃ|</strong></p>.<p><strong>ತದ್ವನಂ ಭವಿತಾ ರಾಷ್ಟ್ರಂ ಯತ್ರ ರಾಮೋ ನಿವತ್ಸ್ಯತಿ||</strong></p>.<p>‘ರಾಮನು ಯಾವ ರಾಷ್ಟ್ರದಲ್ಲಿ ರಾಜನಾಗಿಲ್ಲವೋ ಅದು ರಾಷ್ಟ್ರವೇ ಅಲ್ಲ; ರಾಮನಿರುವ ಕಾಡು ಕೂಡ ರಾಷ್ಟ್ರವೇ ಆಗುವುದು.’</p>.<p>ರಾಷ್ಟ್ರ ಎನ್ನುವುದು ವಿಶಾಲವಾದ ಒಂದು ವ್ಯವಸ್ಥೆ; ಆ ವ್ಯವಸ್ಥೆಯೆಲ್ಲವೂ ರಾಮನೇ ಹೌದು ಎಂಬ ಸಮೀಕರಣವನ್ನು ಈ ಮಾತಿನಲ್ಲಿ ನೋಡಬಹುದು. ಧರ್ಮ, ನೀತಿ, ನಿಯಮ, ಸುಖ, ಸಂತೋಷ, ಕಾನೂನು, ಕರ್ತವ್ಯ, ಕರುಣೆ, ದಂಡನೆ, ಸಂಪತ್ತು – ಹೀಗೆ ಹತ್ತು ಹಲವು ವಿವರಗಳ ಸಾಂಗತ್ಯದಿಂದ ರಾಷ್ಟ್ರವೊಂದು ನೆಲೆ ನಿಲ್ಲುತ್ತದೆ. ರಾಮನೇ ರಾಷ್ಟ್ರ– ಎಂದರೆ ಈ ಎಲ್ಲ ಗುಣಗಳ ಧಣಿ, ಗಣಿ ಅವನು ಎಂದಾಯಿತು.</p>.<p>ರಾಮಾಯಣದ ಆರಂಭ ಆಗುವುದೇ ಸಗುಣವಂತನ ಹುಡುಕಾಟದಿಂದ. ನಮ್ಮ ಕಾಲವೂ ಸೇರಿದಂತೆ ಎಲ್ಲ ಕಾಲದಲ್ಲೂ ತೋರಿಕೊಳ್ಳಬಹುದಾದ ಪ್ರಶ್ನೆ: ’ಗುಣವಂತನಾದ ಮಹಾಪುರುಷ ಯಾರು?’ ರಾಮಾಯಣದ ಆರಂಭವೇ ಈ ಪ್ರಶ್ನೆ. ಈ ಗುಣಗಳು ಯಾವುವು ಎಂದು ಉದ್ದವಾದ ಪಟ್ಟಿಯೂ ಅಲ್ಲಿದೆ. ಗುಣವಂತನಾದರಷ್ಟೆ ಸಾಲದು, ಅವನು ವೀರನೂ ಆಗಿರಬೇಕು; ಜೊತೆಗೆ ಧರ್ಮಜ್ಞನೂ ಕೃತಜ್ಞನೂ ಸತ್ಯವಾದಿಯೂ ದೃಢಸಂಕಲ್ಪನೂ ಸದಾಚಾರನಿಷ್ಠನೂ ಎಲ್ಲರ ಜೀವಿಗಳ ಹಿತವನ್ನು ಬಯಸುವವನೂ ವಿದ್ವಾಂಸನೂ ಕಾರ್ಯದಕ್ಷನೂ ನೋಡುವ ಜನರಿಗೆ ಆನಂದವನ್ನು ಉಂಟುಮಾಡುವವನೂ ಧೈರ್ಯಶಾಲಿಯೂ ಕೋಪವನ್ನು ಗೆದ್ದವನೂ ಕಾಂತಿವಂತನೂ ಆಸೆಯೆಯಿಲ್ಲದವನೂ ಯುದ್ಧಕ್ಕೆ ನಿಂತರೆ ದೇವತೆಗಳಿಗೂ ಭಯ ಹುಟ್ಟಿಸುವವನೂ ಆಗಿರಬೇಕು. ಈ ಎಲ್ಲ ಗುಣಗಳನ್ನು ಹೊಂದಿದವನು ನಿಜವಾದ ಗುಣವಂತ. ರಾಮಾಯಣ ಹುಟ್ಟಿದ್ದೇ ಇಂಥ ಗುಣವಂತನ ಹುಡುಕಾಟದಲ್ಲಿ. ಈ ಪ್ರಶ್ನೆಗೆ ಸಿಕ್ಕ ಉತ್ತರ: ಶ್ರೀರಾಮ.</p>.<p>ಇಷ್ಟು ಗುಣಗಳು ಮಾತ್ರವಲ್ಲ, ರಾಮನಲ್ಲಿ ಇನ್ನೂ ಹಲವು ಗುಣಗಳು ಮನೆಮಾಡಿದ್ದವು. ಅವನು ಯಾವಾಗಲೂ ಶಾಂತವಾಗಿರುತ್ತಿದ್ದ; ಜನರೊಡನೆ ಮೃದುವಾಗಿ ಮಾತನಾಡತಕ್ಕವನು; ಯಾರಾದರೂ ಅವನಿಗೆ ಚಿಕ್ಕ ಉಪಕಾರವನ್ನು ಮಾಡಿದರೂ ಅವನು ಅದರಿಂದ ಸಂತೋಷ ಪಡುತ್ತಿದ್ದ, ನೂರಾರು ಅಪಕಾರಗಳನ್ನು ಮಾಡಿದರೂ ಅವನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ; ಜನರನ್ನು ಕಂಡಾಗ ಅವನೇ ಮೊದಲು ಮಾತನಾಡಿಸುತ್ತಿದ್ದ; ನಾನು ಶೂರ ಎಂಬ ಜಂಭ ಅವನಲ್ಲಿರಲಿಲ್ಲ; ಸುಳ್ಳು ಎಂಬುದು ಅವನ ಹತ್ತಿರವೂ ಸುಳಿಯುತ್ತಿರಲಿಲ್ಲ; ಶಾಸ್ತ್ರಗಳಲ್ಲಿ ನಿಷ್ಣಾತ; ದೊಡ್ಡವರೆಂದರೆ ಅವನಿಗೆ ಗೌರವ; ಪ್ರಜೆಗಳಿಗೆ ಅವನೆಂದರೆ ಪ್ರೀತಿ, ಅವನಿಗೆ ಪ್ರಜೆಗಳೆಂದರೆ ಪ್ರೀತಿ; ದೀನರಲ್ಲಿ ಅವನಿಗೆ ಅಪಾರ ದಯೆ; ಅವನು ಸದಾ ಆರೋಗ್ಯವಂತ; ಮಾತಿನಲ್ಲಿ ಚತರನೂ ಹೌದು; ವಿದ್ಯೆಯನ್ನು ಚೆನ್ನಾಗಿ ಸಂಪಾದಿಸಿದ್ದ; ಅವನ ಸ್ಮರಣಶಕ್ತಿಯೂ ಅದ್ಭುತವಾಗಿತ್ತು; ತನ್ನ ಸುಖವನ್ನಾಗಲೀ ದುಃಖವನ್ನಾಗಲೀ ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ; ವಿನಯಶಾಲಿ; ಸಜ್ಜನರಿಗೆ ಆಶ್ರಯದಾತ; ರಾಜವ್ಯವಹಾರದ ಚರ್ಚೆಗಳನ್ನು ಗುಟ್ಟಾಗಿ ಕಾಪಾಡುತ್ತಿದ್ದ; ಸಂಪತ್ತನ್ನು ಯಾವಾಗ ಗಳಿಸಬೇಕು ಮತ್ತು ಯಾವಾಗ ದಾನ ಮಾಡಬೇಕು ಎಂದು ಅರಿತಿದ್ದವನು; ಅವನಿಗೆ ಕಲೆಗಳಲ್ಲಿ ಆಸಕ್ತಿಯೂ ಪ್ರಾವೀಣ್ಯವೂ ಇದ್ದಿತು; ಕರ್ತವ್ಯವನ್ನು ನಿರ್ವಹಿಸುವುದರಲ್ಲಿ ಅವನಿಗೆ ಆಲಸ್ಯ ಎಂಬುದೇ ಇರಲಿಲ್ಲ; ಪುರುಷಾರ್ಥಗಳಿಗೆ ವಿರೋಧ ಬರದಂತೆ ಅವನು ಸುಖವನ್ನು ಅನುಭವಿಸುತ್ತಿದ್ದ; ಅವನು ಯಾರನ್ನೂ ಅವಮಾನಪಡಿಸುತ್ತಿರಲಿಲ್ಲ; ಅಹಂಕಾರಿಯಲ್ಲ – ಇಂಥ ಇನ್ನೂ ಹಲವು ಗುಣಗಳನ್ನು ಮೈಗೂಡಿಸಿಕೊಂಡಿದ್ದವನು ರಾಮ.</p>.<p>ಅವನು ತನ್ನ ಬಂಧು–ಮಿತ್ರರೊಂದಿಗೆ ಹೊಂದಿದ್ದ ನಂಟನ್ನು ತಿಳಿಸುವ ವಿಶೇಷಣಗಳನ್ನೂ ವಾಲ್ಮೀಕಿಗಳು ರಾಮನಿಗೆ ಯಥೇಷ್ಟವಾಗಿ ಬಳಸಿದ್ದಾರೆ. ಶ್ರೀರಾಮನು ಕೌಸಲ್ಯಾನಂದವರ್ಧನ; ಎಂದರೆ ತಾಯಿಯಾದ ಕೌಸಲ್ಯೆಯ ಆನಂದವನ್ನು ಹೆಚ್ಚುಮಾಡುವವನು. ಅವನು ‘ಸೀತಾಪತಿ’; ದಶರಥನ ಮಗ; ಲಕ್ಷ್ಮಣ, ಭರತ, ಶತ್ರುಘ್ನರ ಅಣ್ಣ; ಗುಹನ ಮಿತ್ರ; ಸುಗ್ರೀವನ ರಕ್ಷಕ; ಹನುಮಂತನ ಸ್ವಾಮಿ; ವಿಶ್ವಾಮಿತ್ರರ ಶಿಷ್ಯ; ವಿಭೀಷಣನ ಆಶ್ರಯದಾತ; ಶಬರಿಯ ಮೋಕ್ಷಕಾರಕ; ಅಹಲ್ಯೆಯ ಪಾಪನಿವಾರಕ – ಹೀಗೆ ಅವನ ಸಂಪರ್ಕಕ್ಕೆ ಬಂದವರೆಲ್ಲರಿಗೂ ತನ್ನ ವ್ಯಕ್ತಿತ್ವದ ಬೆಳಕನ್ನು ಕಾಣಿಸಿದ ಪುರುಷೋತ್ತಮ ಶ್ರೀರಾಮ. ಈ ಎಲ್ಲ ಗುಣಗಳಿಗೂ ಮೂಲ ಯಾವುದು ಎಂಬುದನ್ನು ವಾಲ್ಮೀಕಿಗಳೇ ಸೂಚಿಸುತ್ತಾರೆ: ‘ಶ್ರೀರಾಮ ಎಂದರೆ ಧರ್ಮದ ಮೂರ್ತರೂಪ.’</p>.<p>ಹೀಗಾಗಿ ‘ರಾಮ’ ಎಂದರೆ ಧರ್ಮ. ರಾಮನಿದ್ದ ಕಡೆ ಧರ್ಮ ಗಟ್ಟಿಯಾಗಿ ನೆಲೆಯೂರಿದೆ ಎಂದೇ ಹೌದು. ಎಲ್ಲಿ ಧರ್ಮ ನಾಲ್ಕು ಕಾಲಿನಿಂದ ನಿಂತಿರುತ್ತದೆಯೋ ಅದೇ ದಿಟವಾದ ರಾಷ್ಟ್ರ ಎಂಬುದನ್ನು ರಾಮಾಯಣವು ಶ್ರೀರಾಮನ ವ್ಯಕ್ತಿತ್ವದ ಮೂಲಕ ಸಾರಿ ಹೇಳುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮಾಯಣದ ಉದ್ದಕ್ಕೂ ಶ್ರೀರಾಮನ ಹಲವು ಗುಣಗಳ ವರ್ಣನೆಯಿದೆಯಷ್ಟೆ. ಅವುಗಳಲ್ಲಿ ಈ ಶ್ಲೋಕವೂ ಒಂದು; ರಾಮ ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ; ರಾಷ್ಟ್ರವೇ ರಾಮ, ರಾಮನೇ ರಾಷ್ಟ್ರ – ಎಂಬ ತತ್ತ್ವವನ್ನು ಈ ಮಾತಿನಲ್ಲಿ ನೋಡಬಹುದು:</p>.<p><strong>ನ ಹಿ ತದ್ಭವಿತಾ ರಾಷ್ಟ್ರಂ ಯತ್ರ ರಾಮೋ ನ ಭೂಪತಿಃ|</strong></p>.<p><strong>ತದ್ವನಂ ಭವಿತಾ ರಾಷ್ಟ್ರಂ ಯತ್ರ ರಾಮೋ ನಿವತ್ಸ್ಯತಿ||</strong></p>.<p>‘ರಾಮನು ಯಾವ ರಾಷ್ಟ್ರದಲ್ಲಿ ರಾಜನಾಗಿಲ್ಲವೋ ಅದು ರಾಷ್ಟ್ರವೇ ಅಲ್ಲ; ರಾಮನಿರುವ ಕಾಡು ಕೂಡ ರಾಷ್ಟ್ರವೇ ಆಗುವುದು.’</p>.<p>ರಾಷ್ಟ್ರ ಎನ್ನುವುದು ವಿಶಾಲವಾದ ಒಂದು ವ್ಯವಸ್ಥೆ; ಆ ವ್ಯವಸ್ಥೆಯೆಲ್ಲವೂ ರಾಮನೇ ಹೌದು ಎಂಬ ಸಮೀಕರಣವನ್ನು ಈ ಮಾತಿನಲ್ಲಿ ನೋಡಬಹುದು. ಧರ್ಮ, ನೀತಿ, ನಿಯಮ, ಸುಖ, ಸಂತೋಷ, ಕಾನೂನು, ಕರ್ತವ್ಯ, ಕರುಣೆ, ದಂಡನೆ, ಸಂಪತ್ತು – ಹೀಗೆ ಹತ್ತು ಹಲವು ವಿವರಗಳ ಸಾಂಗತ್ಯದಿಂದ ರಾಷ್ಟ್ರವೊಂದು ನೆಲೆ ನಿಲ್ಲುತ್ತದೆ. ರಾಮನೇ ರಾಷ್ಟ್ರ– ಎಂದರೆ ಈ ಎಲ್ಲ ಗುಣಗಳ ಧಣಿ, ಗಣಿ ಅವನು ಎಂದಾಯಿತು.</p>.<p>ರಾಮಾಯಣದ ಆರಂಭ ಆಗುವುದೇ ಸಗುಣವಂತನ ಹುಡುಕಾಟದಿಂದ. ನಮ್ಮ ಕಾಲವೂ ಸೇರಿದಂತೆ ಎಲ್ಲ ಕಾಲದಲ್ಲೂ ತೋರಿಕೊಳ್ಳಬಹುದಾದ ಪ್ರಶ್ನೆ: ’ಗುಣವಂತನಾದ ಮಹಾಪುರುಷ ಯಾರು?’ ರಾಮಾಯಣದ ಆರಂಭವೇ ಈ ಪ್ರಶ್ನೆ. ಈ ಗುಣಗಳು ಯಾವುವು ಎಂದು ಉದ್ದವಾದ ಪಟ್ಟಿಯೂ ಅಲ್ಲಿದೆ. ಗುಣವಂತನಾದರಷ್ಟೆ ಸಾಲದು, ಅವನು ವೀರನೂ ಆಗಿರಬೇಕು; ಜೊತೆಗೆ ಧರ್ಮಜ್ಞನೂ ಕೃತಜ್ಞನೂ ಸತ್ಯವಾದಿಯೂ ದೃಢಸಂಕಲ್ಪನೂ ಸದಾಚಾರನಿಷ್ಠನೂ ಎಲ್ಲರ ಜೀವಿಗಳ ಹಿತವನ್ನು ಬಯಸುವವನೂ ವಿದ್ವಾಂಸನೂ ಕಾರ್ಯದಕ್ಷನೂ ನೋಡುವ ಜನರಿಗೆ ಆನಂದವನ್ನು ಉಂಟುಮಾಡುವವನೂ ಧೈರ್ಯಶಾಲಿಯೂ ಕೋಪವನ್ನು ಗೆದ್ದವನೂ ಕಾಂತಿವಂತನೂ ಆಸೆಯೆಯಿಲ್ಲದವನೂ ಯುದ್ಧಕ್ಕೆ ನಿಂತರೆ ದೇವತೆಗಳಿಗೂ ಭಯ ಹುಟ್ಟಿಸುವವನೂ ಆಗಿರಬೇಕು. ಈ ಎಲ್ಲ ಗುಣಗಳನ್ನು ಹೊಂದಿದವನು ನಿಜವಾದ ಗುಣವಂತ. ರಾಮಾಯಣ ಹುಟ್ಟಿದ್ದೇ ಇಂಥ ಗುಣವಂತನ ಹುಡುಕಾಟದಲ್ಲಿ. ಈ ಪ್ರಶ್ನೆಗೆ ಸಿಕ್ಕ ಉತ್ತರ: ಶ್ರೀರಾಮ.</p>.<p>ಇಷ್ಟು ಗುಣಗಳು ಮಾತ್ರವಲ್ಲ, ರಾಮನಲ್ಲಿ ಇನ್ನೂ ಹಲವು ಗುಣಗಳು ಮನೆಮಾಡಿದ್ದವು. ಅವನು ಯಾವಾಗಲೂ ಶಾಂತವಾಗಿರುತ್ತಿದ್ದ; ಜನರೊಡನೆ ಮೃದುವಾಗಿ ಮಾತನಾಡತಕ್ಕವನು; ಯಾರಾದರೂ ಅವನಿಗೆ ಚಿಕ್ಕ ಉಪಕಾರವನ್ನು ಮಾಡಿದರೂ ಅವನು ಅದರಿಂದ ಸಂತೋಷ ಪಡುತ್ತಿದ್ದ, ನೂರಾರು ಅಪಕಾರಗಳನ್ನು ಮಾಡಿದರೂ ಅವನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ; ಜನರನ್ನು ಕಂಡಾಗ ಅವನೇ ಮೊದಲು ಮಾತನಾಡಿಸುತ್ತಿದ್ದ; ನಾನು ಶೂರ ಎಂಬ ಜಂಭ ಅವನಲ್ಲಿರಲಿಲ್ಲ; ಸುಳ್ಳು ಎಂಬುದು ಅವನ ಹತ್ತಿರವೂ ಸುಳಿಯುತ್ತಿರಲಿಲ್ಲ; ಶಾಸ್ತ್ರಗಳಲ್ಲಿ ನಿಷ್ಣಾತ; ದೊಡ್ಡವರೆಂದರೆ ಅವನಿಗೆ ಗೌರವ; ಪ್ರಜೆಗಳಿಗೆ ಅವನೆಂದರೆ ಪ್ರೀತಿ, ಅವನಿಗೆ ಪ್ರಜೆಗಳೆಂದರೆ ಪ್ರೀತಿ; ದೀನರಲ್ಲಿ ಅವನಿಗೆ ಅಪಾರ ದಯೆ; ಅವನು ಸದಾ ಆರೋಗ್ಯವಂತ; ಮಾತಿನಲ್ಲಿ ಚತರನೂ ಹೌದು; ವಿದ್ಯೆಯನ್ನು ಚೆನ್ನಾಗಿ ಸಂಪಾದಿಸಿದ್ದ; ಅವನ ಸ್ಮರಣಶಕ್ತಿಯೂ ಅದ್ಭುತವಾಗಿತ್ತು; ತನ್ನ ಸುಖವನ್ನಾಗಲೀ ದುಃಖವನ್ನಾಗಲೀ ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ; ವಿನಯಶಾಲಿ; ಸಜ್ಜನರಿಗೆ ಆಶ್ರಯದಾತ; ರಾಜವ್ಯವಹಾರದ ಚರ್ಚೆಗಳನ್ನು ಗುಟ್ಟಾಗಿ ಕಾಪಾಡುತ್ತಿದ್ದ; ಸಂಪತ್ತನ್ನು ಯಾವಾಗ ಗಳಿಸಬೇಕು ಮತ್ತು ಯಾವಾಗ ದಾನ ಮಾಡಬೇಕು ಎಂದು ಅರಿತಿದ್ದವನು; ಅವನಿಗೆ ಕಲೆಗಳಲ್ಲಿ ಆಸಕ್ತಿಯೂ ಪ್ರಾವೀಣ್ಯವೂ ಇದ್ದಿತು; ಕರ್ತವ್ಯವನ್ನು ನಿರ್ವಹಿಸುವುದರಲ್ಲಿ ಅವನಿಗೆ ಆಲಸ್ಯ ಎಂಬುದೇ ಇರಲಿಲ್ಲ; ಪುರುಷಾರ್ಥಗಳಿಗೆ ವಿರೋಧ ಬರದಂತೆ ಅವನು ಸುಖವನ್ನು ಅನುಭವಿಸುತ್ತಿದ್ದ; ಅವನು ಯಾರನ್ನೂ ಅವಮಾನಪಡಿಸುತ್ತಿರಲಿಲ್ಲ; ಅಹಂಕಾರಿಯಲ್ಲ – ಇಂಥ ಇನ್ನೂ ಹಲವು ಗುಣಗಳನ್ನು ಮೈಗೂಡಿಸಿಕೊಂಡಿದ್ದವನು ರಾಮ.</p>.<p>ಅವನು ತನ್ನ ಬಂಧು–ಮಿತ್ರರೊಂದಿಗೆ ಹೊಂದಿದ್ದ ನಂಟನ್ನು ತಿಳಿಸುವ ವಿಶೇಷಣಗಳನ್ನೂ ವಾಲ್ಮೀಕಿಗಳು ರಾಮನಿಗೆ ಯಥೇಷ್ಟವಾಗಿ ಬಳಸಿದ್ದಾರೆ. ಶ್ರೀರಾಮನು ಕೌಸಲ್ಯಾನಂದವರ್ಧನ; ಎಂದರೆ ತಾಯಿಯಾದ ಕೌಸಲ್ಯೆಯ ಆನಂದವನ್ನು ಹೆಚ್ಚುಮಾಡುವವನು. ಅವನು ‘ಸೀತಾಪತಿ’; ದಶರಥನ ಮಗ; ಲಕ್ಷ್ಮಣ, ಭರತ, ಶತ್ರುಘ್ನರ ಅಣ್ಣ; ಗುಹನ ಮಿತ್ರ; ಸುಗ್ರೀವನ ರಕ್ಷಕ; ಹನುಮಂತನ ಸ್ವಾಮಿ; ವಿಶ್ವಾಮಿತ್ರರ ಶಿಷ್ಯ; ವಿಭೀಷಣನ ಆಶ್ರಯದಾತ; ಶಬರಿಯ ಮೋಕ್ಷಕಾರಕ; ಅಹಲ್ಯೆಯ ಪಾಪನಿವಾರಕ – ಹೀಗೆ ಅವನ ಸಂಪರ್ಕಕ್ಕೆ ಬಂದವರೆಲ್ಲರಿಗೂ ತನ್ನ ವ್ಯಕ್ತಿತ್ವದ ಬೆಳಕನ್ನು ಕಾಣಿಸಿದ ಪುರುಷೋತ್ತಮ ಶ್ರೀರಾಮ. ಈ ಎಲ್ಲ ಗುಣಗಳಿಗೂ ಮೂಲ ಯಾವುದು ಎಂಬುದನ್ನು ವಾಲ್ಮೀಕಿಗಳೇ ಸೂಚಿಸುತ್ತಾರೆ: ‘ಶ್ರೀರಾಮ ಎಂದರೆ ಧರ್ಮದ ಮೂರ್ತರೂಪ.’</p>.<p>ಹೀಗಾಗಿ ‘ರಾಮ’ ಎಂದರೆ ಧರ್ಮ. ರಾಮನಿದ್ದ ಕಡೆ ಧರ್ಮ ಗಟ್ಟಿಯಾಗಿ ನೆಲೆಯೂರಿದೆ ಎಂದೇ ಹೌದು. ಎಲ್ಲಿ ಧರ್ಮ ನಾಲ್ಕು ಕಾಲಿನಿಂದ ನಿಂತಿರುತ್ತದೆಯೋ ಅದೇ ದಿಟವಾದ ರಾಷ್ಟ್ರ ಎಂಬುದನ್ನು ರಾಮಾಯಣವು ಶ್ರೀರಾಮನ ವ್ಯಕ್ತಿತ್ವದ ಮೂಲಕ ಸಾರಿ ಹೇಳುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>