<p>ಮತ್ತೊಮ್ಮೆ ಯುಗಾದಿ ಬಂದಿದೆ; ನೂತನ ಸಂವತ್ಸರ ಆರಂಭವಾಗಿದೆ. ಈ ಹೊಸ ವರ್ಷ ತನ್ನ ಹೆಸರಿನಲ್ಲೇ ಒಳಿತನ್ನಂತೂ ತುಂಬಿಕೊಂಡುಬರುತ್ತಿದೆ. ‘ಈ ವರ್ಷ ಸಂತೋಷವನ್ನು ತರಲಿ; ಧೈರ್ಯವಾಗಿ ರಸ್ತೆಗಳಲ್ಲಿ ಓಡಾಡುವಂತಾಗಲಿ; ಮಕ್ಕಳು ಹೊರಗೆ ಆಟ ಆಡುವಂತಾಗಲಿ; ಒಬ್ಬರ ಮನೆಗೆ ಇನ್ನೊಬ್ಬರು ಎಂದಿನಂತೆ ವಿಶ್ವಾಸದಿಂದ ಹೋಗಿ–ಬರುವಂತಾಗಲಿ; ಪರಸ್ಪರ ಸ್ನೇಹ–ಬಾಂಧವ್ಯಗಳ ಎಳೆ ಗಟ್ಟಿಯಾಗಲಿ’ – ಇವು, ಇಂಥವು ನಮ್ಮೆಲ್ಲರ ಆಶಯವೂ ಆಗಿದೆ. ಸುಮಾರು ಎರಡು ವರ್ಷಗಳಿಂದ ಒಂದು ವಿಧದ ‘ವಿಚಿತ್ರವೂ ವಿಭಿನ್ನವೂ’ ಎನಿಸಿದ ಆಘಾತಕ್ಕೆ ತುತ್ತಾಗಿರುವ ನಮ್ಮೆಲ್ಲರಿಗೂ ಈಗ ಸಾಂತ್ವನ, ನೆಮ್ಮದಿ, ಭರವಸೆ, ಸಂತೋಷ ಬೇಕಿದೆ; ಶುಭ ಎಂದರೆ ಇಂಥವೇ ಅಲ್ಲವೆ?</p>.<p>ಯುಗಾದಿ ಎಂದ ಕೂಡಲೇ ಬೇವು–ಬೆಲ್ಲ ಎನ್ನುತ್ತೇವೆ. ‘ಬೇವು–ಬೆಲ್ಲ’ ಎಂದರೆ ಸುಖ–ದುಃಖಗಳು ಎಂದು ವರ್ಗೀಕರಿಸುತ್ತೇವೆ. ಈ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂಬ ಆಶಯವೇ ಯುಗಾದಿಯ ಸಂದೇಶ ಎಂಬ ತತ್ತ್ವವನ್ನೂ ಹೊರಡಿಸುತ್ತೇವೆ. ಯುಗಾದಿಯ ಪರ್ವದಲ್ಲಿ ಸಮತೋಲನದ ಈ ಪಾಠ ಸೇರಿದೆಯೆ?</p>.<p>ಯುಗಾದಿಗೂ ಪ್ರಕೃತಿಗೂ ನೇರ ನಂಟಿದೆ. ಕಾಲದ ಅಳತೆಯೊಂದಿಗೆ ನಂಟನ್ನು ಹೊಂದಿರುವ ಹಬ್ಬ ಯುಗಾದಿ. ಯುಗದ ಆರಂಭವೇ ‘ಯುಗಾದಿ’. ‘ಯುಗ’ ಎಂದರೆ ವಿಸ್ತಾರವಾದ ಕಾಲದ ಎಣಿಕೆ ಎಂದು ಒಂದು ಅರ್ಥ; ನಾಲ್ಕು ಯುಗಗಳ ಚಕ್ರ, ಸೃಷ್ಟಿ–ಪ್ರಳಯ – ಇವು ಅದರೊಂದಿಗೆ ಸೇರಿಕೊಳ್ಳುತ್ತವೆ. ‘ಯುಗ’ ಎಂದರೆ ಜೋಡಿ ಎಂಬ ಅರ್ಥವೂ ಇದೆ; ಸುಖ–ದುಃಖ, ಒಳಿತು–ಕೆಡಕು ಎಂಬ ಭಾವಗಳೂ ಕತ್ತಲೆ–ಬೆಳಕು, ಹುಟ್ಟ–ಸಾವು ಎಂಬ ಜೋಡಿಗಳೂ ಸೃಷ್ಟಿನಿಯಮದ ಅನಿವಾರ್ಯ ತಥ್ಯಗಳು ಎಂಬುದನ್ನು ಈ ‘ಯುಗ’ದ ಕಲ್ಪನೆಯಲ್ಲಿ ಕಾಣಬಹುದು. ನೇಗಿಲಿನ ಮತ್ತು ಬಂಡಿಯ ನೊಗಕ್ಕೂ ‘ಯುಗ’ ಎಂದು ಹೆಸರು; ಇದು ಜೀವನಪಯಣವನ್ನೂ ಸಂಕೇತಿಸುತ್ತದೆ; ಜೀವನಾಧಾರವಾದ ಕೃಷಿಯನ್ನೂ ಸಂಕೇತಿಸುತ್ತದೆ. ಯುಗಗಳ ಕಲ್ಪನೆ, ಸೃಷ್ಟಿಚಕ್ರ, ಪ್ರಕೃತಿಯ ವಿನ್ಯಾಸ, ಕೃಷಿ – ಇವಾವುದೂ ಏಕಮುಖ ಸಂಚಾರವಲ್ಲ; ಇವೆಲ್ಲವೂ ಸುಖ–ದುಃಖ, ಹುಟ್ಟು–ಸಾವು, ರಾತ್ರಿ–ಹಗಲು – ಇಂಥ ಜೋಡಿಯ ಸಾಮರಸ್ಯದ ಕುಣಿತಗಳೇ ಹೌದು ಎಂಬುದು ಎದ್ದುಕಾಣುವ ವಿವರ. ಜೀವನಚಕ್ರದ ಓಟ ನಿರಂತರವಾಗಿರಬೇಕು; ಕತ್ತಲೆ–ಬೆಳಕುಗಳು ಈ ಓಟಕ್ಕೆ ಅಡ್ಡಿಗಳನ್ನಾಗಿಸಿಕೊಳ್ಳಬಾರದು ಎಂಬ ಪ್ರಕೃತಿಯ ಪಾಠವೇ ಯುಗಾದಿಯ ಸಂದೇಶವೂ ಆಗಿದೆ.</p>.<p>ಬದಲಾವಣೆ ಜಗದ ನಿಯಮ. ಬದಲಾವಣೆ ಎಂದರೆ ಈಗಿರುವ ಸ್ಥಿತಿಗೆ ಒದಗುವ ಮಾರ್ಪಾಡು; ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಾಗುವ ಸಹಜಯಾನ. ಪ್ರಕೃತಿಯಲ್ಲಿ ಉಂಟಾಗುವ ಇಂಥ ಸುಂದರವಾದ ಬದಲಾವಣೆಯ ಸಮಯವನ್ನೇ ನಮ್ಮ ಪೂರ್ವಜರು ಸೃಷ್ಟಿಯ ಮೊದಲ ಕ್ಷಣ, ನಮ್ಮ ಜೀವನದ ಪ್ರಥಮ ಮುಹೂರ್ತ, ಕಾಲಚಕ್ರದ ಆರಂಭ ಗತಿ ಎಂದರು. ಇದೇ ‘ಯುಗಾದಿ’.</p>.<p>ಬದಲಾವಣೆ ಎಂದರೆ ಹೊಸತು; ಹೊಸತು ಎಂದರೆ ಉಲ್ಲಾಸ; ಉಲ್ಲಾಸ ಎಂದರೆ ಬದುಕು. ಬದುಕು ಎಂದರೆ ಬದಲಾವಣೆ. ಇದು ಯುಗಾದಿಯ ಸಂದೇಶವೂ ಹೌದು, ಸಂತೋಷವೂ ಹೌದು.</p>.<p>ಬೀಜ ಮೊಳಕೆಯಾಗಿ ಒಡೆಯುತ್ತದೆ; ಗಿಡವಾಗುತ್ತದೆ; ಮರವಾಗಿ ಬೆಳೆಯುತ್ತದೆ; ಮರದಲ್ಲಿ ಹೂವು ಅರಳುತ್ತದೆ; ಅರಳಿದ ಹೂವು ಕಾಯಾಗಿ ಕಸುವನ್ನು ಪಡೆಯುತ್ತದೆ; ಹಣ್ಣಾಗುತ್ತದೆ. ಹಣ್ಣು ಮರದ ಕೊನೆಯ ಸ್ಥಿತಿಯಲ್ಲ – ಅದರ ಪುನರ್ಜನ್ಮದ ಮೊದಲ ಹಂತ. ಹಣ್ಣಿನಲ್ಲಿರುವ ಬೀಜ ಮುಂದಿನ ಮರದ ಸೂಕ್ಷ್ಮರೂಪ. ಬೀಜವೊಂದು ಮರವಾಗಿ ಬೆಳೆಯುವ ಹಂತಗಳು ಒಂದು ಇನ್ನೊಂದಕ್ಕೆ ಪೂರಕ; ಯಾವುದೇ ಹಂತವೂ ತನ್ನಷ್ಟಕ್ಕೆ ತಾನೇ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಎಲ್ಲ ಹಂತಗಳೂ ಸುಂದರವಾದಂಥವು; ಅನಿವಾರ್ಯವಾದಂಥವು; ಪರಿಪೂರ್ಣವಾದಂಥವು. ಪ್ರಕೃತಿಯ ಈ ಬದಲಾವಣೆಯ ಸೊಗಸಿನ ಸಂದರ್ಭಗಳೇ ಋತುಗಳು. ವಸಂತಋತು ಎಂದರೆ ಪ್ರಕೃತಿಯು ಹಸಿರಿನಿಂದ ಸಜ್ಜಾಗುವ ಸುಂದರಸಮಯ. ಈ ಋತುವಿನ ಚೈತ್ರಮಾಸದ ಮೊದಲ ದಿನವೇ ಯುಗಾದಿ. ಚಿಗುರೊಂದು ಮುಂದೆ ಹಣ್ಣಾಗಿ ಪೂರ್ಣತೆಯನ್ನು ಪಡೆಯಲು ಸಾಧ್ಯವಾಗಿಸುವಂಥ ಆರಂಭದ ಕ್ಷಣವಿದು. ಉದುರುವಿಕೆ; ಅರಳುವಿಕೆ; ಅಗಲುವಿಕೆ; ಚಿಗುರುವಿಕೆ – ಇವು ಸಮಗ್ರವೂ ಪರಿಪೂರ್ಣವೂ ಆದ ಕಾರ್ಯಚಕ್ರದ ಬೇರೆ ಬೇರೆ ಗತಿಗಳಷ್ಟೆ. ಇಂಥ ಸಂದೇಶವನ್ನು ನಮಗೆ ಪ್ರಕೃತಿ ನೀಡುತ್ತಿದೆ.</p>.<p>ಸುಖ–ದುಃಖಗಳನ್ನು ಹೀಗೆ ನಾವು ಸ್ವೀಕರಿಸಿದ್ದೇವೆ ಎಂಬುದರ ಸಾಂಕೇತಿಕತೆಯನ್ನು ಬೇವು–ಬೆಲ್ಲಗಳ ಮಿಶ್ರಣವನ್ನು ತಿನ್ನುವುದರಲ್ಲಿ ಕಾಣಬಹುದಾಗಿದೆ. ಯುಗದ ಆದಿಯಲ್ಲಿಯೇ ಬದುಕನ್ನು ಧೈರ್ಯವಾಗಿಯೂ ಸಂತಸವಾಗಿಯೂ ಸ್ವೀಕರಿಸುವಂಥ ವಿವೇಕವೇ ಯುಗಾದಿಹಬ್ಬದ ಮೂಲತತ್ತ್ವ. ಇದೇ ನಮಗಿಂದು ಬೇಕಾಗಿರುವ ಅಂತರಂಗದ ಸತ್ತ್ವ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮತ್ತೊಮ್ಮೆ ಯುಗಾದಿ ಬಂದಿದೆ; ನೂತನ ಸಂವತ್ಸರ ಆರಂಭವಾಗಿದೆ. ಈ ಹೊಸ ವರ್ಷ ತನ್ನ ಹೆಸರಿನಲ್ಲೇ ಒಳಿತನ್ನಂತೂ ತುಂಬಿಕೊಂಡುಬರುತ್ತಿದೆ. ‘ಈ ವರ್ಷ ಸಂತೋಷವನ್ನು ತರಲಿ; ಧೈರ್ಯವಾಗಿ ರಸ್ತೆಗಳಲ್ಲಿ ಓಡಾಡುವಂತಾಗಲಿ; ಮಕ್ಕಳು ಹೊರಗೆ ಆಟ ಆಡುವಂತಾಗಲಿ; ಒಬ್ಬರ ಮನೆಗೆ ಇನ್ನೊಬ್ಬರು ಎಂದಿನಂತೆ ವಿಶ್ವಾಸದಿಂದ ಹೋಗಿ–ಬರುವಂತಾಗಲಿ; ಪರಸ್ಪರ ಸ್ನೇಹ–ಬಾಂಧವ್ಯಗಳ ಎಳೆ ಗಟ್ಟಿಯಾಗಲಿ’ – ಇವು, ಇಂಥವು ನಮ್ಮೆಲ್ಲರ ಆಶಯವೂ ಆಗಿದೆ. ಸುಮಾರು ಎರಡು ವರ್ಷಗಳಿಂದ ಒಂದು ವಿಧದ ‘ವಿಚಿತ್ರವೂ ವಿಭಿನ್ನವೂ’ ಎನಿಸಿದ ಆಘಾತಕ್ಕೆ ತುತ್ತಾಗಿರುವ ನಮ್ಮೆಲ್ಲರಿಗೂ ಈಗ ಸಾಂತ್ವನ, ನೆಮ್ಮದಿ, ಭರವಸೆ, ಸಂತೋಷ ಬೇಕಿದೆ; ಶುಭ ಎಂದರೆ ಇಂಥವೇ ಅಲ್ಲವೆ?</p>.<p>ಯುಗಾದಿ ಎಂದ ಕೂಡಲೇ ಬೇವು–ಬೆಲ್ಲ ಎನ್ನುತ್ತೇವೆ. ‘ಬೇವು–ಬೆಲ್ಲ’ ಎಂದರೆ ಸುಖ–ದುಃಖಗಳು ಎಂದು ವರ್ಗೀಕರಿಸುತ್ತೇವೆ. ಈ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂಬ ಆಶಯವೇ ಯುಗಾದಿಯ ಸಂದೇಶ ಎಂಬ ತತ್ತ್ವವನ್ನೂ ಹೊರಡಿಸುತ್ತೇವೆ. ಯುಗಾದಿಯ ಪರ್ವದಲ್ಲಿ ಸಮತೋಲನದ ಈ ಪಾಠ ಸೇರಿದೆಯೆ?</p>.<p>ಯುಗಾದಿಗೂ ಪ್ರಕೃತಿಗೂ ನೇರ ನಂಟಿದೆ. ಕಾಲದ ಅಳತೆಯೊಂದಿಗೆ ನಂಟನ್ನು ಹೊಂದಿರುವ ಹಬ್ಬ ಯುಗಾದಿ. ಯುಗದ ಆರಂಭವೇ ‘ಯುಗಾದಿ’. ‘ಯುಗ’ ಎಂದರೆ ವಿಸ್ತಾರವಾದ ಕಾಲದ ಎಣಿಕೆ ಎಂದು ಒಂದು ಅರ್ಥ; ನಾಲ್ಕು ಯುಗಗಳ ಚಕ್ರ, ಸೃಷ್ಟಿ–ಪ್ರಳಯ – ಇವು ಅದರೊಂದಿಗೆ ಸೇರಿಕೊಳ್ಳುತ್ತವೆ. ‘ಯುಗ’ ಎಂದರೆ ಜೋಡಿ ಎಂಬ ಅರ್ಥವೂ ಇದೆ; ಸುಖ–ದುಃಖ, ಒಳಿತು–ಕೆಡಕು ಎಂಬ ಭಾವಗಳೂ ಕತ್ತಲೆ–ಬೆಳಕು, ಹುಟ್ಟ–ಸಾವು ಎಂಬ ಜೋಡಿಗಳೂ ಸೃಷ್ಟಿನಿಯಮದ ಅನಿವಾರ್ಯ ತಥ್ಯಗಳು ಎಂಬುದನ್ನು ಈ ‘ಯುಗ’ದ ಕಲ್ಪನೆಯಲ್ಲಿ ಕಾಣಬಹುದು. ನೇಗಿಲಿನ ಮತ್ತು ಬಂಡಿಯ ನೊಗಕ್ಕೂ ‘ಯುಗ’ ಎಂದು ಹೆಸರು; ಇದು ಜೀವನಪಯಣವನ್ನೂ ಸಂಕೇತಿಸುತ್ತದೆ; ಜೀವನಾಧಾರವಾದ ಕೃಷಿಯನ್ನೂ ಸಂಕೇತಿಸುತ್ತದೆ. ಯುಗಗಳ ಕಲ್ಪನೆ, ಸೃಷ್ಟಿಚಕ್ರ, ಪ್ರಕೃತಿಯ ವಿನ್ಯಾಸ, ಕೃಷಿ – ಇವಾವುದೂ ಏಕಮುಖ ಸಂಚಾರವಲ್ಲ; ಇವೆಲ್ಲವೂ ಸುಖ–ದುಃಖ, ಹುಟ್ಟು–ಸಾವು, ರಾತ್ರಿ–ಹಗಲು – ಇಂಥ ಜೋಡಿಯ ಸಾಮರಸ್ಯದ ಕುಣಿತಗಳೇ ಹೌದು ಎಂಬುದು ಎದ್ದುಕಾಣುವ ವಿವರ. ಜೀವನಚಕ್ರದ ಓಟ ನಿರಂತರವಾಗಿರಬೇಕು; ಕತ್ತಲೆ–ಬೆಳಕುಗಳು ಈ ಓಟಕ್ಕೆ ಅಡ್ಡಿಗಳನ್ನಾಗಿಸಿಕೊಳ್ಳಬಾರದು ಎಂಬ ಪ್ರಕೃತಿಯ ಪಾಠವೇ ಯುಗಾದಿಯ ಸಂದೇಶವೂ ಆಗಿದೆ.</p>.<p>ಬದಲಾವಣೆ ಜಗದ ನಿಯಮ. ಬದಲಾವಣೆ ಎಂದರೆ ಈಗಿರುವ ಸ್ಥಿತಿಗೆ ಒದಗುವ ಮಾರ್ಪಾಡು; ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಾಗುವ ಸಹಜಯಾನ. ಪ್ರಕೃತಿಯಲ್ಲಿ ಉಂಟಾಗುವ ಇಂಥ ಸುಂದರವಾದ ಬದಲಾವಣೆಯ ಸಮಯವನ್ನೇ ನಮ್ಮ ಪೂರ್ವಜರು ಸೃಷ್ಟಿಯ ಮೊದಲ ಕ್ಷಣ, ನಮ್ಮ ಜೀವನದ ಪ್ರಥಮ ಮುಹೂರ್ತ, ಕಾಲಚಕ್ರದ ಆರಂಭ ಗತಿ ಎಂದರು. ಇದೇ ‘ಯುಗಾದಿ’.</p>.<p>ಬದಲಾವಣೆ ಎಂದರೆ ಹೊಸತು; ಹೊಸತು ಎಂದರೆ ಉಲ್ಲಾಸ; ಉಲ್ಲಾಸ ಎಂದರೆ ಬದುಕು. ಬದುಕು ಎಂದರೆ ಬದಲಾವಣೆ. ಇದು ಯುಗಾದಿಯ ಸಂದೇಶವೂ ಹೌದು, ಸಂತೋಷವೂ ಹೌದು.</p>.<p>ಬೀಜ ಮೊಳಕೆಯಾಗಿ ಒಡೆಯುತ್ತದೆ; ಗಿಡವಾಗುತ್ತದೆ; ಮರವಾಗಿ ಬೆಳೆಯುತ್ತದೆ; ಮರದಲ್ಲಿ ಹೂವು ಅರಳುತ್ತದೆ; ಅರಳಿದ ಹೂವು ಕಾಯಾಗಿ ಕಸುವನ್ನು ಪಡೆಯುತ್ತದೆ; ಹಣ್ಣಾಗುತ್ತದೆ. ಹಣ್ಣು ಮರದ ಕೊನೆಯ ಸ್ಥಿತಿಯಲ್ಲ – ಅದರ ಪುನರ್ಜನ್ಮದ ಮೊದಲ ಹಂತ. ಹಣ್ಣಿನಲ್ಲಿರುವ ಬೀಜ ಮುಂದಿನ ಮರದ ಸೂಕ್ಷ್ಮರೂಪ. ಬೀಜವೊಂದು ಮರವಾಗಿ ಬೆಳೆಯುವ ಹಂತಗಳು ಒಂದು ಇನ್ನೊಂದಕ್ಕೆ ಪೂರಕ; ಯಾವುದೇ ಹಂತವೂ ತನ್ನಷ್ಟಕ್ಕೆ ತಾನೇ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಎಲ್ಲ ಹಂತಗಳೂ ಸುಂದರವಾದಂಥವು; ಅನಿವಾರ್ಯವಾದಂಥವು; ಪರಿಪೂರ್ಣವಾದಂಥವು. ಪ್ರಕೃತಿಯ ಈ ಬದಲಾವಣೆಯ ಸೊಗಸಿನ ಸಂದರ್ಭಗಳೇ ಋತುಗಳು. ವಸಂತಋತು ಎಂದರೆ ಪ್ರಕೃತಿಯು ಹಸಿರಿನಿಂದ ಸಜ್ಜಾಗುವ ಸುಂದರಸಮಯ. ಈ ಋತುವಿನ ಚೈತ್ರಮಾಸದ ಮೊದಲ ದಿನವೇ ಯುಗಾದಿ. ಚಿಗುರೊಂದು ಮುಂದೆ ಹಣ್ಣಾಗಿ ಪೂರ್ಣತೆಯನ್ನು ಪಡೆಯಲು ಸಾಧ್ಯವಾಗಿಸುವಂಥ ಆರಂಭದ ಕ್ಷಣವಿದು. ಉದುರುವಿಕೆ; ಅರಳುವಿಕೆ; ಅಗಲುವಿಕೆ; ಚಿಗುರುವಿಕೆ – ಇವು ಸಮಗ್ರವೂ ಪರಿಪೂರ್ಣವೂ ಆದ ಕಾರ್ಯಚಕ್ರದ ಬೇರೆ ಬೇರೆ ಗತಿಗಳಷ್ಟೆ. ಇಂಥ ಸಂದೇಶವನ್ನು ನಮಗೆ ಪ್ರಕೃತಿ ನೀಡುತ್ತಿದೆ.</p>.<p>ಸುಖ–ದುಃಖಗಳನ್ನು ಹೀಗೆ ನಾವು ಸ್ವೀಕರಿಸಿದ್ದೇವೆ ಎಂಬುದರ ಸಾಂಕೇತಿಕತೆಯನ್ನು ಬೇವು–ಬೆಲ್ಲಗಳ ಮಿಶ್ರಣವನ್ನು ತಿನ್ನುವುದರಲ್ಲಿ ಕಾಣಬಹುದಾಗಿದೆ. ಯುಗದ ಆದಿಯಲ್ಲಿಯೇ ಬದುಕನ್ನು ಧೈರ್ಯವಾಗಿಯೂ ಸಂತಸವಾಗಿಯೂ ಸ್ವೀಕರಿಸುವಂಥ ವಿವೇಕವೇ ಯುಗಾದಿಹಬ್ಬದ ಮೂಲತತ್ತ್ವ. ಇದೇ ನಮಗಿಂದು ಬೇಕಾಗಿರುವ ಅಂತರಂಗದ ಸತ್ತ್ವ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>