ಮಂಗಳವಾರ, ಮಾರ್ಚ್ 28, 2023
30 °C

ವಚನಾಮೃತ: ‘ಗುರು’ ಏನಿದರ ಅರ್ಥ?

ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ Updated:

ಅಕ್ಷರ ಗಾತ್ರ : | |

Prajavani

ಸಾವಿರಾರು ಸೂರ್ಯಚಂದ್ರರು ಹುಟ್ಟಿಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಇದು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ತೊಡೆದು ಹಾಕುತ್ತದೆ

‘ಗು’ ಎಂದರೆ ಅಂಧಕಾರ, ‘ರು’ ಎಂದರೆ ನಾಶಪಡಿಸುವವನು. ಅಂದರೆ, ಅಂಧಕಾರವನ್ನು ನಾಶಪಡಿಸುವವನು ಎಂದು. ಉಪನಿಷತ್ ಪ್ರಕಾರ ‘ಗುರು’ ಎಂದರೆ ಲೌಕಿಕ ಅಂಧಕಾರವನ್ನು ಆಧ್ಯಾತ್ಮಿಕ ಬೆಳಕಿನಿಂದ ತೊಲಗಿಸುವ ವ್ಯಕ್ತಿ ಎಂದು ನಿರೂಪಿಸಲ್ಪಡುತ್ತಾನೆ.

‘ಗುರು’ ಶಬ್ದದ ಮತ್ತೊಂದು ಅರ್ಥವನ್ನು ಗುರು ಗೀತಾದಲ್ಲಿ ‘ಗು’ ಅನ್ನು ‘ಗುಣಗಳನ್ನು ಮೀರಿ’ ಮತ್ತು ‘ರು’ ಅನ್ನು ‘ಆಕಾರ ರಹಿತ’ ಅಂದರೆ, ಗುಣಗಳನ್ನು ಅತಿಶಯಿಸುವ ಪ್ರವೃತ್ತಿಯನ್ನು ಅನುಗ್ರಹಿಸುವವನೇ ಗುರು ಎಂಬುದಾಗಿ ಹೇಳಲಾಗಿದೆ.

ಜಗತ್ತು ಕಂಡ ಶ್ರೇಷ್ಠ ಗುರು ಶ್ರೀ ರಾಮಕೃಷ್ಣರ ಪರಮಹಂಸರು. ಅವರ ಕೃಪೆಯಿಂದ ಕುರಿ ಕಾಯುವ ಅನಕ್ಷರಸ್ಥ ಹುಡುಗ ‘ಲಾಟು’ ಉನ್ನತಮಟ್ಟದ ಆಧ್ಯಾತ್ಮಿಕ ಸಾಧಕ ಸ್ವಾಮಿ ಅದ್ಭುತಾನಂದರಾದರು.

‘ನಾನು ಕುಡಿದ ಸಾರಾಯಿ ಬಾಟಲಿಗಳನ್ನು ಪೇರಿಸಿದರೆ ಗೌರಿಶಂಕರ ಶಿಖರವನ್ನು ಮೀರಿಸುತ್ತಿತು’ ಎಂದು ನಿರ್ಲಜ್ಜನಾಗಿ ಹೇಳುತ್ತಿದ್ದ ಗಿರೀಶ್ಚಂದ್ರಘೋಷ್ ಮುಂದೆ ಪರಮ ಸಂತನಾದ.

ತನ್ನ ಗುರುವಿನ ಮೇಲಿನ ಶ್ರದ್ಧಾಭಕ್ತಿಯಿಂದ ಏಕಲವ್ಯ ಬಿಲ್ಲು ವಿದ್ಯೆಯಲ್ಲಿ ಪರಿಣಿತನಾದ, ಕನಕದಾಸರು ಗುರುಗಳು ಕೊಟ್ಟ ‘ಕೋಣ ಮಂತ್ರ’ವನ್ನು ಜಪಿಸಿ ದಿವ್ಯ ಕೋಣನ ದರ್ಶನ ಪಡೆದರು.

ಕ್ರೂರಿಯಾದ ರತ್ನಾಕರ ನಾರದಮುನಿಯಿಂದ ‘ಮರಾ ಮಂತ್ರ’ವನ್ನು ಜಪಿಸಿ ರಾಮಾಯಣ ರಚಿಸಿ ವಾಲ್ಮೀಕಿ ಮುನಿಯಾದರು. ಗುರುವಾದವನು ಶಿಷ್ಯನಲ್ಲಿ ಎಂತಹ ಪರಿವರ್ತನೆಯನ್ನು ಮಾಡಬಲ್ಲ ಎಂಬುದಕ್ಕೆ ಇವರೆಲ್ಲರೂ ನಮ್ಮ ಮುಂದೆ ನಿದರ್ಶನವಾಗಿ ನಿಂತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು