ಕೆರೂರ: ‘ಸ್ಥಳೀಯ ತರಕಾರಿ ಮಾರ್ಕೆಟ್ನಿಂದ ಹುಲ್ಲಿಕೇರಿ ರಸ್ತೆ ಸಂಪರ್ಕಿಸುವ ಪ್ರಮುಖ ಮಹಾತ್ಮ ಗಾಂಧಿ ರಸ್ತೆಗೆ ಡಾಂಬರೀಕರಣ ಹಾಗೂ ಚರಂಡಿ, ಕುಡಿಯುವ ನೀರಿನ ಪೈಪಲೈನ್ ಜೋಡಣೆ ಕಾಮಗಾರಿಗಳು ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಫೇಸ್–3 ಅಡಿಯಲ್ಲಿ ಒಟ್ಟು ₹ 1.70 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿವೆ’ ಎಂದು ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ಮಾರ್ಕೆಟ್ನ ಅಗಸಿ ಬಳಿ ರಾಷ್ಟ್ರೀಯ ಹೆದ್ದಾರಿ (ಪೊಲೀಸ್ ಸ್ಟೇಷನ್) ರಸ್ತೆಯಿಂದ ಮಹಾತ್ಮಗಾಂಧಿ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ನಗರೋತ್ಥಾನ ಯೋಜನೆ ಕಾಮಗಾರಿಗಳು ಪಟ್ಟಣಗಳ ಅಭಿವೃದ್ಧಿಗೆ ಮುಖ್ಯವಾಗಿವೆ. ನಾಗರಿಕರು ಕಾಮಗಾರಿ ವೇಳೆ ಸಹಕರಿಸಿ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.
‘ಸ್ಥಳಿಯ ನೆಹರೂ ನಗರದ ರಾಷ್ಟ್ರೀಯ ಹೆದ್ದಾರಿ ಬದಿಯ ಅಮೃತ ಹೋಟೆಲ್ನಿಂದ ಮಲ್ಲಿಕಾರ್ಜುನ ಶಾಲೆಯವರೆಗೆ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ಒಟ್ಟು ₹ 25 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ (ಸಿ.ಸಿ) ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ’ ಎಂದು ಶಾಸಕ ಬಿ.ಬಿ. ಚಿಮ್ಮನಕಟ್ಟಿ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಡಾ.ಎಂ.ಜಿ. ಕಿತ್ತಲಿ ಮಾತನಾಡಿ, ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಲ್ಲಿ ಮೊದಲು 3 ಪ್ರಮುಖ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಫೇಸ್–1 ರಲ್ಲಿ ಸ್ಥಳೀಯ ರಿಂಗ್ ರಸ್ತೆ, 2ರಲ್ಲಿ ಬೆಳಗಂಟಿ ಹಾಗೂ ಮೇಗಾಡಿ ಸಂಪರ್ಕಿಸುವ ಮುಖ್ಯ ರಸ್ತೆ ಹಾಗೂ ಈಗ ಫೇಸ್–3 ರಲ್ಲಿ ಮಾರ್ಕೆಟ್ನ ಎಂ.ಜಿ ರಸ್ತೆಗೆ ಡಾಂಬರೀಕರಣ, ಚರಂಡಿ ನಿರ್ಮಿಸಲಾಗುತ್ತಿದೆ ಎಂದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಗೈಬುಸಾಬ್ ಡಾಲಾಯತ, ಉಪಾಧ್ಯಕ್ಷೆ ಸುವರ್ಣಾ ಘಟ್ಟದ, ಧುರೀಣ ಕುಮಾರ ಘಟ್ಟದ, ಮಾಜಿ ಅಧ್ಯಕ್ಷ ಬಿ.ಬಿ. ಸೂಳಿಕೇರಿ, ಸದಾನಂದ ಮದಿ, ಸಿದ್ದಣ್ಣ ಕೊಣ್ಣೂರ, ಅಶೋಕ ಜಿಗಳೂರ, ಡಾ.ಬಿ.ಕೆ. ಕೋವಳ್ಳಿ, ಸೈದುಸಾಬ್ ಚೌದ್ರಿ, ಮಹಾಬಳೇಶ್ವರ ಘಟ್ಟದ, ಮಹ್ಮದ್ ರಫೀಕ್ ಪೀರಖಾನ್ ಇದ್ದರು.