ಗುಳೇದಗುಡ್ಡ (ಬಾಗಲಕೋಟೆ ಜಿಲ್ಲೆ): ಪಟ್ಟಣದ ಲಾಲ್ಬಹಾದ್ದೂರ ಶಾಸ್ತ್ರಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ದಶಮಾನೋತ್ಸವ ಮತ್ತು ಅಯೋಧ್ಯೆಯ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸೋಮವಾರ (ಜನವರಿ 22) ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಪ್ರತಿ ಮಗುವಿಗೆ ₹5 ಸಾವಿರ ಠೇವಣಿ ವಾಗ್ದಾನ ಮಾಡಲಾಗಿತ್ತು. ಅದರಂತೆ ಜನಿಸಿದ ಐವರು ಮಕ್ಕಳ ಹೆಸರಿನಲ್ಲಿ ಠೇವಣಿ ಇಡಲಾಯಿತು.
‘ಮಗುವಿಗೆ ₹5 ಸಾವಿರ ಹಣ ಕೊಟ್ಟರೆ, ಅದು ಉಳಿಯದು. ಅದನ್ನೇ ಠೇವಣಿ ಇಟ್ಟರೆ, 18 ವರ್ಷದ ಬಳಿಕ ₹25 ಸಾವಿರ ಸಿಗುತ್ತದೆ. ಮಗುವಿನ ಶಿಕ್ಷಣಕ್ಕೆ ಅನುಕೂಲವಾಗುತ್ತದೆ’ ಎಂದು ಸಂಘದ ಅಧ್ಯಕ್ಷ ರಾಜು ತಾಪಡಿಯಾ ಹೇಳಿದರು.
‘ಸೋಮವಾರ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 5 ಮಕ್ಕಳು ಜನಿಸಿವೆ’ ಎಂದು ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕುರಿ ತಿಳಿಸಿದರು.