ಬಾಗಲಕೋಟೆ: ಪತ್ನಿ ಶೀಲಶಂಕಿಸಿ ಕೊಲೆ ಮಾಡಿದ್ದ ಪತಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ. ವಿಜಯ ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಜಿಲ್ಲೆಯ ಹುನಗುಂದ ತಾಲ್ಲೂಕಿನ ಹೂವಿನಹಲ್ಲಿಯ ಮುತ್ತಪ್ಪ ಬಡ್ಡಿ ಶಿಕ್ಷೆಗೆ ಗುರಿಯಾದ ಅಪರಾಧಿ. ಸಾವಿತ್ರಿ ಕೊಲೆಯಾದವರು.
ಘಟನೆ: ಪತಿ, ಪತ್ನಿಯ ನಡುವೆ ಆಗಾಗ ಜಗಳವಾಗುತ್ತಿತ್ತು. 2022ರಲ್ಲಿ ಪತ್ನಿ ಸಾವಿತ್ರಿಯೊಂದಿಗೆ ಜಗಳ ತೆಗೆದಿದ್ದ ಮುತ್ತಪ್ಪ, ಅವರ ಕುತ್ತಿಗೆಗೆ ಹಗ್ಗದಿಂದ ಬಿಗಿಯಾಗಿ ಬಿಗಿದು, ಬೆಡಗದಿಂದ ಕುತ್ತಿಗೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದನು.
ಕೊಲೆ ಮಾಡಿ ಮಹಾಂತೇಶ, ವಿಠ್ಠಲ, ಹನುಮಂತ ಅವರ ಮುಂದೆ ತನ್ನ ಹೆಂಡತಿಯನ್ನು ಕೊಂದಿರುವುದಾಗಿ ಮುತ್ತಪ್ಪ ತಪ್ಪೊಪ್ಪಿಕೊಂಡಿದ್ದನು.
ಶಿಕ್ಷೆಯ ಜತೆಗೆ ₹5 ಸಾವಿರ ದಂಡ ವಿಧಿಸಲಾಗಿದೆ. ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಧಾನ ಸರ್ಕಾರಿ ಅಭಿಯೋಜಕ ವಿ.ಜಿ. ಹೆಬಸೂರ ವಾದ ಮಂಡಿಸಿದ್ದರು.