ಕಳಸದ ಮಾರ್ಗದ ಮೂಲಕ ವಿಜಯಪುರಕ್ಕೆ ಹೋಗುತ್ತಿದ್ದ ಕ್ಯಾಂಟರ್ ವಾಹನವನ್ನು ಎರಡು ಪಲ್ಸರ್ ಬೈಕ್ಗಳಲ್ಲಿ ನಾಲ್ವರು ಕಳ್ಳರು ಹಿಂಬಾಲಿಸಿದ್ದರು. ಕ್ಯಾಂಟರ್ ವಾಹನ ನಿಲ್ಲಿಸಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಹನದಿಂದ ಕೆಳಗಿಳಿಸಿದರು. ಅವರಲ್ಲೊಬ್ಬ ಚಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಕ್ಯಾಂಟರ್ ವಾಹನದ ಹಿಂಬದಿಗೆ ಕರೆದುಕೊಂಡು ಹೋದ. ಉಳಿದ ಮೂರು ಕಳ್ಳರು ಗಾಡಿಯಲ್ಲಿ ಕುಳಿತಿದ್ದ ಕಿರಾಣಿ ಅಂಗಡಿ ಮಾಲೀಕ ಬಸವರಾಜ ಹುದ್ದಾರ ಅವರಿಗೆ ಮಾರಾಕಾಸ್ತ್ರ ತೋರಿಸಿ ಕೆಳಗೆ ಇಳಿಸಿ ಕಣ್ಣಿಗೆ ಖಾರದ ಪುಡಿ ಎರಚಿ ₹ 5,53,300 ನಗದು ಇದ್ದ ಬ್ಯಾಗ್ ಅನ್ನು ಕಿತ್ತುಕೊಂಡು ರಾಷ್ಟ್ರೀಯ ಹೆದ್ದಾರಿ ಕಡೆ ಪರಾರಿಯಾಗಿದ್ದಾರೆ.