ಬಾಗಲಕೋಟೆ: ಈ ಬಾರಿಜಿಲ್ಲೆಯಲ್ಲಿ ಬಿಟ್ಟೂಬಿಡದೆ ಕಾಡುತ್ತಿರುವ ಮಳೆಯ ಆರ್ಭಟಕ್ಕೆ ಹೊಲದಲ್ಲಿಯೇ ಈರುಳ್ಳಿ ಬೆಳೆ ನಾಶವಾಗಿದೆ. ಇದು ಬೆಳೆಗಾರ ಹಾಗೂ ಗ್ರಾಹಕ ಇಬ್ಬರಲ್ಲೂ ಕಣ್ಣೀರು ತರಿಸಿದೆ.
ಬಾಗಲಕೋಟೆ ಎಪಿಎಂಸಿಯಲ್ಲಿ ಈರುಳ್ಳಿ ಕ್ವಿಂಟಲ್ಗೆ ಈಗ ಗರಿಷ್ಠ ₹4000 ಬೆಲೆ ಇದೆ. ಉತ್ತರ ಕರ್ನಾಟಕದ ಅತಿದೊಡ್ಡ ಮಾರುಕಟ್ಟೆ ಎನಿಸಿದ ಹುಬ್ಬಳ್ಳಿ ಎಪಿಎಂಸಿಯಲ್ಲಿ ಗರಿಷ್ಠ ₹9000ಕ್ಕೆ ಆವಕ ಆಗಿದೆ. ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಿ ಒಂದಷ್ಟು ರೊಕ್ಕ ಎಣಿಸಿಕೊಳ್ಳೋಣ ಎಂದರೆ ರೈತನ ಬಳಿ ಈರುಳ್ಳಿಯೇ ಇಲ್ಲ. ಇತ್ತ ಚಿಲ್ಲರೆ ಮಾರುಕಟ್ಟೆಯಲ್ಲಿ ಕಿಲೋಗೆ ₹80 ಇದ್ದು, ಈರುಳ್ಳಿ ಕೊಳ್ಳಲಾಗದೇ ಗ್ರಾಹಕರು ಏದುಸಿರುಬಿಡುತ್ತಿದ್ದಾರೆ.
ಶೇ 100ರಷ್ಟು ನಾಶ:10 ವರ್ಷಗಳಲ್ಲಿ ಮೊದಲ ಬಾರಿಗೆ ಬಿತ್ತನೆ ಮಾಡಿದ ಶೇ100 ರಷ್ಟುಬೆಳೆ ನಾಶವಾಗಿದೆ. ಈ ಹಿಂದೆ ಅತಿವೃಷ್ಟಿ, ರೋಗ, ಮಳೆ ಕೊರತೆ ಯಿಂದ ಒಂದಷ್ಟು ಭಾಗ ಫಸಲು ನಾಶ ವಾಗುತ್ತಿತ್ತು. ಆದರೆ ಈ ಬಾರಿ ಏನೂ ಉಳಿದಿಲ್ಲ ಎಂದುಬಾಗಲಕೋಟೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಹುಲ್ ಬಾವಿದೊಡ್ಡಿ ಹೇಳುತ್ತಾರೆ.
ನಿರಂತರ ಮಳೆ ಈರುಳ್ಳಿ ಕೀಳಲು ಅವಕಾಶ ಮಾಡಿ ಕೊಡಲಿಲ್ಲ. ಹೊಲಗಳಲ್ಲಿ ನೀರು ನಿಂತು ಗಡ್ಡೆ ಸಂಪೂರ್ಣ ಕೊಳೆತು ಹೋಗಿದೆ. ಫಸಲು ಕಿತ್ತವರು ಅದನ್ನು ಒಕ್ಕಲು ಸಾಧ್ಯವಾಗದೇ ಹೊಲದಲ್ಲಿಯೇ ಬಿಡಬೇಕಾಯಿತು. ಅಲ್ಲಿಯೇ ಮೊಳಕೆ ಬಂದು ಹಾಳಾಗಿವೆ.
’ಈ ಹಿಂದೆ ಸ್ಥಳೀಯವಾಗಿ ಈರುಳ್ಳಿ ಪೂರೈಕೆ ಕಡಿಮೆ ಆದಾಗ ಮಹಾರಾಷ್ಟ್ರದಿಂದ ಬರುವ ಫಸಲು ಇಲ್ಲಿನ ಬೇಡಿಕೆ ಪೂರೈಸುತ್ತಿತ್ತು. ಈ ವರ್ಷ ಅಲ್ಲಿಯೂ ಮಳೆಗೆ ಈರುಳ್ಳಿ ಹಾಳಾಗಿದೆ. ಹೀಗಾಗಿ ಗ್ರಾಹಕರು ಹಣ ಕೊಟ್ಟರೂ ಈರುಳ್ಳಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ‘ ಎಂದು ಬಾಗಲಕೋಟೆಯ ನವನಗರದ ಈರುಳ್ಳಿ ವ್ಯಾಪಾರಿಲಾಲ್ಸಾಬ್ ಬಾಗವಾನ ಹೇಳುತ್ತಾರೆ.