ಘಟಪ್ರಭೆ ಕಲುಷಿತ: ಮೀನುಗಳ ಮಾರಣಹೋಮ

ಬಾಗಲಕೋಟೆ: ಇಲ್ಲಿನ ಮುಧೋಳ ತಾಲ್ಲೂಕು ಮಾಚಕನೂರು ಹಾಗೂ ರಬಕವಿ–ಬನಹಟ್ಟಿ ತಾಲ್ಲೂಕಿನ ಢವಳೇಶ್ವರ ಬಳಿಯ ಘಟಪ್ರಭಾ ನದಿಯಲ್ಲಿ ನಾಲ್ಕು ದಿನಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿವೆ.
ನದಿಯ ನೀರು ಕೆಂಬಣ್ಣಕ್ಕೆ ತಿರುಗಿದೆ. ಮೀಸಿ, ಬಾಳೆ, ಹಾವು, ಕೀಚ್ ಸೇರಿದಂತೆ ಬೇರೆ ಬೇರೆ ಜಾತಿಯ ಮೀನುಗಳು ಸಾವಿಗೀಡಾಗಿವೆ. ನದಿಯ ದಂಡೆಯಲ್ಲಿ ದುರ್ವಾಸನೆ ಬರುತ್ತಿದೆ.
ವಿಚಿತ್ರ ಸಂಕಟ: ಮೀನುಗಳು ನೀರಿನಿಂದ ಹೊರಗೆ ಮುಖ ಮಾಡಿ ಏದುಸಿರು ಬಿಡುತ್ತಾ, ಸಂಕಟಪಡುತ್ತಾ ಒದ್ದಾಡಿ ಜೀವ ಬಿಡುವುದು ಮಾಚಕನೂರು ಸೇತುವೆ ಬಳಿಯ ನದಿ ದಡಕ್ಕೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಕಂಡುಬಂದಿತು.
ಡಂಗುರ ಹೊಡೆಸಿದ್ದೇವೆ: 'ನದಿಯಲ್ಲಿ ಹಿಡಿದ ಮೀನು ಯಾರೂ ತಿನ್ನದಂತೆ ಊರಿನಲ್ಲಿ ಡಂಗುರ ಹೊಡೆಸಿದ್ದೇವೆ. ಇಲ್ಲಿನ ನೀರು ಕುಡಿದ ದನಗಳಿಗೂ ಭೇದಿ ಆಗಿದೆ' ಎಂದು ಗ್ರಾಮದ ಹಿರಿಯರಾದ ದುಂಡಪ್ಪ ದಾಸರಡ್ಡಿ ಹೇಳಿದರು.
'ಬೆಳಗಾವಿ ಜಿಲ್ಲೆ ಗೋಕಾಕ ಹಾಗೂ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಘಟಪ್ರಭಾ ನದಿ ದಂಡೆಯಲ್ಲಿ ಸಕ್ಕರೆ, ಸಿಮೆಂಟ್ ಉದ್ದಿಮೆ ನೆಲೆ ನಿಂತಿವೆ. ಕೆಲವು ಕಾರ್ಖಾನೆಯವರು ಕಲುಷಿತ ನೀರನ್ನು ಶುದ್ಧೀಕರಿಸದೇ ನೇರವಾಗಿ ನದಿಗೆ ಬಿಡುತ್ತಾರೆ. ಆ ನೀರು ಕುಡಿಯುವ ಜಲಚರಗಳು ಸಾವಿಗೀಡಾಗುತ್ತಿವೆ. ಹೊಲಕ್ಕೆ ಹಾಯಿಸಿದರೆ ಪೈರು ಸುಟ್ಟಂತೆ ಆಗುತ್ತವೆ ‘ ಎಂದು ದುಂಡಪ್ಪ ಹೇಳುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.