ಬಾಗಲಕೋಟೆ: ಬೆಳಗಾವಿ ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಘಟಪ್ರಭಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಮುಧೋಳ ತಾಲ್ಲೂಕಿನಲ್ಲಿ ಐದು ಸೇತುವೆಗಳು ಜಲಾವೃತವಾಗಿವೆ.
ಮಿರ್ಜಿ-ಅಕ್ಕಿಮರಡಿ,ಮಹಾಲಿಂಗಪುರ-ಯಾದವಾಡ, ನಂದಗಾವ್-ಮಹಾಲಿಂಗಪೂರ,ಒಂಟಗೊಡಿ - ಸೋರಗಾಂವ, ಢವಳೇಶ್ವರ -ಮಹಾಲಿಂಗಪುರ ಸೇತುವೆ ಮುಳುಗಡೆಯಾಗಿವೆ.
ಇದರಿಂದ ಮಿರ್ಜಿ, ಮಲ್ಲಾಪುರ, ಒಂಟಿಗೋಡಿ, ಚನಾಳ, ನಾಗರಾಳ, ಅಕ್ಕಿಮರಡಿ, ನಂದಗಾಂವ ಗ್ರಾಮಗಳಿಗೆ ತಾಲ್ಲೂಕು ಕೇಂದ್ರ ಮುಧೋಳದೊಂದಿಗೆ ನೇರ ಸಂಪರ್ಕ ಕಡಿತಗೊಂಡಿದೆ. ಗ್ರಾಮಸ್ಥರು ಸುತ್ತು ಬಳಸಿ ಓಡಾಟ ನಡೆಸಬೇಕಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಶನಿವಾರ ಮಧ್ಯಾಹ್ನ ಮುಧೋಳಕ್ಕೆ ಭೇಟಿ ನೀಡುತ್ತಿದ್ದು, ಪ್ರವಾಹ ಮುನ್ನೆಚ್ಚರಿಕೆ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.