ಬಾಗಲಕೋಟೆ: ‘ವಿಧಾನಮಂಡಲದ ಕಲಾಪದ ವೇಳೆ ಮಾಧ್ಯಮಗಳನ್ನು ಹೊರಗಿಟ್ಟಿದ್ದು ದುರಾದೃಷ್ಟರ. ಮಾಧ್ಯಮಗಳ ಕತ್ತು ಹಿಸುಕುವ ಕೆಲಸ ನಡೆಯುತ್ತಿದೆ. ಈಗ ಕಾಶ್ಮೀರದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯದ ವಿಚಾರದಲ್ಲಿ ಏನಾಗುತ್ತಿದೆ. ಅದರ ಪ್ರತಿಬಿಂಬವೇ ಕರ್ನಾಟಕ ವಿಧಾನಸಭೆ‘ ಎಂದು ಶಾಸಕ ಕೆ.ಆರ್. ರಮೇಶ ಕುಮಾರ್ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರೇಮ ವ್ಯವಹಾರ ಖಾಸಗಿಯಾಗಿ ಮಾಡಬೇಕು. ಆದರೆ ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಒಳಗೆ ಗುಟ್ಟಾಗಿ ಮಾಡಬಾರದು‘ ಎಂದು ಚಕ್ರವರ್ತಿ ನೆಪೋಲಿಯನ್ ಹೇಳಿದ್ದರು. ಆದರೆ ಈಗ ಅಧಿವೇಶನಕ್ಕೆ ಕ್ಯಾಮೆರಾ ತರಬಾರದು ಅನ್ನೋದು ದುಖಃಕರ ಸಂಗತಿ‘ ಎಂದರು.
‘ಕಾಂಗ್ರೆಸ್ ಪಕ್ಷದಲ್ಲಿ ಮೂಲ ನಿವಾಸಿಗಳು, ವಲಸಿಗರು ಎಂಬ ಬೇಧವಿಲ್ಲ. ಒಂದು ಸಾರಿ ಪಕ್ಷದೊಳಗೆ ಕಾಲಿಟ್ಟ ಮೇಲೆ ಎಲ್ಲವೂ ಕಾಂಗ್ರೆಸ್. ಹಳೆಯದೂ ಇಲ್ಲ. ಹೊಸದೂ ಇಲ್ಲ. ಯಾರೂ ಸಿದ್ದರಾಮಯ್ಯ ಕೈ ಕಟ್ಟಿ ಹಾಕಿಯೂ ಇಲ್ಲ. ಅವೆಲ್ಲಾ ಭ್ರಮೆಗಳಷ್ಟೇ‘ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಹಿಂದಿನ ಸರ್ಕಾರದಲ್ಲಿ ಸ್ಪೀಕರ್ ಆಗಿ ನನ್ನ ಕರ್ತವ್ಯವನ್ನು ಸಂವಿಧಾನ ಪ್ರಕಾರವೇ ಮಾಡಿದ್ದೇನೆ. ಅದರಿಂದ ಯಾರಿಗೆ ಅರ್ಹತೆ ಇಲ್ಲವೇ ಅನರ್ಹತೆ ಬಂದಿದೆಯೋ ನನಗೆ ಗೊತ್ತಿಲ್ಲ. ನಮ್ಮ ದೇಶದಲ್ಲಿ ಗಾಂಧೀಜಿ ಅವರನ್ನೇ ಕೊಲ್ಲುತ್ತೇವೆ. ಇನ್ನು ಈ ರಮೇಶಕುಮಾರ್ ಯಾವ ದೊಡ್ಡ ಮನುಷ್ಯ. ಅವ್ರಿಗೆ ಬಿಟ್ಟಿಲ್ಲಾ ಇನ್ನು ನನಗೆ ಬಿಡ್ತಾರಾ‘ ಎಂದು ಮಾರ್ಮಿಕವಾಗಿ ಉತ್ತರಿಸಿದರು.