ಕೂಡಲಸಂಗಮ: ಕೊರೊನಾ ಎರಡನೇ ಅಲೆ ಭೀತಿ ವೇಳೆ 76 ದಿನಗಳ ಕಾಲ ಬಂದ್ ಆಗಿದ್ದ ಪ್ರವಾಸಿ, ಧಾರ್ಮಿಕ ತಾಣ ಕೂಡಲಸಂಗಮ ಕಳೆದ ಒಂದು ವಾರದಿಂದ ತೆರೆದುಕೊಂಡಿದ್ದರಿಂದ ಪ್ರವಾಸಿಗರಿಂದ ಮತ್ತೆ ಕಂಗೊಳಿಸುತ್ತಿದೆ.
ಸರ್ಕಾರದ ನಿರ್ದೇಶನದಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಏಪ್ರಿಲ್ 19 ರಿಂದ ದೇವಾಲಯ ಪ್ರವೇಶ ನಿಷೇಧಿಸಿ ಬೀಗ ಹಾಕಿತ್ತು. ಜುಲೈ 5 ರಿಂದ ಸಂಗಮೇಶ್ವರ ದೇವಾಲಯ, ಬಸವಣ್ಣನ ಐಕ್ಯಸ್ಥಳ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರಿಂದ ನಿತ್ಯ ಸಾವಿರಾರು ಭಕ್ತರು ದರ್ಶನಕ್ಕೆ ಬರುತ್ತಿದ್ದಾರೆ.
ಕಳೆದ ಒಂದು ವಾರದಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರು ಕ್ಷೇತ್ರದ ದರ್ಶನ ಪಡೆದಿದ್ದಾರೆ. ಶನಿವಾರ, ಭಾನುವಾರ, ಸೋಮವಾರ ಅಧಿಕ ಭಕ್ತರು ಭೇಟಿ ನೀಡುವರು.
ಬಹುತೇಕ ಭಕ್ತರು ಕೋವಿಡ್ ನಿಯಮ ಪಾಲನೆ ಮಾಡದೆ ಇರುವುದು ಪ್ರಜ್ಞಾವಂತ ಜನರಲ್ಲಿ ಆತಂಕ ಉಂಟುಮಾಡಿದೆ.
ಐಹೊಳೆ, ಪಟ್ಟದಕಲ್ಲು, ಮುಂತಾದ ಐತಿಹಾಸಿಕ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದ್ದು, ಧಾರ್ಮಿಕ ತಾಣಗಳಾದ ಕೂಡಲ ಸಂಗಮ, ಬಾದಾಮಿ, ಶಿವಯೋಗ ಮಂದಿರ, ಯಲಗೂರು ಮನರಂಜನಾ ತಾಣವಾದ ಆಲಮಟ್ಟಿಯಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಿದೆ.
ಕೂಡಲಸಂಗಮಕ್ಕೆ ಆಗಮಿಸುವ ಬಹುತೇಕ ಪ್ರವಾಸಿಗರು, ಭಕ್ತರು ಸುತ್ತಲ್ಲಿನ ಜಿಲ್ಲೆಯವರಾಗಿದ್ದು, ಸಂಗಮನಾಥ, ಬಸವಣ್ಣನ ಐಕ್ಯ ಸ್ಥಳದ ದರ್ಶನ ಪಡೆಯುವರು.