ಜಮಖಂಡಿ: ಸಾಹಿತ್ಯವನ್ನು ಬೆಳೆಸಲು ಎಲ್ಲರೂ ಸರ್ಕಾರದ ಕಡೆಗೆ ಮುಖ ಮಾಡಬಾರದು ಪ್ರತಿಯೊಬ್ಬರ ಪಾತ್ರವು ಇದೆ, ಯುವಕರು ಸಮಾಜದಲ್ಲಿ ಸಾಹಿತ್ಯವನ್ನು ತಿಳಿದುಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಲ್ಲಿಕಾ ಘಂಟಿ ಹೇಳಿದರು.
ಇಲ್ಲಿನ ಕನ್ನಡ ಸಂಘದ ಆಶ್ರಯದಲ್ಲಿ ಸಾಕ್ಷಾತ್ಕಾರ ನಿವಾಸದ ಸಭಾಭವನದಲ್ಲಿ ಕನ್ನಡ ಕಾವ್ಯ ಹಾಗೂ ಕಥಾ ಕಮ್ಮಟ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕೊರೊನಾದಿಂದ ಸಾಹಿತ್ಯ ಲೋಕ ಸೊರಗುತ್ತಿದೆ, ಸಾಹಿತಿಗಳು ಒಳ್ಳೆಯದನ್ನು ಬರೆಯುವಾಗ ತನ್ನ ಸಂಕಟವನ್ನು ಮರೆಯುತ್ತಾನೆ ಎಂದರು.
ಜಮಖಂಡಿಯ ಕನ್ನಡ ಸಂಘ ಐವತ್ತು ವರ್ಷಕ್ಕೂ ಹೆಚ್ಚು ಕಾಲ ಹೋರಾಟವನ್ನು ಮಾಡುತ್ತಾ ಬಂದಿದೆ. ಕರ್ನಾಟಕದ ದಿಗ್ಗಜರನ್ನು ಕರೆಸಿಕೊಂಡು ಭಾರತ ದೇಶ ಮೆಚ್ಚುವಂತ ಕೆಲಸ ಮಾಡಿದೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಕಾರ್ಯವನ್ನು ಮಾಡುತ್ತಿರುವದು ಶ್ಲಾಘನೀ ಎಂದರು.
ಇಂದಿನ ಯುವ ಜನರು ಸಾಮಾಜಿಕ ಕಳಕಳಿಯನ್ನು ಮರೆಯುತ್ತಿದ್ದಾರೆ, ಹೋರಾಟ, ಚಳವಳಿಗಳನ್ನು ಮಾಡಲು ಮುಂದೆ ಬರಬೇಕು, ಪಾಲಕರು ಮಕ್ಕಳ ಕೈಯಲ್ಲಿ ಪುಸ್ತಕವನ್ನು ನೀಡಿ ಜೀವನದ ಪಾಠವನ್ನು ಕಲಿಸಬೇಕು. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಭಾಷೆ ಮತ್ತು ಸಾಹಿತ್ಯ ಸಹಕಾರಿ ಎಂದರು.
ನಾಡೋಜ, ಕನ್ನಡ ಸಂಘದ ಅಧ್ಯಕ್ಷ ಜಗದೀಶ ಗುಡಗುಂಟಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆ ಮಾನಸಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ, ಆಧ್ಯಾತ್ಮೀಕದಿಂದ ತಯಾರಾಗಬೇಕು. ಕಥೆ, ಸಾಹಿತ್ಯವನ್ನು ಓದುತ್ತಿರುವವರು ಒಳ್ಳೆಯ ಬದುಕು ಸಾಗಿಸುತ್ತಾರೆ. ಆ ನಿಟ್ಟಿನಲ್ಲಿ ಕಳೆದ 5 ದಶಕಗಳಿಂದ ಸಂಘವು ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆ, ಕ್ರೀಡೆ, ನಾಡು-ನುಡಿ ಬೆಳವಣಿಗೆಗೆ ಉತ್ತೇಜನ ನೀಡಿ ಪ್ರೋತ್ಸಾಹಿಸುತ್ತಿದೆ ಎಂದರು.
ವೇದಿಕೆ ಮೇಲೆ ಹಿರಿಯ ಸಾಹಿತಿಗಳಾದ ಸಿದ್ಧರಾಜ ಪೂಜಾರಿ, ಮಲ್ಲಿಕಾರ್ಜುನ ಹುಲಗಬಾಳಿ, ಎಸ್.ಎಸ್.ಹೂಲಿ, ಜಿ.ಎಸ್. ನ್ಯಾಮಗೌಡ, ಬಸವರಾಜ ನ್ಯಾಮಗೌಡ, ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬಾಳಾಸಾಹೇಬ ಲೋಕಾಪೂರ, ಹಿರಿಯ ಸಾಹಿತಿ ಡಾ. ಚನ್ನಪ್ಪ ಕಟ್ಟಿ, ಪ್ರಾಚಾರ್ಯ ಡಾ. ವಾಯ್.ಎಮ್. ಯಾಕೊಳ್ಳಿ. ಕವಿಯತ್ರಿ ಡಾ. ಮೃತೇಯಿಣಿ ಗದಿಗೆಪ್ಪಗೌಡರ ಇದ್ದರು.
ಡಾ. ಶಾರದಾ ಮುಳ್ಳೂರ ಸ್ವಾಗತಿಸಿದರು. ಶಂಕರ ಲಮಾಣಿ ನಿರೂಪಿಸಿದರು. ಮಲ್ಲಿಕಾರ್ಜುನ ಇಂಡಿ, ಡಾ.ವೈ.ವೈ.ಕೊಕ್ಕನವರ ವಂದನಾರ್ಪಣೆ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.