ಬಾಗಲಕೋಟೆ: ‘ಬಿಜೆಪಿ, ಕಾಂಗ್ರೆಸ್ನಲ್ಲಿ ಹೆಚ್ಚಿನ ವ್ಯತ್ಯಾಸ ಕಾಣಿಸುತ್ತಿಲ್ಲ. ಕಾರ್ಪೋರೇಟ್ ಕಂಪನಿಗಳ ಪರವಾಗಿವೆ. ಕಾರ್ಮಿಕರ, ರೈತರ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿವೆ’ ಎಂದು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಮುಖಂಡ ಬಿ. ಭಗವಾನ ರೆಡ್ಡಿ ಹೇಳಿದರು.
ಸೋಮವಾರ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಎಚ್.ಟಿ. ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಅವರು, ‘ಉದ್ಯೋಗವಿಲ್ಲದೆ ಗುಳೆ ಹೋಗುವ ಸ್ಥಿತಿ ಇದೆ. ಜಾತಿ, ಧರ್ಮದ ಮೇಲೆ ಮತ ಕೇಳುತ್ತಿದ್ದಾರೆ. ಕಾರ್ಮಿಕರ, ರೈತರ ಪರವಾಗಿ ಪಕ್ಷ ಹೋರಾಟ ಮಾಡಲಿದೆ’ ಎಂದರು.
‘ಕೃಷಿ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದರೆ, ರೈತರ ಉತ್ಪನ್ನಗಳಿಗೆ ಬೆಲೆ ಸಿಗುತ್ತಿಲ್ಲ. ಬೆಂಬಲ ಬೆಲೆಯಡಿ ಖರೀದಿಸಬೇಕು ಎಂಬ ಬೇಡಿಕೆಗೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಭ್ರಷ್ಟಾಚಾರ ಮುಚ್ಚಿಕೊಳ್ಳಲು ವಿವಿಧ ಪಕ್ಷಗಳ ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಅಲ್ಲಿ ಹೋದ ಕೂಡಲೇ ಅವರು ಪವಿತ್ರರಾಗುತ್ತಿದ್ದಾರೆಯೇ?’ ಎಂದು ಪ್ರಶ್ನಿಸಿದರು.
ಶ್ರಮ ಆಧಾರಿತ ಕೈಗಾರಿಕೆಗಳನ್ನು ಆರಂಭಿಸಬೇಕು. ಕೆಲಸದ ಸಮಯವನ್ನು 8 ಗಂಟೆಗೆ ಮಿತಗೊಳಿಸಬೇಕು. ಜಿಲ್ಲೆಯಲ್ಲಿ ಒಂದೇ ಒಂದು ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು ಇಲ್ಲ. ಪ್ರವಾಸೋದ್ಯಮ ಸ್ಥಳಗಳಿಗೂ ಕಾಯಕಲ್ಪ ಸಿಕ್ಕಿಲ್ಲ ಎಂದು ದೂರಿದತು.
ಟಿ.ಎಸ್. ಸುನೀತಕುಮಾರ, ಎಚ್.ಟಿ.ಭರತಕುಮಾರ, ಮಹಾದೇವಿ ಧರ್ಮಶೆಟ್ಟಿಯವರು ಇದ್ದರು.