ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಗೀತಾಬಾಯಿ ಸೋಮನಿಂಗ ಶಿವಗದ್ದಗಿ ಅವರಿಗೆ ಶೇ6 ಬಡ್ಡಿ ಸಮೇತ ₹5ಲಕ್ಷ ಅಲ್ಲದೆ ಮಾನಸಿಕ ವ್ಯಥೆಗೆ ₹10, ದಾವಾ ವೆಚ್ಚ ₹5 ಸಾವಿರ ಕೊಡುವಂತೆ ಯುನೈಟೆಡ್ ಇನ್ಶ್ಯೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಘಟನೆ ವಿವರ : ಗೀತಾಬಾಯಿ ಅವರ ಪತಿ ಸೋಮನಿಂಗ ಅವರು ವಿಜಯಪುರದ ಡಿಎಆರ್ನಲ್ಲಿ ಹೆಡ್ ಕಾನ್ಸ್ಟೆಬಲ್ ಎಂದು ಸೇವೆ ಸಲ್ಲಿಸುತ್ತಿದ್ದು. ಸೈನಿಕ ಸ್ಕೂಲ್ ಎಸ್.ಬಿ.ಐ. ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಪಿಎಸ್ಪಿ ಸಿಲ್ವರ್ ಪ್ಯಾಕೇಜ್ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಯ ಸದಸ್ಯರೂ ಆಗಿದ್ದರು.
2020ರಲ್ಲಿ ಬೈಕ್ ಮೇಲೆ ಜಮಖಂಡಿಗೆ ಹೋಗುತ್ತಿದ್ದಾಗ ಮಹೇಂದ್ರ ಪಿಕ್ ಅಪ್ ವ್ಯಾನ್ ಹಾಯ್ದು ವಿಜಯಪುರ ಆಸ್ಪತ್ರೆಯಲ್ಲಿ ನಿಧನರಾದರು.
ಪಿಎಸ್ಪಿ ಸಿಲ್ವರ್ ಪ್ಯಾಕೇಜ್ ಪಾಲಿಸಿ ನಾಮಿನಿ ಆಗಿದ್ದ ಮೃತರ ಪತ್ನಿ ಗೀತಾಬಾಯಿ ಅಗತ್ಯ ದಾಖಲೆಗಳ ಸಮೇತ ಯುನೈಟೆಡ್ ಇನ್ಶ್ಯೂರೆನ್ಸ್ ಕಂಪನಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಪರಿಹಾರ ನೀಡದಿದ್ದಾಗ ಗೀತಾಬಾಯಿ ಅವರು ವಿಮಾ ಕಂಪನಿ ವಿರುದ್ಧ ಆಯೋಗದಲ್ಲಿ ದೂರು ದಾಖಲಿಸಿದ್ದರು.
ವಿಚಾರಣೆಯಲ್ಲಿ ಹಾಜರಾದ ವಿಮಾ ಕಂಪನಿಯ ಪ್ರತಿನಿಧಿಗಳು ಎಸ್ಬಿಐ ಬ್ಯಾಂಕಿನವರು ಪಾಲಿಸಿ ಮಾಡಿದ್ದು, ಅವರ ವಿರುದ್ಧವೂ ದೂರು ದಾಖಲಿಸಬೇಕಿತ್ತು ಎಂದರು.
ಆಗ ವಿಚಾರಣೆಗೆ ಹಾಜಗಾರ ಎಸ್ಬಿಐ ಬ್ಯಾಂಕಿನವರು ತಮ್ಮ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ಯುನೈಟೆಡ್ ಇನ್ಶ್ಯೂರೆನ್ಸ್ ಕಂಪನಿಯವರು ಪಾಲಿಸಿ ನೀಡಿದ್ದರ ಬಗ್ಗೆ ದಾಖಲೆಗಳನ್ನು ಸಲ್ಲಿಸಿದರು.
ಎಲ್ಲ ದಾಖಲೆ ಹಾಗೂ ಸಾಕ್ಷಿಗಳನ್ನು ಪರಿಸೀಲಿಸಿದ ಆಯೋಗದ ಅಧ್ಯಕ್ಷ ವಿಜಯಕುಮಾರ ಪಾವಲೆ, ಸದಸ್ಯರಾದ ರಂಗನಗೌಡ ದಂಡಣ್ಣವರ ಹಾಗೂ ಸಿ.ಎಚ್. ಸಮಿವುನ್ನೀಸಾ ಅಬ್ರಾರ ವಿಮಾ ಕಂಪನಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.