ಬಾಗಲಕೋಟೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಮೂರನೇ ಪೀಠದ ಪೀಠಾಧಿಪತಿಯಾಗಿ ಷ.ಬ್ರ.ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಅವರಿಗೆಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ಭಾನುವಾರ ಬೆಳಗಿನ ಜಾವ ಪಟ್ಟಾಭಿಷೇಕ ನೆರವೇರಿತು.
ನಸುಕಿನ ಬ್ರಾಹ್ಮಿ ಮುಹೂರ್ತದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳು ಹಾಜರಿದ್ದರು.
ಪೀಠಾರೋಹಣ ಸ್ಥಳಕ್ಕೆ ಬಂದ ಡಾ. ಮಹಾದೇವ ಶಿವಾಚಾರ್ಯ ಸ್ವಾಮೀಜಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಅರಿಷಿಣ, ಗಂಧ ಲೇಪಿಸಿ ಹಾಲು, ಜೇನು,ತುಪ್ಪ, ಸಕ್ಕರೆ, ಪಂಚಾಮೃತ ಅಭಿಷೇಕ ಮಾಡಲಾಯಿತು. ಈ ವೇಳೆ ಒಕ್ಕೂಟದ ಸ್ವಾಮಿಗಳು ಪರಸ್ಪರ ಅರಿಶಿಣ ಬಳಿದುಕೊಂಡರು.
ನಂತರ ರುದ್ರಾಭಿಷೇಕ ಆಸನದಲ್ಲಿ ಕೂರಿಸಿ ಮಂತ್ರ ಪಠಣ, ಪೂಜಾ ವಿಧಿ-ವಿಧಾನಗಳ ನೆರವೇರಿಸಲಾಯಿತು.
ಪಂಚಮಸಾಲಿ ಮಠಾಧೀಶರ ಒಕ್ಕೂಟದ ಕಾರ್ಯದರ್ಶಿ ಸಂಗನಬಸವ ಸ್ವಾಮೀಜಿ, ಉಪಾಧ್ಯಕ್ಷ ಬೆಂಡವಾಡದ ರೇವಣಸಿದ್ಧ ಸ್ವಾಮೀಜಿ, ಸಿದ್ಧಲಿಂಗ ದೇವರು ಸೇರಿದಂತೆ ವಿವಿಧ ಮಠಾಧೀಶರು ಹಾಜರಿದ್ದರು.