ಬೀಳಗಿ: ‘ಅನೇಕ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಚಿತ್ರಕಲಾ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುವ ಮೂಲಕ ಕಲಾವಿದರ ನೆರವಿಗೆ ಸರ್ಕಾರ ಮುಂದಾಗಬೇಕು’ ಎಂದು ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬೀಳಗಿಯ ರುದ್ರಗೌಡ ಪಾಟೀಲ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಲಾವಿದೆ ರಂಜಿತಾ ಸಾರಾವರಿ ಅವರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಹಾಗೂ ಕಾವ್ಯ ಕುಂಚ ಸಿಂಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರದರ್ಶನ ಉದ್ಘಾಟಿಸಿದ ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀದೇವಿ ಪಾಟೀಲ ಮಾತನಾಡಿ, ‘ಕಲೆ ಯಾರೊಬ್ಬರ ಸ್ವತ್ತಲ್ಲ. ಕಲಾವಿದರಲ್ಲಿ ಅಡಗಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಕಾರ್ಯೋನ್ಮುಖರಾಗಿರುವ ವಿಶ್ವ ವಿನೂತನ ಚಿತ್ರಕಲಾ ಮಹಾವಿದ್ಯಾಲಯದ ಶಿವಾನಂದ ಹಿರೇಮಠರ ಸೇವೆ ಅಭಿನಂದನಿಯ’ ಎಂದು ಹೇಳಿದರು.
ಕಸಾಪ ಬಾಗಲಕೋಟೆ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸಿದ್ಧರಾಮ ಶಿರೊಳ ಮಾತನಾಡಿ, ‘ಸರ್ಕಾರ ಕಲಾವಿದರಿಗೆ ಸೂಕ್ತ ಸ್ಥಾನಮಾನ, ಪ್ರೋತ್ಸಾಹ ನೀಡುತ್ತಿಲ್ಲ. ಇದರಿಂದ ಕಲೆ ಅಳಿವಿನಂಚಿನಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದರೆ ಕೆಲವರಿಗೆ ಮಾತ್ರ ಒಲಿಯುತ್ತದೆ’ ಎಂದು ಕಜಾಪ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಂ. ಸಾಹುಕಾರ ಹೇಳಿದರು.
ಪತ್ರಕರ್ತ ವೀರೇಂದ್ರ ಶೀಲವಂತ ಅಧ್ಯಕ್ಷತೆ ವಹಿಸಿದ್ದರು. ಹುಚ್ಚೇಶ್ವರ ಮಠದ ಫಕೀರಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹಿರಿಯ ಸಾಹಿತಿಗಳಾದ ಬಿ.ಎನ್. ಮುಂಡರಗಿ, ಸಿದ್ದಪ್ಪ ಬಿದರಿ, ಸಂತೋಷಕುಮಾರ ವೈದ್ಯ, ಸಿದ್ದು ಸಾರಾವರಿ, ಸಂಗಣ್ಣ ನಾಗರಾಳ ಭಾಗವಹಿಸಿದ್ದರು.
ಬಾಗಲಕೋಟೆಯ ವಿಶ್ವ ವಿನೂತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಶಿವಾನಂದ ಹಿರೇಮಠ ಅಭಿನಂದನಾ ನುಡಿ ಹೇಳಿದರು. ಕರ್ನಾಟಕ ಜಾನಪದ ಪರಿಷತ್ ಬೀಳಗಿ ತಾಲ್ಲೂಕು ಸಮಿತಿಯ ಅಧ್ಯಕ್ಷ ಶೇಖರ ಗೊಳಸಂಗಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀಶೈಲ ಜತ್ತಿ, ಜ್ಯೋತಿಬಾ ಅವತಾಡೆ ಇದ್ದರು. ರಂಜಿತಾ ಸಾರಾವರಿ ಚಿತ್ರಿಸಿದ ಚಿತ್ರಕಲಾ ಪ್ರದರ್ಶನ ನಡೆಯಿತು.