ಬಾಗಲಕೋಟೆ: ಯಾರದ್ದೋ ತ್ಯಾಗದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಇಂದು ಒಂದು ಜಾತಿ, ವರ್ಗಕ್ಕೆ ಮೀಸಲಿರುವ ಸರ್ಕಾರವಾಗಿ ಮಾರ್ಪಟ್ಟಿದೆ. ಇದನ್ನು ಬಿಜೆಪಿಯವರು, ಆರ್ಎಸ್ಎಸ್ನವರು, ರಾಜ್ಯದ ಜನರು ಗಮನಿಸಬೇಕು ಎಂದು ಕನಕ ಗುರುಪೀಠ ತಿಂಥಿಣಿ ಬ್ರಿಜ್ ಶಾಖೆಯ ಸಿದ್ದರಾಮಪುರಿ ಸ್ವಾಮೀಜಿ ಹೇಳಿದರು.
ಇಲ್ಲಿನ ನವನಗರದ ಕಾಳಿದಾಸ ಮೈದಾನದಲ್ಲಿ ಕುರುಬರ ಎಸ್ಟಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಬೆಳಗಾವಿ ವಿಭಾಗ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯವರು ಯಾಕೆ ಕುರುಬರಿಗೆ ಟಿಕೆಟ್ ಕೊಡಬಾರದು. ಬರೀ ಅದೇ ವರ್ಗಕ್ಕೆ ಕೊಡಬೇಕು ಎಂಬ ನಿಯಮವಿದೆಯೇ ಎಂದು ಪ್ರಶ್ನಿಸಿದರು.
ಕುರುಬರನ್ನು ಎಸ್ಟಿಗೆ ಸೇರಿಸಬೇಕು ಎಂಬುದು ಮನವಿ ಅಲ್ಲ. ಅದು ಆಗ್ರಹ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕುರುಬರ ಋಣದಲ್ಲಿವೆ. ಅದನ್ನು ಮರೆಯಬಾರದು ಎಂದರು.
ಈ ಸಮಾವೇಶ ಬಿಜೆಪಿಯ ಪರ ಅಲ್ಲ. ಸಮಾವೇಶಕ್ಕೆ ಬಾರದವರ ವಿರುದ್ಧವೂ ಅಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಗೈರು ಹಾಜರಿ ಪ್ರಸ್ತಾಪಿಸಿದರು.
ಈಶ್ವರಪ್ಪ ಅಸಮಾಧಾನ: ಸ್ವಾಮೀಜಿ ಭಾಷಣ ಮುಗಿಸಿ ತಮ್ಮ ಸ್ಥಾನಕ್ಕೆ ಮರಳುತ್ತಿದ್ದಂತೆಯೇ ಹತ್ತಿರ ಬಂದು ಕುಳಿತ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ರಕ್ತ ಸುರಿಸಲಿದ್ದೇವೆ: ಸಚಿವ ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ ಮಾತನಾಡಿ, ಇಲ್ಲಿಯವರೆಗಿನ ಹೋರಾಟ ಬರೀ ಸ್ಯಾಂಪಲ್ ಮಾತ್ರ. ಅಗತ್ಯ ಬಿದ್ದರೆ ರಕ್ತ ಸುರಿಸಿಯಾದರೂ ಎಸ್ಟಿ ಮೀಸಲಾತಿಗೆ ಸಮುದಾಯವನ್ನು ಸೇರಿಸಲು ಬದ್ಧ ಎಂದು ಘೋಷಿಸಿದರು.
ಸಿದ್ದರಾಮಪುರಿ ಸ್ವಾಮೀಜಿ ಅವರ ಭಾಷಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.