ತಾಲ್ಲೂಕಿನಲ್ಲಿ ಪ್ರಸ್ತುತ ವರ್ಷ 20 ಸಾವಿರ ಹೆಕ್ಟೇರ್ನಲ್ಲಿ ರೈತರು ಕಬ್ಬು ನಾಟಿ ಮಾಡಿದ್ದಾರೆ. ಭೀಮಾನದಿಯ ದಡದಲ್ಲಿ ಕಬ್ಬು ಹೆಚ್ಚು ಬೆಳೆಯಲಾಗುತ್ತದೆ. ಅದರಲ್ಲಿ ಬಂದರವಾಡ, ಸಾಗನೂರ, ಟಾಕಲಿ, ಕಿರಸಾವಳಗಿ, ಕೆಕ್ಕರ ಸಾವಳಗಿ, ಕಲ್ಲೂರ, ಹಿಂಚಗೇರಿ, ಕೇಶಾಪುರ, ಶಿವಪುರ, ಮಣೂರ, ಉಡಚಾಣ ಗ್ರಾಮಗಳಲ್ಲಿ ಬೆಳೆಯಲಾಗುತ್ತದೆ. ಆದರೆ ಸದ್ಯಕ್ಕೆ ಚವಡಾಪುರ ವಲಯದಲ್ಲಿ ಕಬ್ಬಿನ ಎಲೆಗಳಿಗೆ ಬಿಳಿಹೇನು ಮತ್ತು ಕಪ್ಪುಹೇನು ಹತ್ತಿಕೊಂಡಿದ್ದರಿಂದ ಕಬ್ಬಿಗೆ ಬೂದಿ ರೋಗ, ಬಿಳಿಚುಕ್ಕೆ ಹಾಗೂ ಮಜ್ಜಿಗೆ ರೋಗ ಕಾಣಿಸಿಕೊಂಡು ಬೆಳವಣಿಗೆ ಕುಂಠಿತವಾಗಿದೆ. ಎಲೆಗಳು ಕಪ್ಪಾಗುತ್ತಿವೆ ಎಂದು ಕಬ್ಬು ಬೆಳೆಗಾರರು ಹೇಳುತ್ತಾರೆ.